RSS Leader Passes Away : ಬಿಜೆಪಿ ಭೀಷ್ಮ ಉರಿಮಜಲು ರಾಮ್ ಭಟ್ ನಿಧನ

By Suvarna NewsFirst Published Dec 6, 2021, 8:21 PM IST
Highlights

* ದಕ್ಷಿಣ ಕನ್ನಡ.ಜಿಲ್ಲಾ ಬಿಜೆಪಿ ಭೀಷ್ಮ ಉರಿಮಜಲು ರಾಮ್ ಭಟ್(92) ನಿಧನ
* ವಯೋಸಹಜ ಅನಾರೋಗ್ಯಕ್ಕೆ ತುತ್ತಾಗಿ ರಾಮ್ ಭಟ್ ನಿಧನ
*ಕೆಲ ತಿಂಗಳ ಹಿಂದೆ ಆಸ್ಪತ್ರೆಗೆ ದಾಖಲಿಸಿದ್ದರೂ ಮತ್ತೆ ಮನೆಗೆ ಕರೆ ತಂದಿದ್ದು, ಮನೆಯಲ್ಲೇ ಕೊನೆಯುಸಿರು
*ಜನಸಂಘದ ಪ್ರಭಾವಿ ನಾಯಕರಾಗಿ, ಬಿಜೆಪಿಯ ಮುಂಚೂಣಿ ನಾಯಕರಾಗಿದ್ದ ರಾಮ್ ಭಟ್

 ಮಂಗಳೂರು, (ಡಿ.06): ಬಿಜೆಪಿಯ(BJP ಭೀಷ್ಮ’ ಎಂದೇ ಕರೆಸಿಕೊಳ್ಳುತ್ತಿದ್ದ ಪುತ್ತೂರಿನ ಮಾಜಿ ಶಾಸಕ ಉರಿಮಜಲು ಕೆ. ರಾಮ ಭಟ್‌(Ram Bhat) ನಿಧರಾಗಿದ್ದಾರೆ. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ  ರಾಮ್ ಭಟ್(92) ಇಂದು (ಡಿ.06) ಕೊಂಬೆಟ್ಟಿನಲ್ಲಿರುವ ಸ್ವಗೃಹದಲ್ಲಿ ಕೊನೆಯುಸಿರೆಳೆದರು.  ವಯೋ ಸಹಜ ಅನಾರೋಗ್ಯಕ್ಕೆ ಒಳಗಾಗಿದ್ದು, ಅವರನ್ನು ಕೆಲ ತಿಂಗಳ ಹಿಂದೆಯಷ್ಟೇ ಮಂಗಳೂರಿನ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚೇತರಿಸಿಕೊಂಡಿದ್ದ ರಾಮ ಭಟ್‌ರನ್ನು ಕೊಂಬೆಟ್ಟಿನಲ್ಲಿರುವ ಅವರ ಮನೆಗೆ ಕರೆತರಲಾಗಿತ್ತು. ಮತ್ತೆ ಅವರ ಆರೋಗ್ಯ ಹದಗೆಟ್ಟಿರುವ ಹಿನ್ನೆಲೆಯಲ್ಲಿ  ಪುತ್ತೂರಿನ ಸುಶ್ರುತ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೇ ರಾಮ್ ಭಟ್ ಅವರಿಗೆ  ಕೆರೆ ಆರೋಗ್ಯ ವಿಚಾರಿಸಿದ್ದರು.

 ಪುತ್ತೂರು ವಿಧಾನಸಭಾ ಕ್ಷೇತ್ರದಿಂದ ಒಟ್ಟು ಏಳು ಬಾರಿ‌ ಸ್ಪರ್ಧಿಸಿದ್ದ ರಾಮ್ ಭಟ್ ಅವರು ಎರಡು ಬಾರಿ ಗೆದ್ದು ಐದು ಬಾರಿ ಸೋಲುಕಂಡಿದ್ದರು.1957ರಲ್ಲಿ ಜನಸಂಘದಿಂದ ಮೊದಲ ಸ್ಪರ್ಧೆ ಮಾಡಿದ್ದರು. 2008ರ ವಿಧಾನಸಭಾ ಚುನಾವಣೆಯ ವೇಳೆ ಬಿಜೆಪಿ ಶಾಸಕಿಯಾಗಿದ್ದ ಶಕುಂತಳಾ ಟಿ. ಶೆಟ್ಟಿ ಅವರಿಗೆ ಮತ್ತೆ ಸ್ಪರ್ಧಿಸಲು ಅವಕಾಶ ನಿರಾಕರಿಸಿದಾಗ ಶಕುಂತಳಾ ಶೆಟ್ಟಿಯವರು ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಲು ರಾಮ ಭಟ್ ಪ್ರೇರಣೆಯಾಗಿದ್ದರು. ನಂತರ ಸ್ವಾಭಿಮಾನಿ ವೇದಿಕೆ ಹುಟ್ಟು ಹಾಕಿದ್ದ ಇವರು ಸ್ವಾಭಿಮಾನಿ ಸೌಹಾರ್ದ ಸಹಕಾರಿ ಸಂಘದ ಹುಟ್ಟಿಗೂ ಕಾರಣರಾಗಿದ್ದರು. 2009ರಲ್ಲಿ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ವಿರುದ್ದವೇ ಸಂಸದ ಸ್ಥಾನಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಬಳಿಕ ನರೇಂದ್ರ ಮೋದಿ ಪ್ರಧಾನಿಯಾದ ನಂತರ ಮತ್ತೆ ಬಿಜೆಪಿಗೆ ಬೆಂಬಲ ಸೂಚಿಸಿದ್ದರು.

