
ಢಾಕಾ: ಶೇಖ್ ಹಸೀನಾ ಅವರ 15 ವರ್ಷಗಳ ಆಡಳಿತವನ್ನು ಸಾಮೂಹಿಕ ದಂಗೆ ಕೊನೆಗೊಳಿಸಿದ ನಂತರದ ಮೊದಲ ಬಾರಿಗೆ, ಬಾಂಗ್ಲಾದೇಶದ ಸಂಸತ್ ಚುನಾವಣೆ ಗುರುವಾರ ನಡೆಯಲಿದೆ.
ಚುನಾವಣೆಯಲ್ಲಿ ಬಿಎನ್ಪಿ ಹಾಗೂ ಜಮಾತೆ ಇಸ್ಲಾಮಿ ನಡುವೆ ನೇರ ಸ್ಪರ್ಧೆ ಏರ್ಪಟ್ಟಿದೆ. ಆದರೆ ಹಸೀನಾ ಅವರ ಅವಾಮಿ ಲೀಗ್ ಅನ್ನು ಸ್ಪರ್ಧೆಯಿಂದ ಅನರ್ಹಗೊಳಿಸಲಾಗಿದೆ. ಹೀಗಾಗಿ ಎಷ್ಟರ ಮಟ್ಟಿಗೆ ಈ ಚುನಾವಣೆ ವಿಶ್ವಾಸಾರ್ಹವಾಗಲಿದೆ ಹಾಗೂ ಕೋಮು ದಂಗೆಯಲ್ಲಿ ತತ್ತರಿಸಿರುವ ದೇಶವನ್ನು ಮರಳಿ ಪ್ರಜಾಪ್ರಭುತ್ವದ ಹಾದಿಗೆ ಒಯ್ಯಲಿದೆ ಎಂಬುದು ಪ್ರಶ್ನೆಯಾಗಿದೆ.
ಹಸೀನಾ ಪದಚ್ಯುತಿ ನಂತರ ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತ ಮುಹಮ್ಮದ್ ಯೂನಸ್ ಮಧ್ಯಂತರ ಸರ್ಕಾರ ನೋಡಿಕೊಳ್ಳುತ್ತಿದ್ದಾರೆ.
ಬಾಂಗ್ಲಾದೇಶದ ಸಂಸತ್ತು 350 ಸ್ಥಾನ ಹೊಂದಿದ್ದು, 300 ಸದಸ್ಯರನ್ನು ನೇರ ಚುನಾವಣೆಯಲ್ಲಿ ಆಯ್ಕೆ ಮಾಡಲಾಗುತ್ತದೆ. 50 ಮಹಿಳಾ ಮೀಸಲು ಸ್ಥಾನಗಳಿದ್ದು, ಚುನಾಯಿತ ಸಂಸದರು ಸಂಸತ್ತು ರಚನೆ ಆದ ನಂತರ ಆಯ್ಕೆ ಮಾಡುತ್ತಾರೆ.
299 ಸ್ಥಾನಗಳಿಗೆ ಗುರುವಾರ ಮತದಾನ ನಡೆಯಲಿದೆ. ಅಭ್ಯರ್ಥಿಯೊಬ್ಬರ ನಿಧನದ ಕಾರಣ ಒಂದು ಸ್ಥಾನದ ಚುನಾವಣೆ ಮುಂದೂಡಲಾಗಿದೆ. f 1,755 ಅಭ್ಯರ್ಥಿಗಳಿದ್ದು, 12.8 ಕೋಟಿ ಮತದಾರರು ಮತ ಚಲಾಯಿಸಲಿದ್ದಾರೆ. ಸಂಸತ್ತು 5 ವರ್ಷಗಳ ಅವಧಿಗೆ ಸೇವೆ ಸಲ್ಲಿಸುತ್ತದೆ.
50 ರಾಜಕೀಯ ಪಕ್ಷಗಳಿದ್ದರೂ ಬಿಎನ್ಪಿ ಹಾಗೂ ಜಮಾತೆ ಇಸ್ಲಾಮಿ ಪ್ರಮುಖವಾಗಿ ಸ್ಪರ್ಧಿಸುತ್ತಿವೆ. ಎರಡೂ ಪಕ್ಷಗಳು ಭಾರತದಲ್ಲಿನ ಗ್ಯಾರಂಟಿಗಳ ರೀತಿ ಭರವಸೆ ಕೊಟ್ಟಿದ್ದು, ಚುನಾವಣೆ ರಂಗೇರಿದೆ. ದಿವಂಗತ ಬಿಎನ್ಪಿ ನಾಯಕಿ ಖಲೀದಾ ಜಿಯಾ ಅವರ ಪುತ್ರ ತಾರೀಖ್ ರೆಹಮಾನ್ ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿತರಾಗಿದ್ದು, ಗೆಲ್ಲುವ ಮುಂಚೂಣಿಯಲ್ಲಿದ್ದಾರೆ.
ಹಸೀನಾ ಇಲ್ಲದ ಮೊದಲ ಚುನಾವಣೆ:
ಅಂದ ಹಾಗೆ ಕೆಲವು ದಶಕಗಳ ಬಳಿಕ ಶೇಖ್ ಹಸೀನಾ ಇಲ್ಲದ ಇಲ್ಲದ ಮೊದಲ ಚುನಾವಣೆ ಇದಾಗಿದೆ. ಅವರ ಪಕ್ಷದ ಸ್ಪರ್ಧೆ ನಿರ್ಬಂಧ ಜನಾಕ್ರೋಶಕ್ಕೂ ಕಾರಣವಾಗಿದೆ. ಹೀಗಾಗಿ ಚುನಾವಣೆಯ ಸಾಚಾತನವನ್ನು ಜನತೆ ಪ್ರಶ್ನಿಸಿದ್ದಾರೆ. ಸದ್ಯ ಶೇಖ್ ಹಸೀನಾ ಬಾಂಗ್ಲಾದೇಶ ತೊರೆದು ಭಾರತದಲ್ಲಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.