ಸಂವಿಧಾನ ಬದ್ಧವಾಗಿ ಕೆಲಸ ಮಾಡುವ ಪಕ್ಷ ಕಾಂಗ್ರೆಸ್‌: ಡಿ.ಕೆ.ಶಿವಕುಮಾರ್‌

By Kannadaprabha NewsFirst Published Mar 1, 2023, 8:23 PM IST
Highlights

ಸರ್ವರಿಗೂ ಸಮಪಾಲು ಮತ್ತು ಸರ್ವರಿಗೂ ಸಮಬಾಳು ಎಂಬ ಆಶಯದೊಂದಿಗೆ ಅಂಬೇಡ್ಕರ್‌ ಅವರು ಬರೆದಿರುವ ಸಂವಿಧಾನಕ್ಕೆ ಬದ್ಧವಾಗಿ ಕಾರ್ಯಕ್ರಮಗಳನ್ನು ರೂಪಿಸಿ ಜಾರಿಗೆ ತಂದಿರುವ ಯಾವುದಾದರೂ ಪಕ್ಷ ಈ ಭಾರತ ದೇಶದಲ್ಲಿದ್ದರೆ ಅದು ಕಾಂಗ್ರೆಸ್‌ ಪಕ್ಷ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ತಿಳಿಸಿದರು.

ಆಲೂರು (ಮಾ.01): ಸರ್ವರಿಗೂ ಸಮಪಾಲು ಮತ್ತು ಸರ್ವರಿಗೂ ಸಮಬಾಳು ಎಂಬ ಆಶಯದೊಂದಿಗೆ ಅಂಬೇಡ್ಕರ್‌ ಅವರು ಬರೆದಿರುವ ಸಂವಿಧಾನಕ್ಕೆ ಬದ್ಧವಾಗಿ ಕಾರ್ಯಕ್ರಮಗಳನ್ನು ರೂಪಿಸಿ ಜಾರಿಗೆ ತಂದಿರುವ ಯಾವುದಾದರೂ ಪಕ್ಷ ಈ ಭಾರತ ದೇಶದಲ್ಲಿದ್ದರೆ ಅದು ಕಾಂಗ್ರೆಸ್‌ ಪಕ್ಷ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ತಿಳಿಸಿದರು. ತಾಲೂಕಿನಲ್ಲಿ ಪ್ರಜಾಧ್ವನಿ ಯಾತ್ರೆಯ ಬೃಹತ್‌ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಈ ಕ್ಷೇತ್ರದಲ್ಲಿ ಜೆಡಿಎಸ್‌ ಪಕ್ಷದ ಎಂಎಲ್‌ಎ ಮೂರು ಬಾರಿ ಆಡಳಿತ ನಡೆಸಿದರು. 

ಕೂಡ ಈ ಭಾಗದಲ್ಲಿ ಕಾಡಾನೆ ಸಮಸ್ಯೆ, ಎತ್ತಿನಹೊಳೆ ಪರಿಹಾರ, ಹೇಮಾವತಿ ನಿರಾಶ್ರಿತರ ಸಮಸ್ಯೆಗಳು ಇನ್ನೂ ಜೀವಂತವಾಗಿವೆ ಎಂದು ಈ ಭಾಗದ ರೈತರು ನನಗೆ ಮನವಿ ಸಲ್ಲಿಸಿದ್ದು, ಈ ಕ್ಷೇತ್ರದಲ್ಲಿ ಯಾವುದೇ ಕೈಗಾರಿಕೆಗಳು ಇಲ್ಲದ ಕಾರಣ ಕಾರ್ಮಿಕರ ವಲಸೆ ಹೆಚ್ಚಾಗಿದೆ ಎಂದರು. ರಾಜ್ಯ ಮತ್ತು ದೇಶದಲ್ಲಿ ಡಬಲ್‌ ಇಂಜಿನ್‌ ಸರ್ಕಾರ ಆಡಳಿತ ನಡೆಸುತ್ತಿದ್ದು ಪ್ರಧಾನಿ ಮೋದಿ ಅವರು ಮೊದಲ ಅವಧಿಯಲ್ಲಿ ಇನ್ನು ಮುಂದೆ ದೇಶವಾಸಿಗಳಿಗೆ ಅಚ್ಚೆದಿನ್‌ ಬರುತ್ತದೆ ಮತ್ತು ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರು. ಹಣ ಹಾಕಲಾಗುವುದು ಎಂದು ಹೇಳಿದ್ದರು. 

