
ದೊಡ್ಡಬಳ್ಳಾಪುರ (ಅ.20): ಆರ್.ಎಲ್.ಜಾಲಪ್ಪನವರ ವ್ಯಕ್ತಿತ್ವ ನೇರ-ನಿಷ್ಠುರ ಮತ್ತು ಹೃದಯವಂತಿಕೆಯಿಂದ ಕೂಡಿತ್ತು. ಬಹಳ ಸ್ವಾಭಿಮಾನಿ ಆಗಿದ್ದ ಜಾಲಪ್ಪನವರು ನನ್ನ ರಾಜಕೀಯ ಏಳಿಗೆಗೆ ಕಾರಣಕರ್ತರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಇಲ್ಲಿನ ಆರ್.ಎಲ್.ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯದ ಕ್ಯಾಂಪಸ್ನಲ್ಲಿ ನಡೆದ ಆರ್.ಎಲ್.ಜಾಲಪ್ಪ ಜನ್ಮ ಶತಮಾನೋತ್ಸವ ಉದ್ಘಾಟನೆ ಹಾಗೂ ‘ಕನ್ನಡಪ್ರಭ’ ವರದಿಗಾರ ಪ್ರೊ.ರವಿಕಿರಣ್ ಬರೆದಿರುವ ‘ನೇರ-ನಿಷ್ಠುರ ನಡೆಯ ಹೃದಯವಂತ ಆರ್.ಎಲ್.ಜಾಲಪ್ಪ ಜೀವನ ಪಥ’ ಪುಸ್ತಕವನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ನಾನು ಮೊದಲ ಬಾರಿ ಸಚಿವನಾಗಲು ರಾಚಯ್ಯನವರಷ್ಟೇ ಜಾಲಪ್ಪನವರೂ ಕಾರಣ. ನನ್ನನ್ನು ಮುಖ್ಯಮಂತ್ರಿ ಮಾಡಲೇಬೇಕು ಎಂದು ಜಾಲಪ್ಪನವರು ದೇವೇಗೌಡರ ಎದುರು ಹಠ ಹಿಡಿದು ಆಗ್ರಹ ಪೂರ್ವಕವಾಗಿ ಒತ್ತಾಯಿಸಿದ್ದರು. ನನ್ನ ಮತ್ತು ಜೆ.ಎಚ್.ಪಟೇಲರ ನಡುವೆ ಮುಖ್ಯಮಂತ್ರಿ ಯಾರಾಗಬೇಕು ಎನ್ನುವ ಚರ್ಚೆ ನಡೆಯುತ್ತಿದ್ದಾಗ ನನ್ನ ಪರವಾಗಿ ಗಟ್ಟಿಯಾಗಿ ನಿಂತು ದೇವೇಗೌಡರಿಗೆ ನನ್ನನ್ನೇ ಸಿಎಂ ಮಾಡಬೇಕು ಎಂದು ಅವರು ಒತ್ತಾಯಿಸಿದ್ದರು ಎಂದು ತಿಳಿಸಿದರು.
ಹಿಂದುಳಿದವರ ಏಳಿಗೆಗೆ ದೂರದೃಷ್ಠಿ: ಜಾಲಪ್ಪನವರಿಗೆ ಹಿಂದುಳಿದವರ ಏಳಿಗೆಯ ವಿಚಾರದಲ್ಲಿ ದೂರದೃಷ್ಟಿ ಇತ್ತು. ಹೀಗಾಗಿ ಆಗಲೇ ವೈದ್ಯಕೀಯ ಕಾಲೇಜು ಸ್ಥಾಪಿಸಿದ್ದರು. ಮೊದಲಿಗೆ 150 ವಿದ್ಯಾರ್ಥಿಗಳಿಂದ ಆರಂಭವಾದ ಸಂಸ್ಥೆ ಈಗ 9 ಸಾವಿರದಷ್ಟು ವಿದ್ಯಾರ್ಥಿಗಳು ನಾನಾ ವಿಭಾಗಗಳಲ್ಲಿ ಓದುತ್ತಿರುವುದು ಶ್ಲಾಘನೀಯ ಎಂದರು.
