ಜಾತಿ ರಾಜಕಾರಣದಿಂದ ಕಾಂಗ್ರೆಸ್‌ಗೆ ಸೋಲು: ಕುಮಾರ ಬಂಗಾರಪ್ಪ

By Kannadaprabha NewsFirst Published Jun 6, 2024, 11:43 PM IST
Highlights

ಚುನಾವಣಾ ಕಾಲದಲ್ಲಿ ನಡೆದ ತೀಕ್ಷ್ಣ ಟೀಕೆಗಳು ಏನೇ ಇರಲಿ. ಅವೆಲ್ಲವೂ ಚುನಾವಣಾ ಕಾಲಕ್ಕೆ ಮಾತ್ರ ಸೀಮಿತವಾಗಿರಲಿ. ಈಗಾಗಲೇ ಜನತೆ ತೀರ್ಪು ನೀಡಿದ್ದಾರೆ. ಟೀಕೆಗಳು ಮುಂದಿನ ರಾಜಕೀಯ ನಡೆಯಲ್ಲಿ ಅವಶ್ಯಕತೆ ಇಲ್ಲ: ಕುಮಾರ ಬಂಗಾರಪ್ಪ 
 

ಸೊರಬ(ಜೂ.06): ಲೋಕಸಭಾ ಚುನಾವಣೆಯಲ್ಲಿ ಕ್ಷೇತ್ರದ ಶಾಸಕರು ಮತ್ತು ಕಾಂಗ್ರೆಸ್ ಅಭ್ಯರ್ಥಿ ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಮತ್ತು ಡಾ. ರಾಜ್‌ಕುಮಾರ್ ಹೆಸರು ದುರುಪಯೋಗಪಡಿಸಿ ಪ್ರಚಾರ ನಡೆಸಿ ಅಪಮಾನ ಮಾಡಿದ್ದಾರೆ ಮಾಜಿ ಶಾಸಕ ಕುಮಾರ ಬಂಗಾರಪ್ಪ ಕಿಡಿಕಾರಿದರು.

ಗುರುವಾರ ಪಟ್ಟಣದ ಬಿಜೆಪಿ ಕಾರ್ಯಾಲಯದ ಸಭಾಂಗಣದಲ್ಲಿ ಬಿಜೆಪಿ ಕಾರ್ಯಕರ್ತರು ಮತ್ತು ಮುಖಂಡರಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಸಭೆಯಲ್ಲಿ ಮಾತನಾಡಿ, ರಾಜಕಾರಣ ಎನ್ನುವುದು ಒಂದು ಜಾತಿ, ವರ್ಗ ಒಬ್ಬ ವ್ಯಕ್ತಿಗೆ ಸೀಮಿತವಾಗಿಲ್ಲ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆದರೆ ಯಶಸ್ಸು ಸಾಧ್ಯ. ಆದರೆ ಇಲ್ಲಿನ ಶಾಸಕರು ಜಾತಿ ರಾಜಕಾರಣ ಮೂಲಕ ಒಂದು ವರ್ಗದ ಮತಗಳ ಸೆಳೆಯಲು ಹೋಗಿ ಮುಗ್ಗರಿಸಿದ್ದಾರೆ. ಅಲ್ಲದೇ ಎಸ್.ಬಂಗಾರಪ್ಪ ಮತ್ತು ಡಾ. ರಾಜ್ ಕುಟುಂಬವನ್ನು ಚುನಾವಣೆಯಲ್ಲಿ ಎಳೆ ತಂದು ಗೆಲ್ಲಲಾಗದೇ ಮತದಾರರಿಂದ ತಿರಸ್ಕೃತಗೊಂಡಿದ್ದಾರೆ. ತಾಲೂಕಿನಲ್ಲಿ ಬಿಜೆಪಿಗೆ ಎಸ್ಸಿ, ಎಸ್ಟಿ ಸೇರಿದಂತೆ ಸಣ್ಣ ಸಣ್ಣ ಸಮುದಾಯಗಳೂ ಮತ ನೀಡಿ ಅಭಿವೃದ್ಧಿ ರಾಜಕಾರಣಕ್ಕೆ ಕೈಜೋಡಿಸಿವೆ ಎಂದರು.

