ಮೈಸೂರು (ಜೂ.10): ಮೋದಿಗೆ ಅಂಕ ನೀಡುವ ಅರ್ಹತೆ ಸಿಎಂ ಸಿದ್ದರಾಮಯ್ಯ ಅವರಿಗೆ ಇದೆಯಾ ಎಂದು ಪ್ರಶ್ನಿಸುವ ಮೂಲಕ ಮಾಜಿ ಸಂಸದ ಪ್ರತಾಪ್ ಸಿಂಹ ಅವರು, ಮೋದಿ ಸರ್ಕಾರಕ್ಕೆ ಶೂನ್ಯ ಅಂಕ ನೀಡಿದ ಸಿಎಂಗೆ ತಿರುಗೇಟು ನೀಡಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊಲೆಗಳ ಸರಣಿಗೆ ದಾರಿ ಮಾಡಿ ಕೊಟ್ಟಿದ್ದು ಯುವನಿಧಿ ಹೆಸರಿನಲ್ಲಿ ಟೋಪಿ ಹಾಕಿದ್ದು ಗೃಹಲಕ್ಷ್ಮಿ ಹೆಸರಲ್ಲಿ ಟೋಪಿ ಹಾಕಿದ್ದು ಸಿಎಂ ಸಾಧನೆ.
ಪ್ರತಿ ನಿತ್ಯ ಜನರಿಗೆ ಟೋಪಿ ಹಾಕುವ ಸಿಎಂಗೆ ಮೋದಿ ಸಾಧನೆ ಅಳೆಯುವ ಅರ್ಹತೆ ಇದ್ಯಾ ಎಂದು ಪ್ರಶ್ನಿಸಿದರು. ಮೈಸೂರಿಗೆ ಮೋದಿ ಕೊಡುಗೆ ಬಹಳ ಇದೆ. ನೀವೇನು ಕೊಟ್ಟಿದ್ದಿರಾ ಮೈಸೂರಿಗೆ ಹೇಳಿ? ಮೈಸೂರಿಗೆ ಬೀಗರ ಊಟಕ್ಕೆ ಬರೋದು, ಮಾಧ್ಯಮದ ಮುಂದೆ ಉಡಾಫೆ ಹೇಳಿಕೆ ಕೊಡುವುದಷ್ಟೆ ಸಿಎಂ ಕೆಲಸ. ಅವರಿಗೆ ಮೋದಿ ಸಾಧನೆ ಏನ್ ಗೊತ್ತಿದೆ ಹೇಳಿ ಎಂದು ಪ್ರತಾಪಸಿಂಹ ಕಿಡಿಕಾರಿದರು.
ಪೊಲೀಸ್ ವಿರೋಧಿ ಸಿಎಂ: ಇಷ್ಟು ದಿನ ಹಿಂದೂ ವಿರೋಧಿ ಆಗಿದ್ದ ಸಿಎಂ ಈಗ ಪೊಲೀಸ್ ಇಲಾಖೆ ವಿರೋಧಿ ಆಗಿದ್ದಾರೆ. ಹಿಂದುಳಿದವರ ಉದ್ಧಾರಕ ಎಂದು ಹೇಳುವ ಸಿಎಂ ವಾಲ್ಮೀಕಿ ಸಮುದಾಯದ ನಿಷ್ಠಾವಂತ ಅಧಿಕಾರಿ ದಯಾನಂದ್ ಅವರನ್ನು ಯಾಕೆ ಟಾರ್ಗೆಟ್ ಮಾಡಿದ್ದಾರೆ? ದಯಾನಂದ್ ಒಬ್ಬ ಸಮರ್ಥ ನಿಷ್ಠಾವಂತ ಅಧಿಕಾರಿ. ನಾಯಕ ಸಮುದಾಯದ ವ್ಯಕ್ತಿ ಮೇಲೆ ನಿಮಗೆ ಯಾಕೆ ಇಷ್ಟು ಕೋಪ. ಪೊಲೀಸ್ ಇಲಾಖೆ ಅನ್ ಫಿಟ್ ಅಲ್ಲ. ಸರ್ಕಾರ ಅನ್ ಫಿಟ್ ಎಂದು ಅವರು ವಾಗ್ದಾಳಿ ನಡೆಸಿದರು.