ನನ್ನನ್ನು ಸಿಎಂ ಮಾಡಲು ಹಠ ಹಿಡಿದಿದ್ದರು: ನನ್ನನ್ನು ಮುಖ್ಯಮಂತ್ರಿ ಮಾಡಲೇಬೇಕು ಎಂದು ಜಾಲಪ್ಪನವರು ದೇವೇಗೌಡರ ಎದುರು ಹಠ ಹಿಡಿದು ಆಗ್ರಹ ಪೂರ್ವಕವಾಗಿ ಒತ್ತಾಯಿಸಿದ್ದರು. ನಾನು ಮತ್ತೆ ಜೆ.ಎಚ್.ಪಟೇಲರು ಇಬ್ಬರ ನಡುವೆ ಮುಖ್ಯಮಂತ್ರಿ ಯಾರಾಗಬೇಕು ಎನ್ನುವ ಚರ್ಚೆ ನಡೆಯುತ್ತಿದ್ದಾಗ ನನ್ನ ಪರವಾಗಿ ಗಟ್ಟಿಯಾಗಿ ನಿಂತು ದೇವೇಗೌಡರಿಗೆ ನನ್ನನ್ನೇ ಸಿಎಂ ಮಾಡಬೇಕು ಎಂದು ಒತ್ತಾಯಿಸಿದ್ದರು ಎಂದು ತಿಳಿಸಿದರು. ನಾನು ಮೊದಲ ಬಾರಿ ಹಣಕಾಸು ಸಚಿವನಾಗುವಾಗಲೂ ಜಾಲಪ್ಪನವರ ಪ್ರಯತ್ನ ಇದೆ. ನಾನು ಕಂದಾಯ ಸಚಿವನಾಗಬೇಕು ಎಂದುಕೊಂಡಿದ್ದೆ. ಆದರೆ, ನಾನು ಹಣಕಾಸು ಸಚಿವ ಆಗಲೇಬೇಕು ಎಂದು ಸೂಚಿಸಿದರು. ಅವರ ಕಾರಣದಿಂದ ನಾನು ಇಂದು ಹದಿನಾರು ಬಜೆಟ್ ಗಳನ್ನು ಮಂಡಿಸುವಂತಾಯಿತು ಎಂದರು.
ನನ್ನ ಏಳಿಗೆಯಲ್ಲಿ ಜಾಲಪ್ಪ ಪಾತ್ರ ಹಿರಿದು: ಇಂದು ನಾನು ರಾಜಕೀಯವಾಗಿ ಈ ಮಟ್ಟದ ಏಳಿಗೆ ಆಗಿದ್ದರೆ ಅದರಲ್ಲಿ ಜಾಲಪ್ಪನವರ ಪಾತ್ರ ದೊಡ್ಡದಿದೆ. ಅವರ ಋಣವನ್ನು ಮರೆಯಲು ಸಾಧ್ಯವೇ ಇಲ್ಲ. ಅತ್ಯಂತ ಹೃದಯವಂತರಾಗಿದ್ದ ಜಾಲಪ್ಪನವರು ಆತಿಥ್ಯದಲ್ಲೂ ಎತ್ತಿದ ಕೈ. ತುಪ್ಪದ ದೋಸೆ ಮಾಡಿ ಸ್ವತಃ ಬಡಿಸಿದ್ದರು ಎಂದು ನೆನಪಿಸಿಕೊಂಡ ಸಿದ್ದರಾಮಯ್ಯ, ಸಾಮಾಜಿಕ ನ್ಯಾಯದ ಪರವಾಗಿ ತಮ್ಮ ರಾಜಕೀಯ ಜೀವನವನ್ನು ಮುಡಿಪಾಗಿ ಇಟ್ಟಿದ್ದರು. ಅತ್ಯಂತ ಧೈರ್ಯವಂತರಾಗಿದ್ದ ಜಾಲಪ್ಪ ಅವರು ಸತ್ಯ ಹೇಳುವಾಗ ಮುಲಾಜಿಲ್ಲದೆ ಎದೆಗಾರಿಕೆ ಪ್ರದರ್ಶಿಸುತ್ತಿದ್ದರು ಎಂದು ವಿವರಿಸಿದರು.
ಇದೇ ವೇಳೆ ಆರ್.ಎಲ್.ಜಾಲಪ್ಪ ಅಕಾಡೆಮಿ ಕಟ್ಟಡವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದರು. ಆರ್.ಎಲ್.ಜಾಲಪ್ಪ ಶತಮಾನೋತ್ಸವ ಭವನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಶಿಲಾನ್ಯಾಸ ನೆರವೇರಿಸಿದರು. ದೇವರಾಜ ಅರಸು ಅಂತಾರಾಷ್ಟ್ರೀಯ ವಸತಿ ಶಾಲೆ ಕಟ್ಟಡ ನಿರ್ಮಾಣಕ್ಕೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಶಂಕುಸ್ಥಾಪನೆ ನೆರವೇರಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.