ದಮ್‌ ಇದ್ದರೆ ಬಿಜೆಪಿ ವಿಜಯ ಯಾತ್ರೆ ತಡೀರಿ: ಸಿಎಂ ಬೊಮ್ಮಾಯಿ

By Kannadaprabha NewsFirst Published Oct 31, 2022, 3:20 AM IST
Highlights

ಇತರ ಹಿಂದುಳಿದ ವರ್ಗಗಳವರು ಇನ್ನೂ ನಿಮ್ಮ (ಕಾಂಗ್ರೆಸ್‌) ಜೇಬಲ್ಲೇ ಇದ್ದಾರೆಂದು ಅನ್ಕೋಬೇಡಿ. ಆ ಭ್ರಮೆಯಿಂದ ಹೊರಬನ್ನಿ, ನಿಮ್ಮ ಕಥೆ ಮುಗೀತು, ಒಬಿಸಿ ಸೇರಿ ಎಲ್ಲಾ ಸಮುದಾಯದವರು ಬಿಜೆಪಿ ವಿಜಯ ಸಂಕಲ್ಪಕ್ಕೆ ಪಣ ತೊಟ್ಟಿದ್ದಾರೆ.

ಕಲಬುರಗಿ (ಅ.31): ಇತರ ಹಿಂದುಳಿದ ವರ್ಗಗಳವರು ಇನ್ನೂ ನಿಮ್ಮ (ಕಾಂಗ್ರೆಸ್‌) ಜೇಬಲ್ಲೇ ಇದ್ದಾರೆಂದು ಅನ್ಕೋಬೇಡಿ. ಆ ಭ್ರಮೆಯಿಂದ ಹೊರಬನ್ನಿ, ನಿಮ್ಮ ಕಥೆ ಮುಗೀತು, ಒಬಿಸಿ ಸೇರಿ ಎಲ್ಲಾ ಸಮುದಾಯದವರು ಬಿಜೆಪಿ ವಿಜಯ ಸಂಕಲ್ಪಕ್ಕೆ ಪಣ ತೊಟ್ಟಿದ್ದಾರೆ. ನಿಮ್ಮ ಹತ್ರ ತಾಕತ್ತು ಹಾಗೂ ಧಮ್‌ ಇದ್ರೆ ಬಿಜೆಪಿ ವಿಜಯ ಯಾತ್ರೆ ತಡೆಯಿರಿ ನೋಡೋಣ ಎಂದು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಕಾಂಗ್ರೆಸ್‌ ಮುಖಂಡರಿಗೆ ಸವಾಲು ಹಾಕಿದ್ದಾರೆ.

ಕಲಬುರಗಿಯಲ್ಲಿ ಭಾನುವಾರ ಭಾರತೀಯ ಜನತಾ ಪಕ್ಷ ಆಯೋಜಿಸಿದ್ದ ಇತರೆ ಹಿಂದುಳಿದ ವರ್ಗಗಳ (ಒಬಿಸಿ) ವಿರಾಟ್‌ ಸಮಾವೇಶದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಭಗವಂತನ ಆಶೀರ್ವಾದ, ಪ್ರಧಾನಿ ಮೋದಿಯವರ ಬೆಂಬಲ, ಒಬಿಸಿ ಸೇರಿದಂತೆ ನಾಡಿನ ಎಲ್ಲಾ ವರ್ಗದ ಜನರ ಶುಭ ಹಾರೈಕೆಗಳೊಂದಿಗೆ ಬರುವ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿ 150ಕ್ಕೂ ಹೆಚ್ಚು ಸ್ಥಾನ ಗೆಲ್ಲುವಲ್ಲಿ ಯಾವುದೇ ಸಂಶಯ ಇಲ್ಲ ಎಂದರು. ಬಿಜೆಪಿಯವರು ಬರೀ ರಾಜಕಾರಣ ಮಾಡೋರಲ್ಲ, ಜನರಿಗಾಗಿ ರಾಜಕಾರಣ ಮಾಡೋರು. 

