DK Shivakumar: ಅಂದುಕೊಂಡಿದ್ದು ನೆರವೇರಿಸಿದ ದೇವತೆ: ಡಿಕೆಶಿ ಹರಕೆ ಸಲ್ಲಿಕೆ

By Suvarna NewsFirst Published Nov 5, 2021, 5:54 PM IST
Highlights

* ಹಾನಗಲ್ ಉಪಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಗೆಲುವು
* ಬಿಜೆಪಿಯ ಶಿವರಾಜ್ ಸಜ್ಜನ್ ವಿರುದ್ಧ ಗೆದ್ದ ಕಾಂಗ್ರೆಸ್‌ನ ಶ್ರೀನಿವಾಸ್ ಮಾನೆ
* ಗೆಲುವು ಸಿಕ್ಕಿದ್ದರಿಂದ ಹರಕೆ ತೀರಿಸಿದ ಡಿಕೆ ಶಿವಕುಮಾರ್
* ಹಾನಗಲ್‌ಗೆ ಭೇಟಿ ನೀಡಿ ಶ್ರೀ ಗ್ರಾಮದೇವಿ ಹಾದಗಟ್ಟಿಗೆ ವಿಶೇಷ ಪೂಜೆ

ಹಾವೇರಿ, (ನ.05): ತೀವ್ರ ಜಿದ್ದಾಜಿದ್ದಿಯಿಂದ ಕೂಡಿದ ಹಾನಗಲ್ (Hangal)​ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ (By Election) ಕಾಂಗ್ರೆಸ್ (Congress) ಗೆದ್ದು ಬೀಗಿದೆ. ಬಿಜೆಪಿ ಅಭ್ಯರ್ಥಿ ಶಿವರಾಜ ಸಜ್ಜನ್ ವಿರುದ್ಧ ಕಾಂಗ್ರೆಸ್‌ನ ಶ್ರೀನಿವಾಸ್ ಮಾನೆ ಅವರು 7,373 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ಈ ಹಿನ್ನಲೆಯಲ್ಲಿ ನೂತನ ಶಾಸಕರಾಗಿ ಆಯ್ಕೆಯಾದ ಶ್ರೀನಿವಾಸ ಮಾನೆ (Srinivas Mane) ಅವರಿಗೆ ಇಂದು (ನ.05) ಶಿಗ್ಗಾವಿ ಬ್ಲಾಕ್​ ಕಾಂಗ್ರೆಸ್​ ಸಮಿತಿ ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಈ ಸಮಾರಂಭದಲ್ಲಿ ಖುದ್ದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಪಾಲ್ಗೊಂಡಿ ಕಾರ್ಯಕರ್ತರ ಉತ್ಸಹ ಹೆಚ್ಚಿಸಿದರು.

ಬೈಎಲೆಕ್ಷನ್‌ನಲ್ಲಿ ಹುಸಿಯಾದ ಬಿಜೆಪಿ ನಿರೀಕ್ಷೆ: ಶಕ್ತಿ ವೃದ್ಧಿಸಿಕೊಂಡ ಕಾಂಗ್ರೆಸ್‌

ಇನ್ನು ಇದೇ ವೇಳೆ ಡಿಕೆ ಶಿವಕುಮಾರ್ ಅವರು ಚುನಾವಣೆ ಪ್ರಚಾರದ ಸಂದರ್ಭದಲ್ಲಿ ಕ್ಷೇತ್ರದ ಶಕ್ತಿ ದೇವತೆ ಶ್ರೀ ಗ್ರಾಮದೇವಿ ಹಾದಗಟ್ಟಿಗೆ ಭೇಟಿ ನೀಡಿ ಚುನಾವಣೆಯಲ್ಲಿ ಗೆಲ್ಲಿಸಿ ಕೊಡುವಂತೆ ಹರಕೆ ಹೊತ್ತುಕೊಂಡಿದ್ದರು. ಅದಂತೆ ಚುನಾವಣೆ ಕಾಂಗ್ರೆಸ್ ಗೆಲುವು ಸಾಧಿಸಿದ್ದರಿಂದ ಡಿಕೆಶಿ ಸುಕ್ಷೇತ್ರಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಲಿದ್ದಾರೆ. 

