ವಾರಂಟಿ ಇಲ್ಲದ ಗ್ಯಾರಂಟಿ ನೀಡಿದ ಕಾಂಗ್ರೆಸ್‌: ಮಾಜಿ ಸಿಎಂ ಬೊಮ್ಮಾಯಿ ಲೇವಡಿ

By Kannadaprabha NewsFirst Published Oct 12, 2023, 10:03 PM IST
Highlights

ವಾರಂಟಿ ಇಲ್ಲದ ಗ್ಯಾರಂಟಿಗಳನ್ನು ಕಾಂಗ್ರೆಸ್‌ ನೀಡಿದೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಲೇವಡಿ ಮಾಡಿದರು. ಕಾಂಗ್ರೆಸ್‌ನವರು ನೀಡಿರುವ ಐದೂ ಗ್ಯಾರಂಟಿಗಳು ಸುಳ್ಳಿನ ಕಂತೆಯಾಗಿವೆ. ಶೀಘ್ರದಲ್ಲಿಯೇ ಈ ಗ್ಯಾರಂಟಿಗಳು ವಾರಂಟಿ ಕಳೆದುಕೊಳ್ಳಲಿವೆ ಎಂದು ಅವರು ಹೇಳಿದರು.

ಜಮಖಂಡಿ (ಅ.12): ವಾರಂಟಿ ಇಲ್ಲದ ಗ್ಯಾರಂಟಿಗಳನ್ನು ಕಾಂಗ್ರೆಸ್‌ ನೀಡಿದೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಲೇವಡಿ ಮಾಡಿದರು. ಕಾಂಗ್ರೆಸ್‌ನವರು ನೀಡಿರುವ ಐದೂ ಗ್ಯಾರಂಟಿಗಳು ಸುಳ್ಳಿನ ಕಂತೆಯಾಗಿವೆ. ಶೀಘ್ರದಲ್ಲಿಯೇ ಈ ಗ್ಯಾರಂಟಿಗಳು ವಾರಂಟಿ ಕಳೆದುಕೊಳ್ಳಲಿವೆ ಎಂದು ಅವರು ಹೇಳಿದರು. ನಗರದಲ್ಲಿರುವ ಶಾಸಕ ಜಗದೀಶ ಗುಡಗುಂಟಿ ಅವರ ಸಾಕ್ಷಾತ್ಕಾರ ನಿವಾಸದ ಮೈದಾನದಲ್ಲಿ ಏರ್ಪಡಿಸಿದ್ದ ಜಮಖಂಡಿ ಬಿಜೆಪಿ ಕಾರ್ಯಕರ್ತರ ಸಮಾವೇಶ, ಸಂಘೋಷ್ಠಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಬಿಜೆಪಿ ತೊರೆದು ಕಾಂಗ್ರೆಸ್‌ಗೆ ಹೋದ ನಮ್ಮವರು ಈಗ ಪಶ್ಚಾತ್ತಾಪದ ಮಾತು ಹೇಳುತ್ತಿದ್ದಾರೆ.

ಸಾಹೇಬ್ರೆ, ನಾವು ಇಲ್ಲಿ ಬಂದು ತಪ್ಪು ಮಾಡಿದ್ದೇವೆ. ನಮಗೆ ಇಲ್ಲಿ ಕವಡೆ ಕಾಸಿನ ಕಿಮ್ಮತ್ತು ಸಿಗುತ್ತಿಲ್ಲ ಅನ್ನುತ್ತಿದ್ದಾರೆ. ನಾನು ಅವರಿಗೆ ನೀವು ಅಲ್ಲೆ ಇರಿ, ಇಲ್ಲಿ ಈಗ ಎಲ್ಲವೂ ಸರಿ ಇದೆ ಎಂದು ಹೇಳಿದ್ದೇನೆ ಎಂದರು. ಮಾಜಿ ಸಚಿವ ರಾಜಾಜಿನಗರ ಶಾಸಕ ಎಸ್.ಸುರೇಶಕುಮಾರ ಮಾತನಾಡಿ, ಬಿಜೆಪಿ ಕಾರ್ಯಕರ್ತರ ಪಕ್ಷ. ಭಾರತಿಯ ಜನತಾ ಪಕ್ಷ ಉಳಿದೆಲ್ಲ ಪಕ್ಷಗಳಿಗಿಂತ ವಿಭಿನ್ನ ಪಕ್ಷವಾಗಿದೆ. 1994ರಲ್ಲಿ ಕೇವಲ 2ಸಿಟು ಹೊಂದಿದ್ದ ಬಿಜೆಪಿ ಪಕ್ಷ ಇಂದು ಇಡೀ ಪ್ರಪಂಚಲ್ಲೇ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ ಎಂದು ಹೇಳಿದರು. 

