
ಬೆಂಗಳೂರು(ಏ.05): ರಾತ್ರೋರಾತ್ರಿ ಬಿಬಿಎಂಪಿ ಬಜೆಟ್(BBMP Budget) ಮಂಡಿಸಿರುವುದು ಪಾಲಿಕೆ ಇತಿಹಾಸದಲ್ಲೇ ಕಪ್ಪುಚುಕ್ಕೆಯಾಗಿದೆ. ಕಳೆದ ವರ್ಷ ಕೋವಿಡ್(Covid-19) ಇದ್ದರೂ ಆನ್ಲೈನ್ ಮೂಲಕ ಬಜೆಟ್ ಮಂಡಿಸಲಾಗಿತ್ತು. ಪಾಲಿಕೆ ಸದಸ್ಯರು, ಶಾಸಕರು ಚರ್ಚೆ ಮಾಡಿದ್ದರು. ಆದರೆ ಈ ಬಾರಿ ಅದೂ ಆಗಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾ ರೆಡ್ಡಿ(Ramalinga Reddy) ಆಕ್ರೋಶ ವ್ಯಕ್ತಪಡಿಸಿದರು.
ಕೆಪಿಸಿಸಿ(KPCC) ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಜೆಟ್ ವಿತ್ತೀಯ ಶಿಸ್ತು ಪಾಲನೆ ಕಾಯ್ದೆಗೆ ವಿರುದ್ಧವಾಗಿದೆ. ನೂತನ ಕಾಯ್ದೆ ಪ್ರಕಾರ ಮೂರು ವಾರ ಮುನ್ನ ಬಜೆಟ್ ಮಂಡನೆ ಆಗಬೇಕಿತ್ತು. ಮಾ.10ರೊಳಗೆ ಈ ಪ್ರಕ್ರಿಯೆ ಮುಗಿಯಬೇಕಿತ್ತು. 8.5 ಸಾವಿರ ಕೋಟಿಯಿಂದ 9 ಸಾವಿರ ಕೋಟಿ ಮೇಲೆ ಬಜೆಟ್ ಮಂಡನೆ ಮಾಡಲು ಸಾಧ್ಯವಿಲ್ಲ. ಆದರೆ .10,480 ಕೋಟಿ ಬಜೆಟ್ ಅನ್ನು ತರಾತುರಿಯಾಗಿ ಮಂಡಿಸಿದ್ದಾರೆ ಎಂದು ಆರೋಪಿಸಿದರು.
ದಾಖಲೆಯ ತೆರಿಗೆ ಸಂಗ್ರಹಿಸಿದರೂ ನಿಗದಿತ ಗುರಿ ಮುಟ್ಟದ ಬಿಬಿಎಂಪಿ..
ಆಡಳಿತಾಧಿಕಾರಿಗಳು ಬಜೆಟ್ ಹಿಂಪಡೆಯಬೇಕು. ಇದು ಸಾಧ್ಯವಾಗದಿದ್ದರೆ ಸರ್ಕಾರ ಈ ಬಜೆಟ್ ಅನ್ನು ಪರಿಶೀಲಿಸಿ ಹೊಸ ಬಜೆಟ್ ಮಂಡಿಸಬೇಕು. ಬೆಂಗಳೂರು(Bengaluru) ಉಸ್ತುವಾರಿಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಅವರೇ ಇಟ್ಟುಕೊಂಡಿದ್ದು, ಈ ಗೊಂದಲಕ್ಕೆಲ್ಲ ಅವರೇ ಕಾರಣರಾಗುತ್ತಾರೆ. ಅವರ ಕಣ್ಣ ಮುಂದೆ ಇದೆಲ್ಲವೂ ನಡೆಯುತ್ತಿದ್ದು, ಅವರೇ ಜವಾಬ್ದಾರಿ ಹೊರಬೇಕು ಎಂದು ಆಗ್ರಹಿಸಿದರು.
ಜಾಲತಾಣದಲ್ಲಿ ಬಜೆಟ್ ಅಪ್ಲೋಡ್ ಮಾಡಿದರೆ ಜನರಿಗೆ ಹೇಗೆ ತಿಳಿಯುತ್ತದೆ. ಹೀಗಾಗಿ ಸರ್ಕಾರ ನೂತನ ಬಜೆಟ್ ಮಂಡಿಸಬೇಕು ಎಂದು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾಜಿ ಮಹಾಪೌರರಾದ ರಾಮಚಂದ್ರಪ್ಪ, ಪದ್ಮಾವತಿ, ಗಂಗಾಂಬಿಕೆ, ಹುಚ್ಚಪ್ಪ, ಬಿಬಿಎಂಪಿ ಮಾಜಿ ಸದಸ್ಯ ಶಿವರಾಜ್ ಉಪಸ್ಥಿತರಿದ್ದರು.
ರಾತ್ರೋ ರಾತ್ರಿ ಬಿಬಿಎಂಪಿ ಬಜೆಟ್ ಮಂಡನೆ..!
ಬೆಂಗಳೂರು: ಚುನಾಯಿತ ಪ್ರತಿನಿಧಿಗಳು ಅಧಿಕಾರದಲ್ಲಿ ಇಲ್ಲದ ಕಾರಣಕ್ಕೆ ಬಿಬಿಎಂಪಿ(BBMP) ಅಧಿಕಾರಿಗಳು 2022-23ನೇ ಸಾಲಿನ ಆಯವ್ಯಯ ರೂಪಿಸಿ ನೇರವಾಗಿ ಸರ್ಕಾರಕ್ಕೆ ಮಂಡಿಸಿದ್ದಾರೆ. ಈ ಬಾರಿ 10,480 ಕೋಟಿ ಮೊತ್ತದ ಬಜೆಟ್(Budget) ರೂಪಿಸಲಾಗಿದೆ. 10484 ಕೋಟಿ ಆದಾಯ ತೋರಿಸಲಾಗಿದೆ. ಈ ಮೂಲಕ ಉಳಿತಾಯ ಬಜೆಟ್ ರೂಪಿಸಲಾಗಿದೆ. ಕಳೆದ ಬಾರಿ 9,951.8 ಕೋಟಿ ಮೊತ್ತಕ್ಕೆ ಅನುಮೋದನೆ ನೀಡಲಾಗಿತ್ತು.
