ದೇವೇಗೌಡ್ರ ಬಗ್ಗೆ ರಾಜಣ್ಣ ವಿವಾದಾತ್ಮಕ ಹೇಳಿಕೆ ಖಂಡಿಸಿದ ಡಿಕೆ ಬ್ರದರ್ಸ್..!

By Suvarna NewsFirst Published Jul 1, 2022, 7:11 PM IST
Highlights

ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರ ಬಗ್ಗೆ ಕಾಂಗ್ರೆಸ್ ಮಾಜಿ ಶಾಸಕ ಕೆ.ಎನ್ ರಾಜಣ್ಣ ನೀಡಿರುವ ವಿವಾದಾತ್ಮಕ ಹೇಳಿಕೆಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ಸಂಸದ ಡಿಕೆ ಸುರೇಶ್ ಖಂಡಿಸಿದ್ದಾರೆ.

ನವದೆಹಲಿ (ಜುಲೈ1): ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಕಾಂಗ್ರೆಸ್ ಮಾಜಿ ಶಾಸಕ ಕೆ.ಎನ್ ರಾಜಣ್ಣ ವಿರುದ್ಧ ಎಲ್ಲೆಡೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಇನ್ನು ಈ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹಾಗೂ ಸಂಸದ ಡಿಕೆ ಸುರೇಶ್ ಪ್ರತಿಕ್ರಿಯಿಸಿ ರಾಜಣ್ಣ ಹೇಳಿಕೆಯನ್ನು ಖಂಡಿಸಿದ್ದಾರೆ.

ನವದೆಹಲಿಯಲ್ಲಿ ಮಾತನಾಡಿದ ಡಿ ಕೆ ಶಿವಕುಮಾರ್, ದೇವೇಗೌಡರ ಬಗ್ಗೆ ರಾಜಣ್ಣ ವಿವಾದಾತ್ಮಕವಾಗಿ ಮಾತನಾಡಿರುವುದನ್ನು ಇಡೀ ಕಾಂಗ್ರೆಸ್ ಪಕ್ಷ ಖಂಡಿಸುತ್ತದೆ.  ದೇಶ ಹಾಗೂ ರಾಜ್ಯಕ್ಕೆ ಸೇವೆ ಸಲ್ಲಿಸಿರುವ ಹಿರಿಯ ನಾಯಕ, ಪೂಜ್ಯ ಸಮಾನರಾದ ದೇವೇಗೌಡರ ಆರೋಗ್ಯದ ಬಗ್ಗೆ ಮಾಜಿ ಶಾಸಕ ಕೆ.ಎನ್. ರಾಜಣ್ಣ ನೀಡಿರುವ ಹೇಳಿಕೆ ಖಂಡನೀಯ ಎಂದರು.

Latest Videos

ಭುಗಿಲೆದ್ದ ಆಕ್ರೋಶ, ತುರ್ತು ಸುದ್ದಿಗೋಷ್ಠಿ ಕರೆದು ದೇವೇಗೌಡ್ರ ಕ್ಷಮೆಯಾಚಿಸಿದ ರಾಜಣ್ಣ

ನಮ್ಮ ಪಕ್ಷದ ನಾಯಕರಾದ ರಾಜಣ್ಣ ಅವರು ಹಿರಿಯ ನಾಯಕ ದೇವೇಗೌಡರ ಪರಿಸ್ಥಿತಿ ಬಗ್ಗೆ ಆಡಿರುವ ಮಾತನ್ನು ಇಡೀ ಕಾಂಗ್ರೆಸ್ ಪಕ್ಷ ಖಂಡಿಸುತ್ತದೆ. ಪಕ್ಷದ ನಾಯಕನಾಗಿ, ವೈಯಕ್ತಿಕ ವಾಗಿಯೂ ಇದನ್ನು ಖಂಡಿಸುತ್ತೇನೆ. ಯಾರೇ ನಾಯಕರು ಮಾನವೀಯತೆಯನ್ನು ಮೆರೆಯಬೇಕು. ಸಮಾಜ ಹಾಗೂ ದೇಶಕ್ಕೆ ಸೇವೆ ಮಾಡಿರುವ ಹಿರಿಯ ನಾಯಕರಾದ ದೇವೇಗೌಡರ ಬಗ್ಗೆ ಇಂತಹ ಹೇಳಿಕೆ ನೀಡಿದ್ದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. 

