
ಮಂಡ್ಯ (ಆ.09): ಎಚ್.ಡಿ.ಕುಮಾರಸ್ವಾಮಿ ಎನ್ಡಿಎ ನಾಯಕರಲ್ಲಿ ಒಬ್ಬರು ಅದೇ ರೀತಿ ಪ್ರೀತಂಗೌಡ ಅವರು ಹಾಸನದಲ್ಲಿ ವರ್ಚಸ್ವಿ ನಾಯಕ. ನಾವು ಇಬ್ಬರನ್ನು ಸಮಾನ ಗೌರವದಿಂದ ಕಾಣುತ್ತೇವೆ ಎಂದು ಮಾಜಿ ಸಚಿವ ಸಿ.ಟಿ.ರವಿ ಹೇಳಿದರು. ಮೈತ್ರಿ ಹಿನ್ನೆಲೆಯಲ್ಲಿ ನಾವು ಯಾರನ್ನೂ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ. ಇಬ್ಬರನ್ನೂ ಒಟ್ಟಿಗೆ ಕರೆದುಕೊಂಡು ಹೋಗುತ್ತೇವೆ. ಪ್ರೀತಂಗೌಡ ಇನ್ನೂ ಚಿಕ್ಕವರಿದ್ದಾರೆ. ಹಾಸನದಲ್ಲಿ ಅವರದ್ದೇ ಆದ ಪ್ರಭಾವವನ್ನು ಹೊಂದಿದ್ದಾರೆ. ಕುಮಾರಸ್ವಾಮಿ ಅವರು ಜೆಡಿಎಸ್ನ ನಾಯಕರಾಗಿರುವುದರಿಂದ ವೈಮನಸ್ಸಿಗೆ ಎಡೆಮಾಡಿಕೊಡದಂತೆ ಮುನ್ನಡೆಸಿಕೊಂಡು ಹೋಗುವುದಾಗಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ನಾವು ಉದ್ದೇಶಪೂರ್ವಕವಾಗಿ ಯಾರನ್ನೂ ಕರೆಸಿಲ್ಲ. ಗಲಾಟೆ, ಗೊಂದಲ ಎಬ್ಬಿಸುವ ಸಂಚನ್ನೂ ನಡೆಸಿಲ್ಲ. ಪಾದಯಾತ್ರೆಗೆ ಬಂದಿದ್ದ ಸಾವಿರಾರು ಜನರಲ್ಲಿ ಕೆಲವರಷ್ಟೇ ಘೋಷಣೆ ಕೂಗಿದ್ದಾರೆ. ಅದಕ್ಕೆ ಯಾರ ಪ್ರಚೋದನೆಯೂ ಇರಲಿಲ್ಲ. ಕೆಲವರಿಂದಾದ ತಪ್ಪನ್ನು ಸರಿಪಡಿಸಿಕೊಂಡು ಹೊಂದಾಣಿಕೆಯಿಂದ ಸಾಗುವುದಾಗಿ ತಿಳಿಸಿದರು.
ನಾಗರ ಪಂಚಮಿ ಹಬ್ಬದಂದೇ ಹಾವು ಕಚ್ಚಿ ಬಾಣಂತಿ ಸಾವು: 4 ತಿಂಗಳ ಹಸುಗೂಸು ಅನಾಥ!
ಲೂಟಿ ಹಣದಲ್ಲಿ ಕೈ ಹೈಕಮಾಂಡ್ ಪಾಲು: ರಾಜ್ಯ ಕಾಂಗ್ರೆಸ್ ಸರ್ಕಾರ ವಾಲ್ಮೀಕಿ ನಿಗಮದಲ್ಲಿ ನಡೆಸಿರುವ ಹಣ ದುರುಪಯೋಗ ಹಾಗೂ ಮೈಸೂರು ಮುಡಾ ಹಗರಣದ ಬಗ್ಗೆ ರಾಹುಲ್ಗಾಂಧಿ ಸೌಂಡ್ಲೆಸ್ ಆಗಿದ್ದರೆ ಖರ್ಗೆ ವಾಯ್ಸ್ಲೆಸ್ ಆಗಿದ್ದಾರೆ ಎಂದು ಮಾಜಿ ಸಚಿವ ಸಿ.ಟಿ.ರವಿ ಟೀಕಿಸಿದರು. ಖರ್ಗೆ ಮತ್ತು ರಾಹುಲ್ ಅಂತಾರಾಷ್ಟ್ರೀಯ ಬೆಳವಣಿಗೆಗಳ ವಿಚಾರವಾಗಿ ಮಾತನಾಡುತ್ತಾರೆ. ಆದರೆ, ಕಾಂಗ್ರೆಸ್ ಸರ್ಕಾರ ನಡೆಸಿರುವ ಹಗರಣಗಳ ಬಗ್ಗೆ ಬಾಯೇ ಬಿಡುವುದಿಲ್ಲ. ಕರ್ನಾಟಕದಲ್ಲಿ ನಡೆದಿರುವ ಹಣದ ಲೂಟಿಯಲ್ಲಿ ಹೈಕಮಾಂಡ್ ಪಾಲೂ ಇದೆ ಎಂದಂತಾಗಿದೆ.