ಆರ್‌ಎಸ್‌ಎಸ್‌ನ ನಿಷ್ಠಾವಂತ  ಸ್ವಯಂ ಸೇವಕರಾಗಿದ್ದರು. ಆರ್‌ಎಸ್‌ಎಸ್ ಮೂಲಕ ಪುತ್ತೂರನ್ನು ಹಿಂದುತ್ವದ ಭದ್ರಕೋಟೆ ಮಾಡಲು ಅಡಿಪಾಯ ಹಾಕಿದ್ದರು. ಜನಸಂಘ, ಬಿಜೆಪಿ ಮೂಲಕ ಅಟಲ್ ಬಿಹಾರಿ ವಾಜಪೇಯಿ, ಲಾಲ್‌ ಕೃಷ್ಣ ಅಡ್ವಾಣಿಯಂತಹ ರಾಷ್ಟ್ರ ನಾಯಕರೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು. ವಕೀಲರಾಗಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮುಖ್ಯಸ್ಥರಾಗಿ, ಪುರಸಭೆ ಅಧ್ಯಕ್ಷರಾಗಿದ್ದರು.

ಕರಾವಳಿ ಬಿಜೆಪಿ ಭೀಷ್ಮನಿಗೆ ಮೋದಿ ಕರೆ, ಭಟ್ ಜಿ ಆಪ್ ಕೈಸೆ ಹೋ

 ಎ.ಕೆ.ಸುಬ್ಬಯ್ಯ, ಬಿ.ಬಿ. ಶಿವಪ್ಪ, ಅಣ್ಣಾ ವಿನಯಚಂದ್ರ ಮುಂತಾದವರ ಜತೆಗೂಡಿ ಬಿಜೆಪಿಯ ಹಿರಿಯರ ವೇದಿಕೆಯಲ್ಲಿಯೂ ಸಕ್ರಿಯರಾಗಿದ್ದ ರಾಮ ಭಟ್‌ರು 2009ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ ವಿರುದ್ಧ ಬಂಡಾಯ ಘೋಷಿಸಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಆರ್‌ಎಸ್‌ಎಸ್ ಸಹಿತ ಸಂಘ ಪರಿವಾರ, ಬಿಜೆಪಿಯ ಉನ್ನತ ನಾಯಕರ ರಾಜಿ ಸಂಧಾನಕ್ಕೂ ಬಗ್ಗದ ರಾಮ ಭಟ್‌ರವರು ರಾಜಕೀಯದಲ್ಲಿ ಸಂಚಲನವನ್ನೇ ಸೃಷ್ಟಿಸಿದ್ದರು.

ಮಾಜಿ ಶಾಸಕಬಳಿಕದ ಬದಲಾದ ರಾಜಕಾರಣದ ಸಮಯದಲ್ಲಿ ನರೇಂದ್ರ ಮೋದಿಯವರಿಗೆ ನಮೋ ನಮಃ ಎಂದಿದ್ದ ರಾಮಭಟ್‌ರವರು ನಂತರದ ಚುನಾವಣೆಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಮಾತನಾಡಿದ್ದರು. 2020ರ ಏಪ್ರಿಲ್ ತಿಂಗಳಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಖುದ್ದಾಗಿ ರಾಮ ಭಟ್ಟಗೆ ದೂರವಾಣಿ ಕರೆ ಮಾಡಿ ಮಾತನಾಡಿದ್ದರು. ಮತ್ತೆ ಬಿಜೆಪಿ ನಾಯಕರ ಜತೆ ಆಪ್ತರಾಗಿದ್ದ ರಾಮ ಭಟ್‌ರವರ ಮನೆಗೆ ಕೆಲವೇ ದಿನಗಳ ಹಿಂದೆ ಪುತ್ತೂರಿನ ಮಾಜಿ ಶಾಸಕ, ಮಾಜಿ  ಮಾಜಿ ಮುಖ್ಯಮಂತ್ರಿ, ಕೇಂದ್ರದ ಮಾಜಿ ಸಚಿವ ಡಿ.ವಿ. ಸದಾನಂದ ಗೌಡ ಸಹಿತ ಹಲವರು ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದರು.

