
ದಾವಣಗೆರೆ (ನ.24): ರಾಜ್ಯದಲ್ಲಿ ಬಿಜೆಪಿ ಎಂದಿಗೂ 114 ಕ್ಷೇತ್ರ ಗೆದ್ದು ಸರ್ಕಾರ ಮಾಡಿಲ್ಲ. ಯಾವಾಗ ಸರ್ಕಾರ ಮಾಡಿದ್ದರೂ ಏನೇನೋ ಮಾಡಿಯೇ ಅಧಿಕಾರ ಹಿಡಿದಿದ್ದಾರೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅದೇ ಕಾರಣಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಆಪರೇಷನ್ ಕಮಲದ ಮೂಲಕ ಸರ್ಕಾರ ರಚನೆಯ ಕನಸು ಕಾಣುತ್ತಿರಬಹುದು. ನಮ್ಮ ಶಾಸಕರು ಯಾರೂ ದಡ್ಡರೂ ಅಲ್ಲ ಎಂದರು.
ಕೇವಲ 105 ಶಾಸಕರಿದ್ದ ಬಿಜೆಪಿಯವರೇ ಸರ್ಕಾರ ಮಾಡಿರುವಾಗ 135 ಸ್ಥಾನ ಗೆದ್ದಿರುವ ನಾವು ಸರ್ಕಾರ ಮಾಡದೇ ಇರ್ತೀವಾ? ಬಿಜೆಪಿಯವರು ಆಪರೇಷನ್ ಕಮಲ ಕೈಬಿಟ್ಟು, ಕಾವೇರಿ ನೀರು ಹಂಚಿಕೆ, ಬರ ಪರಿಹಾರ ಇತರೆ ವಿಷಯಗಳಿಗೆ ಹೆಚ್ಚು ಕಿವಿಗೊಡಲಿ ಎಂದು ಸಲಹೆ ನೀಡಿದರು. ತುಮಕೂರು ಜಿಲ್ಲೆಯ ಇಬ್ಬರು ಮಾಜಿ ಶಾಸಕರು ಕಾಂಗ್ರೆಸ್ಸಿಗೆ ಸೇರಿದ್ದಾರೆ. ಬಿಜೆಪಿ-ಜೆಡಿಎಸ್ ಹೊಂದಾಣಿಕೆಯಿಂದ ಎರಡೂ ಪಕ್ಷದ ಅನೇಕ ಶಾಸಕರು ಅಸಮಾಧಾನಗೊಂಡಿದ್ದಾರೆ. ಯಾರೇ ಆಗಲಿ ಪಕ್ಷದ ತತ್ವ, ಸಿದ್ಧಾಂತ ಒಪ್ಪಿಕೊಂಡು ಕಾಂಗ್ರೆಸ್ಸಿಗೆ ಬಂದರೆ ಸ್ವಾಗತಿಸುತ್ತೇವೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಕಾಡಾನೆ ದಾಳಿಗೆ ಮೂವರ ಬಲಿ: ಮಲೆನಾಡಿಗರಿಗೆ ಸುಳ್ಳು ಹೇಳಿದ್ರಾ ಸಿಎಂ ಸಿದ್ದರಾಮಯ್ಯ?
ಗ್ಯಾರಂಟಿ ಯೋಜನೆಗಳಿಂದ ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳೂ ನಿಂತಿಲ್ಲ. ಗೃಹಲಕ್ಷ್ಮಿ ಯೋಜನೆಯಡಿ 36 ಸಾವಿರ ಕೋಟಿ ರು. ನೀಡಲಾಗಿದೆ. ಕೆಲವಾರು ಸಮಸ್ಯೆಗಳನ್ನು ಪರಿಹರಿಸಿ, ಎಲ್ಲರಿಗೂ ಹಣ ನೀಡಲಾಗುವುದು. ಎಲ್ಲಾ ಇಲಾಖೆಗಳ ಮೂಲಕ ಈವರೆಗೆ 75 ಸಾವಿರ ಕೋಟಿ ರು. ನೀಡಲಾಗಿದೆ ಎಂದು ತಿಳಿಸಿದರು. ಶಾಸಕರಾದ ಮಾಯಕೊಂಡ ಕೆ.ಎಸ್.ಬಸವಂತಪ್ಪ, ಚನ್ನಗಿರಿ ಶಿವಗಂಗಾ ಬಸವರಾಜ ಇತರರಿದ್ದರು.
