ಕಾಂಗ್ರೆಸ್‌ನಲ್ಲಿ ಮತ್ತೆ ಅಸಮಾಧಾನ ಸ್ಫೋಟ..!

By Kannadaprabha NewsFirst Published Aug 17, 2023, 9:05 PM IST
Highlights

ವಿಜಯನಗರ ಜಿಲ್ಲೆಯಲ್ಲಿ ಕಾಂಗ್ರೆಸ್‌ನ ಬೀದಿರಂಪಾಟವು ಸಾರ್ವಜನಿಕರಿಗೆ ಹಾಗೂ ಕಾಂಗ್ರೆಸ್‌ ಹಿರಿಯ ನಾಯಕರಿಗೆ ಮುಜುಗರ ತಂದಿದೆ. ಮಾಜಿ ಶಾಸಕರೊಬ್ಬರು ಇನ್ನೊಬ್ಬ ಮಾಜಿ ಶಾಸಕನಿಗೆ ಅತ್ಯಂತ ಕೆಟ್ಟಶಬ್ದ ಬಳಸಿ ನಿಂದನೆ ಮಾಡಿರುವುದು ರಾಜಕಾರಣಿಗಳ ನಿಜಮುಖ ಪ್ರದರ್ಶನ ಮಾಡಿದಂತಿದೆ. 

ಹಗರಿಬೊಮ್ಮನಹಳ್ಳಿ(ಆ.17):  ಕೆಎಂಎಫ್‌ ರಾಜ್ಯಾಧ್ಯಕ್ಷ ಎಸ್‌. ಭೀಮಾನಾಯ್ಕ ಅವರಿಗೆ ಜಾತಿನಿಂದನೆ ಹಾಗೂ ಅವರ ಅಳಿಯನಿಗೆ ಕೊಲೆ ಬೆದರಿಕೆ ಹಾಕಿದ್ದಾರೆಂದು ಮಾಜಿ ಶಾಸಕ, ವಿಜಯನಗರ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಶಿರಾಜ್‌ಶೇಖ್‌ ಅವರ ವಿರುದ್ಧ ಪಟ್ಟಣದ ಠಾಣೆಯಲ್ಲಿ ಜಾತಿ ನಿಂದನೆ ಪ್ರಕರಣ ದಾಖಲಾಗಿದೆ.

ಹಗರಿಬೊಮ್ಮನಹಳ್ಳಿ ಪಟ್ಟಣಕ್ಕೆ ಸಚಿವ ಜಮೀರ್‌ ಆಹಮದ್‌ ಖಾನ್‌ ಅವರು ಇತ್ತೀಚೆಗೆ ಆಗಮಿಸಿದ್ದ ವೇಳೆ ಭೀಮಾನಾಯ್ಕ ಸ್ವಾಗತಿಸುತ್ತಿದ್ದ ಸಂದರ್ಭದಲ್ಲಿ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಶಿರಾಜ್‌ಶೇಖ್‌ ಅವರು ಭೀಮಾನಾಯ್ಕ ಅವರನ್ನು ನಿಂದಿದ್ದರು. ಆಗ ಭೀಮಾನಾಯ್ಕ ಅಭಿಮಾನಿಗಳು ಶಿರಾಜ್‌ಶೇಖ್‌ಗೆ ಧಿಕ್ಕಾರವನ್ನು ಕೂಗಿದರು. ಇದರಿಂದ ರೊಚ್ಚಿಗೆದ್ದ ಶಿರಾಜ್‌ಶೇಖ್‌, ಎಸ್‌. ಭೀಮಾನಾಯ್ಕ ಅವರು ಸಚಿವರನ್ನು ಸ್ವಾಗತಿಸುವ ಬ್ಯಾನರ್‌ಗಳಲ್ಲಿ ನನ್ನ ಫೋಟೊ ಹಾಕಿಲ್ಲ. ಜತೆಗೆ ಪಕ್ಷ ವಿರೋಧಿ ಕೆಲಸ ಮಾಡಿದ್ದೇನೆ ಎಂದು ಕಾಂಗ್ರೆಸ್‌ ಹೈಕಮಾಂಡ್‌ಗೆ ದೂರು ಸಲ್ಲಿಸಿದ್ದಾರೆ ಎಂದು ಆರೋಪಿಸಿದ್ದರು.

ಕಾಂಗ್ರೆಸ್‌ನಲ್ಲಿ ಅಸಮಾಧಾನದ ಬೇಗುದಿ: 'ಕೈ'ನಲ್ಲಿ ಕಾಣದ ಒಗ್ಗಟ್ಟು..!

ಬಳಿಕ ಶಿರಾಜ್‌ಶೇಖ್‌ ಅವರು ಭೀಮಾನಾಯ್ಕ ಹಾಗೂ ಅವರ ಕುಟುಂಬದವರ ಜಾತಿ ನಿಂದಿಸಿದ್ದಾರೆ. ಅಲ್ಲದೇ ಭೀಮಾನಾಯ್ಕ ಅಳಿಯ ಮಂಜುನಾಥ ಅವರಿಗೆ ಕೊಲೆ ಪ್ರಯತ್ನ ಮಾಡಿ ಪ್ರಾಣ ಬೆದರಿಕೆ ಹಾಕಿದ್ದಾರೆ ಎಂದು ಕೂಡ ಎಫ್‌ಐಆರ್‌ನಲ್ಲಿ ದಾಖಲಾಗಿದೆ. ಕಾಂಗ್ರೆಸ್‌ ಕಾರ್ಯಕರ್ತ ಮಂಜುನಾಥ ಎಸ್‌.ಎಲ್‌. ಎಂಬವರು ದೂರು ಸಲ್ಲಿಸಿದ್ದಾರೆ. ಪಟ್ಟಣದ ಠಾಣೆಯಲ್ಲಿ ಪಿಎಸ್‌ಐ ಸರಳಾ ದೂರು ದಾಖಲಿಸಿಕೊಂಡಿದ್ದಾರೆ.

ಕಾಂಗ್ರೆಸ್‌ ತಿಕ್ಕಾಟ

ವಿಜಯನಗರ ಜಿಲ್ಲೆಯಲ್ಲಿ ಕಾಂಗ್ರೆಸ್‌ನ ಬೀದಿರಂಪಾಟವು ಸಾರ್ವಜನಿಕರಿಗೆ ಹಾಗೂ ಕಾಂಗ್ರೆಸ್‌ ಹಿರಿಯ ನಾಯಕರಿಗೆ ಮುಜುಗರ ತಂದಿದೆ. ಮಾಜಿ ಶಾಸಕರೊಬ್ಬರು ಇನ್ನೊಬ್ಬ ಮಾಜಿ ಶಾಸಕನಿಗೆ ಅತ್ಯಂತ ಕೆಟ್ಟಶಬ್ದ ಬಳಸಿ ನಿಂದನೆ ಮಾಡಿರುವುದು ರಾಜಕಾರಣಿಗಳ ನಿಜಮುಖ ಪ್ರದರ್ಶನ ಮಾಡಿದಂತಿದೆ. ಈ ಬೆಳವಣಿಗೆಯನ್ನು ಗಮನಹರಿಸಿರುವ ಕಾಂಗ್ರೆಸ್‌ನ ಹಿರಿಯ ನಾಯಕರು ಇವರ ವಿರುದ್ಧ ಶಿಸ್ತುಕ್ರಮಕ್ಕೆ ಮುಂದಾಗುವರೇ ಎಂಬುದನ್ನು ಕಾದುನೋಡಬೇಕಿದೆ.

click me!