ಹಿರಿಯ ನಾಯಕರ ಆರೋಗ್ಯದ ಬಗ್ಗೆ ಈ ರೀತಿ ಮಾತನಾಡುವುದು ಸರಿಯಲ್ಲ.  ಇಂತಹ ಹೇಳಿಕೆಗಳಿಗೆ ನಾವು ಅವಕಾಶ ನೀಡುವುದಿಲ್ಲ. ಪೂಜ್ಯ ಸಮಾನರಾದ ದೇವೇಗೌಡರಿಗೆ ಉತ್ತಮ ಆರೋಗ್ಯ ಮತ್ತು ಇನ್ನಷ್ಟು ಸೇವೆ ಮಾಡುವ ಅವಕಾಶವನ್ನು ದೇವರು ಕರುಣಿಸಲಿ ಎಂದು ನಾವು ಪ್ರಾರ್ಥನೆ ಮಾಡುತ್ತೇವೆ' ಎಂದು ಶಿವಕುಮಾರ್ ಹೇಳಿದರು.

 ಡಿ.ಕೆ. ಸುರೇಶ್ ಖಂಡನೆ
ಇನ್ನು ಈ ಬಗ್ಗೆ ಡಿಕೆ ಸುರೇಶ್ ಮಾತನಾಡಿ, ಮಾಜಿ ಪ್ರಧಾನಿಗಳಾದ ದೇವೇಗೌಡರ ಕುರಿತು ಕೆ.ಎನ್.ರಾಜಣ್ಣ ಅವರು ನೀಡಿರುವ ಹೇಳಿಕೆ ಖಂಡನೀಯ.ದೇವೇಗೌಡರ ಹಿರಿತನಕ್ಕೆ ನಾವೆಲ್ಲರೂ ತಲೆಬಾಗಬೇಕು. ಸಮಾಜದ ಹಿರಿಯರ ಬಗ್ಗೆ ಇಂತಹ ಹಗುರ ಹೇಳಿಕೆ ನೀಡಿರುವುದು ರಾಜಣ್ಣ ಅವರ ಘನತೆಗೆ ಸೂಕ್ತವಲ್ಲ ಎಂದರು.

 ಇದು ಅವರ ವೈಯಕ್ತಿಕ ಹೇಳಿಕೆಯಾದರೂ, ಅವರು ಕ್ಷಮೆ ಕೋರಬೇಕು. ಇಲ್ಲದಿದ್ದರೆ ಸಮಾಜ ಅವರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಸುರೇಶ್ ಅವರು ಎಚ್ಚರಿಸಿದರು.

ಕ್ಷಮೆಯಾವಿಸಿದ ರಾಜಣ್ಣ
ಹೇಳಿಕಗೆ ತೀವ್ರ ವಿರೋಧಗಳು ವ್ಯಕ್ತವಾಗುತ್ತಿದ್ದರಿಂದ ತುರ್ತು ಸುದ್ದಿಗೋಷ್ಠಿ ಕರೆದ ರಾಜಣ್ಣ, ದೇವೇಗೌಡರಿಗೆ ಕ್ಷಮೆಯಾಚಿಸಿದ್ದಾರೆ. ಅಲ್ಲದೇ ಖುದ್ದು ಅವರನ್ನ ಭೇಟಿಯಾಗಿ ಈ ಬಗ್ಗೆ ಸ್ಪಷ್ಟಪಡಿಸುತ್ತೇನೆ ಎಂದಿದ್ದಾರೆ.

