
ಬೆಂಗಳೂರು (ಜೂ.11): ಮಧ್ಯಪ್ರದೇಶದ ಶಕ್ತಿ ಪೀಠಗಳಲ್ಲಿ ಹರಕೆ ಪೂಜೆ ಮುಗಿಸಿಕೊಂಡು ಭಾನುವಾರ ಬೆಂಗಳೂರಿಗೆ ವಾಪಸ್ಸಾಗಿ ಸರ್ಕಾರದ ‘ಶಕ್ತಿ’ ಗ್ಯಾರಂಟಿ ಯೋಜನೆಯ ಚಾಲನಾ ಕಾರ್ಯಕ್ರಮದಲ್ಲಿ ಭಾಗವಹಿಸುತ್ತೇನೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಾಗಲ್ಮುಖಿಯ ಪೀತಾಂಬರ ಮಾತಾ ಪೀಠ ಮತ್ತು ಉಜ್ಜಯಿನಿಯ ಮಹಾಕಾಲೇಶ್ವರ ಮಂದಿರಗಳು ಪ್ರಮುಖ ಪುಣ್ಯ ಕ್ಷೇತ್ರಗಳು. ಹಿಂದೆ ನೆಹರೂ ಅವರು ಕೂಡ ಯುದ್ಧ ನಿಲ್ಲುವಂತೆ ಹರಕೆ ಹೊತ್ತಿದ್ದರು ಎಂದು ಹೇಳಿದರು.
ತಾವು ಕೂಡ ರಾಜಕೀಯದಲ್ಲಿ ಒಂದಷ್ಟು ಫಲಗಳು ಲಭವಿಸಿದ ಬಳಿಕ ಇಲ್ಲಿಗೆ ಬರುವುದಾಗಿ ಹರಕೆ ಹೊತ್ತಿದ್ದೆ. ಹಾಗಾಗಿ ತೆರಳುತ್ತಿದ್ದೇನೆ. ಮೊದಲು ಭಾನುವಾರ ಸಂಜೆ ಬೆಂಗಳೂರಿಗೆ ಬರುವ ಯೋಜನೆ ಇತ್ತು. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಕ್ತಿ ಯೋಜನೆ ಚಾಲನೆಗೆ ನೀನೇ ಮುಹೂರ್ತ ಇಟ್ಟು ಉದ್ಘಾಟನೆಗೆ ಇರದೆ ಇದ್ದರೆ ಹೇಗೆ ಎಂದರು. ಹಾಗಾಗಿ ಪ್ರವಾಸದ ಸಮಯ ಬದಲಾಯಿಸಿಕೊಂಡಿದ್ದೇನೆ.
ಮೇಕೆದಾಟು ಪಾದಯಾತ್ರೆ: ಡಿ.ಕೆ.ಶಿವಕುಮಾರ್ ಮೇಲಿನ 1 ಕೇಸ್ ರದ್ದು, 2ಕ್ಕೆ ತಡೆ
ಭಾನುವಾರ ಮುಂಜಾನೆಯೇ ಮಹಾಕಾಲೇಶ್ವರನಿಗೆ ಭಸ್ಮಾರತಿ ಪೂಜೆ ನೆರವೇರಿಸಿ ಬೆಳಗ್ಗೆ 11.30ರ ವೇಳೆಗೆ ಬೆಂಗಳೂರಿಗೆ ವಾಪಸ್ಸಾಗುತ್ತೇನೆ. 12 ಗಂಟೆಗೆ ಯೋಜನೆಗೆ ಚಾಲನೆ ನೀಡೋಣ ಎಂದು ಹೇಳಿದ್ದಾರೆ. ಎಚ್ಎಎಲ್ ವಿಮಾನ ನಿಲ್ದಾಣದಲ್ಲಿ ಇಳಿದು ಅಲ್ಲಿಂದ ರಸ್ತೆ ಮೂಲಕ ನೇರವಾಗಿ ವಿಧಾನಸೌಧ ಆವರಣದಲ್ಲಿ ನಡೆಯುವ ಶಕ್ತಿ ಯೋಜನೆ ಚಾಲನಾ ಕಾರ್ಯಕ್ರಮಕ್ಕೆ ಆಗಮಿಸುತ್ತೇನೆ ಎಂದು ತಿಳಿಸಿದರು.
