ಸಿದ್ದರಾಮಯ್ಯ ಸ್ಪರ್ಧೆ ವಿಚಾರವಾಗಿ ಕಾಂಗ್ರೆಸ್‌ ಕಾರ್ಯಕರ್ತರ ಸಭೆಯಲ್ಲಿ ಗದ್ದಲ, ಕೆ.ಎಚ್‌.ಮುನಿಯಪ್ಪ ಸ್ಪಷ್ಟನೆ

By Gowthami KFirst Published Dec 5, 2022, 9:47 PM IST
Highlights

ಕಾಂಗ್ರೆಸ್‌ ಕಾರ್ಯಕರ್ತರ ಗಲಾಟೆ ವಿಚಾರಕ್ಕೆ ಸಂಬಂಧಿಸಿದ್ದಂತೆ ಹೇಳಿಕೆ ನೀಡಿರುವ ಮಾಜಿ ಕೇಂದ್ರ ಸಚಿವ ಕೆ.ಎಚ್‌.ಮುನಿಯಪ್ಪ ಇಬ್ಬರು ಮೂವರು ಗೊಂದಲ ಮಾಡಿದ್ದಾರೆ, ಯಾರೂ ತಲೆಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ. ಇಲ್ಲಿ ಗುಂಪುಗಾರಿಕೆ, ಗೊಂದಲಗಳಿವೆ ಸರಿಮಾಡಿ ಬನ್ನಿ ಎಂದು  ಸಿದ್ದರಾಮಯ್ಯರಿಗೆ ಎಚ್ಚರಿಕೆ ಕೊಟ್ಟಿದ್ದೇನೆ ಎಂದಿದ್ದಾರೆ.

ಕೋಲಾರ (ಡಿ.5): ಇಬ್ಬರು ಮೂವರು ಗೊಂದಲ ಮಾಡಿದ್ದಾರೆ, ಯಾರೂ ತಲೆಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ. ಇಲ್ಲಿ ಗುಂಪುಗಾರಿಕೆ, ಗೊಂದಲಗಳಿವೆ ಸರಿಮಾಡಿ ಬನ್ನಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಎಚ್ಚರಿಕೆ ಕೊಟ್ಟಿದ್ದೇನೆ ಎಂದು ಮಾಜಿ ಕೇಂದ್ರ ಸಚಿವ ಕೆ.ಎಚ್‌.ಮುನಿಯಪ್ಪ ಹೇಳಿದರು. ನಗರ ಜಿಲ್ಲಾ ಕಾಂಗ್ರೆಸ್‌ ಭವನದ ಮುಂದೆ ನಡೆದ ಕಾಂಗ್ರೆಸ್‌ ಕಾರ್ಯಕರ್ತರ ಗಲಾಟೆ ವಿಚಾರಕ್ಕೆ ಸಂಬಂಧಿಸಿದ್ದಂತೆ ಸುದ್ದಿಗಾರರೊಂದಿಗೆ ಮಾತನಾಡಿ, ಇಷ್ಟುದಿನ ಆಗಿದ್ದಾಯ್ತು, ಗುಂಪುಗಾರಿಗೆ ಬೇಡ ಒಟ್ಟಿಗೆ ಹೋಗೋಣ ಎಂದು ಹೇಳಿದ್ದೇನೆ. ಗುಂಪುಗಾರಿಕೆ ಮುಂದುವರೆಯಲಿ ಅನ್ನೋದಾದ್ರೆ ಕಾಂಗ್ರೆಸ್‌ಗೆ ಕಷ್ಟವಾಗುತ್ತದೆ. ಸಿದ್ದರಾಮಯ್ಯ ಸಿಎಂ ಆಗಿದ್ದವರು, ಅವರನ್ನು ಯಾರು ತಡಿಯೋಕೆ ಆಗುತ್ತೆ. ಎಲ್ಲಿ ಬೇಕಾದರೂ ಸಿದ್ದರಾಮಯ್ಯ ಸ್ಪರ್ಧೆ ಮಾಡಬಹುದು. ನಾಮಪತ್ರ ಸಲ್ಲಿಸಿ ರಾಜ್ಯ ಪ್ರವಾಸ ಮಾಡಬೇಕು, ಇಲ್ಲಿ ಸಿದ್ದರಾಮಯ್ಯ ಗೊಂದಲ ಸೃಷ್ಟಿಮಾಡಿಕೊಳ್ಳಬಾರದು. ಇದನ್ನು ಹೈಕಮಾಂಡ್‌ ಸಹ ಅರ್ಥ ಮಾಡಿಕೊಂಡು ಮಧ್ಯಪ್ರವೇಶ ಮಾಡಿ ಸಮಸ್ಯೆ ಇತ್ಯರ್ಥಗೊಳಿಸಬೇಕು ಎಂದು ನಗರದ ಕಾಂಗ್ರೆಸ್ ಕಚೇರಿಯ ಬಳಿ  ಹೇಳಿದರು. 