ಉರಿಮಜಲು ರಾಮಭಟ್ಟರ ನಿಧನಕ್ಕೆ ಸಚಿವರ ಶೋಕ
ಬೆಂಗಳೂರು: ಹಿರಿಯ ಆರೆಸ್ಸೆಸ್ ಕಟ್ಟಾಳು ಮತ್ತು ರಾಜ್ಯ ಬಿಜೆಪಿಯ ಅಧ್ವರ್ಯುಗಳಲ್ಲಿ ಒಬ್ಬರಾಗಿದ್ದ ಮಾಜಿ ಶಾಸಕ ಉರಿಮಜಲು ಕೆ. ರಾಮಭಟ್ ಅವರ ನಿಧನಕ್ಕೆ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಶೋಕಿಸಿದ್ದಾರೆ.

ರಾಜ್ಯದಲ್ಲಿ ಇಂದು ಬಿಜೆಪಿ ಇಷ್ಟು ಪ್ರಬಲವಾಗಿ ಬೆಳೆದಿರುವುದರ ಹಿಂದೆ ರಾಮಭಟ್ಟರ ಕಾಣಿಕೆ ದೊಡ್ಡದಾಗಿತ್ತು. ಬಿಜೆಪಿಗೆ ಬಲವಿಲ್ಲದ ದಿನಗಳಲ್ಲಿ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಅವರು, ಪಕ್ಷದ ಜನಪರ ಕಾಳಜಿಯ ಸಂಸ್ಕೃತಿಯನ್ನು ರೂಪಿಸಿದ ಚೈತನ್ಯಪುರುಷರಲ್ಲಿ ಒಬ್ಬರಾಗಿದ್ದರು ಎಂದು ಅವರು ತಮ್ಮ ಶೋಕಸಂದೇಶದಲ್ಲಿ ನೆನಪಿಸಿಕೊಂಡಿದ್ದಾರೆ.

ರಾಮಭಟ್ಟರು ಭಾರತೀಯ ಸಂಸ್ಕೃತಿ ಮತ್ತು ಸಂಘಟನೆಗಳಲ್ಲಿ ಅಪಾರ ನಂಬಿಕೆ ಇಟ್ಟುಕೊಂಡಿದ್ದ ತತ್ತ್ವನಿಷ್ಠರಾಗಿದ್ದರು. ಅವರು ಮೌಲ್ಯಗಳ ವಿಚಾರ ಬಂದಾಗ ಯಾರೊಂದಿಗೂ ರಾಜಿ ಮಾಡಿಕೊಳ್ಳುತ್ತಿರಲಿಲ್ಲ. ಅವರ ನಿಧನದಿಂದ ಕೇವಲ ಆರೆಸ್ಸೆಸ್ ಮತ್ತು ಬಿಜೆಪಿಗೆ ಮಾತ್ರವಲ್ಲದೆ ಸಮಾಜಕ್ಕೂ ನಷ್ಟವಾಗಿದೆ ಎಂದು ಸಚಿವರು ಕಂಬನಿ ಮಿಡಿದಿದ್ದಾರೆ.

ರಾಮಭಟ್ಟರ ನಿಧನದಿಂದ ಆಗಿರುವ ದುಃಖವನ್ನು ತಡೆದುಕೊಳ್ಳುವ ಶಕ್ತಿಯನ್ನು ಭಗವಂತನು ಅವರ ಕುಟುಂಬದವರಿಗೆ ಮತ್ತು ಅನುಯಾಯಿಗಳಿಗೆ ಹಾಗೂ ಕಾರ್ಯಕರ್ತರಿಗೆ ನೀಡಿ, ಅವರ ಆತ್ಮಕ್ಕೆ ಚಿರಶಾಂತಿಯನ್ನು ಕರುಣಿಸಲಿ ಎಂದು ಸಚಿವರು ಪ್ರಾರ್ಥಿಸಿದ್ದಾರೆ.

"

click me!