Latest Videos

ಈಶ್ವರಪ್ಪಗೆ ಬರೀ 30 ಸಾವಿರ ಮತ; ಭಾರೀ ಸೋಲು, ಠೇವಣಿ ನಷ್ಟ!

ಮತದಾರ ಪ್ರತ್ಯುತ್ತರ:

ಚುನಾವಣಾ ಕಾಲದಲ್ಲಿ ನಡೆದ ತೀಕ್ಷ್ಣ ಟೀಕೆಗಳು ಏನೇ ಇರಲಿ. ಅವೆಲ್ಲವೂ ಚುನಾವಣಾ ಕಾಲಕ್ಕೆ ಮಾತ್ರ ಸೀಮಿತವಾಗಿರಲಿ. ಈಗಾಗಲೇ ಜನತೆ ತೀರ್ಪು ನೀಡಿದ್ದಾರೆ. ಟೀಕೆಗಳು ಮುಂದಿನ ರಾಜಕೀಯ ನಡೆಯಲ್ಲಿ ಅವಶ್ಯಕತೆ ಇಲ್ಲ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೊರಬ ಕ್ಷೇತ್ರದಿಂದ ಕಾಂಗ್ರೆಸ್‌ನ ೩೭ ಸಾವಿರ ಮತಗಳ ಅಂತರದ ಗೆಲುವಿಗೆ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಗೆಲ್ಲಿಸಿ ಮತದಾರ ಪ್ರತ್ಯುತ್ತರ ನೀಡಿದ್ದಾರೆ ಎಂದು ಟೀಕಿಸಿದರು.

ಗ್ರಾಮಗಳ ಜನರ ಸಮಸ್ಯೆಗೆ ಸ್ಪಂದಿಸಿ:

ತಾಲೂಕು ಯಾವುದೇ ಕಾರಣಕ್ಕೂ ಅಭಿವೃದ್ಧಿ ದೃಷ್ಟಿಯಿಂದ ಹಿಂದೆ ಉಳಿಯಬಾರದು. ಸಂಸದ ಬಿ.ವೈ.ರಾಘವೇಂದ್ರ ಮೂಲಕ ಅನುದಾನದ ಹಣ ತಂದು ಶಿಕ್ಷಣ, ನೀರಾವರಿ, ವಿದ್ಯುತ್, ರಸ್ತೆ ಸೇರಿ ಮೂಲಭೂತ ಸಮಸ್ಯೆಗಳಿಗೆ ಕೈಜೋಡಿಸೋಣ. ಮುಂದಿನ ದಿನಗಳಲ್ಲಿ ಪಟ್ಟಣದಲ್ಲಿ ಕೇವಲ ಸಭೆ ನಡೆಸುವುದು ಬಿಟ್ಟು ಪ್ರತೀ ಗ್ರಾಮಗಳಿಗೆ ಭೇಟಿ ನೀಡಿ ಜನರ ಸಮಸ್ಯೆಗಳ ಅರಿಯುವ ಕೆಲಸ ಮಾಡಬೇಕು. ಬಿಜೆಪಿಗೆ ಹೆಚ್ಚಿನ ಮತಗಳ ತಂದುಕೊಟ್ಟ ಕಾರ್ಯಕರ್ತರು ಮತ್ತು ಬೂತ್ ಮಟ್ಟದ ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸಿ, ಸದ್ಯದಲ್ಲೇ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಸೊರಬ ಮತ್ತು ಆನವಟ್ಟಿಯಲ್ಲಿ ಅಭಿನಂದನಾ ಸಭೆ ಹಮ್ಮಿಕೊಳ್ಳಲಾಗುವುದು ಎಂದರು.

ಸಭೆಯಲ್ಲಿ ತಾಲೂಕು ಅಧ್ಯಕ್ಷ ಪ್ರಕಾಶ್ ತಲಕಾಲಕೊಪ್ಪ, ಪ್ರಧಾನ ಕಾರ್ಯದರ್ಶಿ ಶಿವಕುಮಾರ ಕಡಸೂರು, ಮುಖಂಡರಾದ ಎಂ.ಡಿ.ಉಮೇಶ್, ಗುರುಕುಮಾರ ಪಾಟೀಲ್, ಅಮಿತ್ ಗೌಡ, ಪ್ರಭಾಕರ ಸಮನವಳ್ಳಿ, ವಿನಾಯಕ ಬುಳ್ಳಿ ತವನಂದಿ, ಆಶಿಕ್ ನಾಗಪ್ಪ, ಅಶೋಕ್ ಶೇಟ್ ವಕೀಲ ಎಂ. ನಾಗಪ್ಪ ಸೇರಿ ವಿವಿಧ ಬೂತ್‌ನ ಕಾರ್ಯಕರ್ತರು ಹಾಜರಿದ್ದರು.

