
ಚಿಕ್ಕಮಗಳೂರು(ಆ.23): ರಾಜ್ಯ ಕಾಂಗ್ರೆಸ್ ಸರ್ಕಾರ ಎಲ್ಲದರ ಮೇಲೂ ದರ ಏರಿಸಿದ್ದಾಯಿತು. ಇನ್ನು ಗಾಳಿಯ ಮೇಲೂ ಒಂದು ತೆರಿಗೆ ಹಾಕಿಬಿಟ್ಟರೆ ಔರಂಗಜೇಬನ ಅಪ್ಪಂದಿರು ಎನ್ನುವುದನ್ನು ತೋರಿಸಲು ಇನ್ನೇನೂ ಬೇಕಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಟೀಕಿಸಿದರು.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರು ಜಲ ಮಂಡಳಿ ದರ ಏರಿಕೆ ಮಾಡಿರುವ ಬಗ್ಗೆ ಪ್ರತಿಕ್ರಿಯಿಸಿ, ಅಧಿಕಾರಕ್ಕೆ ಬಂದ ಕೂಡಲೇ ಮದ್ಯದ ಬೆಲೆ ನಂತರ ಸ್ಟಾಂಪ್ ಡ್ಯೂಟಿ, ವಿದ್ಯುತ್ ಬಿಲ್ ಎಲ್ಲಾ ಹೆಚ್ಚಿಸಿದರು. ಈಗ ನೀರಿನ ದರವೂ ಹೆಚ್ಚಿಸಿದ್ದಾರೆ. ಈಗ ಉಳಿದಿರುವುದು ಗಾಳಿಯ ಮೇಲೆ ಟ್ಯಾಕ್ಸ್ ಹಾಕುವುದು ಮಾತ್ರ ಎಂದು ಹೇಳಿದರು.
ವಾರ್ತಾ ಇಲಾಖೆ ದುರುಪಯೋಗ ಆರೋಪ; ಸಿಎಂ ಸಿದ್ದರಾಮಯ್ಯ ವಿರುದ್ಧ ಸಿಟಿ ರವಿ ವಾಗ್ದಾಳಿ
ಯಾರೇ ಜನವಿರೋಧಿ ಆಡಳಿತ ನಡೆಸಿದರೂ ಆ ಸರ್ಕಾರಕ್ಕೆ ಆಯಸ್ಸು ಕಡಿಮೆ. ಅದನ್ನು ಜನರು ತೀರ್ಮಾನ ಮಾಡಿಬಿಡುತ್ತಾರೆ. ಮುಂದೆ ಬನ್ನಿ ನಿಮಗೆ ಬುದ್ದಿ ಕಲಿಸುತ್ತೇವೆ ಎಂದು ಜನ ಹೇಳುತ್ತಿದ್ದಾರೆ. ಒಂದು ಕಡೆ ಗ್ಯಾರಂಟಿ ಕೊಟ್ಟು ಮತ್ತೊಂದು ಕಡೆ ಪಿಕ್ ಪ್ಯಾಕೇಟ್ ಮಾಡಲಾಗುತ್ತಿದೆ. 2 ಸಾವಿರ ಕೊಟ್ಟು 20 ಸಾವಿರ ಹೊಡೆಯುವ ಕೆಲಸ ಮಾಡುತ್ತಿದ್ದಾರೆ ಎಂದರು.
ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ನಮ್ಮ ಬಳಿ ಸಾಕಷ್ಟು ದಾಖಲೆಗಳಿವೆ. ಅದನ್ನಿಟ್ಟುಕೊಂಡೇ ಸದನದಲ್ಲಿ ಚರ್ಚಿಸಲು ನಾವು ಬಯಸಿದ್ದೆವು. ಇದೆಲ್ಲ ಗೊತ್ತಿದ್ದ ಕಾರಣಕ್ಕೆ ಮುಖ್ಯಮಂತ್ರಿ ಅದಕ್ಕೆ ಅವಕಾಶ ಕೊಡದೆ ಪಲಾಯನ ಮಾಡಿದರು ಎಂದು ದೂರಿದರು.
