ಮೋದಿ ಎದುರಿಗೆ ಸಿಎಂ ಬೊಮ್ಮಾಯಿ ನಾಯಿಮರಿ: ಸಿದ್ದು ಹೇಳಿಕೆ, ಬಿಜೆಪಿ ಕಿಡಿ

By Govindaraj SFirst Published Jan 5, 2023, 4:42 AM IST
Highlights

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ನಾಯಿಮರಿಗೆ ಹೋಲಿಸಿದ ವಿಧಾನಸಭೆಯ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆ ಉಭಯ ಪಕ್ಷಗಳ ನಾಯಕರ ನಡುವೆ ಭಾರೀ ವಾಕ್ಸಮರಕ್ಕೆ ಕಾರಣವಾಗಿದೆ. 

ಬೆಂಗಳೂರು/ಬಳ್ಳಾರಿ (ಜ.05): ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ನಾಯಿಮರಿಗೆ ಹೋಲಿಸಿದ ವಿಧಾನಸಭೆಯ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆ ಉಭಯ ಪಕ್ಷಗಳ ನಾಯಕರ ನಡುವೆ ಭಾರೀ ವಾಕ್ಸಮರಕ್ಕೆ ಕಾರಣವಾಗಿದೆ. ಸಿದ್ದು ಮಂಗಳವಾರ ನೀಡಿದ್ದ ಹೇಳಿಕೆಗೆ ತೀಕ್ಷ್ಣವಾಗಿಯೇ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ‘ಹೌದು, ನಾನು ಜನರ ಪರವಾಗಿ ಕೆಲಸ ಮಾಡುವ, ಬಡವರ ಹಿತ ಕಾಯುವ ನಿಯತ್ತಿನ ನಾಯಿ’ ಎಂದು ಹೇಳಿದ್ದಾರೆ. ಇದೇ ವೇಳೆ ಸಿದ್ದರಾಮಯ್ಯ ಹೇಳಿಕೆಗೆ ಬೊಮ್ಮಾಯಿ ಸಂಪುಟದ ಅನೇಕ ಸಚಿವರು, ಶಾಸಕರು ಹಾಗೂ ಬಿಜೆಪಿ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಈ ಹೇಳಿಕೆ ಸಿದ್ದರಾಮಯ್ಯ ಅವರ ರೋಗಗ್ರಸ್ಥ ಮನಸ್ಥಿತಿ ತೋರಿಸುತ್ತದೆ. ತಕ್ಷಣವೇ ಅವರು ರಾಜ್ಯದ ಜನತೆಯ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌, ಕೇಂದ್ರ ಸಚಿವ ಎ.ನಾರಾಯಣಸ್ವಾಮಿ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ರಾಜ್ಯದ ಸಚಿವರಾದ ವಿ.ಸೋಮಣ್ಣ, ಆರ್‌.ಅಶೋಕ್‌, ಬಿ.ಶ್ರೀರಾಮುಲು, ಸಿ.ಸಿ.ಪಾಟೀಲ್‌, ಮುರುಗೇಶ್‌ ನಿರಾಣಿ, ಡಾ.ಕೆ.ಸುಧಾಕರ್‌, ಪ್ರಭು ಚೌಹಾಣ್‌, ಬಿ.ಸಿ.ಪಾಟೀಲ್‌, ಎಸ್‌.ಟಿ.ಸೋಮಶೇಖರ್‌ ಮತ್ತಿತರರು ಸಿದ್ದರಾಮಯ್ಯ ಹೇಳಿಕೆ ಖಂಡಿಸಿ ಕಿಡಿಕಾರಿದ್ದಾರೆ.

