ಗೆದ್ದೆತ್ತಿನ ಬಾಲ ಹಿಡಿಯುವ ಪಕ್ಷ ಜೆಡಿಎಸ್‌: ಸಿದ್ದರಾಮಯ್ಯ

By Govindaraj SFirst Published Jan 22, 2023, 10:04 AM IST
Highlights

ಜೆಡಿಎಸ್‌ ಎನ್ನುವುದು ಅವಕಾಶವಾದಿ ಪಕ್ಷ. ಅವರಿಗೆ ಸಿದ್ಧಾಂತ ಎನ್ನುವುದೇ ಇಲ್ಲ. ಅವರೇನಿದ್ದರೂ ಗೆದ್ದೆತ್ತಿನ ಬಾಲ ಹಿಡಿಯುವವರು. ಹಾಗಾಗಿ ಅಂಥವರಿಗೆ ಮತ ಹಾಕಿ ನಿಮ್ಮ ಮತಗಳನ್ನು ಹಾಳು ಮಾಡಿಕೊಳ್ಳಬೇಡಿ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು. ಜೆಡಿಎಸ್‌ ಭದ್ರಕೋಟೆಯಲ್ಲೇ ಪಕ್ಷದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. 

ಹಾಸನ (ಜ.22): ಜೆಡಿಎಸ್‌ ಎನ್ನುವುದು ಅವಕಾಶವಾದಿ ಪಕ್ಷ. ಅವರಿಗೆ ಸಿದ್ಧಾಂತ ಎನ್ನುವುದೇ ಇಲ್ಲ. ಅವರೇನಿದ್ದರೂ ಗೆದ್ದೆತ್ತಿನ ಬಾಲ ಹಿಡಿಯುವವರು. ಹಾಗಾಗಿ ಅಂಥವರಿಗೆ ಮತ ಹಾಕಿ ನಿಮ್ಮ ಮತಗಳನ್ನು ಹಾಳು ಮಾಡಿಕೊಳ್ಳಬೇಡಿ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು. ಜೆಡಿಎಸ್‌ ಭದ್ರಕೋಟೆಯಲ್ಲೇ ಪಕ್ಷದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಪ್ರಜಾಧ್ವನಿ ಸಮಾವೇಶದಲ್ಲಿ ಮಾತನಾಡಿದ ಅವರು, ಜೆಡಿಎಸ್‌ ಎನ್ನುವುದು 5-6 ಜಿಲ್ಲೆಯಲ್ಲಿ ಮಾತ್ರ ಇದೆ. ದಿನದಿಂದ ದಿನಕ್ಕೆ ಆ ಪಕ್ಷ ನೆಲ ಕಚ್ಚುತ್ತಿದೆ. ಆದರೆ, ಕುಮಾರಸ್ವಾಮಿ ಟಮಟೆ ಹೊಡೆದುಕೊಂಡು ಪಂಚರತ್ನ ಮಾಡುವುದಾಗಿ ಹೇಳುತ್ತಿದ್ದಾರೆ. 

ನೀವು ಅ​ಧಿಕಾರದಲ್ಲಿದ್ದಾಗ ಪಂಚರತ್ನ ಯಾತ್ರೆ ಯಾಕೆ ಮಾಡಲಿಲ್ಲ? ಸಿದ್ಧಾಂತವೇ ಇಲ್ಲದ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಜೆಡಿಎಸ್‌ ಪಕ್ಷ ವಿಸರ್ಜನೆ ಮಾಡಲಿ. ಇಂಥ ಪಕ್ಷಕ್ಕೆ ನೀವು ಯಾಕೆ ಹೆದರಿಕೊಳ್ಳುತ್ತಿದ್ದೀರಿ. ಇದೀಗ ಅವರ ಮುಂದೆ ತೊಡೆ ತಟ್ಟುವ ದಿನ ಬಂದಿದೆ. ಪುಕ್ಕಲುತನ ಬಿಟ್ಟು ಅವರಿಗೆ ಸಡ್ಡು ಹೊಡೆದು ಕಾಂಗ್ರೆಸ್‌ ಬೆಂಬಲಿಸಿ ಎಂದು ಮನವಿ ಮಾಡಿದರು. ಇದೇ ವೇಳೆ ಬಿಜೆಪಿ ವಿರುದ್ಧವೂ ಗುಡುಗಿದ ಸಿದ್ದರಾಮಯ್ಯ, ರಾಜ್ಯ ಬಿಜೆಪಿ ಸರ್ಕಾರ ಜನರ ನಂಬಿಕೆ ಕಳೆದುಕೊಂಡಿದೆ. ಈಗಿರುವ ಮುಖ್ಯಮಂತ್ರಿ ಬೊಮ್ಮಾಯಿ ನೇತೃತ್ವದ ಸರ್ಕಾರ ದಲಿತರ, ಮಹಿಳೆಯರ, ಹಿಂದುಳಿದಿರುವವರ, ಯುವಕರ ವಿರೋ​ಧಿಯಾಗಿದೆ. ಹಿಂದೆ ನಾನು ಬಡವರ ಏಳಿಗೆಗಾಗಿ ತಂದ ಎಲ್ಲಾ ಭಾಗ್ಯಗಳನ್ನು ನಿಲ್ಲಿಸಿದ್ದಾರೆ ಎಂದು ಕಿಡಿಕಾರಿದರು.