ರಾಜ್ಯದಲ್ಲಿ 30 ಸಾವಿರ ಕೃಷಿ ಹೊಂಡ ನಿರ್ಮಾಣ: ರಾಜ್ಯದಲ್ಲಿ 2013ರಿಂದ 18ರವರೆಗೆ ಚಾಲನೆಯಲ್ಲಿದ್ದು, ನಂತರ ಸ್ಥಗಿತಗೊಂಡಿದ್ದ ಕೃಷಿ ಭಾಗ್ಯ ಯೋಜನೆ ಪುನಾರಂಭಿಸಿದ್ದು, ಯೋಜನೆಯಡಿ ರಾಜ್ಯಾದ್ಯಂತ 30 ಸಾವಿರ ಕೃಷಿ ಹೊಂಡಗಳ ನಿರ್ಮಾಣ ಮಾಡುವುದಾಗಿ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಎನ್.ಡಿ.ಆರ್.ಎಫ್.ನಿಂದ 100 ಕೋಟಿ ಅನುದಾನ ಸಿಗಲಿದ್ದು, ಈ ಅನುದಾನ ಬಳಸಿ ಕೃಷಿ ಭಾಗ್ಯದಡಿ 30 ಸಾವಿರ ಕೃಷಿ ಹೊಂಡ ನಿರ್ಮಿಸಿ ಅಂತರ್ಜಲ ವೃದ್ಧಿಗೆ ಒತ್ತು ನೀಡಲಾಗುವುದು ಎಂದರು. ಕೇಂದ್ರದ ಅನುದಾನ ಬರುತ್ತಿದ್ದಂತೆಯೇ ಜಿಲ್ಲಾವಾರು ಬರ ಪರಿಹಾರ ವಿತರಣೆಗೆ ಕೃಷಿ, ತೋಟಗಾರಿಕೆ ಹಾಗೂ ಕಂದಾಯ ಇಲಾಖೆಗಳು ಎಲ್ಲಾ ಅಗತ್ಯ ಸಿದ್ಧತೆ ಮಾಡಿಕೊಂಡಿವೆ. ಆದಷ್ಟು ಬೇಗನೆ ಕೇಂದ್ರದ ಅನುದಾನ ಬರುವ ನಂಬಿಕೆ ಎಂದು ತಿಳಿಸಿದರು.
ಕೃಷಿ ವಿವಿ ಸೇವೆ ಬಳಸಲು ಇಲಾಖೆಗೆ ಸೂಚನೆ: ಕೃಷಿ ವಿಶ್ವ ವಿದ್ಯಾನಿಲಯಗಳ ಹೆಚ್ಚೆಚ್ಚು ಬಳಸಿಕೊಳ್ಳಲು ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು, ಕೃಷಿ ಕ್ಷೇತ್ರಕ್ಕೆ ಏನೆಲ್ಲಾ ಅನುಕೂಲ ಪಡೆಯಲು ಸಾಧ್ಯವೋ ಅದನ್ನು ಮಾಡಿಕೊಳ್ಳಲು ಸೂಚಿಸಿದ್ದೇವೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಕೃಷಿ ವಿವಿಗಳು ಸಂಶೋಧನೆ, ಕಡಿಮೆ ಪ್ರಮಾಣದ ನೀರು ಬಳಸಿ, ಹೆಚ್ಚು ಇಳುವರಿ ನೀಡುವಂತಹ ಬೆಳೆಗಳು, ಮಣ್ಣಿನ ಫಲವತ್ತತೆ ಆಧಾರದಲ್ಲಿ ಪರ್ಯಾಯ ಬೆಳೆ ಬೆಳೆಯುವುದು ಒಳಗೊಂಡಂತೆ ರೈತರಿಗೆ ಹೆಚ್ಚು ಮಾಹಿತಿ ನೀಡುವ ಕೆಲಸ ಮಾಡಲಿವೆ ಎಂದರು.
ವಿ.ಸೋಮಣ್ಣ ಬಿಜೆಪಿ ಪಕ್ಷ ಬಿಡಲ್ಲ: ಮಾಜಿ ಸಚಿವ ರಾಮದಾಸ್ ಸ್ಪಷ್ಟನೆ
ಭತ್ತ, ಕಬ್ಬನ್ನು ಮತ್ತಷ್ಟು ಹೆಚ್ಚು ಯಾಂತ್ರಿಕವಾಗಿ ಕಟಾವು ಮಾಡುವ 100 ಕೇಂದ್ರ ಆರಂಭಿಸಲಾಗುವುದು. ಭತ್ತದಂತೆ ತೊಗರಿ ನಾಟಿ ಮಾಡುವ ಪ್ರಯೋಗ ಧನಾತ್ಮಕ ಫಲಿತಾಂಶ ನೀಡುತ್ತಿದೆ. ಮುಂದಿನ ದಿನಗಳಲ್ಲಿ ರಾಜ್ಯವ್ಯಾಪಿ ಅದನ್ನು ವಿಸ್ತರಿಸಲಾಗುವುದು. ಕೇಂದ್ರ ಸರ್ಕಾರ ಯಾಂತ್ರೀಕೃತ ಕೃಷಿಗೆ ಅನುದಾನ ನೀಡಬೇಕಾಗುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ಕೇಂದ್ರಕ್ಕೆ ಪತ್ರ ಬರೆದಿದ್ದಾರೆ. ಕೇಂದ್ರ ಹಣಕಾಸು ಸಚಿವರನ್ನು ಗುರುವಾರ ಭೇಟಿ ಮಾಡುವ ವೇಳೆ ಈ ವಿಚಾರ ಪ್ರಸ್ತಾಪಿಸಲಿದ್ದೇವೆ ಎಂದು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.