
ನವದೆಹಲಿ(ಡಿ.08): ಹಾಸನದಲ್ಲಿ ಕಾಂಗ್ರೆಸ್ ಹಮ್ಮಿಕೊಂಡ ಸಮಾವೇಶಕ್ಕೆ ಬದಲಾಗಿ ಜೆಡಿಎಸ್ ಸಮಾವೇಶ ಮಾಡಲಾಗುತ್ತದೆ. ಕೈ ನಾಯಕರು ಇಂಥ 10 ಸಮಾವೇಶ ಮಾಡಿದರೂ ನಾವು (ಜೆಡಿಎಸ್) ಎದುರಿಸುತ್ತೇವೆ. ಜೆಡಿಎಸ್ ಕಾರ್ಯಕರ್ತರು, ಸಂಘಟನೆ ಜತೆಗಿದೆ ಎಂದು ಮಾಜಿ ಪ್ರಧಾನಿ, ರಾಜ್ಯಸಭಾ ಸದಸ್ಯ ಎಚ್.ಡಿ.ದೇವೇಗೌಡ ಹೇಳಿದ್ದಾರೆ.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ರಾಜಕೀಯದಲ್ಲಿ ಸೋಲು- ಗೆಲುವುಗಳನ್ನು ಸಮಭಾವದಲ್ಲಿ ಸ್ವೀಕಾರ ಮಾಡಬೇಕು. ಇಂದು ನಮ್ಮನ್ನು ಸೋಲಿಸಿದವರೇ ನಾಳೆ ಗೆಲ್ಲಿಸುತ್ತಾರೆ ಎಂದರು. ಕಾಂಗ್ರೆಸ್ನವರು ನಿನ್ನೆ ಸಭೆ ಮಾಡಿ ಹೋಗಿರಬಹುದು. ಆದರೆ, ಹಾಸನದಲ್ಲಿ ನಾವು ಮಾಡಿದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಜನ ಮಾತನಾಡುತ್ತಾರೆ. ರಾಜಕೀಯವಾಗಿ ದೇವೇಗೌಡರ ಕುಟುಂಬವನ್ನು ಮುಗಿಸಬೇಕು ಅಂಥ ಕೂತರು. ಆದರೆ, ಮುಗಿಸಿದ್ರಾ? ಎಂದು ಪ್ರಶ್ನಿಸುವ ಮೂಲಕ ಕಾಂಗ್ರೆಸ್ಗೆ ತಿರುಗೇಟು ನೀಡಿದರು.
ನಿಖಿಲ್ ನೇತೃತ್ವದಲ್ಲೇ ಪಕ್ಷ ಸಂಘಟನೆ, ಅವರೊಬ್ಬರೇ ಈಗ ಜೆಡಿಎಸ್ ಪಕ್ಷದ ಜೀವಾಳ: ಕುಮಾರಸ್ವಾಮಿ
ನಾವು ಈಗ ಎನ್ಡಿಎ ಭಾಗವಾಗಿದ್ದು, ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ದೆಹಲಿಯಲ್ಲಿ ಓಡಾಡುತ್ತಿದ್ದಾರೆ. ಎಚ್.ಡಿ. ಕುಮಾರಸ್ವಾಮಿ ಅವರು ಸಂಸದರಾಗಿ ಆಯ್ಕೆಯಾಗಿ ಕೇಂದ್ರದಲ್ಲಿ ಮಂತ್ರಿಯಾಗಿದ್ದು, ಪಕ್ಷ, ಶಾಸಕರು, ಕಾರ್ಯಕರ್ತರ ಬಗ್ಗೆ ನೋಡಿಕೊಳ್ಳುವಂತೆ ನಾನೇ ಹೇಳಿದ್ದೇನೆ. ಸೋಮವಾರ ಗೃಹ ಸಚಿವ ಅಮಿತ್ ಶಾ ಅವರನ್ನು ನಿಖಿಲ್ ಭೇಟಿ ಮಾಡುವ ಬಗ್ಗೆ ಗೊತ್ತಿಲ್ಲ. ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಅವರ ಅಸಮಧಾನಕ್ಕೆ ಕಾರಣ ಇದೆ. ಅದರ ಬಗ್ಗೆ ಹೆಚ್ಚು ಚರ್ಚೆ ಮಾಡುವುದಿಲ್ಲ ಎಂದರು.