Prajadwani Bus Yatra: ಜೆಡಿಎಸ್‌ ಭದ್ರಕೋಟೆ ಹಾಸನದಲ್ಲಿ ಕಾಂಗ್ರೆಸ್‌ ಶಕ್ತಿ ಪ್ರದರ್ಶನ

ಕೋಲಾರಕ್ಕೆ ಯಾರೇ ಬಂದ್ರೂ ನನ್ನ ಸೋಲಿಸಲಾಗದು: ಕಳೆದ ಬಾರಿ ಬಾದಾಮಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಬಂದರೂ ನನ್ನನ್ನು ಸೋಲಿಸಲು ಆಗಲಿಲ್ಲ. ಈ ಬಾರಿ ಕೋಲಾರಕ್ಕೆ ಯಾರೇ ಬಂದರೂ, ಏನೇ ಮಾಡಿದರೂ ನಾನೇ ಗೆಲ್ಲುತ್ತೇನೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಶನಿವಾರ ಸುದ್ದಿಗಾರರ ಜತೆಗೆ ಮಾತನಾಡಿ, ಕಳೆದ ಬಾರಿ ಬಾದಾಮಿಯಲ್ಲಿ ನನ್ನನ್ನು ಸೋಲಿಸಲು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಬಂದಿದ್ದರು. ಅಶೋಕ್‌ ಪಟ್ಟಣಶೆಟ್ಟಿಬದಲಿಗೆ ಶ್ರೀರಾಮುಲು ನಿಲ್ಲಿಸಿದ್ದರು. ಆದರೂ ನನ್ನನ್ನು ಸೋಲಿಸಲು ಸಾಧ್ಯವಾಗಲಿಲ್ಲ. ನಾನು ಬಾದಾಮಿಗೆ ಪ್ರಚಾರಕ್ಕೆ ಹೋಗಿದ್ದು ಎರಡೇ ದಿನ. ದೂರ ಎಂಬ ಕಾರಣಕ್ಕೆ ಬಾದಾಮಿ ಕ್ಷೇತ್ರವನ್ನು ಬದಲಾಯಿಸುತ್ತಿದ್ದೇನೆಯೇ ಹೊರತು, ಅಲ್ಲಿ ನಿಂತರೆ ಸೋಲುತ್ತೇನೆ ಎಂಬ ಕಾರಣಕ್ಕಲ್ಲ ಎಂದು ಇದೇ ವೇಳೆ ಸ್ಪಷ್ಟಪಡಿಸಿದರು. ಬಾದಾಮಿಯಲ್ಲೇ ನಿಲ್ಲಲು ಅಲ್ಲಿನ ಜನ ನನಗೆ ಹೆಲಿಕಾಪ್ಟರ್‌ ಕೊಡಿಸುವುದಾಗಿ ಹೇಳಿದರು. ನಾನು ಅದನ್ನೂ ಬೇಡ ಎಂದೆ. ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಕೋಲಾರ ಕ್ಷೇತ್ರ ಹತ್ತಿರವಾಗುತ್ತದೆ ಎಂದು ತಿಳಿಸಿದರು.

