
ಹೊಸಕೋಟೆ (ಜೂ.11): ಕಾಂಗ್ರೆಸ್ ಚುನಾವಣೆಯಲ್ಲಿ ಸುಳ್ಳು ಆಶ್ವಾಸನೆ ಹಾಗೂ ಬಿಜೆಪಿ ಮೇಲೆ ಸುಳ್ಳು ಆರೋಪ ಮಾಡುತ್ತಲೆ ಅಧಿಕಾರ ಕಸಿದುಕೊಂಡರು ಎಂದು ವಿಧಾನ ಪರಿಷತ್ ಸದಸ್ಯ ಎಂಟಿಬಿ ನಾಗರಾಜ್ ತಿಳಿಸಿದರು. ನಗರದಲ್ಲಿ ಆಯೋಜಿಸಿದ್ದ ಬಿಜೆಪಿ ಆತ್ಮಾವಲೋಕನ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿ ಚುನಾವಣಾ ಸಂದರ್ಭದಲ್ಲಿ ತೆಗೆದುಕೊಂಡ ಮೀಸಲಾತಿ ನಿರ್ಧಾರ ಸಾಕಷ್ಟುಪೆಟ್ಟುಕೊಟ್ಟಿತು. ಒಂದಿಷ್ಟುಸಮುದಾಯಕ್ಕೆ ಒಳಿತಾದರೂ ಬಂಜಾರ, ಲಂಬಾಣಿಯಂತಹ ಸಣ್ಣ ಸಮುದಾಯಗಳು ಪಕ್ಷಕ್ಕೆ ಮತ ನೀಡಿಲ್ಲ. ಮುಖ್ಯವಾಗಿ ಕಾಂಗ್ರೆಸ್, ಬಿಜೆಪಿ ಸರ್ಕಾರದ ಮೇಲೆ ಮಾಡಿದ ಆರೋಪಕ್ಕೆ, ಕೌಂಟರ್ ಕೊಡಲು ನಮ್ಮ ಪಕ್ಷ ಸಂಪೂರ್ಣ ವಿಫಲವಾಯಿತು.
ಕಾಂಗ್ರೆಸ್ ಗ್ಯಾರಂಟಿಗಳ ಘೋಷಣೆ ಮಾಡಿತು. ಚುನಾವಣೆ ಕೇವಲ 8 ದಿನ ಇದ್ದಾಗ ಬಿಜೆಪಿ ಪ್ರಣಾಳಿಕೆ ಘೋಷಣೆ ಮಾಡಿದ್ದು ಸೋಲಿಗೆ ಕಾರಣವಾಯಿತು ಎಂದರು. ಕಳೆದ ಉಪ ಚುನಾವಣೆಯಲ್ಲಿ ನಾನು ಸೋತಿದ್ರು ಬಿಜೆಪಿ ಸರ್ಕಾರದಲ್ಲಿ ಮಂತ್ರಿಯಾಗಿ 400 ಕೋಟಿ ಅನುದಾನ ತಂದು ಕ್ಷೇತ್ರದ ಅಭಿವೃದ್ಧಿ ಮಾಡಿದ್ದೆ. ಆದರೂ ಕೆಲವರು ಪಕ್ಷದಲ್ಲಿದ್ದುಕೊಂಡು ಪಕ್ಷದ್ರೋಹ ಮಾಡಿದರು. ಸಾಕಷ್ಟುಕಾರ್ಯಕರ್ತರು ಮೈಮರೆತ ಪರಿಣಾಮ ಸೋಲುಣಬೇಕಾಯಿತು ಎಂದು ಎಂಟಿಬಿ ನಾಗರಾಜ್ ತಿಳಿಸಿದರು. ಜಿಪಂ ಮಾಜಿ ಅಧ್ಯಕ್ಷ ಬಿ.ಎಂ.ನಾರಾಯಣಸ್ವಾಮಿ, ಬೆಂಗಳೂರು ಹಾಲು ಒಕ್ಕೂಟದ ನಿರ್ದೇಶಕ ಹುಲ್ಲೂರು ಸಿ.ಮಂಜುನಾಥ್, ತಾಲೂಕು ಬಿಜೆಪಿ ಅಧ್ಯಕ್ಷ ಹುಲ್ಲೂರು ಕೆ.ಸತೀಶ್, ಟೌನ್ ಅಧ್ಯಕ್ಷ ಡಾ.ಸಿ.ಜಯರಾಜ್, ಬಿಜೆಪಿ ಮುಖಂಡರು, ಕಾರ್ಯಕರ್ತರು ಹಾಜರಿದ್ದರು.
