Karnataka Politics: ಬಿಜೆಪಿ ವಿರುದ್ಧ ರಣತಂತ್ರಕ್ಕೆ ಕಾಂಗ್ರೆಸ್‌ ಸಭೆ

By Girish GoudarFirst Published Mar 30, 2022, 4:39 AM IST
Highlights

*  ಏ.10ರಿಂದ ಚಿಂತನ- ಮಂಥನ
*  ಹಿಜಾಬ್‌, ಮುಸ್ಲಿಂ ವ್ಯಾಪಾರ ನಿಷೇಧಕ್ಕೆ ಪ್ರತಿ ತಂತ್ರಕ್ಕೆ ಸಜ್ಜು
*  ಯಲಹಂಕ ಸಮೀಪದ ಹೊಟೇಲ್‌ವೊಂದರಲ್ಲಿ ನಡೆಯಲಿರುವ ಮೂರು ದಿನಗಳ ಕಾರ್ಯಾಗಾರ 
 

ಬೆಂಗಳೂರು(ಮಾ.30):   ಹಿಜಾಬ್‌ ವಿವಾದ, ಪಠ್ಯದಲ್ಲಿ ಭಗವದ್ಗೀತೆ ಅಳವಡಿಕೆ, ಮುಸ್ಲಿಂ ವ್ಯಾಪಾರಿಗಳಿಗೆ ನಿಷೇಧ ಸೇರಿದಂತೆ ಧರ್ಮಾಧಾರಿತ ಭಾವನಾತ್ಮಕ ವಿಚಾರಗಳನ್ನು ಮುಂದಿಟ್ಟುಕೊಂಡು ಬಿಜೆಪಿ(BJP) ಚುನಾವಣೆಗೆ ಸಜ್ಜಾಗುತ್ತಿರುವ ಹಿನ್ನೆಲೆಯಲ್ಲಿ ಇದಕ್ಕೆ ಪ್ರತಿಯಾಗಿ ರಣತಂತ್ರ ರೂಪಿಸಲು ಕಾಂಗ್ರೆಸ್‌(Congress) ಏ.10ರಿಂದ ಮೂರು ದಿನಗಳ ಕಾಲ ‘ಚಿಂತನ ಮಂಥನ’ ಸಭೆ ಹಮ್ಮಿಕೊಂಡಿದೆ.

ಯಲಹಂಕ ಸಮೀಪದ ಹೊಟೇಲ್‌ವೊಂದರಲ್ಲಿ ನಡೆಯಲಿರುವ ಈ ಮೂರು ದಿನಗಳ ಕಾರ್ಯಾಗಾರದಲ್ಲಿ ಕಾಂಗ್ರೆಸ್‌ನ ಎಲ್ಲ ಪ್ರಮುಖರು ಆಹ್ವಾನಿತರಾಗಿದ್ದಾರೆ. ಮೂರು ದಿನಗಳಲ್ಲಿ ಮೊದಲು ಪಕ್ಷದ ಹಿರಿಯ ನಾಯಕರು, ಶಾಸಕರು, ಮಾಜಿ ಶಾಸಕರು, ಕಳೆದ ಬಾರಿಯ ಚುನಾವಣೆಯಲ್ಲಿ(Election) ಪಕ್ಷದ ಅಭ್ಯರ್ಥಿಯಾಗಿದ್ದವರು, ಮುಂಚೂಣಿ ಘಟಕಗಳ ಅಧ್ಯಕ್ಷರು, ಜಿಲ್ಲಾಧ್ಯಕ್ಷರು ಹಾಗೂ ಎಲ್ಲ ಪ್ರಮುಖ ನಾಯಕರನ್ನು ಆಹ್ವಾನಿಸಲಾಗಿದೆ. ಪ್ರತ್ಯೇಕವಾಗಿ ಈ ನಾಯಕರೊಂದಿಗೆ ಚಿಂತನ-ಮಂಥನ ನಡೆಯಲಿದ್ದು, ಮುಂದಿನ ವಿಧಾನಸಭಾ ಚುನಾವಣೆಗೆ(Karnataka Assembly Election) ಪಕ್ಷ ಯಾವ ವಿಚಾರಗಳನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸಬೇಕು ಎಂಬ ಬಗ್ಗೆ ಸಲಹೆ ಪಡೆಯಲು ಉದ್ದೇಶಿಸಲಾಗಿದೆ ಎಂದು ಮೂಲಗಳು ಹೇಳಿವೆ.