Latest Videos

ಡಿಕೆಶಿ ಕೈಗೆ ತಂಬೂರಿ ಕೊಟ್ಟು ಜ್ಯೋತಿಷ್ಯ ಹೇಳಿ ಎನ್ನಬೇಕು: ಶಾಸಕ ಎನ್‌.ಮಹೇಶ್‌

ನಿಮಗೆ ಅಚ್ಚೆ ದಿನ ಬಂದಿದೆಯೇ ಹಾಗೂ 15 ಲಕ್ಷ ರು. ನಿಮ್ಮ ಖಾತೆಗೆ ಬಂದಿದೆಯೇ ಎಂದು ನೆರೆದಿದ್ದ ಸಾರ್ವಜನಿಕರಲ್ಲಿ ಪ್ರಶ್ನಿಸಿದರು. ಈ ಸಂವಿಧಾನ ವಿರೋಧಿ ಡಬಲ್‌ ಇಂಜಿನ್‌ ಸರ್ಕಾರವನ್ನು ಕಿತ್ತೊಗೆಯಬೇಕಾದ ಅನಿವಾರ್ಯತೆ ಇದೆ. ನುಡಿದಂತೆ ನಡೆದ ಸರ್ಕಾರ ಯಾವುದಾದರೂ ಇದ್ದರೆ ಅದು ಕಾಂಗ್ರೆಸ್‌ ಸರ್ಕಾರವಾಗಿದ್ದು, ಈ ಬಾರಿ ಕಾಂಗ್ರೆಸ್‌ ಪಕ್ಷಕ್ಕೆ ತಾವೆಲ್ಲರೂ ಮತ ನೀಡಬೇಕೆಂದು ಮನವಿ ಮಾಡಿದೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ ಮಾತನಾಡಿ, ಈ ಪ್ರಪಂಚದಲ್ಲಿ ಆಯಾ ದೇಶದ ಸಂವಿಧಾನಕ್ಕೆ ವಿರುದ್ಧವಾಗಿ ಸರ್ಕಾರವನ್ನು ನಡೆಸುತ್ತಿರುವ ಯಾವುದಾದರೂ ಪಕ್ಷ ಇದ್ದರೆ ಅದು ನಮ್ಮ ದೇಶದ ಬಿಜೆಪಿ ಪಕ್ಷ. ಸಕಲೇಶಪುರ ಕ್ಷೇತ್ರದಲ್ಲಿ ಜೆಡಿಎಸ್‌ ಗೆ 3 ಬಾರಿ ಅವಕಾಶ ಮಾಡಿಕೊಟ್ಟಿದ್ದೀರಿ ಈ ಬಾರಿ ನಮಗೆ ಒಂದು ಅವಕಾಶ ಮಾಡಿಕೊಡಿ. 

ಬಡವರ, ದುರ್ಬಲರ, ದೀನದಲಿತರ, ಅಲ್ಪಸಂಖ್ಯಾತರ ಏಳಿಗೆಗೆ ಶ್ರಮಿಸಿರುವ ಯಾವುದಾದರೂ ಪಕ್ಷ ಇದ್ದರೆ ಅದು ಕಾಂಗ್ರೆಸ್‌ ಪಕ್ಷ. ಕಾಂಗ್ರೆಸ್‌ ಪಕ್ಷ ಆಡಳಿತದಲ್ಲಿ ಇದ್ದ ಸಂದರ್ಭದಲ್ಲಿ ಬ್ಯಾಂಕುಗಳ ರಾಷ್ಟ್ರೀಕರಣ, ಉಳುವವನೇ ಭೂಮಿಯ ಒಡೆಯ, ವಿದ್ಯುತ್‌ ಕ್ರಾಂತಿ ಅಣೆಕಟ್ಟುಗಳನ್ನು ನಿರ್ಮಿಸಿದ ಕೀರ್ತಿ ಕಾಂಗ್ರೆಸ್‌ ಪಕ್ಷಕ್ಕೆ ಸಲ್ಲುತ್ತದೆ ಎಂದರು. ಆಕಾಂಕ್ಷಿತ ಅಭ್ಯರ್ಥಿಗಳಾದ ಮುರುಳಿ ಮೋಹನ್‌, ಮಾಜಿ ಶಾಸಕ ಡಿ.ಮಲ್ಲೇಶ್‌, ಡಿ.ಸಿ ಸಣ್ಣಸ್ವಾಮಿ, ಭುವನಾಕ್ಷ ಈ ನಾಲ್ವರಲ್ಲಿ ಯಾರಿಗೆ ಟಿಕೆಟ್‌ ನೀಡಿದರೂ ಒಮ್ಮತದಿಂದ ಕೆಲಸ ಮಾಡುವಂತೆ ಕಿವಿಮಾತು ಹೇಳಿದರು

ಮುಂದಿನ ಸಲ ಕಾಂಗ್ರೆಸ್‌ ಅಧಿಕಾರಕ್ಕೆ ತರುವುದು ಖಚಿತ: ಡಿ.ಕೆ.ಶಿವಕುಮಾರ್‌

ಕಾರ್ಯಕ್ರಮದಲ್ಲಿ ಸಂಸದರಾದ ಡಿ.ಕೆ ಸುರೇಶ್‌, ಚಂದ್ರಶೇಖರ್‌, ಮಾಜಿ ಸಚಿವರಾದ ಎಚ್‌.ಎಮ್‌ ರೇವಣ್ಣ, ಯು.ಟಿ ಖಾದರ್‌, ಮೋಟಮ್ಮ, ಕೆಪಿಸಿಸಿ ಸದಸ್ಯ ಎಚ್‌.ಪಿ ಮೋಹನ್‌, ಜಿಲ್ಲಾಧ್ಯಕ್ಷ ಲಕ್ಷ್ಮಣ್‌, ಜಿಲ್ಲಾ ಕಾಂಗ್ರೆಸ್‌ ಪ್ರಚಾರ ಸಮಿತಿ ಅಧ್ಯಕ್ಷ ದೇವರಾಜೇಗೌಡ, ಎಚ್‌.ಕೆ ಮಹೇಶ್‌, ಬಾಗೂರು ಮಂಜೇಗೌಡ, ದೊಡ್ಡ ಮಗ್ಗೆ ಕೃಷ್ಣೆಗೌಡ, ಎಐಸಿಸಿ ಸದಸ್ಯ ಶ್ರೀನಿವಾಸ್‌, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎಸ್‌.ಎಸ್‌ ಶಿವಮೂರ್ತಿ, ನಿಕಟಪೂರ್ವ ಅಧ್ಯಕ್ಷ ಜಿ.ಆರ್‌ ರಂಗನಾಥ್‌, ಪ್ರಧಾನ ಕಾರ್ಯದರ್ಶಿ ಎಚ್‌.ಸಿ ಶಾಂತ ಕೃಷ್ಣ ಸೇರಿದಂತೆ ತಾಲೂಕು ಬ್ಲಾಕ್‌ ಕಾಂಗ್ರೆಸ್‌ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

click me!