ಬೆಂಗಳೂರು- ಮೈಸೂರು ರಾಷ್ಟ್ರೀಯ ಹೆದ್ದಾರಿ ಅವೈಜ್ಞಾನಿಕ: ಸಚಿವ ಚಲುವರಾಯಸ್ವಾಮಿ
ಅಲ್ಲಾ ಕ್ಷಮಿಸಲ್ಲ: ಕ್ಷೇತ್ರಕ್ಕೆ ಬಂದಾಗಿನಿಂದ ನಾನು ಸರ್ವಧರ್ಮದ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ಪ್ರಮುಖವಾಗಿ ಅಲ್ಪಸಂಖ್ಯಾತರಗ್ರಾಮಗಳಾದ ಕಟ್ಟಿಗೇನಹಳ್ಳಿ, ಬೈಲನರಸಾಪುರ, ಹಿಂಡಿಗನಾಳ, ಮೇಡಿ ಮಲ್ಲಸಂದ್ರ ಗ್ರಾಮಗಳಲ್ಲಿ ಶೇ. 10ರಷ್ಟುಮತ ಹಾಕಿದ್ದೀರಿ. ಚುನಾವಣೆ ಸಂದರ್ಭದಲ್ಲಿ ನಮ್ಮ ಬಳಿ ಹಣ, ಉಡುಗೊರೆ ಸೇರಿದಂತೆ ಎಲ್ಲಾ ಸವಲತ್ತುಗಳನ್ನು ಪಡೆದುಕೊಂಡು ಕುರಾನ್, ಅಲ್ಲಾ ಮೇಲೆ ಪ್ರಮಾಣ ಮಾಡಿ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿದ್ದೀರಿ. ಮೂರು ಬಾರಿ ಪ್ರಾರ್ಥನೆ ಮಾಡುವ ನಿಮ್ಮನ್ನು ಅಲ್ಲಾ ಎಂದಿಗೂ ಕ್ಷಮಿಸಲ್ಲ ಎಂದು ಅಲ್ಪಸಂಖ್ಯಾತರ ವಿರುದ್ಧ ಎಂಟಿಬಿ ನಾಗರಾಜ್ ಬೇಸರ ವ್ಯಕ್ತಪಡಿಸಿದರು.
ಮೋದಿ ವಿಶ್ವ ಮೆಚ್ಚಿದ ನಾಯಕ: ಪ್ರಧಾನಿ ನರೇಂದ್ರ ಮೋದಿ ವಿಶ್ವ ಮೆಚ್ಚಿದ ನಾಯಕ. ಇಂತಹ ನಾಯಕನನ್ನು ಕಟ್ಟಿಹಾಕಲು 19 ಪಕ್ಷಗಳು ಒಟ್ಟಾಗಿ ಮುಂದಿನ ಲೋಕಸಭೆ ಚುನಾವಣೆ ಎದುರಿಸಲು ಸಜ್ಜಾಗುತ್ತಿವೆ. ರಾಜ್ಯದಲ್ಲಿ ಎರಡು ಪಕ್ಷಗಳು ಸೇರಿ ಮಾಡಿದ ಅಧಿಕಾರವೆ ಉಳಿದಿಲ್ಲ. ಇನ್ನು 19 ಪಕ್ಷ ಒಟ್ಟಾಗಿ ಮಾಡುವ ಅಧಿಕಾರ ಉಳಿಯಲು ಸಾಧ್ಯವೆ. ಹಲವಾರು ದೇಶಗಳಲ್ಲಿ ಆರ್ಥಿಕ ಸ್ಥಿತಿಗತಿ ಬುಡಮೇಲಾಗಿ ಸಂದಿಗ್ದ ಪರಿಸ್ಥಿತಿಯಲ್ಲಿರುವ ಸಂದರ್ಭದಲ್ಲಿ ಭಾರತದ ಜಿಡಿಪಿ ಏರಿಕೆ ಆಗುತ್ತಿದ್ದು, ಆರ್ಥಿಕ ಪರಿಸ್ಥಿತಿಯಲ್ಲಿ ಸ್ಥಿರತೆ ಕಾಯ್ದುಕೊಂಡಿದೆ ಎಂದು ತಿಳಿಸಿದರು.