ಈಗ ಸೋತರೂ, ಮುಂದೆ ಗೆಲುವು, ಪ್ರಜಾಪ್ರಭುತ್ವಕ್ಕೆ ಬಲಿಷ್ಠ ಕಾಂಗ್ರೆಸ್‌ ಅತೀ ಅಗತ್ಯ: ಬಿಜೆಪಿಗನ ಅಚ್ಚರಿಯ ಹೇಳಿಕೆ

ಮಾ.31 ರಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ(Rahul Gandhi) ರಾಜ್ಯಕ್ಕೆ(Karnataka) ಆಗಮಿಸುತ್ತಿದ್ದು ಮೊದಲು ದಿನ ಹಿರಿಯ ನಾಯಕರೊಂದಿಗೆ ಸಭೆ ನಡೆಸಲಿದ್ದಾರೆ. ಎರಡನೇಯ ದಿನ ಶಾಸಕರು, ಪರಾಜಿತ ಅಭ್ಯರ್ಥಿಗಳು, ವಿವಿಧ ಮುಂಚೂಣಿ ಘಟಕಗಳ ಮುಖ್ಯಸ್ಥರೊಂದಿಗೆ ಸಂವಾದ ನಡೆಸಲಿದ್ದಾರೆ. ಈ ವೇಳೆ ಪ್ರಮುಖವಾಗಿ ಚುನಾವಣೆ ಸಿದ್ಧತೆಗಳ ಕುರಿತು ಚರ್ಚೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಇದೇ ಮಾ.31 ರಂದು ಪೆಟ್ರೋಲ್‌, ಡೀಸೆಲ್‌, ಅಡುಗೆ ಗ್ಯಾಸ್‌, ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರುದ್ಧ ಕಾಂಗ್ರೆಸ್‌ ರಾಜ್ಯಾದ್ಯಂತ ಹೋರಾಟ ನಡೆಸಲಿದೆ. ಬಳಿಕ ಏ.7ರಂದು ಜಿಲ್ಲಾ ಮಟ್ಟದಲ್ಲಿ ಹೋರಾಟ ನಡೆಸಿ, ಬಳಿಕ ರಾಜ್ಯ ಮಟ್ಟದಲ್ಲಿ ಹೋರಾಟ ನಡೆಸಲಾಗುವುದು. ಈ ಮೂಲಕ ಭಾವನಾತ್ಮಕ ವಿಚಾರಗಳನ್ನು ಬದಿಗಿರಿಸಿ ಜನರು ಎದುರಿಸುತ್ತಿರುವ ಸಂಕಷ್ಟಗಳನ್ನು ಮುನ್ನೆಲೆಗೆ ತರಲು ನಿರ್ಧಾರ ಮಾಡಿದೆ. ಇದನ್ನು ಇದೇ ರೀತಿ ಮುಂದುವರೆಸಿಕೊಂಡು ಹೋಗಲು ಯಾವ್ಯಾವ ರೀತಿಯ ಕಾರ್ಯಕ್ರಮಗಳನ್ನು ರೂಪಿಸಬೇಕು ಎಂಬುದರ ಬಗ್ಗೆ ಮೂರು ದಿನಗಳ ಚಿಂತನ ಮಂಥನ ಕಾರ್ಯಕ್ರಮದಲ್ಲಿ ಚರ್ಚೆಯಾಗುವ ಸಾಧ್ಯತೆ ಇದೆ.

