ಬಿಜೆಪಿ ತೊರೆದು ಕಾಂಗ್ರೆಸ್‌ ಸೇರ್ತಾರಾ ಮಾಜಿ ಸಚಿವ?: ಡಿಕೆಶಿ ಹೇಳಿದ್ದಿಷ್ಟು

By Kannadaprabha NewsFirst Published Nov 5, 2021, 6:19 AM IST
Highlights

*   ಯೋಗಿ ಕಾಂಗ್ರೆಸ್‌ ಸೇರ್ಪಡೆ ಗೊತ್ತಿಲ್ಲ: ಡಿಕೆಶಿ
*   ಮಾರ್ಕೆಟ್‌ ಹೆಚ್ಚಿಸಿಕೊಳ್ಳಲು ಸುದ್ದಿ ಹಬ್ಬಿಸ್ತಾರೆ
*   ಹಾನಗಲ್‌ ಕಾಂಗ್ರೆಸ್‌ ಟಿಕೆಟ್‌ ಅನ್ನು ಬಿಜೆಪಿಗರೂ ಕೇಳಿದ್ದರು 
 

ಬೆಂಗಳೂರು(ನ.05): ಸಿ.ಪಿ.ಯೋಗೇಶ್ವರ್‌(CP Yogeeshwara) ಅವರು ಕಾಂಗ್ರೆಸ್‌(Congress)  ಸೇರುವ ಪ್ರಯತ್ನದ ಬಗ್ಗೆ ನನಗೆ ಮಾಹಿತಿ ಇಲ್ಲ. ಕೆಲವರು ಸುದ್ದಿ ಹರಿದುಬಿಟ್ಟು ತಮ್ಮ ಮಾರುಕಟ್ಟೆ ಹೆಚ್ಚಿಸಿಕೊಳ್ಳಲು ಪ್ರಯತ್ನಿಸುತ್ತಿರುತ್ತಾರೆ. ಅವರು ಹಿಂದೆ ಪರೀಕ್ಷೆ ಬರೆದಿದ್ದೇವೆ ಎಂದು ಹೇಳಿದ್ದು ಮಾತ್ರ ಗೊತ್ತಿದೆ. ಪಾಸಾಗಿದ್ದಾರೋ ಅಥವಾ ಫೇಲಾಗಿದ್ದಾರೋ ಅವರನ್ನೇ ಕೇಳಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌(DK Shivakumar) ಹೇಳಿದ್ದಾರೆ.

ಗುರುವಾರ ನಗರದಲ್ಲಿ(Bengaluru) ಯೋಗೇಶ್ವರ್‌ ಕಾಂಗ್ರೆಸ್‌ ಸೇರುವ ಪ್ರಯತ್ನದ ಕುರಿತ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ‘ಕೆಪಿಸಿಸಿ ಅಧ್ಯಕ್ಷನಾಗಿ ನಾನು ಒಂದು ಹೆಸರು ಹೇಳಲು ಸಾಧ್ಯವಿಲ್ಲ. ಕೆಲವರು ಸುದ್ದಿ ಹರಿಬಿಟ್ಟು ತಮ್ಮ ಮಾರುಕಟ್ಟೆ ಸೃಷ್ಟಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ನೀವು ನಿಮ್ಮ ಸಂಸ್ಥೆಯಿಂದ ಬೇರೆ ಸಂಸ್ಥೆಗೆ ಹೋಗುತ್ತೇನೆ ಎಂದರೆ ನಿಮ್ಮನ್ನು ಕರೆದು ಸಂಬಳ ಹೆಚ್ಚಿಸುತ್ತಾರಲ್ಲಾ ಇದೂ ಹಾಗೆಯೇ’ ಎಂದು ವ್ಯಂಗ್ಯವಾಡಿದ್ದಾರೆ.
ಅವರು ಪಕ್ಷಕ್ಕೆ ಬೆದರಿಸಿ ಸಚಿವ ಸ್ಥಾನ ಪಡೆಯಲು ಪ್ರಯತ್ನಿಸುತ್ತಿದ್ದಾರೋ ಅಥವಾ ಇಲ್ಲವೋ ನನಗೆ ಗೊತ್ತಿಲ್ಲ ಎಂದೂ ಹೇಳಿದರು.