ಪ್ರಧಾನಿ ಮೋದಿ ಮುಂದೆ ಸಿಎಂ ಬೊಮ್ಮಾಯಿ ನಾಯಿ ಬಾಲ: ಮತ್ತೆ ಟೀಕಿಸಿದ ಸಿದ್ದರಾಮಯ್ಯ

ಸಿದ್ದು ಹೇಳಿದ್ದೇನು?: ಮಂಗಳವಾರ ಸಿದ್ದರಾಮಯ್ಯ ಅವರು ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ತಾಕತ್ತಿದ್ದರೆ ಕೇಂದ್ರದಿಂದ ಅನುದಾನ ತಂದು ರಾಜ್ಯದ ಅಭಿವೃದ್ಧಿಗೆ ಶ್ರಮಿಸಲಿ. ಅಲ್ಲಿ ಪ್ರಧಾನಿ ಬಳಿ ಕೇಳುವ ಧೈರ್ಯವಿಲ್ಲ. ಗಡ ಗಡ ನಡುಗುತ್ತಾ ನಾಯಿ ಮರಿಯಂತೆ ನಿಲ್ಲುತ್ತಾರೆ ಎಂದು ಲೇವಡಿ ಮಾಡಿದ್ದರು. ಆ ಹೇಳಿಕೆಗೆ ತೀವ್ರ ಪ್ರತಿರೋಧ ವ್ಯಕ್ತವಾಗುತ್ತಿದ್ದಂತೆಯೇ ಬುಧವಾರ ತುಮಕೂರು ಜಿಲ್ಲೆಯ ತುರುವೇಕೆರೆಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ಹಳ್ಳಿಸೊಗಡಿನ ಭಾಷೆಯಲ್ಲಿ ಆ ಹೇಳಿಕೆ ನೀಡಿದ್ದೇನೆ ಹೊರತು ಬೊಮ್ಮಾಯಿ ಅವರಿಗೆ ಅವಮಾನ ಮಾಡಿಲ್ಲ ಎಂದು ಸಮಜಾಯಿಷಿ ನೀಡುವ ಪ್ರಯತ್ನ ಮಾಡಿದರು.

ನಾನು ನಿಯತ್ತಿನ ನಾಯಿ: ಬುಧವಾರ ಬಳ್ಳಾರಿಯಲ್ಲಿ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಬೊಮ್ಮಾಯಿ ಅವರು, ‘ನಾನು ಜನಕಲ್ಯಾಣಕ್ಕಾಗಿ ಶ್ರಮಿಸುತ್ತಿರುವ ನಿಯತ್ತಿರುವ ನಾಯಿಯೇ ಹೊರತು ನಾಯಿ ವೇಷದಲ್ಲಿರುವ ತೋಳವಲ್ಲ. ಈ ನಾಯಿ ಕಳ್ಳರನ್ನು ಒಳಗಡೆ ಬರಲು ಬಿಡುವುದಿಲ್ಲ. ಅಧಿಕಾರ ಸಿಕ್ಕಿದೆಯೆಂದು ಜನರನ್ನು ಕಿತ್ತು ತಿನ್ನುವ ತೋಳ ನಾನಲ್ಲ. ನಾಯಿ ವೇಷದ ತೋಳಗಳ ಬಗ್ಗೆ ಜನ ಎಚ್ಚರದಿಂದಿರಬೇಕು, ನಿಯತ್ತಿನ ನಾಯಿ ಯಾರು? ನಾಯಿ ವೇಷದ ಕಿತ್ತು ತಿನ್ನುವ ತೋಳ ಯಾರು ಎಂಬುದು ನಾಡಿನ ಜನರಿಗೂ ಗೊತ್ತಿದೆ’ ಎಂದರು.

‘ನಾನು ನಾಯಿಯೊಳಗಿನ ನಿಯತ್ತಿನ ಗುಣ ಉಳಿಸಿಕೊಂಡು ಹೋಗುತ್ತೇನೆ. ಅವರಂತೆ ಸಮಾಜ ಒಡೆಯುವ ಕೆಲಸ ನಾನೆಂದೂ ಮಾಡುವುದಿಲ್ಲ. ನಾನೆಂದೂ ಸುಳ್ಳು ಹೇಳುವುದಿಲ್ಲ. ಸೌಭಾಗ್ಯ ಕೊಡುವುದಾಗಿ ಸುಳ್ಳು ಹೇಳಿ ದೌರ್ಭಾಗ್ಯ ಕೊಟ್ಟಿಲ್ಲ. ರಾಜಕಾರಣಿಗಳಿಗಿಂತಲೂ ಜನ ಬುದ್ಧಿವಂತರಿದ್ದಾರೆ. ಯಾರು ಬರೀ ಮಾತನಾಡುತ್ತಾರೆ. ಯಾರು ಕೆಲಸ ಮಾಡುತ್ತಾರೆ. ಯಾರಿಗೆ ಜನಪರವಾದ ಕಾಳಜಿಯಿದೆ ಎಂಬುದನ್ನು ಜನ ಸೂಕ್ಷ್ಮವಾಗಿ ಗಮನಿಸುತ್ತಲೇ ಇರುತ್ತಾರೆ. ಸಮಯ ಬಂದಾಗ ಸರಿಯಾದ ಉತ್ತರ ನೀಡುತ್ತಾರೆ ಎಂದರಲ್ಲದೆ, ಮುಖ್ಯಮಂತ್ರಿಯನ್ನು ನಾಯಿಗೆ ಹೋಲಿಸುವ ಸಿದ್ದರಾಮಯ್ಯನವರ ವ್ಯಕ್ತಿತ್ವ ಏನೆಂಬುದು ಜನರಿಗೀಗ ಗೊತ್ತಾಗಿದೆ ಎಂದು ಹರಿಹಾಯ್ದರು.