ಡಾ.ಕೆ.ಸುಧಾಕರ್ ವಿರುದ್ಧ ವಾಗ್ಧಾಳಿ: ಹೊಸಕೋಟೆಯಲ್ಲಿ ಬಿಜೆಪಿ ಸೋಲಿಗೆ ಮಾಜಿ ಸಚಿವ ಡಾ.ಕೆ.ಸುಧಾಕರ್ ಕಾರಣ. ಅವರು ಉಸ್ತುವಾರಿ ವಹಿಸಿಕೊಂಡು ಚಿತ್ರನಟ ಸುದೀಪ್ ಅವರು ಪ್ರಚಾರಕ್ಕೆ ಬಂದ ಸಂಧರ್ಭದಲ್ಲಿ ತಮ್ಮ ಸ್ವಾರ್ಥಕ್ಕಾಗಿ ಹೆಚ್ಚಿನ ಸಮಯವನ್ನು ತಮ್ಮ ಕ್ಷೇತ್ರದಲ್ಲೆ ಕಳೆಯುವಂತೆ ಮಾಡಿ ಬೇರೆ ಕ್ಷೇತ್ರಗಳಿಗೆ ಕಳುಹಿಸುವಲ್ಲಿ ವಿಫಲರಾದರು. ಪ್ರಮುಖವಾಗಿ ಹೊಸಕೋಟೆ ತಾಲೂಕಿನ ಕೋಡಿಹಳ್ಳಿ ಮಂಜುನಾಥ್ಗೌಡರನ್ನು ಜೆಡಿಎಸ್ನಿಂದ ಬಿಜೆಪಿಗೆ ಕರೆತಂದು ಮಾಲೂರು ಕ್ಷೇತ್ರದ ಅಭ್ಯರ್ಥಿಯಾಗಿಸಿದರು.
ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ 20 ಸ್ಥಾನ: ಸಿಎಂ ಸಿದ್ದರಾಮಯ್ಯ
ಆದರೆ ಅವರ ಕುಟುಂಬ ಇಲ್ಲಿ ಕಾಂಗ್ರೆಸ್ ಪರ ಪ್ರಚಾರ ಮಾಡಿದರು. ಬಿಜೆಪಿ ಪಕ್ಷಕ್ಕೆ ಕರೆತಂದ ಅವರು ಹೊಸಕೋಟೆಯಲ್ಲಿ ಏಕೆ ಅವರನ್ನು ಪ್ರಚಾರ ಮಾಡಿಸಲಿಲ್ಲ. ಸುಧಾಕರ್ ಅವರ ಇಂತಹ ಹಲವಾರು ನಡವಳಿಕೆಗಳು ಎಂಟಿಬಿ ಸೋಲಲು ಕಾರಣವಾಯಿತು. ಆದ್ದರಿಂದ ಡಾ.ಕೆ.ಸುದಾಕರ್ ಲೋಕಸಭಾ ಚುನವಣೆಗೆ ಅಭ್ಯರ್ಥಿಯಾದರೆ ಹೊಸಕೋಟೆ ಕಾರ್ಯಕರ್ತರು ಬಹಿಷ್ಕಾರ ಹಾಕಬೇಕು. ಅಲ್ಲದೆ ಹೊಸಕೋಟೆ ವ್ಯಕ್ತಿಯೇ ಈ ಬಾರಿ ಲೋಕಸಭೆಗೆ ಅಭ್ಯರ್ಥಿ ಆಗಬೇಕು ಎಂದು ಕಾರ್ಯಕರ್ತರು ಹೈಕಮಾಂಡ್ಗೆ ಒಕ್ಕೊರಲಿನಿಂದ ತಿಳಿಸಬೇಕು ಎಂದು ತಾಲೂಕು ಬಿಜೆಪಿ ಅಧ್ಯಕ್ಷ ಹುಲ್ಲೂರು ಕೆ.ಸತೀಶ್ ತಿಳಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.