ಜೇಬಿನಲ್ಲಿದ್ದ ಕಾಸು ಕೊಟ್ಟು ತೆಂಗಿನಕಾಯಿ ತರಿಸಿದ ಡಿಕೆಶಿ, 11 ತೆಂಗಿನಕಾಯಿ ಒಡೆದು ಕರ್ಪೂರ ಬೆಳಗಿ ಹರಕೆ ತೀರಿಸಿದದರು. ಬಳಿಕ ಅಲ್ಲಿಂದ ಹಾನಗಲ್ ಪಟ್ಟಣದ ಕಾಶ್ಮೀರಿ ದರ್ಗಾಕ್ಕೆ ಭೇಟಿ ಕೊಟ್ಟು, ದರ್ಗಾಕ್ಕೆ ಚಾದರ, ಹೂವು ಅರ್ಪಣೆ ಮಾಡಿ ಪ್ರಾರ್ಥನೆ ಮಾಡಿದರು.

'ಹಾನಗಲ್ ಫಲಿತಾಂಶದ ಕ್ರೆಡಿಟ್‌ಗಾಗಿ ಕಾಂಗ್ರೆಸ್‌ನಲ್ಲಿ ಒಳಜಗಳ'

ಹರಕೆ ತೀರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆಶಿ, ನಾನು ಏನು ಬೇಡಿಕೊಂಡಿದ್ದೆನೋ ಆ ಫಲ ನನಗೆ ಸಿಕ್ಕಿದೆ. ಇಂದು ನಾನು ಎಷ್ಟೇ ಬ್ಯೂಸಿ ಇದ್ದರೂ ಕೂಡಾ ದೇವಿ ದೇವಸ್ಥಾನಕ್ಕೆ ಭೇಟಿ ನೀಡಿದ್ದೇನೆ.

ಪಕ್ಷಕ್ಕೆ ವಿಶೇಷ ಶಕ್ತಿ ನೀಡಿದ್ದಾಳೆ

ಈ ದೇವಿ ವಿಶೇಷವಾದ ಶಕ್ತಿ ನೀಡಿದ್ದಾಳೆ. ಈ ದೇಶಕ್ಕೆ, ರಾಜ್ಯಕ್ಕೆ  ನಮ್ಮ ಪಕ್ಷಕ್ಕೆ ವಿಶೇಷ ಶಕ್ತಿ ನೀಡಿದ್ದಾಳೆ. ನಾನು ಗ್ರಾಮ ದೇವತೆಗೆ ಶಿರ ಭಾಗಿ ನಮಸ್ಕರಿಸಿದ್ದೇನೆ. ಕತ್ತಲೆಯಿಂದ ಬೆಳಕಿನಡೆಗೆ ತೆಗೆದುಕೊಂಡು ಹೋಗುವ ಈ ದೀಪಾವಳಿ ಹಬ್ಬದಂದು ನಮ್ಮ ರಾಜ್ಯಕ್ಕೆ, ಪಕ್ಷಕ್ಕೆ ಬೆಳಕು ಸಿಗಲಿ ಎಂದು ಪ್ರಾರ್ಥನೆ ಮಾಡಲು ಬಂದಿದ್ದೆ ಎಂದು ಹೇಳಿದರು.

ಹಾನಗಲ್ ಜನ ಸ್ವಾಭಿಮಾನಿಗಳು.  ಜನ ತಮ್ಮ ಮತ ಮಾರಿಕೊಳ್ಳಲಿಲ್ಲ. ಯಾವ ಒತ್ತಡಕ್ಕೂ ಬಲಿ ಆಗಲಿಲ್ಲ. ಜನ ನಮ್ಮ ಮೇಲೆ ವಿಶ್ವಾಸ ಇಟ್ಟಿದ್ದಾರೆ‌ . ಜನರ ವಿಶ್ವಾಸ ಉಳಿಸಿಕೊಂಡು ಹೋಗುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು.

