
ನವದೆಹಲಿ (ಸೆ.20): ದೇಶದಲ್ಲಿ ಲೋಕಸಭಾ ಚುನಾವಣೆ ಉದ್ದೇಶದಿಂದ I.N.D.I.A. ಮೈತ್ರಿ ಕೂಟ ಗಟ್ಟಿಗೊಳಿಸಿಕೊಳ್ಳಲು ರಾಜ್ಯ ಕಾಂಗ್ರೆಸ್ ಸರ್ಕಾರ ತಮಿಳುನಾಡಿಗೆ ನೀರು ಹರಿಸಿದ್ದಾರೆ. ಕಾವೇರಿ ನೀರು ಬಿಡುವಾಗ ರಾಜ್ಯದ ಸಂಸದರ ನೆನಪಾಗಲಿಲ್ಲವೇ..? ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರು ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ನವದೆಹಲಿಯಲ್ಲಿಂದು ಮಾತನಾಡಿದ ಅವರು, ಕರ್ನಾಟಕದ ಹಿತ ಕಾಪಾಡಲು ನಾವು ಬದ್ಧರಾಗಿದ್ದೇವೆ. ಆದರೆ ರಾಜ್ಯ ಸರ್ಕಾರ ಮೊದಲು ನೀರು ಹರಿಸಿ ಈಗ ಬಂದು ಸಭೆ ಮಾಡುತ್ತಿದೆ. ರಾಜ್ಯ ಕಾಂಗ್ರೆಸ್ ಸರ್ಕಾರ ಮೈತ್ರಿ ಗಟ್ಟಿಗೊಳಿಸಲು ತಮಿಳುನಾಡಿಗೆ ನೀರು ಹರಿಸಿ, ಈಗ ಕೇಂದ್ರದ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡುತ್ತಿದೆ. ಇದು ಸರಿಯಲ್ಲ, ಹೀಗಾಗಬಾರದು ಎಂದು ನೇರವಾಗಿ ಸಭೆಯಲ್ಲೇ ಹೇಳಿದ್ದೇನೆ. ನೀವು ಮೊದಲು ನೀರು ಹರಿಸುವಾಗ ಯಾರನ್ನು ಕೇಳಿದ್ರಿ..? ಆಗ ನಿಮಗೆ ಸಂಸದರ ನೆನಪು ಆಗಲಿಲ್ವಾ.? ಈ ವಿಷಯದಲ್ಲಿ ರಾಜಕೀಯ ಮಾಡಬೇಡಿ ಎಂದು ನೇರವಾಗಿ ಹೇಳಿದ್ದೇನೆ ಎಂದು ಹೇಳಿದರು.
ಸ್ಯಾಂಡಲ್ವುಡ್ ನಟರು ಕಾವೇರಿ ಹೋರಾಟಕ್ಕೆ ಬನ್ನಿ: ಯಶ್, ಸುದೀಪ್, ಶಿವರಾಜ್ಕುಮಾರ್ ವಿರುದ್ಧ ಆಕ್ರೋಶ
ಕಾನೂನಾತ್ಮಕ ವಿಚಾರಗಳ ಬಗ್ಗೆಯೂ ಮಾತನಾಡಿದ ಅವರು, ನಾಳೆ ಸುಪ್ರೀಂಕೋರ್ಟ್ ನಲ್ಲಿ ವಿಚಾರಣೆ ಇದೆ. ನಮ್ಮಲ್ಲಿ ನೀರು ಇಲ್ಲ ಎಂದು ಅಫಿಡವಿಟ್ ಹಾಕ್ತಾರೆ. ಮತ್ತೆ ಅತ್ತ ಯಾವುದೋ ಒತ್ತಡದಲ್ಲಿ ತಮಿಳುನಾಡಿಗೆ ನೀರು ಹರಿಸ್ತಾರೆ. ತಮಿಳುನಾಡಿಗೆ ನೀರು ಹರಿಸುವ ಮೊದಲು ಮೀಟಿಂಗ್ ಮಾಡಬೇಕಿತ್ತು, ಚರ್ಚೆ ಮಾಡಬೇಕಿತ್ತು. ಕರ್ನಾಟಕದ ಹಿತ ಕಾಪಾಡಲು ನಾವು ಬದ್ಧರಾಗಿದ್ದೇವೆ ಎಂದು ಮಾಹಿತಿ ನೀಡಿದರು.