ಜೆಡಿಎಸ್ ಸಮಾವೇಶ ನಿಖಿಲ್ ಸೋಲು ಸೆಲೆಬ್ರೇಟ್ ಮಾಡೋದಕ್ಕಾ?: ಸಚಿವ ಚಲುವರಾಯಸ್ವಾಮಿ
ಮೈಸೂರು: ಮಗನ ಸೋಲನ್ನ ಮುಂದಿಟ್ಟುಕೊಂಡು ಯಾವ ಸಮಾವೇಶ ಮಾಡ್ತಾರೆ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ವ್ಯಂಗ್ಯವಾಡಿದ್ದರು.
ಮಂಡ್ಯದಲ್ಲಿ ಜೆಡಿಎಸ್ ಸಮಾವೇಶ ಆಯೋಜನೆ ವಿಚಾರ ಕುರಿತು ಮೈಸೂರಿನಲ್ಲಿ ಶುಕ್ರವಾರ ಪ್ರತಿಕ್ರಿಯಿಸಿದ ಅವರು, ನಮ್ಮ ವಿರುದ್ಧ ಒಂದೂವರೆ ವರ್ಷದಿಂದ ಕೌಂಟರ್ ಮಾಡಿ ಸಾಕಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರ ತೀರ್ಪು ಅಂತಿಮ ಎಂದು ಒಪ್ಪಿಕೊಳ್ಳಲಾಗಿದೆ ಎಂದಿದ್ದರು.
ಬಿಜೆಪಿ, ಜೆಡಿಎಸ್ ನವರಿಗೆ ತಾಳ್ಮೆಯೇ ಇಲ್ಲ. ಆರಂಭದಿಂದ ಇಲ್ಲಿಯವರೆಗೂ ಅವರು ಮಲಗಿಯೇ ಇಲ್ಲ. ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್, ಗ್ಯಾರಂಟಿ ಬಗ್ಗೆ ಮಾತನಾಡೋದು, ಸರ್ಕಾರ ತೆಗಿತೀವಿ ಅನ್ನೋದು ಆಗಿದೆ. ದೇವೇಗೌಡರ ಬಾಯಲ್ಲಿ ಸರ್ಕಾರ ತೆಗಿತೀವಿ ಅನ್ನೋ ಮಾತು ಬಂತಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದು ತಪ್ಪು ಅಲ್ವ? ಸಿದ್ದರಾಮಯ್ಯ ಗರ್ವ ಮುರೀತೀನಿ ಅನ್ನೋದು ತಪ್ಪಲ್ವ?. ನಾವು ಚನ್ನಪಟ್ಟಣದಲ್ಲಿ 5 ಸಾವಿರ ಅಂತರದಿಂದ ಗೆಲ್ಲುತ್ತಿದ್ವಿ, ಆದರೆ, ದೇವೇಗೌಡರು, ಕುಮಾರಸ್ವಾಮಿ ಬೈದು 25 ಸಾವಿರ ಅಂತರದಿಂದ ಗೆದ್ದಿದ್ದೇವೆ ಎಂದು ಅವರು ತಿಳಿಸಿದ್ದರು.