ಉತ್ತಮ ವರದಿ, ಲೇಖನ ಬರೆದಿದ್ದೀರಾ? ನೀವು ಒಳ್ಳೆ ಫೋಟೋಗ್ರಾಫರಾ?: ಕೆಯುಡಬ್ಯುಜೆ ಮಾಧ್ಯಮ ಪ್ರಶಸ್ತಿಗೆ ಅರ್ಜಿ ಹಾಕಿ!

ಅತಿ ಹೆಚ್ಚು ಆಕಾಂಕ್ಷಿಗಳು ಇದ್ದರೂ ಕೂಡ ಇಲ್ಲಿನ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಪಕ್ಷ ಅವಕಾಶ ನೀಡಿದವರ ಪರವಾಗಿ ನಾವೆಲ್ಲರೂ ಒಂದಾಗಿ ಕಾರ್ಯ ಮಾಡುತ್ತೆವೆ ಎಂದು ಪ್ರಮಾಣ ಮಾಡಿ ಗುಡಗುಂಟಿ ಅವರನ್ನು ಗೆಲ್ಲಿಸಿದ್ದು ರಾಜ್ಯದಲ್ಲೇ ಮಾದರಿಯಾಗಿದೆ.ಬಿಜೆಪಿ ಬೆಳೆದಿದ್ದು ಕಾರ್ಯಕರ್ತರಿಂದ, ಬಿಜೆಪಿ ಹುಟ್ಟಿದ್ದು ಹೊರಾಟದಿಂದ, ಭಾರತೀಯ ಜನ ಸಂಘವನ್ನು ಸ್ಥಾಪಿಸಿದ್ದು ಭಾರತೀಯರೇ ಆದ ಶ್ಯಾಮಪ್ರಕಾಶ ಮುಖರ್ಜಿ. ಆದರೆ, ಕಾಂಗ್ರೆಸ್‌ ಅನ್ನು ವಿದೇಶಿಗ ಎ.ಓ.ಹ್ಯೂಂ ಹುಟ್ಟುಹಾಕಿದ್ದಾರೆ ಎಂದರು.

ಸಮಾಜದಲ್ಲಿನ ಎಲ್ಲರಿಗೂ ಸರ್ಕಾರದ ಯೋಜನೆಗಳ ಲಾಭ ತಲುಪಬೇಕು. ದೇಶಕ್ಕೆ 3ನೇ ಬಾರಿ ನರೇಂದ್ರ ಮೋದಿ ಅವರು ಪ್ರಧಾನಿ ಆಗಬೇಕು ಅದಕ್ಕೆ ಎಲ್ಲ ಕಾರ್ಯಕರ್ತರು ಮನೆ ಮನೆಗೆ ತೆರಳಿ ದೇಶಕ್ಕಾಗಿ ಮೋದಿ ಅವರ ಅವಶ್ಯಕತೆ ಬಗ್ಗೆ ತಿಳಿಹೇಳಬೇಕು ಎಂದರು. ಮಾಜಿ ಡಿಸಿಎಂ ಗೊವೀಂದ ಕಾರಜೋಳ ಮಾತನಾಡಿ, ತಮಗೆ ರಾಜಕೀಯವಾಗಿ ಪುನರ್ಜನ್ಮ ನೀಡಿದ ಬಾದಾಮಿಯನ್ನು ಸಿಎಂ ಸಿದ್ದರಾಮಯ್ಯ ಕಡೆಗಣಿಸಿದ್ದಾರೆ. ಉತ್ತರ ಕರ್ನಾಟಕದ ನೀರಾವರಿ ಯೋಜನೆಗಳ ಬಗ್ಗೆ ಅವರು ನಿರ್ಲಕ್ಷ್ಯ ಮಾಡುತ್ತಿದ್ದಾರೆ. 