ಘಟನೆ ಹಿನ್ನೆಲೆ: ಕಾಂಗ್ರೆಸ್‌ ಕಾರ್ಯಕರ್ತರ ಸಭೆಯಲ್ಲಿ ಮಾಜಿ ಸಂಸದ ಕೆ.ಎಚ್‌.ಮುನಿಯಪ್ಪನವರು ಮಾತನಾಡುವ ಸಂದರ್ಭದಲ್ಲಿ ಗದ್ದಲ ಉಂಟಾಯಿತು. ಸಭೆಯಲ್ಲಿ ಮುನಿಯಪ್ಪ ಮಾತನಾಡಿ, ಸಿದ್ದರಾಮಯ್ಯನವರು ಕೋಲಾರದಿಂದ ಸ್ಪರ್ಧಿಸಿದರೆ ಸ್ವಾಗತ. ಅವರು ಬರುವ ಮೊದಲು ಕ್ಷೇತ್ರದಲ್ಲಿನ ಗುಂಪುಗಾರಿಕೆಯನ್ನು ಸರಿಮಾಡಲು ಸೂಚಿಸಿದ್ದೇನೆ, ಈ ಹಂತದಲ್ಲಿರುವಾಗ ಕಾಂಗ್ರೆಸ್‌ನ್ನು ಸೋಲಿಸಲು ಪ್ರಯತ್ನಪಟ್ಟವರು ಸಿದ್ದರಾಮಯ್ಯ ಪರವಾಗಿ ಪ್ರವಾಸ ಮಾಡುವ ಅವಶ್ಯಕತೆ ಇತ್ತೆ, ಇದರಿಂದ ಮತ್ತಷ್ಟುಗುಂಪುಗಾರಿಕೆ ಹೆಚ್ಚಾಗಲು ಕಾರಣವಾಗುತ್ತದೆ. ಇವರುಗಳು ಮೊದಲು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಕೆಲಸ ಮಾಡಿಕೊಳ್ಳಲಿ. ಕೋಲಾರದ ಊಸಾಬಾರಿ ಇವರಿಗೇಕೆ ಎಂದು ಘಟಬಂಧನ್‌ ಗುಂಪನ್ನು ತರಾಟೆಗೆ ತೆಗೆದುಕೊಂಡರು.

ಗುಂಪುಗಳ ನಡುವೆ ತಳ್ಳಾಟ:
ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧೆ ಮಾಡಬೇಕೆಂದು ಕಾರ್ಯಕರ್ತನೊಬ್ಬ ಜೋರಾಗಿ ಕೂಗಿದಾಗ ಅವನಿಗೆ ಧ್ವನಿಯಾಗಿ ಇತರೇ ಕಾರ್ಯಕರ್ತರು ಸಿದ್ದರಾಮಯ್ಯ ಬರಲೇಬೇಕೆಂದು ಜಯಕಾರ ಕೂಗಿದರು.

ದಲಿತರ ಒಗ್ಗೂಡಿಸಲು ಪರಂ ಜೊತೆ ಸಮಾವೇಶ: ಮುನಿಯಪ್ಪ

ಆ ಸಂದರ್ಭದಲ್ಲಿ ಕೆ.ಎಚ್‌.ಮುನಿಯಪ್ಪ ಪರವಾಗಿಯೂ ಕೆಲವರು ಜಯಕಾರ ಕೂಗಿದಾಗ ಎರಡು ಗುಂಪುಗಳ ನಡುವೆ ಮಾತಿಚಕಮಕಿ ನಡೆದು ನೂಕಾಟ, ತಳ್ಳಾಟ ನಡೆಯಿತು. ಆಗ ಎರಡೂ ಗುಂಪುಗಳನ್ನು ಸಮಾಧಾನಪಡಿಸಲು ಪೊಲೀಸರು ಮಧ್ಯಪ್ರವೇಶಿಸಬೇಕಾಯಿತು. ನಂತರ ಕಾರ್ಯಕರ್ತರ ಮತ್ತೆ ಸಿದ್ದರಾಮಯ್ಯ ಮತ್ತು ಮುನಿಯಪ್ಪ ಪರ ಜೈಕಾರ ಕೂಗಿದರು.

Karnataka Assembly election: ಸಿ.ಟಿ. ರವಿ ಅವರ 'ಸಿದ್ರಾಮುಲ್ಲಾ ಖಾನ್‌' ಹೇಳಿಕೆ ಸಮರ್ಥಿಸಿಕೊಂಡ ಬಿಜೆಪಿ

ಎಲ್ಲರೂ ಒಟ್ಟಾಗಿ ಕೆಲಸ ಮಾಡೋಣ:
ಮೊಟಕುಗೊಳಿಸಿದ ಭಾಷಣವನ್ನು ಮುಂದುವರೆಸಿದ ಕೆ.ಹೆಚ್‌.ಮುನಿಯಪ್ಪ ಹಳೆಯದ್ದನ್ನು ಮರೆತು ಎಲ್ಲರೂ ಒಟ್ಟಿಗೆ ಹೋಗೋಣ, ಎರಡೂ ಜಿಲ್ಲೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳನ್ನು ಗೆಲ್ಲಿಸೋಣ, ಸಿದ್ದರಾಮಯ್ಯ ಬರುವುದಕ್ಕೆ ನನ್ನದು ಸ್ವಾಗತವಿದೆ, ಹೈಕಮಾಂಡ್‌ ತೀರ್ಮಾನಕ್ಕೆ ಎಲ್ಲರೂ ಬದ್ಧರಾಗೋಣ. ಯಾರಿಗೆ ಟಿಕೆಟ್‌ ನೀಡಿದರೂ ಒಟ್ಟಾಗಿ ಕೆಲಸ ಮಾಡೋಣ ಎಂದು ಎಲ್ಲರಿಗೂ ನಮಸ್ಕಾರ ಹಾಕಿ ಸಭೆಯನ್ನು ಮುಕ್ತಾಗೊಳಿಸಿದರು.

click me!