ನಿನ್ನೆ ಡಿಕೆಶಿ ನನ್ನ ಭೇಟಿಯಾಗಿದ್ದಾರೆ: ಕೇಂದ್ರ ಜಲಶಕ್ತಿ ಸಚಿವರನ್ನು ಭೇಟಿ ಮಾಡಲು ಅವರಿಗೆ ಅವಕಾಶ ಸಿಕ್ಕಿದೆ. ಸಂಸದರು ಏನು ಮಾಡಿಲ್ಲ ಅಂತ ವೃಥಾ ಆರೋಪ ಮಾಡುವುದು ತಪ್ಪು. ಸುಮ್ಮನೇ ರಾಜಕೀಯ ಮಾಡಬಾರದು, ಜನ ತಿರುಗಿಬಿದ್ದ ನಂತರ ಈಗ ಬಂದು ಸಭೆ ಮಾಡ್ತಿದ್ದಾರೆ. ಕಾವೇರಿ ನೀರನ್ನು ಹರಿಸುವ ಕುರಿತಂತೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಿನ್ನೆ ನನ್ನನ್ನು ಬಂದು ಭೇಟಿಯಾಗಿದ್ದಾರೆ. ಇದರಲ್ಲಿ ಕೇವಲ ರಾಜಕೀಯಕ್ಕೋಸ್ಕರ ಪ್ರಧಾನಮಂತ್ರಿ ಜೊತೆ ಮಾತಾಡ್ತಿವಿ ಅಂತ ಹೇಳೋಕೆ ಆಗಲ್ಲ. ತಮಿಳುನಾಡು ಸಿಎಂ ಅವರನ್ನು ತಬ್ಬಿಕೊಂಡು ಸಭೆ ಮಾಡಿದವರು ಯಾರು..? ಆಗ ಕೇಳದವರು ಈಗ ಕೇಂದ್ರವನ್ನು ಕೇಳ್ತಿದ್ದಾರೆ ಎಂದು ಪ್ರಲ್ಹಾದ ಜೋಶಿಯವರು ಸಿಎಂ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಕಾವೇರಿ ನೀರಿಗಾಗಿ ದೆಹಲಿಗ್ಹೋದ ಸಿಎಂ ಸಿದ್ದರಾಮಯ್ಯಗೆ ಸಿಕ್ಕಿದ್ದೇನು? ಇಲ್ಲಿದೆ ಸುದ್ದಿಗೋಷ್ಠಿ ವಿವರ
ಒಂದೂವರೆ ತಿಂಗಳಿನಿಂದ 15,000 ಕ್ಯೂಸೆಕ್ ಹರಿವು: ಕರ್ನಾಟಕದ ಎಲ್ಲ ಸಂಸದರು ಕಾವೇರಿ ನೀರು ಹಂಚಿಕೆಯ ವಿಷಯದಲ್ಲಿ ರಾಜ್ಯದ ಹಿತ ಕಾಪಾಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕರೆದ ರಾಜ್ಯದ ಸಂಸದರ ಸಭೆಯಲ್ಲಿ ಕೂಡ ಇದೇ ಮಾತನ್ನು ಹೇಳಿದ್ದೇವೆ. ಆದರೆ ಯಾವೊಬ್ಬ ಸಂಸದರೊಂದಿಗೂ ಚರ್ಚೆ ನಡೆಸದೆ, ತಮ್ಮ ಘಟಬಂಧನದ ಮಿತ್ರತ್ವದಲ್ಲಿ ಒಂದೂವರೆ ತಿಂಗಳಿನಿಂದ 15,000 ಕ್ಯೂಸೆಕ್ ನೀರನ್ನು ತಮಿಳು ನಾಡಿಗೆ ಹರಿಸಿರುವ ಸಿದ್ಧರಾಮಯ್ಯನವರು ಈ ವಿಷಯವನ್ನು ರಾಜಕೀಯಕ್ಕೆ ಬಳಸಿಕೊಳ್ಳಬಾರದು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.