ಭಿನ್ನಮತ ಸ್ಫೋಟ: ಕಾಂಗ್ರೆಸ್‌ ಪ್ರಜಾಧ್ವನಿ ಯಾತ್ರೆ ರದ್ದು..!

By Kannadaprabha NewsFirst Published Mar 16, 2023, 8:10 AM IST
Highlights

ಕುಂದಗೋಳದಲ್ಲಿ ಕಾಂಗ್ರೆಸ್‌ನಿಂದ 16 ಜನ ಆಕಾಂಕ್ಷಿಗಳಿದ್ದಾರೆ. ಹಾಲಿ ಶಾಸಕಿ ಕುಸುಮಾವತಿ ಶಿವಳ್ಳಿಗೆ ಯಾವುದೇ ಕಾರಣಕ್ಕೂ ಟಿಕೆಟ್‌ ನೀಡಬಾರದೆಂಬ ಬೇಡಿಕೆ ಇಲ್ಲಿಂದ ಕೇಳಿ ಬಂದಿದೆ. ಇದರಿಂದ ಪಕ್ಷದಲ್ಲಿ ಭಿನ್ನಮತ ಭುಗಿಲೆದ್ದಿದೆ. ಈ ಹಿನ್ನೆಲೆಯಲ್ಲಿ ಸಮಾವೇಶವನ್ನು ಮುಂದೂಡಲಾಗಿದೆ.

ಹುಬ್ಬಳ್ಳಿ(ಮಾ.16): ಮುಂಬರುವ ವಿಧಾನಸಭಾ ಚುನಾವಣಾ ಟಿಕೆಟ್‌ಗೆ ಸ್ಥಳೀಯ ಕಾಂಗ್ರೆಸ್‌ ಸ್ಪರ್ಧಾಕಾಂಕ್ಷಿಗಳಲ್ಲಿನ ಭಿನ್ನಮತದ ಹಿನ್ನೆಲೆಯಲ್ಲಿ ಕುಂದಗೋಳದಲ್ಲಿ ಮೂರನೇ ಬಾರಿ ಕಾಂಗ್ರೆಸ್‌ ಪ್ರಜಾಧ್ವನಿ ಯಾತ್ರೆ ಮುಂದೂಡಲ್ಪಟ್ಟಿತು. ಕುಂದಗೋಳದಲ್ಲಿ ಕಾಂಗ್ರೆಸ್‌ನಿಂದ 16 ಜನ ಆಕಾಂಕ್ಷಿಗಳಿದ್ದಾರೆ. ಹಾಲಿ ಶಾಸಕಿ ಕುಸುಮಾವತಿ ಶಿವಳ್ಳಿಗೆ ಯಾವುದೇ ಕಾರಣಕ್ಕೂ ಟಿಕೆಟ್‌ ನೀಡಬಾರದೆಂಬ ಬೇಡಿಕೆ ಇಲ್ಲಿಂದ ಕೇಳಿ ಬಂದಿದೆ. ಇದರಿಂದ ಪಕ್ಷದಲ್ಲಿ ಭಿನ್ನಮತ ಭುಗಿಲೆದ್ದಿದೆ. ಈ ಹಿನ್ನೆಲೆಯಲ್ಲಿ ಸಮಾವೇಶವನ್ನು ಮುಂದೂಡಲಾಗಿದೆ.

ಒಟ್ಟಾರೆ ಕ್ಷೇತ್ರದಲ್ಲಿ ಮೂರು ಬಾರಿ ಪ್ರಜಾಧ್ವನಿ ಯಾತ್ರೆ ಮುಂದೂಡಲಾಗಿದೆ. ಇದರಲ್ಲಿ ಒಂದು ಬಾರಿ ಪಕ್ಷದ ನಾಯಕ ಧ್ರುವ ನಾರಾಯಣ ಅಕಾಲಿಕ ನಿಧನದಿಂದಾಗಿ ಮುಂದೂಡಿದ್ದರೆ, ಇನ್ನೆರಡು ಬಾರಿ ಪಕ್ಷದಲ್ಲಿನ ಭಿನ್ನಮತದಿಂದಾಗಿ ಮುಂದೂಡಲಾಗಿದೆ. ಈ ಬಗ್ಗೆ ಕೇಳಿದರೆ, ನಮ್ಮಲ್ಲಿ ಯಾವುದೇ ಭಿನ್ನಮತ ಇಲ್ಲ. ಆದರೆ ಕಾರ್ಯಕ್ರಮ ಆಯೋಜನೆಗೆ ಸಮಯ ಸರಿಯಾಗುತ್ತಿಲ್ಲ ಎಂದಷ್ಟೇ ಅಲ್ಲಿನ ಮುಖಂಡರು ಹೇಳುತ್ತಿದ್ದಾರೆ. ಆದರೂ ಅಲ್ಲಿನ ಭಿನ್ನಮತ ತಾರಕ್ಕೇರಿರುವುದು ಮಾತ್ರ ಸ್ಪಷ್ಟವಾಗಿದೆ.

