ಈ ಬಾರಿ ಕರಾವಳಿ ಕರ್ನಾಟಕ ಸೇರಿದಂತೆ ಆಯಾ ಪ್ರದೇಶವಾರು ಪ್ರಾಮುಖ್ಯತೆಯನ್ನು ಗಮನಿಸಿಕೊಂಡು ಕಾಂಗ್ರೆಸ್ ಪ್ರತ್ಯೇಕ ಪ್ರಣಾಳಿಕೆ ಬಿಡುಗಡೆಗೊಳಿಸಲಿದೆ ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ಮಂಗಳೂರು (ಜ.22) : ಈ ಬಾರಿ ಕರಾವಳಿ ಕರ್ನಾಟಕ ಸೇರಿದಂತೆ ಆಯಾ ಪ್ರದೇಶವಾರು ಪ್ರಾಮುಖ್ಯತೆಯನ್ನು ಗಮನಿಸಿಕೊಂಡು ಕಾಂಗ್ರೆಸ್ ಪ್ರತ್ಯೇಕ ಪ್ರಣಾಳಿಕೆ ಬಿಡುಗಡೆಗೊಳಿಸಲಿದೆ ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ಮಂಗಳೂರಿನ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಕಲ್ಯಾಣ ಕರ್ನಾಟಕ, ಚಿತ್ರದುರ್ಗಗಳಲ್ಲಿ 200 ಮೆಗಾವ್ಯಾಟ್ ಉಚಿತ ವಿದ್ಯುತ್, ಪ್ರತಿಯೊಬ್ಬ ಗೃಹಿಣಿಗೆ ಮಾಸಿಕ 2 ಸಾವಿರ ರು. ಇತ್ಯಾದಿ ಘೋಷಣೆ ಮಾಡಲಾಗಿದೆ. ಇದರಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಎಲ್ಲ ಆರ್ಥಿಕ ಲೆಕ್ಕಾಚಾರಗಳನ್ನು ಮಾಡಿಯೇ ಈ ಘೋಷಣೆ ಮಾಡಲಾಗಿದೆ. ಕಲ್ಯಾಣ ಕರ್ನಾಟಕ, ಚಿತ್ತೂರು ಕರ್ನಾಟಕ, ಮುಂಬೈ ಕರ್ನಾಟಕ, ಮೈಸೂರು ಕರ್ನಾಟಕ ಹೀಗೆ ಪ್ರದೇಶವಾರು ಬೇಡಿಕೆಯನ್ನು ಗಮನಿಸಿ ಪ್ರತ್ಯೇಕ ಪ್ರಣಾಳಿಕೆ ಘೋಷಣೆ ಮಾಡಲಾಗುವುದು. ಕಾಂಗ್ರೆಸ್ ಸರ್ಕಾರದ ಮುಂದಿನ ಮುನ್ನೋಟವೇ ಈ ಪ್ರಣಾಳಿಕೆಯಾಗಿರಲಿದೆ ಎಂದರು.
ಸಿದ್ದು ಭವಿಷ್ಯದ ಸಿಎಂ ಅಂತ ಕೆಲವರು ಹೇಳಿದ್ರೆ ತಪ್ಪಿಲ್ಲ: ಪರಂ
ಜಿಲ್ಲಾವಾರು ಪ್ರಣಾಳಿಕೆ ಸಭೆ:
ಮಂಗಳೂರಿಗೆ ಕಾಂಗ್ರೆಸ್ ಪ್ರಾಣಾಳಿಕ ಸಮಿತಿ ಪ್ರಥಮವಾಗಿ ಭೇಟಿ ಕೊಟ್ಟಿದೆ. ಇದೇ ರೀತಿ ಹುಬ್ಬಳ್ಳಿ ಧಾರವಾಡ, ಬೆಳಗಾವಿ, ಮೈಸೂರು, ಮಧ್ಯಕರ್ನಾಟಕ ಜಿಲ್ಲೆಗಳಲ್ಲಿ ಕಾಂಗ್ರೆಸ್ನ ಪ್ರಣಾಳಿಕೆ ಸಭೆ ನಡೆಯಲಿದೆ ಎಂದರು.
ಮಂಗಳೂರಿನಲ್ಲಿ ಹಲವು ಗುಂಪುಗಳ ಅಭಿಪ್ರಾಯ ಸಂಗ್ರಹಿಸಿದ್ದೇವೆ. ಈ ಭಾಗದ ಸಮಸ್ಯೆಗಳ ಬಗ್ಗೆ ಅಭಿಪ್ರಾಯ ಸಂಗ್ರಹಿಸಿದ್ದೇವೆ. ಇವೆಲ್ಲವನ್ನೂ ಕ್ರೋಢೀಕರಿಸಿ ಕರಾವಳಿ ಕರ್ನಾಟಕ ಪ್ರತ್ಯೇಕ ಪ್ರಣಾಳಿಕೆ ರೂಪಿಸುತ್ತೇವೆ. ಜ.22ರಂದು ಮಂಗಳೂರು ಹಾಗೂ ಉಡುಪಿಯಲ್ಲಿ ನಡೆಯುವ ಪ್ರಜಾಧ್ವನಿ ಯಾತ್ರೆಯಲ್ಲಿ ಕರಾವಳಿಯ ಪ್ರತ್ಯೇಕ ಪ್ರಣಾಳಿಕೆಯ ಮುಖ್ಯಾಂಶ ಘೋಷಣೆ ಮಾಡಲಾಗುವುದು ಎಂದರು.
ಕೆಪಿಸಿಸಿ ಅಧ್ಯಕ್ಷ ಸ್ಥಾನ ನಿಭಾಯಿಸಲು ಡಿಕೆ ಶಿವಕುಮಾರ್ ಒದ್ದಾಡುತ್ತಾರೆ: ಜಿ.ಪರಮೇಶ್ವರ್
ಸಾಮರಸ್ಯ ವಿಚಾರ ಸೇರ್ಪಡೆ:
ದ.ಕ.ಜಿಲ್ಲೆಯ ಸಮುದಾಯಗಳಲ್ಲಿ ಸಾಮರಸ್ಯ ಇಲ್ಲದ ಹಾಗೆ ಮಾಡಿದ್ದಾರೆ. ಕರಾವಳಿಯಲ್ಲಿ ಬಿಜೆಪಿ ಸಾಮರಸ್ಯ ಹಾಳುಗೆಡವಿದೆ. ಅನೈತಿಕ ಪೊಲೀಸ್ಗಿರಿ ಸೇರಿದಂತೆ ವಿವಿಧ ರೀತಿಯಲ್ಲಿ ಸಾಮರಸ್ಯ ಹಾಳುಗೆಡವಿದ್ದಾರೆ. ಆದ್ದರಿಂದ ಇಲ್ಲಿನ ಶಿಕ್ಷಣ ಸಂಸ್ಥೆಗಳಿಗೆ ಹೊರಗಿನ ವಿದ್ಯಾರ್ಥಿಗಳು ಈಗ ಬರಲು ಹಿಂದೇಟು ಹಾಕುತ್ತಿದ್ದಾರೆ. ಕೈಗಾರಿಕೆ ಬೆಳವಣಿಗೆಗೆ ಇದು ಅಡ್ಡಿಯಾಗಿದೆ. ಈ ವಿಚಾರವನ್ನೂ ಪ್ರಣಾಳಿಕೆಯಲ್ಲಿ ಸೇರಿಸಲಾಗುತ್ತದೆ ಡಾ.ಪರಮೇಶ್ವರ್ ಸ್ಪಷ್ಟಪಡಿಸಿದರು.