ಸಾರ್ವಜನಿಕ ಕಾಮಗಾರಿಗಳಿಗೆ ಬಂಪರ್ ಅನುದಾನ(Grants) ನೀಡಲಾಗಿದೆ. ಒಟ್ಟು 6,911 ಕೋಟಿ ನೀಡಲಾಗಿದೆ. ಉಳಿದಂತೆ ನಗರ ಕಸ ವಿಲೇವಾರಿ ಮತ್ತು ಸಂಸ್ಕರಣೆಗೆ 1469.44 ಕೋಟಿ ಮೀಸಲಾಗಿದೆ. ಬಿಬಿಎಂಪಿಯ ಕೆಂಪೇಗೌಡ ಪೌರಸಭಾಂಗಣದಲ್ಲಿ ಬಜೆಟ್ ಮಂಡಿಸುವ ಸಂಪ್ರದಾಯ ನಡೆದು ಬಂದಿತ್ತು. ಈ ಬಾರಿ ಕೌನ್ಸಿಲ್ ಶಿಷ್ಟಾಚಾರ ಮೀರಿ ಗುರುವಾರ ರಾತ್ರಿ 8.30ಕ್ಕೆ ವಿಧಾನಸೌಧದಲ್ಲಿ ಪಾಲಿಕೆ ಆಡಳಿತಾಧಿಕಾರಿ ರಾಕೇಶ್ ಸಿಂಗ್ ನೇತೃತ್ವದಲ್ಲಿ ಬಜೆಟ್ ಮಂಡಿಸಲಾಗಿತ್ತು.
BBMP: ಹೆಚ್ಚು ತ್ಯಾಜ್ಯ ಇದ್ದರೆ ನೀವೇ ವಿಲೇವಾರಿ ಮಾಡಿ..!
ಈ ವೇಳೆ ಮುಖ್ಯ ಆಯುಕ್ತ ಗೌರವ್ ಗುಪ್ತಾ(Gaurav Gupta) ಉಪಸ್ಥಿತರಿದ್ದರು. ಪಾಲಿಕೆ ಹಣಕಾಸು ವಿಭಾಗದ ವಿಶೇಷ ಅಯುಕ್ತೆ ತುಳಸಿ ಮದ್ದಿನೇನಿ ಅವರು ಬಿಬಿಎಂಪಿ 2022-23ನೇ ಸಾಲಿನ ಆಯವ್ಯಯ ಮಂಡಿಸಿದ್ದಾರೆ ಎಂದು ಪಾಲಿಕೆ ಅಧಿಕಾರಿಗಳು ಮಾಹಿತಿ ನೀಡಿದ್ದರು.
ರಾತ್ರಿ 11.30ಕ್ಕೆ ಪಾಲಿಕೆ ಆಯವ್ಯಯ ಸ್ವೀಕೃತಿ ಮತ್ತು ಪಾವತಿಯ ಪಟ್ಟಿಯನ್ನು ಪಾಲಿಕೆ ವೆಬ್ಸೈಟ್ ನಲ್ಲಿ ಪ್ರಕಟಿಸುವ ಮೂಲಕ ಹೊಸ ಪದ್ಧತಿಗೆ ನಾಂದಿ ಹಾಡಿದ್ದಾರೆ. ಬಿಬಿಎಂಪಿ ಕಾಯ್ದೆಯ ಸೆಕ್ಷನ್ 196ರ ಪ್ರಕಾರ ಬಿಬಿಎಂಪಿ ಬಜೆಟ್ಅನ್ನು ಮುಂದಿನ ಆರ್ಥಿಕ ವರ್ಷಾರಂಭಕ್ಕಿಂತ ಕನಿಷ್ಠ ಮೂರು ವಾರಗಳಿಗೆ ಮುಂಚೆ ಅಂಗೀಕರಿಸಬೇಕಿದೆ. ಆ ಪ್ರಕಾರ ಮಾರ್ಚ್ 10ರ ಒಳಗೆ ಬಜೆಟ್ ಮಂಡನೆ ಆಗಬೇಕಿತ್ತು. ಇದು ಸಾಧ್ಯವಾಗಲಿಲ್ಲ. ಈ ಮಧ್ಯೆ ಮಾರ್ಚ್ 30ಕ್ಕೆ ಬಜೆಟ್ ಮಂಡನೆಗೆ ಎಲ್ಲ ಸಿದ್ಧತೆಗಳೂ ಪೂರ್ಣಗೊಂಡಿದ್ದವು. ಆದರೆ ಜನಪ್ರತಿನಿಧಿಗಳು ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ಈ ಮಧ್ಯೆ ಸಚಿವರು, ಅಧಿಕಾರಿಗಳನ್ನು ತರಾಟೆಗೆ ಕೂಡ ತೆಗೆದುಕೊಂಡಿದ್ದರು. ಆದ್ದರಿಂದ ಬಜೆಟ್ ಮಂಡನೆ ಪ್ರಕ್ರಿಯೆ ಕೊನೆ ಕ್ಷಣದಲ್ಲಿ ಕೈಬಿಡಲಾಗಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.