ಕರ್ನಾಟಕದಲ್ಲಿ 5 ಕೈಗಾರಿಕಾ ಟೌನ್‌ಶಿಪ್‌ ನಿರ್ಮಾಣ: ಸಿಎಂ ಬೊಮ್ಮಾಯಿ

ನಾವಿಲ್ಲಿ ಮಾತಿನಲ್ಲೇ ಮಂಟಪ ತೋರಿಸಲು ಬಂದಿಲ್ಲ. 65ಕ್ಕೂ ಹೆಚ್ಚು ಒಬಿಸಿ ಸಮುದಾಯಗಳವರಿಗೆ ಒಂದಿಲ್ಲೊಂದು ರೀತಿಯಲ್ಲಿ ಹೇಗೆ ನೆರವಾಗಿದ್ದೇವೆ ಎಂಬುದರ ಆದೇಶ ಪ್ರತಿಗಳೊಂದಿಗೆ ಬಂದಿರುವೆ. ನಿನ್ನೆಯಷ್ಟೇ ತಳವಾರ, ಪರಿವಾರ ನಾಯಕ ಸಮಾಜದವರಿಗೆ ಎಸ್ಟಿಪಟ್ಟಿಯಲ್ಲಿ ಸೇರ್ಪಡೆ ಮಾಡಿ ಆದೇಶ ಹೊರಡಿಸಿದ್ದೇವೆ ಎಂದರು. ಜೊತೆಗೆ, ಹಿಂದುಳಿದವರ ಕಲ್ಯಾಣಕ್ಕಾಗಿ ಸರ್ಕಾರ ಕೈಗೊಂಡ ಕ್ರಮಗಳ ಆದೇಶ ಪ್ರತಿಗಳನ್ನು ಜನರತ್ತ ತೋರಿಸಿದರು. ಆಗ ವೇದಿಕೆಯಲ್ಲಿದ್ದ ಎಲ್ಲಾ ಮುಖಂಡರು, ಸೇರಿದ್ದ ಜನಸ್ತೋಮ ಎದ್ದು ನಿಂತು ಕರತಾಡನ ಮಾಡಿದರು, ಹತ್ತು ನಿಮಿಷ ಇಡೀ ಸಭಾಂಗಣದಲ್ಲಿ ಜಯಘೋಷಗಳು ಮೊಳಗಿದವು.

ಬಿಜೆಪಿ ನಾಯಕರಿಂದ ಮತಕಹಳೆ: ಇತರೆ ಹಿಂದುಳಿದ ವರ್ಗಗಳ (ಒಬಿಸಿ) ಸಮಾವೇಶದಲ್ಲಿ ಬಿಜೆಪಿ ನಾಯಕರು ರಾಜ್ಯದಲ್ಲಿ ಮತ್ತೆ ಕೇಸರಿ ಪಕ್ಷ ಅಧಿಕಾರಕ್ಕೇರಲಿದೆ ಎಂಬ ಅದಮ್ಯ ವಿಶ್ವಾಸದೊಂದಿಗೆ ರಣಕಹಳೆ ಮೊಳಗಿಸಿದ್ದಾರೆ. ಪರಿಶಿಷ್ಟರಿಗೆ ಮೀಸಲಾತಿ ಹೆಚ್ಚಳ ಮಾಡಿದ್ದು ನಾವು, ಹಿಂದುಳಿದ ಸಮುದಾಯಕ್ಕೆ ನ್ಯಾಯ ಕೊಟ್ಟೇ ಹೋಗುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಬ್ಬರಿಸಿದ್ದಾರೆ. ಎಲ್ಲ ಸಮುದಾಯಗಳು ಬಿಜೆಪಿ ಗೆಲುವಿಗೆ ಸಂಕಲ್ಪ ಮಾಡಿವೆ. ತಾಕತ್ತಿದ್ದರೆ ಬಿಜೆಪಿಯ ವಿಜಯಯಾತ್ರೆ ತಡೆಯಿರಿ ಎಂದು ಕಾಂಗ್ರೆಸ್ಸಿಗರಿಗೆ ಸವಾಲು ಹಾಕಿದ್ದಾರೆ.

ಮತ್ತೊಂದೆಡೆ, ಬಿಜೆಪಿ ಗೆಲ್ಲುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಘೋಷಿಸಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ರಾಜ್ಯದಲ್ಲಿ ಬೊಮ್ಮಾಯಿ ಜತೆಗೂಡಿ ರಥಯಾತ್ರೆ ನಡೆಸುವುದಾಗಿ ಪ್ರಕಟಿಸಿದ್ದಾರೆ. ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ ಸಿಂಗ್‌ ಚೌಹಾಣ್‌ ಆದಿಯಾಗಿ ಸಮಾವೇಶದಲ್ಲಿ ಭಾಗವಹಿಸಿದ್ದ ಎಲ್ಲ ನಾಯಕರು ಕಾಂಗ್ರೆಸ್‌, ಅದರ ನಾಯಕರಾದ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌ ವಿರುದ್ಧ ವಾಗ್ದಾಳಿ ನಡೆಸಿ, ಒಬಿಸಿ ಸಮುದಾಯವನ್ನು ಸೆಳೆಯಲು ಯತ್ನಿಸಿದರು. ಹಿಂದುಳಿದವರ ಕಲ್ಯಾಣಕ್ಕೆ ಕಾಂಗ್ರೆಸ್‌ ಶ್ರಮಿಸಿಲ್ಲ. ಬಿಜೆಪಿಯನ್ನು ಬೆಂಬಲಿಸಿದರೆ ಸಮುದಾಯದ ಪ್ರಗತಿ ಸಾಧ್ಯ ಎಂಬುದನ್ನು ಜನರಿಗೆ ಮನವರಿಕೆ ಮಾಡಿಕೊಡಲು ಯತ್ನಿಸಿದರು.