ಬಹಿರಂಗ ಚರ್ಚೆಗೆ ಸಿಎಂ ಆಹ್ವಾನ: ರಾಜ್ಯದ ಪ್ರಗತಿ ಕುರಿತು ಬಹಿರಂಗ ಚರ್ಚೆಗೆ ಬರಲಿ ಎಂದು ಸಿದ್ದರಾಮಯ್ಯ ಆಹ್ವಾನಿಸುತ್ತಾರೆ. ಚರ್ಚೆ ಮಾಡಲು ವಿಧಾನಸಭೆಗಿಂತ ದೊಡ್ಡ ವೇದಿಕೆ ಬೇಕಾ? 15 ದಿನಗಳ ಕಾಲ ಸದನ ನಡೆಯಿತು. ಅಲ್ಲೇ ಚರ್ಚಿಸಬಹುದಿತ್ತಲ್ಲವೇ? ಜನಪರವಾಗಿ ಚರ್ಚಿಸಲು ವಿಧಾನಸಭಾದಂಥ ದೊಡ್ಡ ವೇದಿಕೆಯಲ್ಲಿ ಏನೂ ಮಾತನಾಡದೆ, ಹೊರಗಡೆ ರಾಜಕೀಯಕ್ಕಾಗಿ ಏನೇನೋ ಮಾತನಾಡಿದರೆ ಹೇಗೆ ಎಂದು ಬೊಮ್ಮಾಯಿ ಪ್ರಶ್ನಿಸಿದರು.

ನಾನು ಜನಕಲ್ಯಾಣಕ್ಕಾಗಿ ಶ್ರಮಿಸುತ್ತಿರುವ ನಿಯತ್ತಿರುವ ನಾಯಿಯೇ ಹೊರತು ನಾಯಿ ವೇಷದಲ್ಲಿರುವ ತೋಳವಲ್ಲ. ಅಧಿಕಾರ ಸಿಕ್ಕಿದೆಯೆಂದು ಜನರನ್ನು ಕಿತ್ತು ತಿನ್ನುವ ತೋಳ ನಾನಲ್ಲ. ನಾಯಿ ವೇಷದ ತೋಳಗಳ ಬಗ್ಗೆ ಜನ ಎಚ್ಚರದಿಂದಿರಬೇಕು.
-ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ

ನಾನು ನಿಯತ್ತಿನ ನಾಯಿ ಎಂದ ಬೊಮ್ಮಾಯಿ: ಸಿದ್ದುಗೆ ಸಿಎಂ ಟಾಂಗ್‌..!

ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಬೊಮ್ಮಾಯಿ ಬಗ್ಗೆ ಕೀಳುಮಟ್ಟದ ಹೇಳಿಕೆ ನೀಡುವ ಮೂಲಕ ರಾಜ್ಯದ ಜನತೆಗೆ ಅಪಮಾನ ಮಾಡಿದ್ದಾರೆ. ಸಿದ್ದರಾಮಯ್ಯ ಅವರ ಹೇಳಿಕೆ ಅವರ ಸಂಸ್ಕೃತಿ ಹಾಗೂ ಹಿನ್ನೆಲೆಯನ್ನು ತೋರಿಸುತ್ತದೆ.
-ಅರುಣ್‌ ಸಿಂಗ್‌, ರಾಜ್ಯ ಬಿಜೆಪಿ ಉಸ್ತುವಾರಿ

ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಗಳನ್ನು ನಾಯಿ ಮರಿಗೆ ಹೋಲಿಸಿ ಮಾತನಾಡಿದ್ದು ನನಗೆ ಗೊತ್ತಿಲ್ಲ. ನಮ್ಮ ಮನೆಯಲ್ಲೂ ನಾಯಿ ಇದೆ. ನಾಯಿ ಬಗ್ಗೆ ನನಗೆ ಗೌರವ ಇದೆ. ಕಳ್ಳರನ್ನ ಹಿಡಿಯೋಕೆ, ರಕ್ಷಣೆಗೆ ನಾಯಿ ಬೇಕು. ನಾಯಿ ನಾರಾಯಣ ಅಂತಾರೆ. ಸಿದ್ದರಾಮಯ್ಯ ಏನು ಹೇಳಿದ್ದಾರೋ ಗೊತ್ತಿಲ್ಲ.
-ಡಿ.ಕೆ.ಶಿವಕುಮಾರ್‌, ಕೆಪಿಸಿಸಿ ಅಧ್ಯಕ್ಷ

click me!