ಕೋಲಾರ ಕಾಂಗ್ರೆಸ್‌ನಲ್ಲಿ ಮಾರಾಮಾರಿ, ಸಭೆಯಲ್ಲಿ ರಂಪಾಟ: ಜಿಲ್ಲಾಧ್ಯಕ್ಷರನ್ನೇ ವೇದಿಕೆಯಿಂದ ಕೆಳ ತಳ್ಳಿದ ಗುಂಪು

By Kannadaprabha NewsFirst Published Sep 29, 2024, 8:24 AM IST
Highlights

ರಮೇಶ್ ಕುಮಾರ್‌ಬೆಂಬಲಿಗರು ವೇದಿಕೆ ಮೇಲಿದ್ದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮೀನಾರಾಯಣ, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸಾದ್ ಬಾಬು ಅವರನ್ನು ಕೆಳಗೆ ತಳ್ಳಿ ಕಾರ್ಯಕ್ರಮದಿಂದ ಹೊರ ಹೋಗುವಂತೆ ತಾಕೀತು ಮಾಡಿದರು. ಆಗ ಮತ್ತೆ ಮಾತಿನ ಚಕಮಕಿ ನಡೆಯಿತು. ಇದ್ದಕ್ಕಿದ್ದಂತೆ ಲಕ್ಷ್ಮೀನಾರಾಯಣ, ಪ್ರಸಾದ್ ಬಾಬು ಅವರನ್ನು ಬಲವಂತವಾಗಿ ಕೆಳ ತಳ್ಳಿದರು.

ಕೋಲಾರ(ಸೆ.29): ಕೋಲಾರ ಜಿಲ್ಲಾ ಕಾಂಗ್ರೆಸ್‌ನಲ್ಲಿ ಗುಂಪುಗಾರಿಕೆ ಸ್ಫೋಟಗೊಂಡಿದ್ದು, ನಗರದಲ್ಲಿ ಶನಿವಾರ ನಡೆದ ಪಕ್ಷದ ವಿವಿಧ ಘಟಕಗಳ ಪದಾಧಿಕಾರಿಗಳ ಸಭೆ ಬೀದಿರಂಪಾಟಕ್ಕೆ ಸಾಕ್ಷಿಯಾಯಿತು. ಮುಖಂಡರು, ಕಾರ್ಯಕರ್ತರು ಪರಸ್ಪರ ಕೈ-ಕೈ ಮಿಲಾಯಿಸಿದ್ದಲ್ಲದೆ, ಪಕ್ಷದ ಜಿಲ್ಲಾಧ್ಯಕ್ಷರನ್ನೇ ವೇದಿಕೆಯಿಂದ ಕೆಳಗೆ ತಳ್ಳಿದ ಘಟನೆ ನಡೆಯಿತು.

ನಗರದ ಹೊರವಲಯದ ಕಲ್ಯಾಣ ಮಂಟಪದಲ್ಲಿ ಕಾಂಗ್ರೆಸ್‌ನ ವಿವಿಧ ಘಟಕಗಳ ಪದಾಧಿಕಾರಿಗಳ ಸಭೆಯನ್ನು ಆಯೋಜನೆ ಮಾಡಲಾಗಿತ್ತು. ಇದನ್ನು ಸಭೆಯ ಆರಂಭದಲ್ಲೇ ನಗರ ಬ್ಲಾಕ್ ಅಧ್ಯಕ್ಷ ಪ್ರಸಾದ್ ಬಾಬು ಪ್ರಶ್ನಿಸಿದರು. ಪಕ್ಷದ ಕಾರ್ಯಕ್ರಮವನ್ನು ನಗರದಿಂದ ಹೊರಗೆ ಆಯೋಜನೆ ಮಾಡಿದರೆ ಇಲ್ಲಿಗೆ ಕಾರ್ಯಕರ್ತರ ಕಾರ್ಯಕರ್ತರು ಹೇಗೆ ಬರಲು ಸಾಧ್ಯ, ಕನಿಷ್ಠ ಒಂದು ಬ್ಯಾನರ್‌ ಸಹ ಕಟ್ಟಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿ, ವೇದಿಕೆ ಮೇಲಿದ್ದ ಹೂ ಕುಂಡಗಳನ್ನು ಕೆಳಗೆ ತಳ್ಳಿ, ನೀರಿನ ಬಾಟಲ್ ಎಸೆದರು.

