
ಬೆಂಗಳೂರು (ಡಿ.05): ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ‘ಸಿದ್ದರಾಮುಲ್ಲಾಖಾನ್’ ಎಂದೂ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ‘ರೌಡಿ ಕೊತ್ವಾಲ್ ಶಿಷ್ಯ’ ಎಂದೂ ಜರೆದಿರುವ ಬಿಜೆಪಿ ನಾಯಕರು ಇದನ್ನು ಇಲ್ಲಿಗೇ ನಿಲ್ಲಿಸಿದ್ದರೆ ಪರಿಸ್ಥಿತಿ ವಿಕೋಪಕ್ಕೆ ಹೋಗಬಹುದು ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್ ಎಚ್ಚರಿಕೆ ನೀಡಿದ್ದಾರೆ. ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿ.ಟಿ. ರವಿ ಅವರು ಸಿದ್ದರಾಮಯ್ಯ ಅವರ ಬಗ್ಗೆ ಆಡಿರುವ ಮಾತುಗಳು ಸರಿಯಲ್ಲ. ಅವರ ವಿರುದ್ಧ ನಾವೂ ಕೂಡ ಪ್ರತಿಭಟನೆ ಪ್ರಾರಂಭಿಸಿದರೆ ಅವರು ಹೊರಗೆ ಬರಲು ಸಾಧ್ಯವಾಗುವುದಿಲ್ಲ.
ಸಿದ್ದರಾಮಯ್ಯ ಎಂಬ ಹೆಸರು ಸಿದ್ದರಾಮೇಶ್ವರ ಎಂಬುದರಿಂದ ಬಂದದ್ದು. ಇದು ದೇವರ ಹೆಸರಿನಿಂದ ಕೂಡಿದೆ. ನಿಮಗೆ ಶಕ್ತಿ ಇದ್ದರೆ ಸಿದ್ದರಾಮಯ್ಯ ಅವರ ಬಗ್ಗೆ ರಾಜಕೀಯವಾಗಿ ಮಾತನಾಡಿ ಎಂದು ಸವಾಲು ಹಾಕಿದರು. ಅದೇ ರೀತಿ ಡಿ.ಕೆ.ಶಿವಕುಮಾರ್ ಅವರನ್ನು ರೌಡಿ ಕೊತ್ವಾಲ್ ಶಿಷ್ಯ ಎನ್ನುತ್ತಾರೆ ಎಂದು ಹೇಳಿಕೆ ನೀಡಿರುವ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಅವರಿಗೂ ಎಚ್ಚರಿಕೆ ನೀಡಿರುವ ಪಾಟೀಲ್, ಡಿ.ಕೆ.ಶಿವಕುಮಾರ್ ಮೇಲೆ ಆರೋಪಗಳಿದ್ದರೆ ತನಿಖೆ ಆಗುತ್ತದೆ ಎಂದರು. ನಲಪಾಡ್ ವಿರುದ್ಧ ರೌಡಿ ಶೀಟ್ ಇದೆಯೇ? ಯಾಕೆ ಇಂತಹ ಕೆಳ ಮಟ್ಟಕ್ಕೆ ಬಿಜೆಪಿಯವರು ಇಳಿಯೋದು? ರಾಜಕಾರಣದಲ್ಲಿ ಯಾರೇ ಆಗಲಿ ತಮ್ಮ ವಿರೋಧಿಗಳು ಅಥವಾ ವಿರೋಧ ಪಕ್ಷದವರ ವಿರುದ್ಧ ರಾಜಕೀಯವಾಗಿಯೇ ಟೀಕೆ, ವಾಗ್ದಾಳಿ ನಡೆಸಬೇಕು.
ಕೊಳ್ಳೇಗಾಲ ಕೆರೆಗಳ ಅಭಿವೃದ್ಧಿಗೆ 10 ಕೋಟಿ: ಸಚಿವ ಸೋಮಣ್ಣ
ಅದನ್ನು ಬಿಟ್ಟು ಬೇರೆ ಬೇರೆ ರೀತಿಯ ಟೀಕೆಗಳಿಗೆ ಇಳಿಯಬಾರದು. ಬಿಜೆಪಿಯವರು ಇಂತಹ ಹೇಳಿಕೆಗಳನ್ನು ಮುಂದುವರೆಸಿದರೆ ನಾವೂ ಕೂಡ ತಕ್ಕ ಉತ್ತರ ಕೊಡಬೇಕಾಗುತ್ತದೆ. ಇದರಿಂದ ಪರಿಸ್ಥಿತಿ ವಿಕೋಪಕ್ಕೂ ಹೋಗಬಹುದು ಎಂದು ತೀಕ್ಷ$್ಣವಾಗಿ ಹೇಳಿದರು. ಸೋಲಿನ ಭಯದಿಂದ ರೌಡಿಗಳಿಗೆ ಪಕ್ಷದ ಟಿಕೆಟ್ ಕೊಡುವ ಬಗ್ಗೆ ಬಿಜೆಪಿಯಲ್ಲಿ ಒಳ ಒಪ್ಪಂದ ಆಗಿತ್ತು ಎಂಬ ಮಾಹಿತಿ ಇದೆ. ಅದರಂತೆ ಈಗ ರೌಡಿಗಳನ್ನು ಬಿಜೆಪಿಗೆ ಸೇರಿಸಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಪ್ರತಿಪಕ್ಷವಾಗಿ ಕಾಂಗ್ರೆಸ್ ಟೀಕಿಸಿದರೆ ತಮ್ಮ ತಪ್ಪು ಸಮರ್ಥಿಸಿಕೊಳ್ಳಲಾಗದೆ ನಮ್ಮ ಪಕ್ಷದ ನಾಯಕರ ವಿರುದ್ಧ ಅನಗತ್ಯ ಹೇಳಿಕೆ ನೀಡುತ್ತಿದ್ದಾರೆ.
ಕೆರೆ ತುಂಬಿಸಿದ ಬಿಜೆಪಿ ಸರ್ಕಾರ ಸ್ಮರಿಸಿ: ಎಂ.ಬಿ.ಪಾಟೀಲಗೆ ಈಶ್ವರಪ್ಪ ಟಾಂಗ್
ಗಡಿ ವಿಚಾರದ ಚರ್ಚೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸರ್ವ ಪಕ್ಷ ಸಭೆ ಕರೆಯಬೇಕಿತ್ತು. ಆದರೆ, ಕರೆದಿಲ್ಲ. ಮಹಾರಾಷ್ಟ್ರದಲ್ಲಿ ರಾಜಕೀಯ ಪರಿಸ್ಥಿತಿ ಸರಿಯಿಲ್ಲ. ಹಾಗಾಗಿ ಜನರ ಗಮನವನ್ನು ಬೇರೆಡೆಗೆ ತಿರುಗಿಸಲು ಗಡಿ ವಿಚಾರದಲ್ಲಿ ಕ್ಯಾತೆ ತೆಗೆಯುತ್ತಿದ್ದಾರೆ. ಜತ್, ಅಕ್ಕಲಕೋಟ, ಸೊಲ್ಲಾಪುರ ಎಲ್ಲೆಡೆ ಕನ್ನಡಿಗರಿದ್ದಾರೆ. ಆ ಪ್ರದೇಶಗಳೆಲ್ಲವೂ ಕರ್ನಾಟಕಕ್ಕೆ ಸೇರಬೇಕಾಗುತ್ತದೆ.
- ಎಂ.ಬಿ.ಪಾಟೀಲ್, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.