ಮೊಟ್ಟೆ ಎಸೆದ್ರೆ ನೀವೇನು ವೀರರಾ ಶೂರರಾ ? ಅಧಿವೇಶನದಲ್ಲಿ ಗುಡುಗಿದ ಸಿದ್ದರಾಮಯ್ಯ!

By Ramesh BFirst Published Sep 13, 2022, 5:00 PM IST
Highlights

ಸಿದ್ದರಾಮಯ್ಯನವರ ಮೇಲೆ ಕೊಡಗಿನಲ್ಲಿ ಮೊಟ್ಟೆ ಎಸೆದ ಪ್ರಕರಣ ಮುಂಗಾರು ಅಧಿವೇಶನದಲ್ಲೂ ಪ್ರತಿಧ್ವನಿಸಿದೆ. ಈ ಬಗ್ಗೆ ಸಿದ್ದರಾಮಯ್ಯ ಪ್ರಸ್ತಾಪಿಸಿ ಬಿಜೆಪಿ ವಿರುದ್ಧ ಗುಡುಗಿದರು.
 

ಬೆಂಗಳೂರು, (ಸೆಪ್ಟೆಂಬರ್.13): ಸಿದ್ದರಾಮಯ್ಯನವರ ಮೇಲೆ ಕೊಡಗಿನಲ್ಲಿ ಮೊಟ್ಟೆ ಎಸೆದಿರುವ ಪ್ರಕರಣ ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನ ಮೂಡಿಸಿತ್ತು. ಇದೀಗ ಈ ಪ್ರಕರಣ ಅಧಿವೇಶನದಲ್ಲೂ ಪ್ರತಿಧ್ವನಿಸಿದೆ.

ಹೌದು...ಮೊಟ್ಟೆ ಎಸೆದ ಪ್ರಕರಣ ಕರ್ನಾಟಕ ವಿಧಾನಸಭೆಯ ಮಳೆಗಾಲ ಅಧಿವೇಶನದ ಎರಡನೇ ದಿನವಾದ ಇಂದು(ಮಂಗಳವಾರ) ಸಿದ್ದರಾಮಯ್ಯ ಮತ್ತು ಬಿಜೆಪಿ ನಾಯಕರ ನಡುವಿನ ಟಾಕ್‌ ಫೈಟ್ ನಡೆಯಿತು. ಈ ವೇಳೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಆಡಳಿತರೂಢ ಬಿಜೆಪಿ ಶಾಸಕರಿಗೆ ಅದರಲ್ಲೂ ಕೊಡಗು ಹಾಗೂ ಮಡಿಕೇರಿ ಬಿಜೆಪಿ ಶಾಸಕರಿಗೆ ನೀರಿಳಿಸಿದರು.ಇನ್ನು ಸಿದ್ದರಾಮಯ್ಯ ವರ್ಸಸ್ ಬಿಜೆಪಿ ಶಾಸಕರ ಮೊಟ್ಟೆ ಕಿತ್ತಾಟ ಹೇಗಿತ್ತು ಎನ್ನುವುದು ಈ ಕೆಳಗಿನಂತಿದೆ.
 
ಮೊದಲಿಗೆ ಧ್ವನಿ ಎತ್ತಿದ ಸಿದ್ದರಾಮಯ್ಯ, ನಾನು ರೈತರ ಕಷ್ಟ ಸುಖ ಕೇಳೊಕೆ ಕೊಡಗಿಗೆ ಹೋಗಿದ್ದೆ.ಆಗ  ನನಗೆ ಕಪ್ಪು ಬಾವುಟ ತೋರಿಸೋದು, ಮೊಟ್ಟೆ ಎಸೆಯೋದು ಮಾಡಿದ್ರೆ ಹೇಗೆ? ಎಂದು ಪ್ರಶ್ನಿಸಿದರು. ಅದೇನೊ ಬೇರೆ ಕಾರಣಕ್ಕೆ ಮೊಟ್ಟೆ ಎಸೆದಿದ್ದು ಎಂದು ಪತ್ರಿಕೆಯಲ್ಲಿ ಓದಿದೆ ಎಂದು ಸ್ಪೀಕರ್ ಉತ್ತರಿಸಿದ್ರು.

ರಣೋತ್ಸಾಹದಿಂದ ಅಬ್ಬರಿಸಿದ್ದ ಸಿದ್ದರಾಮಯ್ಯ ಈಗ ಸೈಲೆಂಟ್; ತೊಡೆ ತಟ್ಟಿ ನಿಂತಿದ್ದ ಟಗರು ತಣ್ಣಗಾಗಿದ್ದೇಕೆ?