ಭ್ರಷ್ಟಾಚಾರಕ್ಕೆ ಕೈಕಮಾಂಡ್ ಬೆಂಬಲವಾಗಿ ನಿಂತಿರುವುದು ಅವರ ಮೌನದಿಂದಲೇ ತಿಳಿಯುತ್ತದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಕುಟುಕಿದರು. ಎಸ್ಸಿಎಸ್ಪಿ, ಟಿಎಸ್ಪಿ ಅನುದಾನವನ್ನು ಬೇಕಾದಕ್ಕೆಲ್ಲಾ ಬಳಸಿಕೊಳ್ಳಬಹುದು ಎಂಬುದಕ್ಕಾಗಿಯೇ ಯೋಜನೆ ರೂಪಿಸಿದರೇ. ಹಾಗಾದರೆ ಆ ಯೋಜನೆ ಇರೋದು ದಲಿತರ ಉದ್ಧಾರಕ್ಕಲ್ಲ. ವಾಲ್ಮೀಕಿ ನಿಗಮ ಇರುವುದು ಆ ಸಮುದಾಯದವರ ಅಭಿವೃದ್ಧಿಗಲ್ಲ. ಯೋಜನೆಗಳ ಹೆಸರಿನಲ್ಲಿ ಇವರು ಕೊಳ್ಳೆ ಹೊಡೆಯುವುದಕ್ಕಾ ಇರೋದು ಎಂದು ಪ್ರಶ್ನಿಸಿದರು.
ಬಿಜೆಪಿ-ಜೆಡಿಎಸ್ನವರದು ಪಾದಯಾತ್ರೆಯಲ್ಲ, ಪಾಪ ವಿಮೋಚನಾ ಯಾತ್ರೆ ಎಂದಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, ಡಿ.ಕೆ.ಶಿವಕುಮಾರ್ ಗಳಿಸಿರುವ ಪುಣ್ಯ ಎಷ್ಟು ಎನ್ನುವುದನ್ನು ಅವರ ಆ ದಿನಗಳ ಟ್ರ್ಯಾಪ್ ರೆಕಾರ್ಡ್ಸ್ ಹೇಳುತ್ತವೆ. ಅವರು ಗಳಿಸಿದ ಪುಣ್ಯದಿಂದಲೇ ತಿಹಾರ್ ಜೈಲ್ಗೆ ಹೋಗಿಬಂದಿದ್ದಾರೆ. ಇನ್ನೂ ಬೇಲ್ ಮೇಲೆ ಓಡಾಡುತ್ತಿದ್ದಾರೆ ಎಂದು ಮಾತಿನ ಈಟಿಯಿಂದ ತಿವಿದರು. ನಮ್ಮ ಸರ್ಕಾರದ ಅವಧಿಯಲ್ಲಿ ನಡೆದಿರುವ ೨೧ ಹಗರಣಗಳ ಬಗ್ಗೆ ಮಾತನಾಡುತ್ತಿದ್ದೀರಿ. ಬ್ಲಾಕ್ಮೇಲ್ ಮಾಡುವ ಬದಲು ಕ್ರಮ ವಹಿಸಿ ತನಿಖೆಗೆ ಆದೇಶಿಸಿ. ಈಗ ನಿಮ್ಮದೇ ಸರ್ಕಾರವಿರುವುದರಿಂದ ನಿಮಗೆ ಯಾರು ಅಡ್ಡಿಯಾಗಿದ್ದಾರೆ. ಎಲ್ಲವನ್ನೂ ತನಿಖೆಗೊಳಪಡಿಸಿ ತಪ್ಪಿತಸ್ಥರನ್ನು ಶಿಕ್ಷೆಗೆ ಗುರಿಪಡಿಸುವಂತೆ ಆಗ್ರಹಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.