ಸಿಎಂ  ಕ್ಷೇತ್ರ ಶಿಗ್ಗಾವಿಯಲ್ಲಿ ಫಲಿತಾಂಶ ಕೇವಲ ಆರಂಭ ಎಂದು ಹೇಳಿದ್ಯಾಕೆ ಎಂಬ ಪ್ರಶ್ನೆಗೆ ಉತ್ತರಿಸಿದ ಡಿಕೆಶಿ, ಎಲ್ಲಾದರೂ ಒಂದು ಮಹೂರ್ತ ಆಗಬೇಕು ಅಲ್ಲವಾ? ಶುಭ ಘಳಿಗೆ, ಶುಭ ಮಹೂರ್ತ, ಶುಭ ವಾರ ಆಗಬೇಕಲ್ಲವಾ? ಮುಖ್ಯಮಂತ್ರಿಗಳ ಕ್ಷೇತ್ರ, ಕರ್ಮಭೂಮಿ, ಪುಣ್ಯ ಭೂಮಿ. ಮುಖ್ಯಮಂತ್ರಿಗಳ ಕ್ಷೇತ್ರದಿಂದಲೇ ಜನ ಆಶೀರ್ವಾದ ಮಾಡಲಿ ಎಂದು ಕೇಳಿ ಕೊಂಡಿದ್ದೇನೆ ಎಂದು ಹೇಳುವ ಮೂಲಕ ಸಿಎಂ ಕ್ಷೇತ್ರ ಶಿಗ್ಗಾವಿಯಿಂದಲೇ ಮುಂಬರುವ ಚುನಾವಣೆಗೆ ರಣಕಹಳೆ ಮೊಳಗಿಸಿದರು.

ಶಿಗ್ಗಾವಿ  ಕಾರ್ಯಕರ್ತರಿಗೆ ಧನ್ಯವಾದ

ಕತ್ತಲೆಯಿಂದ ಬೆಳಕಿನಡೆಗೆ ಸಾಗೋಣ. ಇಷ್ಟು ದಿನ ರಾಜ್ಯ ಕತ್ತಲೆಯಲ್ಲಿ ಇತ್ತು. ಮಾನೆಗೆ ಆಶೀರ್ವಾದ ಮಾಡಿದ್ದೀರಿ. ಬೆಳಕು ಬಂದಿದೆ. ಅದಕ್ಕಾಗಿ ನಿಮಗೆ ಅಭಿನಂದನೆ ಸಲ್ಲಿಸೋಕೆ ಬಂದೆ. ಇದು ಪ್ರಾರಂಭ. 2023 ರ ಪ್ರಾರಂಭ' ಎಂದು ಶಿವಕುಮಾರ್ ಹೇಳಿದರು. 'ಮಾನೆಯನ್ನು ನೀವು ಗೆಲ್ಲಿಸಿಲ್ಲ. ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿದ್ದೀರಿ. ಅದೇ ರೀತಿ ನೀವು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನು ಇಲ್ಲಿಯೂ ಗೆಲ್ಲಿಸಿ. ಇದು ನಮ್ಮೆಲ್ಲರ ಸಂಕಲ್ಪ' ಎಂದು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಶಿಗ್ಗಾವಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಿ ಎಂದು ಡಿಕೆಶಿ ಕರೆ ನೀಡಿದರು.

 'ಹಣ, ಅಧಿಕಾರಕ್ಕೆ ಬಗ್ಗದೇ ಶ್ರೀನಿವಾಸ ಮಾನೆಯವರನ್ನು ಗೆಲ್ಲಿಸಿದ್ದೀರಿ. ಶಿಗ್ಗಾವಿಯ ಕಾರ್ಯಕರ್ತರು ಹಾನಗಲ್​​ಗೆ ಬಂದು ಕೆಲಸ ಮಾಡಿದ್ದೀರಿ. ನಿಮಗೆಲ್ಲಾ ಧನ್ಯವಾದ' ಎಂದರು.

click me!