Latest Videos

ಕೋಲಾರದಲ್ಲಿ ಆತಂಕಕಾರಿ ಸೂಟ್‌ಕೇಸ್‌ ಪತ್ತೆ: ವಿಚಿತ್ರವಾದ ಶಬ್ದದಿಂದ ಭಯಭೀತರಾದ ಜನತೆ..!

ಆಗ ಮಧ್ಯ ಪ್ರವೇಶಿಸಿದ ಶಾಸಕ ಕೆ.ವೈ.ನಂಜೇಗೌಡ ಹಾಗೂ ಜಿಲ್ಲಾ ಉಸ್ತುವಾರಿ ನಾರಾಯಣಸ್ವಾಮಿ, ಪ್ರಸಾದ್‌ಬಾಬುರನ್ನು ಸಮಾಧಾನಪಡಿಸಲು ಯತ್ನಿಸಿದರು. ಅವರ ಮಾತು ಕೇಳದ ಪ್ರಸಾದ್ ಬಾಬು, ಮತ್ತೊಂದು ಗುಂಪಿನ ಕಾರ್ಯಕರ್ತರ ಜತೆಗೆ ವಾಗ್ವಾದಕ್ಕೆ ಇಳಿದರು. ಆಗ ಇಬ್ಬರ ನಡುವೆ ಮಾತಿನ ಚಕಮಕಿ ನಡೆದು, ಕೈಕೈ ಮಿಲಾಯಿಸುವ ಹಂತ ತಲುಪಿತು. 

ರಮೇಶ್‌ ಕುಮಾರ್‌ಗೆ ಆಹ್ವಾನ ಏಕಿಲ್ಲ?: 

ಇದಕ್ಕೆ ರಮೇಶ್ ಕುಮಾರ್‌ ಬೆಂಬಲಿಗರು ವೇದಿಕೆ ಮೇಲೆ ಹತ್ತಿ ಕೇಳಲು ನೀವ್ಯಾರು, ಪಕ್ಷ ಕಟ್ಟಿದವರಿಗೆ ಸಭೆಗೆ ಆಹ್ವಾನ ನೀಡಿಲ್ಲ. ಯಾಕೆ ತಾರತಮ್ಯ ಮಾಡಿದ್ದೀರಿ ಎಂದು ಪ್ರಶ್ನಿಸಿದರು. ಆಗ ವೇದಿಕೆ ಮೇಲಿದ್ದ ಕೆಲ ಮುಖಂಡರು ಕಾರ್ಯಕರ್ತರನ್ನು ಸಮಾಧಾನಪಡಿಸಲು ಪಟ್ಟ ಪ್ರಯತ್ನ ವಿಫಲವಾಯಿತು. ರಮೇಶ್ ಕುಮಾರ್‌ಬೆಂಬಲಿಗರು ವೇದಿಕೆ ಮೇಲಿದ್ದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮೀನಾರಾಯಣ, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸಾದ್ ಬಾಬು ಅವರನ್ನು ಕೆಳಗೆ ತಳ್ಳಿ ಕಾರ್ಯಕ್ರಮದಿಂದ ಹೊರ ಹೋಗುವಂತೆ ತಾಕೀತು ಮಾಡಿದರು. ಆಗ ಮತ್ತೆ ಮಾತಿನ ಚಕಮಕಿ ನಡೆಯಿತು. ಇದ್ದಕ್ಕಿದ್ದಂತೆ ಲಕ್ಷ್ಮೀನಾರಾಯಣ, ಪ್ರಸಾದ್ ಬಾಬು ಅವರನ್ನು ಬಲವಂತವಾಗಿ ಕೆಳ ತಳ್ಳಿದರು.

click me!