ಘಟನೆ ನಡೆದು ಒಂದು ವಾರವಾದರೂ ಸಿಎಂ ನೈತಿಕ ಹೊಣೆ ಹೊತ್ತಿಲ್ಲ. ಸಿಎಂ ನಾಲ್ಕು ಹನಿ ಕಣ್ಣೀರು ಹಾಕಿಲ್ಲ. ಅನುಕಂಪ, ಪಶ್ಚಾತ್ತಾಪದ ಮಾತು ಬಂದಿಲ್ಲ. ಕಾಲ್ತುಳಿತದ ವಿಚಾರ ಎರಡು ಗಂಟೆ ತಡವಾಗಿ ಗೊತ್ತಾಯಿತು ಎನ್ನುವುದಾದರೆ ನೀವು ರಾಜ್ಯ ಹೇಗೆ ಸಂಭಾಳಿಸುತ್ತೀರಿ? ಸಿಎಂ ರಾಜಕೀಯ ಕಾರ್ಯದರ್ಶಿ ಗೋವಿಂದರಾಜ್ ರನ್ನು ಯಾಕೆ ತೆಗೆದು ಹಾಕಿದ್ರಿ. ಮೊದಲು ಈ ರಹಸ್ಯ ಬಿಚ್ಚಿಡಿ ಎಂದು ಅವರು ಆಗ್ರಹಿಸಿದರು.
ಸಿಎಂ ತಮ್ಮ ಮೊಮ್ಮಗನಿಗೆ ಫೋಟೋಗ್ರಾಫ್, ಆಟೋಗ್ರಾಫ್ ಕೊಡಿಸಲು ಓಡುತ್ತಿದ್ದರೇನೋ. ಅದಕ್ಕೆ ಕಾಲ್ತುಳಿತ ವಿಚಾರ ಗೊತ್ತಾಗಿಲ್ಲ. ಸತ್ಯವತಿ ಯಾಕೆ ಒತ್ತಡ ಹೇರಿ ಕಾರ್ಯಕ್ರಮ ಮಾಡಿಸಿದರು. ಯಾಕೆ ಅವರನ್ನು ಇನ್ನೂ ನೀವು ಅಮಾನತು ಮಾಡಿಲ್ಲ. ಯಾಕೆ ಅವರನ್ನು ರಕ್ಷಣೆ ಮಾಡುತ್ತಿದ್ದಿರಿ? ಸತ್ಯವತಿ ಅವರು ಯಾಕೆ ಅಭಿಮಾನಿಗಳಿಗೆ ಚಿನ್ನಸ್ವಾಮಿ ಸ್ಟೇಡಿಯಂಗೆ ಹೋಗಿ ಅಂತಾ ಹೇಳಿದ್ರು ಎಂದು ಪ್ರಶ್ನಿಸಿದರು.
ಸಿಎಂಗೆ ಆಡಳಿತದ ಲಂಗು ಲಗಾಮು ಸಿಕ್ತಿಲ್ಲ. 11 ಜನರ ಸಾವಿಗೆ ಕಣ್ಣೀರು ಹಾಕಿ ಅವರ ಕುಟುಂಬಕ್ಕೆ ಹೋಗಿ ಸಾಂತ್ವನ ಹೇಳಬೇಕಾದ ಸಿಎಂ ಮದ್ವೆ ಮುಂಜಿ ಅಂತಾ ಓಡಾಡುತ್ತಿದ್ದಾರೆ. ಸಿಎಂ ಅವರೇ ನಿಮಗೆ ಮದ್ವೆ ಊಟ, ಬೀಗರ ಊಟನೇ ಮುಖ್ಯನಾ? ಸಂವೇದನಾ ರಹಿತ ವ್ಯಕ್ತಿ ಸಿಎಂ. ವಿಧಾನಸೌಧಕ್ಕೆ ನೀವು ಸಿಎಂ ಅನ್ನುವುದಾದರೆ ನೀವು ಒಬ್ಬ ಸಿಎಂ ಅಲ್ಲ. ಈ ರಾಜ್ಯವನ್ನು ಅಧಿಕಾರಿಗಳಿಗೆ ಬರೆದು ಕೊಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.