ಸಿದ್ದರಾಮಯ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಮೇಲ್ಪಂಕ್ತಿ ಹಾಕಬೇಕು: ಸಿ.ಟಿ.ರವಿ
ಪ್ರಶ್ನೆ ಮಾಡುವವರಿಗೆ, ಸಮರ್ಥನೆ ಮಾಡಿಕೊಳ್ಳುವವರಿಗೆ ಅದಕ್ಕಿಂತ ದೊಡ್ಡ ವೇದಿಕೆ ಮತ್ತೊಂದಿರಲಿಲ್ಲ. ಎಲ್ಲರೂ ಮಾತನಾಡಿದ್ದೂ ದಾಖಲೆಗೆ ಹೋಗುತ್ತಿತ್ತು. ಈ ಎಲ್ಲಾ ಸತ್ಯ ಹೊರಕ್ಕೆ ಬರುತ್ತದೆ ಎನ್ನುವ ಕಾರಣಕ್ಕೆ ಅದಕ್ಕೆ ಅವಕಾಶವನ್ನೇ ಸಿಎಂ ಕೊಡಲಿಲ್ಲ ಎಂದು ದೂರಿದರು. ಸಿದ್ದರಾಮಯ್ಯ ತಮ್ಮ ಸಾರ್ವಜನಿಕ ಜೀವನದಲ್ಲಿ ಭ್ರಷ್ಟಾಚಾರದ ಕಪ್ಪುಚುಕ್ಕೆ ಇಲ್ಲ ಎನ್ನುತ್ತಾರೆ. ಆದರೆ ಆರ್ಟಿಇ ನಲ್ಲಿ ಅರ್ಜಿ ಸಲ್ಲಿಸಿದವರಿಗೆ ಸಿಎಂ ವಿರುದ್ಧ 50 ಲೋಕಾಯುಕ್ತ ಕೇಸುಗಳು ಇರುವುದಾಗಿ ಉತ್ತರ ಸಿಕ್ಕಿದೆ ಎಂದರು.
ಕುಮಾರಸ್ವಾಮಿ ತಾವು ಸಂವಿಧಾನಕ್ಕಿಂತ ಮಿಗಿಲು ಎಂದಿಲ್ಲ
ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರನ್ನು ಯಾವಾಗಬೇಕಾದರೂ ಬಂಧಿಸಬಹುದು ಎಂದು ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಆ ರೀತಿ ಮಾಡಲು ಅದು ಪುಕಸಟ್ಟೆ ಪುನುಗಲ್ಲ. ಕುಮಾರಸ್ವಾಮಿ ಅವರು ತಾವೆಂದಿಗೂ ಸಂವಿಧಾನಕ್ಕಿಂತ ಮಿಗಿಲು ಎಂದು ಹೇಳಿಕೊಂಡಿಲ್ಲ. 2017 ರಿಂದ 18 ವರೆಗೆ ಕಾಂಗ್ರೆಸಿಗರೇ ಅಧಿಕಾರದಲ್ಲಿದ್ದರು. ಆಗ ಸುಮ್ಮನಿದ್ದರು. 2019 ರಲ್ಲಿ ಅವರ ಬೆಂಬಲದಿಂದಲೇ ಕುಮಾರಸ್ವಾಮಿ ಸಿಎಂ ಆಗಿದ್ದಾಗಲೂ ಸುಮ್ಮನಿದ್ದರು. ಆಗ ಕುಮಾರಸ್ವಾಮಿ ಬಹಳ ಒಳ್ಳೆವರಾಗಿದ್ದರು. ಡಿ.ಕೆ.ಶಿವಕುಮಾರ್ ಅವರು ಅಣ್ತಮ್ಮ, ಜೋಡೆತ್ತು ಎನ್ನುತ್ತಿದ್ದರು. ಈಗ ಕುಮಾರ ಸ್ವಾಮಿ ಬಿಜೆಪಿ ಜೊತೆ ಬಂದ ಕೂಡಲೇ ಖಳನಾಯಕನಾಗಿದ್ದಾರೆ. ಈಗ ಅವರು ನಡೆದುಕೊಳ್ಳುತ್ತಿರುವುದು ರಾಜಕೀಯ ದುರುದ್ದೇಶ ಎನ್ನುವುದು ಎಂತಹವರಿಗೂ ಗೊತ್ತಾಗುತ್ತದೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.