ಕೂಡಲಸಂಗಮದಲ್ಲಿ ಆಣೆ, ಪ್ರಮಾಣ ಮಾಡಿ ಅಧಿಕಾರಕ್ಕೆ ಬಂದ ವರ್ಷದೊಳಗೆ ಕೃಷ್ಣಾ ಮೇಲ್ದಂಡೆ ಯೋಜನೆಗೆ ₹10 ಸಾವಿರ ಕೋಟಿ ನೀಡುವುದಾಗಿ ಹೇಳಿ ಐದು ವರ್ಷದಲ್ಲಿ ಕೇವಲ ₹2365 ಕೋಟಿ ಮಾತ್ರ ನೀಡಿ ಮೋಸ ಮಾಡಿದರು. ಈಗ ಮತ್ತೆ ಅದೇ ರೀತಿಯ ಸುಳ್ಳು ಹೇಳಿ ಅಧಿಕಾರಕ್ಕೆ ಬಂದು ಭಂಡತನದಿಂದ ಭಾಷಣ ಮಾಡುತ್ತಿದ್ದಾರೆ. ಜನರು ಕೂಡ ಇದನ್ನು ಪ್ರಶ್ನಿಸುವ ಧೈರ್ಯ ಮಾಡುತ್ತಿಲ್ಲ ಎಂದರು. ಬಿಜೆಪಿಯಲ್ಲಿ ಲಿಂಗಾಯತರಿಗೆ ಅನ್ಯಾಯವಾಗಿದೆ ಎಂದು ಕಾಂಗ್ರೆಸ್‌ನವರು ಹೇಳಿದ್ದರು. ಆದರೆ, ಇದೀಗ ಕಾಂಗ್ರೆಸ್‌ನಲ್ಲಿ ಲಿಂಗಾಯತ ನಾಯಕರನ್ನು ಎರಡನೇ ದರ್ಜೆಯ ನಾಯಕರನ್ನಾಗಿ ಪರಿಗಣಿಸಲಾಗುತ್ತಿದೆ ಎಂಬ ಮಾತುಗಳು ಕಾಂಗ್ರೆಸ್‌ ಮುಖಂಡರಿಂದಲೇ ಕೇಳಿಬರುತ್ತಿವೆ. 

ರಾಜ್ಯದಲ್ಲಿ ಸುಮಾರು 20 ವರ್ಷಗಳಿಂದ ಕಾಂಗ್ರೆಸ್‌ ಅನ್ನು ಸಾಕಿ ಬೆಳೆಸಿದ ಹಿರಿಯನಾಯಕ ಶ್ಯಾಮನೂರ ಶಿವಶಂಕರಪ್ಪನವರೇ ಈ ರೀತಿ ಹೇಳುತ್ತಿದ್ದಾರೆ ಎಂದರು. ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಲಿಂಗಾಯತರು ಬಿಜೆಪಿಗೆ ಕಡಿಮೆ ಪ್ರಮಾಣದಲ್ಲಿ ಮತ ಹಾಕಿದ್ದಾರೆ. ಇದು ನನ್ನ ನೇರ ಅಭಿಪ್ರಾಯ ಎಂದು ಕಾರಜೋಳ ಇದೇ ಸಂದರ್ಭದಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಕಾಂಗ್ರೆಸ್‌ ಸರ್ಕಾರದವರು ಎಸ್ಸಿ, ಎಸ್ಟಿ ಅನುದಾವನ್ನು ಗ್ಯಾರಂಟಿ ಯೋಜನೆಗೆಂದು ಬಳಸಿಕೊಂಡಿದ್ದಾರೆ. ಎಸ್ಸಿ, ಎಸ್ಟಿ ಸಮುದಾಯದವರು ಸರ್ಕಾರದ ವಿರುದ್ಧ ಶೀಘ್ರವೇ ದಂಗೆ ಏಳಲಿದ್ದಾರೆ ಎಂದರು. 

ಶಾಸಕ ಜಗದೀಶ ಗುಡಗುಂಟಿ ಮಾತನಾಡಿ, ಜಮಖಂಡಿ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡಲು ಪ್ರ್ರಾಮಾಣಿಕವಾಗಿ ಕಾರ್ಯ ಮಾಡುತ್ತೇನೆ. ರಾಜಕೀಯ ಎಂದರೆ ಅಭಿವೃದ್ಧಿ, ಜನರಿಗೆ ಮೂಲಸೌಕರ್ಯ ಒದಗಿಸುವುದಾಗಿದೆ. ಭವ್ಯ ಭಾರತ ಭವಿಷ್ಯ ಬಿಜೆಪಿ ಸರ್ಕಾರದ ಮೇಲಿದೆ. ನಮ್ಮ ನಡೆ ಬಿಜೆಪಿ ಗೆಲ್ಲಿಸುವ ಕಡೆ ಆಗಿರಬೇಕು ಎಂದರು.