ಪೀತಾಂಬರ ಪೀಠಕ್ಕೆ ಡಿಕೆಶಿ ಭೇಟಿ: ಕರ್ನಾಟಕ ಚುನಾವಣೆಯ ಗೆಲುವಿನ ಬಳಿಕ ದೇಗಲ ಭೇಟಿ ಕೈಗೊಂಡಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಶನಿವಾರ ಮಧ್ಯಪ್ರದೇಶದ ದತಿಯಾದಲ್ಲಿರುವ ಜನಪ್ರಿಯ ಪೀತಾಂಬರ ಪೀಠಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ಹಿಂದೂ ದೇಗುಲದ ಸಂಕೀರ್ಣಕ್ಕೆ ಶನಿವಾರ ಮಧ್ಯಾಹ್ನ 3 ಗಂಟೆಯ ಸುಮಾರಿಗೆ ಭೇಟಿ ನೀಡಿದ ಡಿ.ಕೆ.ಶಿವಕುಮಾರ್, ಸ್ಥಳೀಯ ಕಾಂಗ್ರೆಸ್ ನಾಯಕರ ಜೊತೆ ಸೇರಿ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಗ್ವಾಲಿಯರ್ಗೆ ಪ್ರಯಾಣ ಬೆಳೆಸಿದರು. ಅಲ್ಲಿಂದ ಭಾನುವಾರ ನಸುಕಿನಲ್ಲಿ ಉಜ್ಜಯಿನಿಗೆ ತೆರಳಲಿರುವ ಅವರು, ಅಲ್ಲಿ ಮಹಾಕಾಲೇಶ್ವರನ ದರ್ಶನ ಪಡೆಯಲಿದ್ದಾರೆ. ಅಲ್ಲದೆ, ನಸುಕಿನ 4 ಗಂಟೆಗೆ ಅವರು ಭಸ್ಮಾರತಿಯಲ್ಲಿ ಭಾಗಿಯಾಗಲಿದ್ದಾರೆ. ನಂತರ ಬೆಂಗಳೂರಿಗೆ ವಾಪಸಾಗಲಿದ್ದಾರೆ.
ಶಿವರಾಮ ಕಾರಂತ ಲೇಔಟ್ಗೆ ಜಾಗ ಕೊಟ್ಟವರು, ಬಿಡಿಎಗೂ ಲಾಭ ಆಗುವಂತೆ ಕ್ರಮ: ಡಿಕೆಶಿ
7ನೇ ವೇತನ ಆಯೋಗ ವರದಿ ಜಾರಿಗೆ ಮನವಿ: ಏಳನೇ ವೇತನ ಆಯೋಗದಿಂದ ಶೀಘ್ರದಲ್ಲಿ ವರದಿ ಪಡೆದು ಅನುಷ್ಠಾನಕ್ಕೆ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ಅವರು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಲ್ಲಿ ಮನವಿ ಮಾಡಿದ್ದಾರೆ. ರಾಜ್ಯ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು ಇತ್ತೀಚೆಗೆ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿ ಅಭಿನಂದಿಸಿದರು. ಈ ವೇಳೆ ಸಿ.ಎಸ್.ಷಡಾಕ್ಷರಿ ಅವರು, ಸರ್ಕಾರಿ ನೌಕರರ ವೇತನ ಮತ್ತು ಭತ್ಯೆ ಹೆಚ್ಚಳಕ್ಕಾಗಿ ಏಳನೇ ವೇತನ ಆಯೋಗದಿಂದ ಶೀಘ್ರದಲ್ಲಿ ವರದಿ ಪಡೆದು ಅನುಷ್ಠಾನಗೊಳಿಸಬೇಕು. ಚುನಾವಣೆಗೂ ಮುನ್ನ ಪ್ರಣಾಳಿಕೆಯಲ್ಲಿ ತಿಳಿಸಿದಂತೆ ಹೊಸ ಪಿಂಚಣಿ ವ್ಯವಸ್ಥೆ ರದ್ದು ಮಾಡಿ ಹಳೆ ಪಿಂಚಣಿ ವ್ಯವಸ್ಥೆ ಮತ್ತೆ ಜಾರಿಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಕೋರಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.