ಕಾಂಗ್ರೆಸ್ ಪಕ್ಷ ರಾಷ್ಟ್ರೀಯ ಪಕ್ಷವಾಗಿ ಉಳಿದಿಲ್ಲ: ಸಂಸದ ತೇಜಸ್ವಿ ಸೂರ್ಯ

By Kannadaprabha NewsFirst Published May 5, 2024, 9:35 AM IST
Highlights

ಭ್ರಷ್ಟಾಚಾರ, ಭಯೋತ್ಪಾದನೆ ಹಾಗೂ ನಕ್ಸಲ್ ಚಟುವಟಿಕೆಯನ್ನು ಕಾಂಗ್ರೆಸ್ ಪೋಷಣೆ ಮಾಡುತ್ತಿದೆ. ಕಾಂಗ್ರೆಸ್ ಅಧಿಕಾರದ ಅವಧಿಯಲ್ಲಿ ೨ಜಿ ಹಗರಣ, ಕಲ್ಲಿದ್ದಲ್ಲು ಹಗರಣ, ಕಾಮನ್‌ವೆಲ್ತ್ ಹಗರಣ ಸೇರಿದಂತೆ ಹಲವು ಹಗರಣಗಳಿಂದ ದೇಶವನ್ನು ಆರ್ಥಿಕ ದಿವಾಳಿಯತ್ತ ನೂಕಿತ್ತು. ದೇಶದಲ್ಲಿ ಬಡತನ, ನಿರುದ್ಯೋಗ ತಾಂಡವವಾಡುತ್ತಿತ್ತು: ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ 

ಹೊಸಪೇಟೆ(ಮೇ.05): ಕಾಂಗ್ರೆಸ್ ಪಕ್ಷ ರಾಷ್ಟ್ರೀಯ ಪಕ್ಷವಾಗಿ ಉಳಿಯದೇ ಒಂದು ಕೋಮಿನ ಪಕ್ಷವಾಗಿ ಉಳಿದಿದೆ ಎಂದು ಸಂಸದ ಹಾಗೂ ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ಆರೋಪಿಸಿದರು.

ನಗರದ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಶನಿವಾರ ನಡೆದ ಬಿಜೆಪಿ ಯುವ ಮೋರ್ಚಾದ ಯುವ ಸಂಕಲ್ಪ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಭ್ರಷ್ಟಾಚಾರ, ಭಯೋತ್ಪಾದನೆ ಹಾಗೂ ನಕ್ಸಲ್ ಚಟುವಟಿಕೆಯನ್ನು ಕಾಂಗ್ರೆಸ್ ಪೋಷಣೆ ಮಾಡುತ್ತಿದೆ. ಕಾಂಗ್ರೆಸ್ ಅಧಿಕಾರದ ಅವಧಿಯಲ್ಲಿ ೨ಜಿ ಹಗರಣ, ಕಲ್ಲಿದ್ದಲ್ಲು ಹಗರಣ, ಕಾಮನ್‌ವೆಲ್ತ್ ಹಗರಣ ಸೇರಿದಂತೆ ಹಲವು ಹಗರಣಗಳಿಂದ ದೇಶವನ್ನು ಆರ್ಥಿಕ ದಿವಾಳಿಯತ್ತ ನೂಕಿತ್ತು. ದೇಶದಲ್ಲಿ ಬಡತನ, ನಿರುದ್ಯೋಗ ತಾಂಡವವಾಡುತ್ತಿತ್ತು. ವಿಶ್ವದ ಅತ್ಯಂತ ಕಡಿಮೆ ಆರ್ಥಿಕತೆ ಹೊಂದಿದ ದೇಶದಲ್ಲಿ ಸಾಲಿನಲ್ಲಿ ಮೊದಲು ಭಾರತ ಇತ್ತು. ಹಿಂದೆಲ್ಲ ಹಿಂದೂಗಳ ಹಬ್ಬ-ಹರಿದಿನಗಳು ಬಂದರೆ ದೇಶದ ಕೆಲ ಮೂಲೆಗಳಲ್ಲಿ ಬಾಂಬ್ ಬ್ಲಾಸ್ಟ್‌ಗಳು ನಡೆಯುತ್ತಿದ್ದವು. ಇದರಿಂದ ಬೇಸತ್ತು ಜನರು ಪರಿವರ್ತನೆಗಾಗಿ ಕಳೆದ ೨೦೧೪ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಯ್ಕೆ ಮಾಡಿದರು ಎಂದರು. ಕಳೆದ 10 ವರ್ಷದಲ್ಲಿ ಪ್ರಧಾನಿ ನರೇಂದ್ರ ಮೋದಿ ದೇಶದ ಚುಕ್ಕಾಣಿ ಹಿಡಿದ ಮೇಲೆ ದೇಶವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುತ್ತಿದ್ದಾರೆ ಎಂದರು.