ಕೆಜೆ ಬೋಪಯ್ಯ ಮಾತನಾಡಲು ಎದ್ದು ನಿಂತಾಗ ಈಲ್ಡ್ ಆಗೋದಿಲ್ಲ ಎಂದು ಸಿದ್ದರಾಮಯ್ಯ ಗುಡುಗಿದರು. ಆಗ ಮಧ್ಯೆ ಪ್ರವೇಶಿಸಿದ ಅಪ್ಪಚ್ವು ರಂಜನ್  ಮೊಟ್ಟೆ ಹೊಡೆದವರು ನಿಮ್ಮ ಪಾರ್ಟಿಯವರೇ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಈ ಕೆಲಸ ಮಾಡಿಸಿದ್ದು ಅಪ್ಪಚ್ಚು ರಂಜನ್ ಎಂದು ನೇರವಾಗಿ ಹೇಳಿದ್ರು.

ನಾವು ಮೊದಲು ಈ ಕೆಲಸ ಮಾಡಿಯೇ ಬಂದಿರೋದು. ಇದಕ್ಕೆಲ್ಲಾ ನಾನು ಹೆದರೋದಿಲ್ಲ. ಮೊಟ್ಟೆ ಎಸೆದ್ರೆ ನೀವೇನು ವೀರರಾ ಶೂರರಾ ? ಇದಕ್ಕೆಲ್ಲಾ ಹೆದರೋ ಮಕ್ಕಳಲ್ಲ ನಾವು. ಅದೇ ಮೊಟ್ಟೆ ಎಸೆಯೋ ಕೆಲಸ ಇಡಿ ರಾಜ್ಯಾದ್ಯಂತ ಮಾಡಿಸಬಲ್ಲೆ.ಆದ್ರೆ ಅಂತ ಕೆಲಸ ಮಾಡಲ್ಲ ಎಂದು ಅಬ್ಬರದಿಂದ ಹೇಳಿದರು.

ಇದಾದ ಬಳಿಕ ಕೆ.ಜಿ. ಬೋಪಯ್ಯ ಹಾಗೂ ಸಿದ್ದರಾಮಯ್ಯ ನಡುವೆ ಟಿಪ್ಪು ವಿಚಾರಕ್ಕೆ ವಾಕ್ಸಮರ ಶುರುವಾಗಿದ್ದು, ಟಿಪ್ಪು ಖಡ್ಗ ಹಿಡಿದಿಲ್ವಾ ನೀವು ನಾಚಿಕೆ ಆಗಲ್ವಾ ನಿಮಗೆ ಎಂದು ಸಿದ್ದರಾಮಯ್ಯ ಬೋಪಯ್ಯಗೆ ತಿವಿದರು.

ಕೊಡಗಿಗೆ ಟಿಪ್ಪು ಜಯಂತಿ ಮಾಡಿ ಅವಮಾನ ಮಾಡಿದವರು ನೀವು ಎಂದ ಬೊಪಯ್ಯ, ಅಪ್ಪಚ್ಚು ರಂಜನ್ ತಿರುಗೇಟು ಕೊಟ್ರು. ಇದಕ್ಕೆ ಸಿಡಿದ ಸಿದ್ದರಾಮಯ್ಯ, ಕೊಡಗಿನ ಜನ ಒಳ್ಳೆಯವರು. ನಿಮ್ಮಿಂದಾಗಿ ಕೊಡಗು ಇಂದು ಹಾಳಾಗ್ತಾ ಇದೆ.ಗೂಟ ಹೊಡೆದುಕೊಂಡು ನೀವೆ ಇರ್ತಿರಾ ಎಂದು ಸಿದ್ದರಾಮಯ್ಯ ಗುಡುಗಿದರು. ಈ ಮೂಲಕ ಪರೋಕ್ಷವಾಗಿ ನಾವು ಅಧಿಕಾರಕ್ಕೆ ಬಂದ ಮೇಲೆ ನಮ್ಮ ತಾಕತ್ತು ತೋರಿಸುತ್ತೇವೆ ಎಂದು ಎಚ್ಚರಿಸಿದರು.

ಒಟ್ಟಿನಲ್ಲಿ ಎರಡನೇ ದಿನದ ಅಧಿವೇಶನದಲ್ಲಿ ಮೊಟ್ಟೆ ಎಸೆದ ಸಿಟ್ಟನ್ನು ಸಿದ್ದರಾಮಯ್ಯ, ಬಿಜೆಪಿ ಶಾಸಕರಾದ ಅಪ್ಪಚ್ಚು ರಂಜನ್, ಕೆಜೆ ಬೊಪಯ್ಯ ತೋರಿಸಿ ಬೆವರಿಳಿಸಿದ್ರು.

click me!