
ಬೆಂಗಳೂರು(ಡಿ.01): ಪಂಚ ರಾಜ್ಯಗಳ ಫಲಿತಾಂಶ ಕರ್ನಾಟಕದ ರಾಜಕಾರಣದ ಮೇಲೂ ಪರಿಣಾಮ ಬೀರಲಿದ್ದು, ಈ ಫಲಿತಾಂಶ ಆಧರಿಸಿ ಬೇಲಿ ಮೇಲೆ ಕುಳಿತಿರುವ ಕೆಲವು ಬಿಜೆಪಿ ಶಾಸಕರು ಹಾಗೂ ಮುಖಂಡರು ಕಾಂಗ್ರೆಸ್ಗೆ ವಲಸೆ ಹೋಗುವ ಬಗ್ಗೆ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ.
ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿಯ ಕೆಲವು ಹಾಲಿ ಮತ್ತು ಮಾಜಿ ಶಾಸಕರು ಕಾಂಗ್ರೆಸ್ಗೆ ಸೇರ್ಪಡೆಯಾಗಲಿದ್ದಾರೆ ಎಂಬ ವದಂತಿ ಹಾಗೂ ತೆರೆಮರೆಯಲ್ಲಿ ಕಸರತ್ತು ಕಳೆದ ಹಲವು ತಿಂಗಳುಗಳಿಂದ ಕೇಳಿಬರುತ್ತಿದೆ. ಆದರೆ, ಬಿಜೆಪಿಯ ಒಂದಿಬ್ಬರು ಮಾಜಿ ಶಾಸಕರು ಸೇರ್ಪಡೆಯಾದರೂ ಪ್ರಮುಖರು ಮಾತ್ರ ಇನ್ನೂ ಗೊಂದಲದಲ್ಲಿದ್ದಾರೆ. ಅಂಥವರಿಗೆ ಈ ಪಂಚರಾಜ್ಯಗಳ ಚುನಾವಣಾ ಫಲಿತಾಂಶ ದಿಕ್ಸೂಚಿಯಾಗಬಹುದು.
News Hour: ಮಧ್ಯಪ್ರದೇಶ, ರಾಜಸ್ಥಾನದಲ್ಲಿ ಬಿಜೆಪಿ; ತೆಲಂಗಾಣ-ಛತ್ತೀಸ್ಗಢ ಕಾಂಗ್ರೆಸ್, ವಿಜೋರಾಂ ಅತಂತ್ರ?
ರಾಜಸ್ಥಾನ, ಮಧ್ಯಪ್ರದೇಶ, ತೆಲಂಗಾಣ, ಛತ್ತೀಸಗಢ ಹಾಗೂ ಮಿಜೋರಂ ರಾಜ್ಯಗಳ ವಿಧಾನಸಭಾ ಚುನಾವಣೆ ಈಗ ಮುಗಿದಿದ್ದು, ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ರಾಜ್ಯಗಳಲ್ಲಿ ಬಿಜೆಪಿ ಬದಲು ಕಾಂಗ್ರೆಸ್ಗೆ ಉತ್ತಮ ಫಲಿತಾಂಶ ದೊರೆತಲ್ಲಿ ಬಿಜೆಪಿಯಿಂದ ಒಂದು ಹೆಜ್ಜೆ ಹೊರಗಿಟ್ಟಿರುವವರು ಹಾಗೂ ಆಪರೇಷನ್ ಗಾಳಕ್ಕೆ ಸಿಲುಕಿರುವವರು ನಿಚ್ಚಳವಾಗಿ ಮುನ್ನಡೆಯುತ್ತಾರೆ. ಒಂದು ವೇಳೆ ಬಿಜೆಪಿ ಪರವಾದ ಫಲಿತಾಂಶ ಹೊರಬಿದ್ದಲ್ಲಿ ಕಾಂಗ್ರೆಸ್ ಬದಲು ಬಿಜೆಪಿಯಲ್ಲೇ ಉಳಿದುಕೊಳ್ಳುವುದು ಸೂಕ್ತ ಎಂಬ ನಿಲವಿಗೆ ಬರಬಹುದು ಎನ್ನಲಾಗಿದೆ.
ಇದರ ಮಧ್ಯೆ ಫಲಿತಾಂಶ ಕಾಂಗ್ರೆಸ್ಗೆ ವಿರುದ್ಧವಾಗಿ ಬಂದರೂ ಕೆಲವು ಮುಖಂಡರು ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗುವುದನ್ನು ತಳ್ಳಿ ಹಾಕುವಂತಿಲ್ಲ. ಯಾಕೆಂದರೆ, ಆ ಕೆಲವರು ಈಗಾಗಲೇ ನಾನಾ ಕಾರಣಗಳಿಗಾಗಿ ಕಾಂಗ್ರೆಸ್ ನಾಯಕರೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ. ಅನುಕೂಲ ಪಡೆದುಕೊಂಡಿದ್ದಾರೆ. ಅಂಥವರು ಮಾತ್ರ ಅನಿವಾರ್ಯವಾಗಿ ಕಾಂಗ್ರೆಸ್ ಕಡೆಗೆ ಹೆಜ್ಜೆ ಹಾಕಬಹುದು ಎಂದು ಮೂಲಗಳು ತಿಳಿಸಿವೆ. ಹೀಗಾಗಿ, ಪಂಚರಾಜ್ಯಗಳ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದ ಬಳಿಕ ರಾಜ್ಯ ರಾಜಕಾರಣದಲ್ಲೂ ಒಂದು ಸುತ್ತಿನ ಬಿರುಸಿನ ಚಟುವಟಿಕೆಗೆಳು ನಡೆಯುವುದಂತೂ ನಿಶ್ಚಿತ ಎನ್ನಲಾಗುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.