ಕಾಂಗ್ರೆಸ್‌ಗೆ 130 ರಿಂದ 150 ಸ್ಥಾನ: ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ 130 ಸ್ಥಾನ ಗೆಲ್ಲುತ್ತದೆ. ಈ ಸಂಖ್ಯೆ 150 ಆದರೂ ಆಗಬಹುದು ಎಂದರು. ರಾಜ್ಯಕ್ಕೆ ಪದೇ ಪದೆ ಬಿಜೆಪಿ ಕೇಂದ್ರ ನಾಯಕರು ಭೇಟಿ ನೀಡುತ್ತಿದ್ದಾರೆ. ನಡ್ಡಾಗೂ- ರಾಜ್ಯಕ್ಕೂ ಏನು ಸಂಬಂಧ? ಅವರು ಏಕೆ ರಾಜ್ಯಕ್ಕೆ ಬರುತ್ತಿದ್ದಾರೆ? ಎಂದರು. ರಾಜ್ಯದ ಜನ ಕಾಂಗ್ರೆಸ್‌ ಅಧಿಕಾರದಲ್ಲಿ ಆಗಿದ್ದ ಕೆಲಸಗಳ ಬಗ್ಗೆ ತಿಳಿದುಕೊಂಡಿದ್ದಾರೆ. ನಾವು ಹಿಂದೆ ಪ್ರಣಾಳಿಕೆಯಲ್ಲಿ ಹೇಳಿದ್ದ ಶೇ.99ರಷ್ಟುಕೆಲಸ ಮಾಡಿದ್ದೇವೆ. ಈಗಲೂ 200 ಯುನಿಟ್‌ ಉಚಿತ ವಿದ್ಯುತ್‌, ಕುಟುಂಬ ಮುಖ್ಯಸ್ಥೆಗೆ ತಿಂಗಳಿಗೆ .2 ಸಾವಿರ ನೀಡುವುದಾಗಿ ಘೊಷಿಸಿದ್ದೇವೆ. 

ಜೆಡಿಎಸ್‌ ಈ ಬಾರಿ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರುವುದಿಲ್ಲ, 20 ಸೀಟು ಗೆದ್ದರೆ ಜಾಸ್ತಿ: ಸಿದ್ದರಾಮಯ್ಯ

ಮುಂದೆ ಇನ್ನೂ ಹಲವು ಘೋಷಣೆ ಮಾಡಲಿದ್ದೇವೆ. ಇವುಗಳು ಚುನಾವಣೆಯಲ್ಲಿ ನಮ್ಮ ಕೈ ಹಿಡಿಯುತ್ತವೆ. ಯಾರು ಏನೇ ಹೇಳಿದರೂ ಕಾಂಗ್ರೆಸ್‌ ಅಧಿಕಾರ ಹಿಡಿಯುವುದು ಸತ್ಯ ಎಂದರು. ಬಿಜೆಪಿ ನಾಯಕರು ಪದೇ ಪದೆ ಬರ್ತಿದ್ದಾರೆ?: ರಾಜ್ಯ ಸರ್ಕಾರಕ್ಕೆ ಪ್ರಧಾನಿ ಮೋದಿ ಸರ್ಟಿಫಿಕೆಟ್‌ ಅನಗತ್ಯ. ರಾಜ್ಯದಲ್ಲಿ ಪಿಎಸ್‌ಐ ಹಗರಣ ನಡೆದಿರುವುದು ಸುಳ್ಳಾ? ಎಡಿಜಿಪಿ ಜೈಲು ಸೇರಿರುವುದು ಸುಳ್ಳಾ? ಏನೂ ಆಗಿಲ್ಲ ಅಂದರೆ ಆತ ಇನ್ನೂ ಏಕೆ ಜೈಲಿನಲ್ಲಿದ್ದಾನೆ? ರಾಜ್ಯಕ್ಕೆ ಪದೇ ಪದೆ ಬಿಜೆಪಿ ಕೇಂದ್ರ ನಾಯಕರು ಭೇಟಿ ನೀಡುತ್ತಿದ್ದಾರೆ. ಯಾರು ಬಂದರೂ ಏನೂ ಪ್ರಯೋಜನ ಇಲ್ಲ. ನಡ್ಡಾಗೂ- ರಾಜ್ಯಕ್ಕೂ ಏನು ಸಂಬಂಧ? ಅವರು ಏಕೆ ರಾಜ್ಯಕ್ಕೆ ಬರುತ್ತಿದ್ದಾರೆ? ಎಂದು ಅವರು ಪ್ರಶ್ನಿಸಿದರು.

click me!