
ಬೆಂಗಳೂರು (ಆ.23): ದೇಶದಲ್ಲಿ ಬೇರೆ ಬೇರೆ ರಾಜ್ಯಗಳ ರಾಜ್ಯಪಾಲರ ನಡತೆ ಮತ್ತು ವರ್ತನೆ ಬಗ್ಗೆ ಪ್ರಶ್ನೆಗಳು ಎದ್ದಿವೆ. ಈ ಬಗ್ಗೆ ಚರ್ಚೆ ನಡೆಸುವ ನಿಟ್ಟಿನಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿರುವ ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ಎಲ್ಲ ರಾಜ್ಯಗಳ ಪಿಸಿಸಿ ಅಧ್ಯಕ್ಷರನ್ನು ಆಹ್ವಾನಿಸಿದೆ. ಆದರೆ, ಇಂಡಿಯಾ ಒಕ್ಕೂಟ ಏನು ನಿರ್ಧಾರ ತೆಗೆದುಕೊಳ್ಳಲಿದೆ ಎಂಬುದು ಗೊತ್ತಿಲ್ಲ. ಈ ಚರ್ಚೆಗೆ ಸಚಿವರನ್ನು ಆಹ್ವಾನಿಸಿಲ್ಲ ಎಂದು ಗೃಹ ಸಚಿವ ಪರಮೇಶ್ವರ ಹೇಳಿದರು.
ಸದಾಶಿವನಗರದ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದ ರಾಷ್ಟ್ರೀಯ ವರಿಷ್ಟರು ಮುಖ್ಯಮಂತ್ರಿ ಮತ್ತು ಪಕ್ಷದ ರಾಜ್ಯ ಅಧ್ಯಕ್ಷರನ್ನು ಕರೆದಿದ್ದಾರೆ. ನಮ್ಮನ್ನು ಆಹ್ವಾನಿಸಿಲ್ಲ. ಕೆಲ ಸಚಿವರು ಸ್ವಯಂ ಪ್ರೇರಿತವಾಗಿ ಹೋಗುತ್ತಿದ್ದೇವೆ. ಇಲಾಖೆಗೆ ಸಂಬಂಧಿಸಿದ ಕೆಲಸಗಳಿವೆ. ಪೊಲೀಸ್ ವಸತಿ ಯೋಜನೆಗೆ ಸಂಬಂಧಿಸಿದಂತೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಈ ಬಗ್ಗೆ ಕೇಂದ್ರ ಗೃಹ ಇಲಾಖೆಯ ಕಾರ್ಯದರ್ಶಿಯವರನ್ನು ಭೇಟಿ ಮಾಡಬೇಕಿದೆ. ಮುಡಾ ಬಗ್ಗೆ ವಿವರಣೆ ನೀಡಲು ಹೋಗುತ್ತಿಲ್ಲ. ಅಜೆಂಡಾ ಏನಿದೆ ಎಂಬುದು ನನಗೆ ಗೊತ್ತಿಲ್ಲ. ಬೇರೆಬೇರೆ ರಾಜ್ಯದಲ್ಲಿಯೂ ಸಹ ಅಲ್ಲಿನ ರಾಜ್ಯಪಾಲರ ವರ್ತನೆ ಬಗ್ಗೆ ಧ್ವನಿ ಎದ್ದಿದೆ. ತಮಿಳುನಾಡು, ಪಶ್ಚಿಮ ಬಂಗಾಳ, ಕೇರಳದಲ್ಲಿ ರಾಜ್ಯಪಾಲರ ನಡತೆ ಬಗ್ಗೆ ಪ್ರಶ್ನೆಗಳು ಬಂದಿವೆ. ಈ ಬಗ್ಗೆ ಚರ್ಚೆ ಆಗುತ್ತದೆಯೇ ಏನೆಂಬುದು ಮಾಹಿತಿ ಇಲ್ಲ ಎಂದು ಹೇಳಿದರು.
ನೂರಾರು ಜೀವ ಉಳಿಸಿದ್ದ ಸ್ಟಾಫ್ ನರ್ಸ್ ಆತ್ಮಹತ್ಯೆ; ಊರಿಗೆ ಊರೇ ಬಂದ್ ಮಾಡಿದ ಜನತೆ!
ರಾಜ್ಯಪಾಲರು 11 ಮಸೂದೆಗಳನ್ನು ಸರ್ಕಾರಕ್ಕೆ ವಾಪಸ್ ಕಳುಹಿಸಿರುವ ಕುರಿತು ಪ್ರತಿಕ್ರಿಯಿಸಿದ ಅವರು, ರಾಜ್ಯಪಾಲರು ಮತ್ತು ಸರ್ಕಾರದ ನಡುವೆ ಹೊಂದಾಣಿಕೆ ಇಲ್ಲದಿದ್ದರೆ ಇಂತಹ ಬೆಳವಣಿಗಳು ನಡೆಯುತ್ತವೆ. ಒಂದೆರಡು ಮಸೂದೆಗಳ ಬಗ್ಗೆ ಸ್ಪಷ್ಟೀಕರಣ ಕೇಳಿರುವುದು ಇದೆ. ಈವರೆಗೆ ಸಾರಸಗಟಾಗಿ ಇಷ್ಟೊಂದು ಮಸೂದೆಗಳನ್ನು ವಾಪಸ್ ಕಳುಹಿಸಿರುವ ಉದಾಹರಣೆಗಳಿಲ್ಲ. ಹನ್ನೊಂದು ಬಿಲ್ಗಳನ್ನು ವಾಪಸ್ ಕಳಿಸಿರುವುದು ನೋಡಿದರೆ, ರಾಜ್ಯಪಾಲರಿಗೆ ನಮ್ಮ ಸರ್ಕಾರದ ಮೇಲೆ ವಿಶ್ವಾಸದ ಕೊರತೆ ಆಗಿರುವ ಎಂಬ ಸಂದೇಶ ಸಿಗುತ್ತಿದೆ ಎಂದರು ಬೇಸರ ವ್ಯಕ್ತಪಡಿಸಿದರು.