ತೇರದಾಳ ಶಾಸಕ ಸಿದ್ದು ಸವದಿ ಮಾತನಾಡಿ, ಕಾರ್ಯಕರ್ತರು ಮನೆ ಗೆದ್ದು ಮಾರು ಗೆಲ್ಲು ಎನ್ನುವಂತೆ ಕಾರ್ಯ ಮಾಡಬೇಕು. ಪ್ರಧಾನಿ ನರೇಂದ್ರ ಮೋದಿ ಅವರನ್ನು ನಾವು ಕಳೆದುಕೊಳ್ಳಬಾರದು. ನಮ್ಮ ನಮ್ಮಲ್ಲಿ ಧರ್ಮ ಜಾತಿ ಎತ್ತಿಕಟ್ಟಿ ನಮ್ಮನಮ್ಮಲ್ಲೇ ಕಾಂಗ್ರಸ್‌ನವರು ತಂದಿಡುತ್ತಾರೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮೋದಿ ಮತ್ತು ಕಮಲವನ್ನು ನೋಡಿ ಮತ ಹಾಕಬೇಕು. ಇಲ್ಲಿ ಯಾರೇ ಅಭ್ಯರ್ಥಿಗಳು ಇದ್ದರೂ ಕಮಲಕ್ಕೆ ಮತ ಚಲಾಯಿಸಿ ಗೆಲ್ಲಿಸುವತ್ತ ಗುರಿ ಇಟ್ಟುಕೊಳ್ಳಬೇಕು. ನನ್ನ ಬೂತ್‌ನಲ್ಲಿ ಹೆಚ್ಚು ಲೀಡ್ ಕೊಡುತ್ತೇನೆ ಎನ್ನುವ ಛಲ ಬೆಳೆಸಿಕೊಳ್ಳಬೇಕು ಎಂದರು.

ವೋಟ್ ಹಾಕಿದ್ರೆ ಅಭಿವೃದ್ದಿ, ಇಲ್ಲಂದ್ರೆ ನೋ ಅಭಿವೃದ್ಧಿ: ಶಾಸಕ ಬಾಲಕೃಷ್ಣ

ಮಾಜಿ ಕುಲಪತಿ ಮಲ್ಲೆಪುರಂ ಜಿ. ವೆಂಕಟೇಶ ಮಾತನಾಡಿ, ಸಮಾಜದಿಂದ ಪಡೆದಿದ್ದನ್ನು ಮರಳಿ ಸಮಾಜಕ್ಕೆ ಕೊಡುವ ಯೋಚನೆ ಹೊಂದಿದವರು ಜಗದೀಶ ಗುಡಗುಂಟಿ. ಈ ಕ್ಷೇತ್ರವನ್ನು ಮಾದರಿಯನ್ನಾಗಿಸುವ ಕನಸು ಹೊಂದಿದ್ದಾರೆ. ಶಿಕ್ಷಣ ಮತ್ತು ಆರೋಗ್ಯಕ್ಕೆ ಹೆಚ್ಚಿನ ಒತ್ತು ಕೊಟ್ಟರೆ ಮಾತ್ರ ದೇಶ ಅಭಿವೃದ್ಧಿ ಹೊಂದುತ್ತದೆ ಎಂದರು. ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ವಿಪ ಸದಸ್ಯ ಎಚ್.ಆರ್.ನಿರಾಣಿ, ವಿಪ ಮಾಜಿ ಸದಸ್ಯ ಜಿ.ಎಸ್. ನ್ಯಾಮಗೌಡ, ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ, ಬೆಳಗಾವಿ ಪ್ರಭಾರಿ ಚಂದ್ರಶೇಖರ ಕವಟಗಿ, ಸಹ ಪ್ರಭಾರಿ ಬಸವರಾಜ ಯಂಕಂಚಿ, ಮಂಡಲದ ಅಧ್ಯಕ್ಷರಾದ ಅಜಯ ಕಡಪಟ್ಟಿ, ಎಂ.ಬಿ. ನ್ಯಾಮಗೌಡ, ಮುಖಂಡ ಡಾ.ಉಮೇಶ ಮಾಬಳಶೆಟ್ಟಿ, ರಾಜ್ಯ ಮಹಿಳಾ ಉಪಾಧ್ಯಕ್ಷೆ ವಿಜಯಲಕ್ಷ್ಮಿ ಉಕುಮನಾಳ, ಜಿಲ್ಲಾ ಉಪಾಧ್ಯಕ್ಷೆ ಡಾ.ವಿಜಯಲಕ್ಷ್ಮಿ ತುಂಗಳ, ಜಿಲ್ಲಾ ಎಸ್ಸಿ ಮೋರ್ಚಾ ಅಧ್ಯಕ್ಷ ಪ್ರಕಾಶ ಕಾಳೆ, ಈಶ್ವರ ಆದೆಪ್ಪನವರ, ನಾಗಪ್ಪ ಸನದಿ, ಕಾಡು ಮಾಳಿ, ಬಸವರಾಜ ಕಲೂತಿ ಇತರರು ಇದ್ದರು. ಮಲ್ಲು ಉಟಗಿ ವಂದೆಮಾತರಂ ಹೇಳಿ ನಿರೂಪಿಸಿದರು, ಪರಶುರಾಮ ಬಿಸನಾಳ ಸ್ವಾಗತಿಸಿದರು, ಗೀತಾ ಸೂರ್ಯವಂಶಿ ವಂದಿಸಿದರು.

click me!