Latest Videos

ಕರ್ನಾಟಕದಲ್ಲಿ ಮಹಾರಾಷ್ಟ್ರ ಆರೋಗ್ಯ ವಿಮೆ: ಕಾಂಗ್ರೆಸ್ಸಿಂದ ತೀವ್ರ ತರಾಟೆ

ಬುಧವಾರವೂ ಪ್ರಜಾಧ್ವನಿ ಯಾತ್ರೆ ಆಯೋಜನೆಯಾಗಿತ್ತು. ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದ ತಂಡ ಅಲ್ಲಿಗೆ ತೆರಳಬೇಕಾಗಿತ್ತು. ಆದರೆ ಅಲ್ಲಿ ಹೊಂದಾಣಿಕೆಯಾಗದ ಹಿನ್ನೆಲೆಯಲ್ಲಿ ಹಾಗೂ ಭಿನ್ನಾಭಿಪ್ರಾಯ ಸ್ಫೋಟಗೊಳ್ಳುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಕಾರ್ಯಕ್ರಮ ರದ್ದಾಗಿದೆ.

ಸಿಎಂ ಭೇಟಿಗೆ ಬಂದ ಕುಸುಮಾ:

ಇನ್ನು ಬುಧವಾರ ಮುಂಜಾನೆಯೇ ಅಲ್ಲಿನ ಕಾಂಗ್ರೆಸ್‌ ಶಾಸಕ ಕುಸುಮಾವತಿ ಶಿವಳ್ಳಿ ಸಿಎಂ ಬೊಮ್ಮಾಯಿ ಅವರನ್ನು ಅವರ ನಿವಾಸದಲ್ಲಿ ಭೇಟಿಯಾಗಲು ಆಗಮಿಸಿದ್ದು ಸಹ ಕುತೂಹಲ ಕೆರಳಿಸಿದೆ. ಆದರೆ ಅನ್ಯ ಕಾರ್ಯನಿಮಿತ್ತ ಸಿಎಂ ಬೊಮ್ಮಾಯಿ ಅವರು ಕುಸುಮಾರನ್ನು ಭೇಟಿ ಮಾಡದೆ ತೆರಳಿದರು.

ಕುಂದಗೋಳದಲ್ಲಿನ ಪ್ರಜಾಧ್ವನಿ ಕಾರ್ಯಕ್ರಮವೂ ಭಿನ್ನಮತದಿಂದಾಗಿ ರದ್ದಾಗಿಲ್ಲ. ಬದಲಿಗೆ ಕಲಘಟಗಿ ಹಾಗೂ ಕುಂದಗೋಳದಲ್ಲಿನ ಕಾರ್ಯಕ್ರಮ ಸಮಯ ಹೊಂದಾಣಿಕೆಯಾಗದಿರುವುದರಿಂದ ಮುಂದೂಡಲಾಗಿದೆ. ಶೀಘ್ರದಲ್ಲೇ ಆಯೋಜಿಸುತ್ತೇವೆ. ನಮ್ಮಲ್ಲಿ ಯಾವುದೇ ಭಿನ್ನಮತವಿಲ್ಲ ಅಂತ ಕುಂದಗೋಳ ಶಾಸಕಿ ಕುಸುಮಾವತಿ ಶಿವಳ್ಳಿ ತಿಳಿಸಿದ್ದಾರೆ. 

click me!