ನಿಖಿಲ್ ಎಲೆಕ್ಷನ್ನಲ್ಲಿ ಸೋತಿದ್ದಾನೆ, ಮನುಷ್ಯನಾಗಿ ಅಲ್ಲ: ಮಗನ ಬಗ್ಗೆ ಅನಿತಾ ಕುಮಾರಸ್ವಾಮಿ ಪೋಸ್ಟ್
ನಿಖಿಲ್ ಸೋಲಿಗೆ ತಂದೆಯೇ ಕಾರಣ:
ಮಗನ ಸೋಲನ್ನ ಮುಂದಿಟ್ಟುಕೊಂಡು ಯಾವ ಸಮಾವೇಶ ಮಾಡ್ತಾರೆ? ಕುಮಾರಸ್ವಾಮಿಗೆ ಮಗ ಮೂರು ಬಾರಿ ಸೋತಿದ್ದರೂ ಸಾಕಾಗಿಲ್ಲ ಅನ್ನಿಸುತ್ತೆ. ನಿಖಿಲ್ ಸೋಲಿಗೆ ತಂದೆಯೇ ಕಾರಣ. ನಿಖಿಲ್ ಕುಮಾರಸ್ವಾಮಿ ಮೂರು ಸೋಲಿಗೆ ಯಾರು ಕಾರಣ? ನಿಖಿಲ್ ಸೋಲನ್ನು ಈಗ ಸೆಲೆಬ್ರೇಟ್ ಮಾಡ್ತಾರಾ? ನಿಖಿಲ್ ಬಗ್ಗೆ ನನಗೆ ಒಳ್ಳೆಯ ಅಭಿಪ್ರಾಯ ಇದೆ. ಮಂಡ್ಯದಲ್ಲಿ ಎಲ್ಲಿ ಬೇಕಾದರು ಸಮಾವೇಶ ಮಾಡಲಿ ನಮಗೇನು ಎಂದು ಅವರು ಪ್ರಶ್ನಿಸಿದ್ದರು.
ನಾನು ಯಾವತ್ತೂ ಕುಮಾರಸ್ವಾಮಿ ಬಗ್ಗೆ ಮಾತನಾಡಿಲ್ಲ. ಕುಮಾರಸ್ವಾಮಿ ವೈರಿ ಎಂದು ಹೇಳಿಲ್ಲ. ಹಲವು ರಾಜಕೀಯ ವಿಚಾರ ಹೇಳಿಕೆಗಳಿಗೆ ಉತ್ತರ ಕೊಟ್ಟಿದ್ದೇವೆ. ಜನರಿಂದ ನಮಗೆ ಉತ್ತಮ ಬಹುಮತ ಬಂದಿದೆ. ಜನರಿಗೆ ಉತ್ತಮ ಆಡಳಿತ ನೀಡೋದೇ ನಮ್ಮ ಗುರಿ. 2028ಕ್ಕೂ ನಮ್ಮ ಪಕ್ಷವನ್ನ ಅಧಿಕಾರಕ್ಕೆ ತರೋದು ನಮ್ಮ ಗುರಿ ಎಂದರು. ಮಂಡ್ಯ ಏಳರಲ್ಲಿ ಆರು ಕ್ಷೇತ್ರ ಗೆದ್ದಿದ್ದೇವೆ. ಮುಂದಿನ ದಿನಗಳಲ್ಲಿ ಏಳಕ್ಕೆ ಏಳು ಕ್ಷೇತ್ರ ಗೆಲ್ಲುತ್ತೇವೆ. ಕುಮಾರಸ್ವಾಮಿ ತಮ್ಮ ವರ್ಚಸ್ಸಿನಿಂದ ಲೋಕಸಭೆಯಲ್ಲಿ ಗೆದ್ದಿಲ್ಲ. ಮೋದಿ ವರ್ಚಸ್ಸಿನಿಂದ ಗೆದ್ದಿರೋದು. ಒಂದು ಸೋಲಿನಿಂದ ವರ್ಚಸ್ಸಿನ ಬಗ್ಗೆ ಅಳೆಯಲಿಕ್ಕೆ ಆಗಲ್ಲ ಎಂದು ಹೇಳಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.