ದೇಶದ ರಕ್ಷಣೆಗೆ ಮೋದಿ ಬೇಕು: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

ಮೋದಿ ಅಧಿಕಾರಕ್ಕೆ ಬಂದ ಮೇಲೆ ದೇಶದಲ್ಲಿ ಭಯೋತ್ಪಾದನೆ, ಭ್ರಷ್ಟಾಚಾರ, ನಕ್ಸಲ್ ಚಟುವಟಿಕೆಗಳಿಗೆ ಕಡಿವಾಣ ಬಿದ್ದಿದೆ. ನರೇಂದ್ರ ಮೋದಿ ಅವರನ್ನು ಅಧಿಕಾರಕ್ಕೆ ಬಾರದಂತೆ ದೇಶದ ಒಳಗೂ, ಹೊರಗೂ ಕೆಲ ದೃಷ್ಟಶಕ್ತಿಗಳು ಕೆಲಸ ಮಾಡುತ್ತಿವೆ. ದೇಶದಲ್ಲಿ ಒಂದೊಮ್ಮೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ಪಾಕಿಸ್ತಾನದಲ್ಲಿ ಜಯಕಾರ ಕೇಳಿ ಬರಲಿದೆ ಎಂದರು.

ಬಿಜೆಪಿ ಅಭ್ಯರ್ಥಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿ, ವಿಜಯನಗರ ಸಾಮ್ರಾಜ್ಯ ಹಂಪಿ ಹಾಗೂ ಮೈಸೂರು ಅರಸರಿಗೂ ಅವಿನಾಭಾವ ಸಂಬಂಧವಿದೆ. ಭಾರತದ ಸಂಸ್ಕೃತಿ ಹಾಗೂ ಪರಂಪರೆ ರಕ್ಷಣೆಗಾಗಿ ಬಿಜೆಪಿ ಪಕ್ಷವನ್ನು ಗೆಲ್ಲಿಸಬೇಕಿದೆ. ಇದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಕೈ ಬಲಪಡಿಸಬೇಕು. ಇದಕ್ಕಾಗಿ ಪಕ್ಷದ ಅಭ್ಯರ್ಥಿ ಶ್ರೀರಾಮುಲು ಅವರನ್ನು ಈ ಚುನಾವಣೆಯಲ್ಲಿ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

ಬಳ್ಳಾರಿಗೆ ಶ್ರೀರಾಮುಲು ಕೊಡುಗೆ ಚೊಂಬು, ದಯವಿಟ್ಟು ಗೆಲ್ಲಿಸಬೇಡಿ: ಸಿಎಂ ಸಿದ್ದರಾಮಯ್ಯ 

ಹೂವಿನಹಡಗಲಿ ಶಾಸಕ ಕೃಷ್ಣನಾಯ್ಕ ಮಾತನಾಡಿ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಕ್ಷೇತ್ರದ ಅಭಿವೃದ್ಧಿಗೆ ಒಂದೇ ಒಂದು ಬಿಡಿಕಾಸು ಬಂದಿಲ್ಲ. ಇದಕ್ಕೆ ಬೇಸತ್ತ ಕಾಂಗ್ರೆಸ್ ಶಾಸಕರೇ ಸಾಮೂಹಿಕವಾಗಿ ರಾಜೀನಾಮೆ ಸಲ್ಲಿಸಲು ಸಿದ್ದರಾಗಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಮನವೊಲಿಸಿದ್ದಾರೆ. ಲೋಕಸಭಾ ಚುನಾವಣೆ ಬಳಿಕ ಯಾವುದೇ ಗ್ಯಾರಂಟಿಗಳು ಉಳಿಯುವುದಿಲ್ಲ ಎಂದು ಲೇವಡಿ ಮಾಡಿದರು.

ಬಿಜೆಪಿ ಯುವಮೋರ್ಚಾ ರಾಜ್ಯ ಉಪಾಧ್ಯಕ್ಷ ಮಲ್ಲಿಕಾರ್ಜುನ ಬಳಕಾಯಿ, ಕೋಶಾಧ್ಯಕ್ಷ ಸಿದ್ಧಾರ್ಥ ಸಿಂಗ್ ಪ್ರಾಸ್ತಾವಿಕ ಮಾತನಾಡಿದರು. ಜಿಲ್ಲಾಧ್ಯಕ್ಷ ಕಿಚಿಡಿ ಕೊಟ್ರೇಶ್ ಸ್ವಾಗತಿಸಿದರು. ಮುಖಂಡರಾದ ಬಲ್ಲಹುಣ್ಸೆ ರಾಮಣ್ಣ, ಅಶೋಕ್ ಜೀರೆ, ಅಡವಿಸ್ವಾಮಿ, ಶಂಕರ್ ಮೇಟಿ ಇತರರಿದ್ದರು.

click me!