ಜಾಹೀರಾತು, ಗ್ಯಾರಂಟಿಗಷ್ಟೇ ಕಾಂಗ್ರೆಸ್‌ ಸರ್ಕಾರ ಸೀಮಿತ: ಬಿ.ವೈ.ವಿಜಯೇಂದ್ರ

ಜಿಲ್ಲಾ ಉಸ್ತುವಾರಿ ಸಚಿವರ ಕ್ಷೇತ್ರದಲ್ಲಿ ೧೮ ಸಾವಿರಕ್ಕೂ ಅಧಿಕ ಮತಗಳು ಸೊರಬದಿಂದ ಚಲಾವಣೆಯಾಗಿರುವುದು ದಾಖಲೆಯಾಗಿದೆ. ಈ ಹಿಂದೆ ಯಾವ ಅಭ್ಯರ್ಥಿ ಕೂಡ ಅಷ್ಟೊಂದು ಅಂತರದ ಮತಗಳ ಪಡೆದಿಲ್ಲ. ಇದು ಅಭಿವೃದ್ಧಿ ಎಂದರೆ ಏನು ಎಂದು ಗೊತ್ತಿಲ್ಲದ ಮತ್ತು ದುರಹಂಕಾರಿಗೆ ನೀಡಿದ ಉತ್ತರ ಎಂದು ಮಾಜಿ ಶಾಸಕ ಕುಮಾರ ಬಂಗಾರಪ್ಪ ತಿಳಿಸಿದ್ದಾರೆ. 

ಕನ್ನಡ ಬರದವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲಿ

ತಲೆಯಲ್ಲಿ ಬುದ್ಧಿನೇ ಇಲ್ಲದ ಶಿಕ್ಷಣ ಸಚಿವರಿಗೆ ಬಿಜೆಪಿ ಅಭ್ಯರ್ಥಿ ಗೆಲುವಿನ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದೆ. ಆದರೆ ಅದನ್ನೂ ಓದುವುದಕ್ಕೆ ಬರಲ್ಲ ಅಂತ ಬೇರೆಯವರಿಂದ ಓದಿಸಿ ಮತ್ತೆ ಪೋಸ್ಟ್ ಮಾಡ್ದೆ. ಶಿಕ್ಷಣ ಸಚಿವರಿಗೆ ನೋಡಿ ಓದಲು ಕನ್ನಡವೂ ಬರೋಲ್ಲ ಅಂದರೆ ಕನ್ನಡಿಗರಿಗೆ ಮತ್ತು ಶಿಕ್ಷಣ ಇಲಾಖೆಗೆ ಅಗೌರವ ತೋರಿದಂತೆ. ಆದ್ದರಿಂದ ಸಚಿವ ಸ್ಥಾನ ನಿರ್ವಹಿಸಲು ಸಾಧ್ಯವಾಗದಿದ್ದರೆ ತಾನೇ ರಾಜೀನಾಮೆ ನೀಡಬೇಕು. ಇಲ್ಲವಾದರೆ ಮುಖ್ಯಮಂತ್ರಿಯವರು ರಾಜೀನಾಮೆ ಪಡೆಯಬೇಕು. ಮಧು ಬಂಗಾರಪ್ಪರಂತೆ ಚಿಕ್ಕಬಳ್ಳಾಪುರದಲ್ಲೂ ಒಬ್ಬ ಶಾಸಕರಿದ್ದಾರೆ. ಆತ ಬರಿ ಸಲ್ಲದ ಮಾತುಗಳನ್ನೇ ಆಡುತ್ತಾರೆ. ಇಬ್ಬರನ್ನೂ ಒಂದೇ ತಕ್ಕಡಿಯಲ್ಲಿ ತೂಗಬಹುದು ಎಂದು ಕುಮಾರ ಬಂಗಾರಪ್ಪ ಲೇವಡಿ ಮಾಡಿದರು.

click me!