IT Raid: ಡಿಕೆಶಿ ಆಪ್ತನ ಮನೆಯಲ್ಲಿ 70 ಕೋಟಿ ಅಕ್ರಮ ಅಸ್ತಿ ಪತ್ತೆ

ವಲಸಿಗರಿಂದ ಹಿನ್ನಡೆ ಆಗಿಲ್ಲ:

ವಲಸಿಗರು ಬರುವುದರಿಂದ ಮೂಲ ಕಾಂಗ್ರೆಸ್ಸಿಗರ ಬೆಂಬಲ ದೊರೆಯದೆ ಪಕ್ಷಕ್ಕೆ ಹಿನ್ನಡೆಯಾಗುತ್ತಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ‘ನಮ್ಮ ಪಕ್ಷ, ಸಿದ್ಧಾಂತ, ನಾಯಕತ್ವ ಒಪ್ಪಿ ಬರುವವರನ್ನು ಸ್ವಾಗತಿಸುತ್ತೇವೆ. ಮನಗೂಳಿ ಅವರನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡುವಾಗ ಜಿಲ್ಲೆಯ ಎಲ್ಲ ನಾಯಕರ ಜತೆ ಚರ್ಚಿಸಿ ತೀರ್ಮಾನ ಕೈಗೊಂಡಿದ್ದೇವೆ. ಯಾವ ಅಸಮಾಧಾನವೂ ಇರಲಿಲ್ಲ. ಮತದಾರನ ತೀರ್ಪನ್ನು ನಾವು ಸ್ವಾಗತಿಸಿದ್ದೇವೆ. ಹಾನಗಲ್‌ನಲ್ಲಿ(Hanagal) ಅಭ್ಯರ್ಥಿ ಆಗಬಯಸಿದ್ದವರ ಹೆಸರು ಕೇಳಿದರೆ ನಿಮಗೆ ಶಾಕ್‌ ಆಗುತ್ತದೆ. ಬಿಜೆಪಿಯವರ(BJP) ಹೆಸರೂ ಇತ್ತು. ಅದನ್ನು ಮಾಧ್ಯಮಗಳ ಮುಂದೆ ಚರ್ಚೆ ಮಾಡಲು ಆಗುವುದಿಲ್ಲ’ ಎಂದು ಹೇಳಿದರು.

ಒಂದು ಕುರ್ಚಿ ಖಾಲಿ ಇದ್ದಾಗ 4 ಜನ ಕಣ್ಣು ಹಾಕುತ್ತಾರೆ. ಎಲ್ಲರೂ ತೃಪ್ತಿಯಾಗಿ ಹೋಗುವುದಿಲ್ಲ. 13 ಜನ ರೆಬೆಲ… ಅಭ್ಯರ್ಥಿಗಳಿದ್ದರೂ ಅಧಿಕಾರ ಇದ್ದಿದ್ದರ ಪರಿಣಾಮ ಸರ್ಕಾರದವರು ನಿಗಮ-ಮಂಡಳಿ ಅಧ್ಯಕ್ಷ ಸ್ಥಾನ ಕೊಟ್ಟರು. ಅವರು ಮುಂದೆ ಏನಾಗುತ್ತಾರೆ ಎಂದು ಕಾದು ನೋಡಿ ಎಂದರು.

ಸಿಎಂ ಸಾಧನೆಗೆ ತವರಲ್ಲೇ ತೀರ್ಪು ಬಂದಿದೆ!

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಅವರ ಆಡಳಿತ 100 ದಿನ ಪೂರೈಸಿರುವ ಬಗ್ಗೆ ಪ್ರತಿಕ್ರಿಯಿಸಿದ ಶಿವಕುಮಾರ್‌ ಅವರು, ‘ಅವರು ಒಳ್ಳೆಯ ಜಾಹೀರಾತು ನೀಡಲಿ. ಸಾಧನೆ ಪುಸ್ತಕ ಪ್ರಕಟಿಸಲಿ. ನಾನೇನೂ ಟೀಕೆ ಮಾಡುವುದಿಲ್ಲ. ಅವರ ಸಾಧನೆ ನೋಡಿ ಅವರದೇ ಜಿಲ್ಲೆ ಜನ ಉಪಚುನಾವಣೆಯಲ್ಲಿ ತೀರ್ಪು ಕೊಟ್ಟಿದ್ದಾರೆ’ ಎಂದು ಹೇಳಿದರು. ವೈಯಕ್ತಿಕವಾಗಿ ಅವರ ಸಾಧನೆ ಬಗ್ಗೆ ನಮ್ಮ ತಕರಾರು ಏನೂ ಇಲ್ಲ. ನಾವು ಅವರ ಆಡಳಿತದ ಬಗ್ಗೆ ದೂರುತ್ತಿಲ್ಲ. ಅವರ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿಲ್ಲ. ಎಲ್ಲವನ್ನೂ ಮತದಾರರೇ ನಿರ್ಧರಿಸುತ್ತಾರೆ ಎಂದರು.
 

click me!