ಹೇಳಿಕೆ ಬಗ್ಗೆ ಸ್ಪಷ್ಟನೆ ಕೊಟ್ಟ ರಾಜಣ್ಣ
ವಾಸ್ತವ ಸ್ಥಿತಿಯನ್ನ ಎಲ್ಲರಿಗೂ ತಿಳಿಸಲು ಬಂದಿದ್ದೇನೆ. ಕಾರ್ಯಕ್ರಮದಲ್ಲಿ ಮಾತನಾಡ್ತಿದ್ದ ಸಂದರ್ಭದಲ್ಲಿ 
2004 ರ ಚುನಾವಣೆಯಲ್ಲಿ ನಾನು ಜೆಡಿಎಸ್ ನಿಂದ ಸ್ಪರ್ಧಿಸಿದ್ದಾಗ ದೊಡ್ಡೇರಿ ಹೋಬಳಿ ಜನರು 5500 ಮತಗಳ ಬಹುಮತ ನೀಡಿದ್ರು. ಇನ್ನೊಂದು ಬಾರಿ ಚುನಾವಣೆಯಲ್ಲಿ ಸ್ಪರ್ಧಿಸ್ತೇನೆ ಎಂದು ಹೇಳ್ದೆ.  ಈ‌ಬಾರಿಯೂ ನನಗೆ ಬಹುಮತ ನೀಡಿ ಗೆಲ್ಲಿಸಬೇಕೆಂದು ಹೇಳ್ದೆ.

ಈ ವೇಳೆ ಮುಂದೆ ಕುಳಿತಿದ್ದ ಒಬ್ಬರು,ಬಿಡಿ ಸ್ವಾಮಿ ದೇವೇಗೌಡರು ಈಗಲೂ ಚುನಾವಣೆ ಮಾಡ್ತಾರೆ ಎಂದರು. ಅದಕ್ಕೆ ನಾನು ಅವರ ಇಬ್ಬರ ಮೇಲೆ‌ ಕೈ ಹಾಕಿ ಓಡಾಡ್ತಾರೆ,ಬಿಡಿ ಅವರ ಬಗ್ಗೆ ಯಾಕೆ ಅಂದೆ. ನನ್ನ ವಿರುದ್ದ ಪಿತೂರಿ ಮಾಡಲಾಗಿದೆ. ಮುಂದೆ ಹಿಂದೆ ಮಾತಾಡಿದ್ದು,ಬಿಟ್ಟು ಕೇವಲ ಒಂದು ನಿಮಿಷದ ವಿಡಿಯೋ ಈ ಅರ್ಥ ಕಲ್ಪಸಿದೆ. ದೇವೇಗೌಡರು ರಾಷ್ಟ್ರದ ಪ್ರಧಾನಿಯಾಗಿದ್ದವರು,ವಯಸ್ಸಲ್ಲಿ ಹಿರಿಯರು. ಅವರ ಸೋಲಿನ ಕುರಿತಾಗಿ ನಮಗೆ ಬೇಸರ ಇದೆ ಎಂದು ಸ್ಪಷ್ಟನೆ ನೀಡಿದರು.

ಈ ರೀತಿಯ ತೇಜೋವಧೆ ಮಾಡಬಾರದು. ದೇವೇಗೌಡರನ್ನ ಖುದ್ದಾಗಿ ಭೇಟಿ ಮಾಡಿ ಕ್ಷಮೆಯಾಚಿಸ್ತೇನೆ. ಈ ಬಳಿಕವೂ ಜೆಡಿಎಸ್ ಪ್ರತಿಭಟನೆ ಮಾಡಿದ್ರೆ ಮಾಡಲಿ. ದೇಶಕ್ಕೆ ದೇವೇಗೌಡರ ಕೊಡುಗೆಗಳನ್ನ ಸ್ಮರಿಸುತ್ತೇನೆ. ಇದು‌ ನನ್ನ‌ ಕೊನೆಯ ಚುನಾವಣೆ. ಗೆಲ್ಲಲೀ ಬಿಡಲೀ ಇದು ನನ್ನ ಕೊನೆ ಚುನಾವಣೆ. ದೇವೇಗೌಡರ ಸಾವನ್ನ ಬಯಸೋ ಮನಸ್ಸಿನವನಲ್ಲಾ ನಾನು. ಈ ಬಗ್ಗೆ ಖುದ್ದಾಗಿ ಹೋಗಿ ಅರ್ಥೈಸಿ ಮಾತನಾಡಿಸುತ್ತೇನೆ ಎಂದು ಹೇಳಿದರು.

click me!