ಜಿಂದಾಲ್ಗೆ ಭೂಮಿ ಮಾರಾಟದ ಕುರಿತು ಪ್ರತಿಕ್ರಿಯಿಸಿ, ವಿರೋಧ ಪಕ್ಷದಲ್ಲಿದ್ದಾಗ ಅನೇಕ ಪ್ರಶ್ನೆಗಳನ್ನು ಕೇಳಲಾಗಿತ್ತು. ಈಗ ಉತ್ತ ಸಿಕ್ಕಿದೆ. ಕೋರ್ಟ್ ಸಹ ಆದೇಶ ಮಾಡಿದೆ. ಸ್ಥಳೀಯ ಬೆಲೆಯನ್ನು ನಿಗದಿ ಮಾಡಿ ಮಾರಾಟ ಮಾಡಲಾಗಿದೆ. ಜಾಗತೀಕ ಮಟ್ಟದ ಹೂಡಿಕೆದಾರರ ಸಭೆಗಳಲ್ಲಿ ವಿದ್ಯುತ್, ಭೂಮಿ ಬೆಲೆ ಮುಂತಾದವುಗಳಲ್ಲಿ ರಿಯಾಯಿತಿ ನೀಡುವುದಾಗಿ ಕೈಗಾರಿಕೋದ್ಯಮಿಗಳಿಗೆ ಹೇಳಿರುತ್ತೇವೆ. ಇರುವ ಕೈಗಾರಿಕೋದ್ಯಮಿಗಳನ್ನು ಉಳಿಸಿಕೊಳ್ಳುವುದರ ಜೊತೆಗೆ ಹೊಸಬರನ್ನು ತರಬೇಕಿದೆ. ಜಿಂದಾಲ್ನವರಯ ರಾಜ್ಯದಲ್ಲಿ ಲಕ್ಷಾಂತರ ಕೋಟಿ ರೂ. ಹೂಡಿಕೆ ಮಾಡುತ್ತಿದ್ದಾರೆ. ಅಂತವರಿಗೆ ಅವಕಾಶ ಕಲ್ಪಿಸದಿದ್ದರೆ ರಾಜ್ಯ ಬಿಟ್ಟು ಹೋಗುತ್ತಾರೆ ಎಂದರು.
ಬೆಂಗಳೂರಲ್ಲಿ ನಿರ್ಮಾಣವಾಗಲಿದೆ ಏಷ್ಯಾದ ಅತಿ ಎತ್ತರದ ಸ್ಕೈಡೆಕ್, ಏನೆಲ್ಲಾ ಸೌಲಭ್ಯಗಳಿರಲಿದೆ?
ಆಂಧ್ರಪ್ರದೇಶ, ತೆಲಂಗಾಣದಲ್ಲಿ ಉಚಿತವಾಗಿ ಭೂಮಿ ನೀಡುತ್ತೇವೆ ಎಂದು ಮುಕ್ತವಾಗಿ ಹೇಳುತ್ತಿದ್ದಾರೆ. ನಾವು ಭೂಮಿ ಕೊಡಲಿಲ್ಲವೆಂದರೆ ಬೇರೆ ರಾಜ್ಯದವರು ಕೊಡುತ್ತಾರೆ. ಇತ್ತೀಚೆಗೆ ಬೆಂಗಳೂರಿನಲ್ಲಿ ಸಣ್ಣ ಘಟನೆ ನಡೆದಾಗ ಇಂಡಸ್ಟ್ರಿ ಬಿಟ್ಟು ಹೋಗುವುದಾಗಿ ಹೇಳಿದಾಗ. ತಮಿಳುನಾಡು, ಆಂಧ್ರದವರು ನಮ್ಮ ರಾಜ್ಯಕ್ಕೆ ಬರುವಂತೆ ಆಹ್ವಾನಿಸಿದ್ದರು. ಈ ಬಗ್ಗೆ ಬಿಜೆಪಿಯವರು ನಮ್ಮನ್ನು ಮನವರಿಕೆ ಮಾಡಿದ್ದರೆ ನಾವು ಒಪ್ಪುತ್ತಿದ್ದೆವು. ಬಿಜೆಪಿಯವರ ಅಧಿಕಾರವಧಿಯಲ್ಲಿ ನಡೆದ ಹಗರಣಗಳು ಒಂದೊಂದಾಗಿ ಹೊರಬರುತ್ತಿವೆ. ಭೋವಿ ನಿಗಮ, ಜಂತಕಲ್ ಗಣಿ ಹಗರಣ ಈತರದ್ದೆಲ್ಲ ತನಿಖೆ ಮಾಡಿ, ತಾರ್ಕಿಕ ಹಂತಕ್ಕೆ ಕೊಂಡೊಯ್ಯುತ್ತೇವೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.