ಬಿಜೆಪಿ ಸರ್ಕಾರದ 40% ಕಮೀಷನ್‌ ವಿರುದ್ಧ ಕಾಂಗ್ರೆಸ್‌ ಹೋರಾಟ

ಕಾಂಗ್ರೆಸ್‌ ಪಕ್ಷವು ರಾಜ್ಯದ ಬಿಜೆಪಿ ಸರ್ಕಾರದ 40 ಪರ್ಸೆಂಟ್‌ ಭ್ರಷ್ಟಾಚಾರವನ್ನು ವ್ಯಾಪಕವಾಗಿ ಬಿಂಬಿಸಲು ಹಾಗೂ ರಾಜ್ಯಾದ್ಯಂತ ಹೋರಾಟ ರೂಪಿಸಲು ಸಂಕಲ್ಪ ಮಾಡಿದೆ. ಸೋಮವಾರ ಅರಮನೆ ಮೈದಾನದಲ್ಲಿ ನಡೆದ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್‌(MB Patil) ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ಸಿಂಗ್‌ ಸುರ್ಜೇವಾಲಾ(Randeep Surjewala) ಅವರು, 40 ಪರ್ಸೆಂಟ್‌ ಕಮಿಷನ್‌(40 Percent Commission) ಹಾಗೂ ಸಚಿವರ ಲಂಚದ ಬೇಡಿಕೆಗೆ ಬಗ್ಗೆ ಇತ್ತೀಚೆಗೆ ಗುತ್ತಿಗೆದಾರರು ಪ್ರಧಾನಮಂತ್ರಿಗಳಿಗೆ ಬರೆದಿರುವ ಪತ್ರದ ದಾಖಲೆಗಳನ್ನು ಪ್ರದರ್ಶಿಸಿ ಹೋರಾಟದ ಎಚ್ಚರಿಕೆ ನೀಡಿದ್ದರು. 

ಕಾಂಗ್ರೆಸ್‌-ಬಿಜೆಪಿ ನಡುವೆ ಅಧ್ಯಕ್ಷ ಸ್ಥಾನಕ್ಕಾಗಿ ಕಿತ್ತಾಟ, ಯಾರ ಪಾಲಾಗುತ್ತೆ ಪಟ್ಟ?

ಇದೇ ವೇಳೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌(DK Shivakumar), ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah), ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ವಿಧಾನಪರಿಷತ್‌ ಪ್ರತಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್‌ ಸೇರಿದಂತೆ ಪ್ರತಿಯೊಬ್ಬರೂ 40 ಪರ್ಸೆಂಟ್‌ ಭ್ರಷ್ಟಾಚಾರದ ವಿಷಯವಾಗಿಯೇ ಮಾತನಾಡಿ ಬಿಜೆಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

ಮೊದಲಿಗೆ ರಣದೀಪ್‌ ಸಿಂಗ್‌ ಸುರ್ಜೇವಾಲಾ ಮಾತನಾಡಿ, ರಾಜ್ಯದಲ್ಲಿಂದು ಅಧಿಕಾರದಲ್ಲಿರುವುದು ಅತ್ಯಂತ ಭ್ರಷ್ಟ ಸರ್ಕಾರ(Corrupt Government). ಇದು ಶೇ.40ರಷ್ಟು ಕಮಿಷನ್‌ ಸರ್ಕಾರ. ಈ ಸರ್ಕಾರ ಜನಾಶೀರ್ವಾದದಿಂದ ಅಧಿಕಾರಕ್ಕೆ ಬಂದಿಲ್ಲ. ಬದಲಾಗಿ ಮಾರುಕಟ್ಟೆಯಲ್ಲಿ ಹರಾಜು ಕೂಗಿ ಪದಾರ್ಥ ಕೊಳ್ಳುವಂತೆ ಶಾಸಕರನ್ನು ಖರೀದಿಸಿ ರೂಪುಗೊಂಡಿದೆ. ಹೀಗಾಗಿಯೇ ಭ್ರಷ್ಟಾಚಾರದಲ್ಲಿ ಮುಳುಗಿ ತೇಲುತ್ತಿದೆ. ಇಂದು ಇಲ್ಲಿರುವ ಎಲ್ಲರೂ ಒಂದು ಸಂಕಲ್ಪ ಮಾಡಬೇಕು. ಬಿಜೆಪಿ ಭ್ರಷ್ಟಾಚಾರವನ್ನು ರಾಜ್ಯದ ಮೂಲೆ-ಮೂಲೆಗೂ ತಲುಪಿಸಬೇಕು. ರಾಜ್ಯದ ಜನರ ಹಣ ತಿಂದವರನ್ನು ಅಧಿಕಾರದಲ್ಲಿ ಕೂರಲು ಬಿಡಬಾರದು ಎಂದು ಕರೆ ನೀಡಿದರು.
 

click me!