
ಮಂಗಳೂರು(ಆ.29): ಗ್ಯಾರಂಟಿ ಹಿಂದೆ ಬಿದ್ದಿರುವ ರಾಜ್ಯ ಸರ್ಕಾರ ಶಿಕ್ಷಣ ಕ್ಷೇತ್ರವನ್ನೂ ನಿರ್ಲಕ್ಷ್ಯ ಮಾಡಿದೆ. ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಅಧಿಕಾರಿಗಳ ಬೇಜವಾಬ್ದಾರಿಯಿಂದಾಗಿ ಆರ್ಥಿಕ ದುರ್ಗತಿ ಒದಗಿದ್ದರೆ, ರಾಜ್ಯ ಸರ್ಕಾರ ಅನುದಾನ ನೀಡದೆ ಮಕ್ಕಳ ಶಿಕ್ಷಣಕ್ಕೆ ದುರ್ಗತಿ ತಂದೊಡ್ಡಿದೆ. ವಿವಿಯಲ್ಲಿ ಆರ್ಥಿಕ ದುಸ್ಥಿತಿಯಿಂದಾಗಿ ಸಿಬ್ಬಂದಿ ವೇತನಕ್ಕೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದಲ್ಲದೆ, ಮಂಗಳೂರು ವಿವಿಯ ಆಡಳಿತ ಸಂಧ್ಯಾ ಕಾಲೇಜು ಸೇರಿದಂತೆ ಕೆಲವು ವಿಭಾಗಗಳನ್ನೇ ಮುಚ್ಚುವುದಕ್ಕೆ ಮುಂದಾಗಿದ್ದು ಇದು ಕಾಂಗ್ರೆಸ್ ಸರ್ಕಾರದ ದುರಾಡಳಿತಕ್ಕೆ ಕನ್ನಡಿಯಾಗಿದೆ ಎಂದು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಪತ್ರಿಕಾ ಹೇಳಿಕೆಯಲ್ಲಿ ಟೀಕಿಸಿದ್ದಾರೆ.
ಮಂಗಳೂರು ವಿವಿಯಲ್ಲಿ ಮಿತಿಮೀರಿದ ಭ್ರಷ್ಟಾಚಾರದಿಂದಾಗಿಯೇ ಇಂತಹ ಸ್ಥಿತಿ ಬಂದೊದಗಿದೆ ಎಂದು ಅಲ್ಲಿನ ನಿವೃತ್ತ ಪ್ರಾಧ್ಯಾಪಕರೇ ಹೇಳುತ್ತಿದ್ದಾರೆ. ವಿವಿಯಲ್ಲಿ ತಾತ್ಕಾಲಿಕ ನೆಲೆಯಲ್ಲಿ ಕೆಲಸ ಮಾಡುವ ಸಿಬ್ಬಂದಿ, ಅತಿಥಿ ಉಪನ್ಯಾಸಕರಿಗೆ ಕಳೆದ ನಾಲ್ಕು ತಿಂಗಳಿನಿಂದ ವೇತನ ಪಾವತಿಯಾಗಿಲ್ಲ. ಒಂದು ಕಾಲದಲ್ಲಿ ಪ್ರತಿಷ್ಠಿತ ವಿಶ್ವವಿದ್ಯಾನಿಲಯ ಎಂಬ ಹೆಸರು ಪಡೆದುಕೊಂಡಿದ್ದ ಮಂಗಳೂರು ವಿವಿ ಭ್ರಷ್ಟಾಚಾರದಿಂದಾಗಿ ಅಕ್ಷರಶಃ ತನ್ನ ಘನತೆಯನ್ನು ಹಾಳು ಮಾಡಿಕೊಂಡಿದೆ ಎಂದಿದ್ದಾರೆ
ಕಾರ್ಕಳ ಅತ್ಯಾಚಾರ ರಾಜ್ಯವೇ ತಲೆ ತಗ್ಗಿಸುವ ಕೃತ್ಯ: ಶಾಸಕ ವೇದವ್ಯಾಸ್ ಕಾಮತ್
ವಿವಿಯ ಆಡಳಿತದ ನಿರ್ಲಕ್ಷ್ಯದಿಂದಾಗಿ ಯುಜಿಸಿ ಮಾನ್ಯತೆ ಬಿ ಗ್ರೇಡ್ಗೆ ಇಳಿದಿದೆ. ಇದರ ನಡುವೆ ವಿದ್ಯಾರ್ಥಿಗಳ ಅಡ್ಮಿಷನ್ ಕಡಿಮೆಯಾದ ನೆಪದಲ್ಲಿ ಅನೇಕ ಪದವಿ, ಸ್ನಾತಕೋತ್ತರ ವಿಭಾಗಗಳನ್ನು ಮುಚ್ಚಲಾಗುತ್ತಿದೆ. ಮಂಗಳೂರಿನ ಸಂಧ್ಯಾ ಕಾಲೇಜಿನಲ್ಲಿ ಪದವಿ ವಿಭಾಗಕ್ಕೆ ಅಡ್ಮಿಷನ್ ನಿಲ್ಲಿಸಿದ್ದು ಇದಕ್ಕೆ ಸಾಕ್ಷಿ. ನಗರದ ಹೃದಯಭಾಗದಲ್ಲಿರುವ ಏಕೈಕ ಸರ್ಕಾರಿ ಕಾಲೇಜನ್ನೇ ಮುಚ್ಚುವ ಹುನ್ನಾರದಂತೆ ಕಾಣುತ್ತಿದೆ. ಸಂಧ್ಯಾ ಕಾಲೇಜಿನಲ್ಲಿ ಪದವಿ ಪ್ರವೇಶ ನಿಲ್ಲಿಸಿದ್ದರಿಂದ ಹಲವಾರು ಮಂದಿ ಉಪನ್ಯಾಸಕರು, ಸಿಬ್ಬಂದಿಯ ಉದ್ಯೋಗಕ್ಕೂ ಕತ್ತರಿ ಹಾಕಿದಂತಾಗಿದೆ ಎಂದಿದ್ದಾರೆ.
ಗ್ಯಾರಂಟಿ ಯೋಜನೆ ಹೆಸರಲ್ಲಿ ರಾಜ್ಯ ಸರ್ಕಾರವೇ ಮಂಗಳೂರು ವಿವಿಯನ್ನು ಅಧೋಗತಿಗೆ ತಳ್ಳಿದ್ದು ಸಾವಿರಾರು ಬಡವರ ಮಕ್ಕಳಿಗೆ ಅನ್ಯಾಯ ಮಾಡಿದೆ ಎಂದು ಶಾಸಕ ವೇದವ್ಯಾಸ ಕಾಮತ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.