ಕಲಬುರಗಿ ನಗರದ ಹೊರವಲಯ ಕೆಸರಟಗಿ ಹತ್ತಿರವಿರುವ ಶಿವರಾಜ ರದ್ದೇವಾಡಗಿ ಲೇಔಟ್‌ನ 30 ಎಕರೆ ಜಾಗದಲ್ಲಿ ಸಮಾವೇಶ ಆಯೋಜನೆಗೊಂಡಿತ್ತು. 1 ಲಕ್ಷದಷ್ಟುಆಸನಗಳು ಭರ್ತಿಯಾಗಿದ್ದವು. ಸಮಾವೇಶ ನಡೆದ ಸ್ಥಳದಿಂದ ನಾಗನಹಳ್ಳಿ ಪೊಲೀಸ್‌ ಶಾಲೆಯ ದ್ವಾರದವರೆಗೂ ಜನ ಸಮೂಹ ಕಂಡು ಬಂತು. ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಸಮಾವೇಶದ ಹಿನ್ನೆಲೆಯಲ್ಲಿ ಇಡೀ ನಗರ ಕೇಸರಿಮಯವಾಗಿತ್ತು.

ಮೀಸಲಾತಿ ಹೆಚ್ಚಳಕ್ಕೆ ಬಿಜೆಪಿಗೆ ವಾಲ್ಮೀಕಿ ಸಮಾಜ ಕೃತಜ್ಞ ; ಸಚಿವ ಶ್ರೀರಾಮುಲು

ಒಬಿಸಿ ಸಮೂಹ ತಟ್ಟಿದ ಸಿಎಂ ಮಾತು: ಮುಖ್ಯಮಂತ್ರಿ ಬೊಮ್ಮಾಯಿ ಮಾತನಾಡುವಾಗ ಭಾವುಕರಾದರು. ನಾವು ರಾಜಕಾರಣ ಮಾಡೋದು ಜನರಿಗಾಗಿ. ನಿಮ್ಮೆಲ್ಲರ ಬಡತನ ಕಂಡಿದ್ದೇವೆ. ಹಾಗೇ ಸುಮ್ಮನೆ ಕೂಡೋರಲ್ಲ. ಪರಿಹಾರಕ್ಕೆ ದಾರಿ ಹುಡುಕಿದ್ದೇವೆ. ನಾವಿಲ್ಲಿ ಮಾತಿನಲ್ಲೇ ಮಂಟಪ ತೋರಿಸಲು ಬಂದಿಲ್ಲ. 65ಕ್ಕೂ ಹೆಚ್ಚು ಒಬಿಸಿ ಸಮುದಾಯಗಳವರಿಗೆ ಒಂದಿಲ್ಲೊಂದು ರೀತಿಯಲ್ಲಿ ಹೇಗೆ ನೆರವಾಗಿದ್ದೇವೆ ಎಂಬುದರ ಆದೇಶ ಪ್ರತಿಗಳೊಂದಿಗೆ ಬಂದಿರುವೆ. ನಿನ್ನೆಯಷ್ಟೇ ತಳವಾರ, ಪರಿವಾರ ನಾಯಕ ಸಮಾಜದವರನ್ನು ಎಸ್ಟಿಪಟ್ಟಿಯಲ್ಲಿ ಸೇರ್ಪಡೆ ಮಾಡಿ ಆದೇಶ ಹೊರಡಿಸಿದ್ದೇವೆ ಎಂದರು. ಜೊತೆಗೆ, ಹಿಂದುಳಿದವರ ಕಲ್ಯಾಣಕ್ಕಾಗಿ ಸರ್ಕಾರ ಕೈಗೊಂಡ ಕ್ರಮಗಳ ಆದೇಶ ಪ್ರತಿಗಳನ್ನು ಜನರತ್ತ ತೋರಿಸಿದರು. ಆಗ ವೇದಿಕೆಯಲ್ಲಿದ್ದ ಎಲ್ಲಾ ಮುಖಂಡರು, ಸೇರಿದ್ದ ಜನಸ್ತೋಮ ಎದ್ದು ನಿಂತು ಕರತಾಡನ ಮಾಡಿದರು, ಹತ್ತು ನಿಮಿಷ ಇಡೀ ಸಭಾಂಗಣದಲ್ಲಿ ಜಯಘೋಷಗಳು ಮೊಳಗಿದವು.

click me!