ಚಿಕ್ಕಬಳ್ಳಾಪುರ ನಗರಸಭೆ ಬಿಜೆಪಿ ತೆಕ್ಕೆಗೆ? ಶಾಸಕ ಪ್ರದೀಪ್ ಈಶ್ವರ್ ಉಡಾಫೆ ಮಾತು ದ್ವೇಷ ರಾಜಕಾರಣ ಕೈಸೋಲಿಗೆ ಕಾರಣವಾಯ್ತ?

By Kannadaprabha NewsFirst Published Sep 13, 2024, 7:46 AM IST
Highlights

ನಮ್ಮ ಸದಸ್ಯರನ್ನು ಕಾಂಗ್ರೆಸ್‌ನವರು ಹೈಜಾಕ್ ಮಾಡಲು ಬಹಳಷ್ಟು ಪ್ರಯತ್ನ ಮಾಡಿದರು. ಶಾಸಕ ಪ್ರದೀಪ್ ಈಶ್ವರ್ ಉಡಾಫೆ ಮಾತುಗಳು, ದ್ವೇಷದ ರಾಜಕಾರಣ ಹೂಮಾಲೆಯಾಗಿ ನನ್ನ ಕೊರಳಿಗೆ ಬೀಳುತ್ತಿವೆ ಎಂದು ಸಂಸದ ಡಾ ಕೆ ಸುಧಾಕರ್ ಹೇಳಿದರು.

ಚಿಕ್ಕಬಳ್ಳಾಪುರ (ಸೆ.13): ಶಾಸಕ ಪ್ರದೀಪ್ ಈಶ್ವರ್, ಸಂಸದ ಡಾ ಕೆ.ಸುಧಾಕರ್ ಮಧ್ಯೆ ಭಾರೀ ಜಿದ್ದಾಜಿದ್ದಿಗೆ ಕಾರಣವಾಗಿದ್ದ ಚಿಕ್ಕಬಳ್ಳಾಪುರ ನಗರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆ ಮತದಾನ ನಡೆದಿದ್ದು, ನ್ಯಾಯಾಲಯದ ನಿರ್ದೇಶನದ ಮೇರೆಗೆ ಫಲಿತಾಂಶ ಕಾಯ್ದಿರಿಸಲಾಗಿದೆ. ಆದರೂ ಚುನಾವಣೆಯಲ್ಲಿ ಜಯಗಳಿಸಿದ್ದೇವೆ ಎಂದು ಬಿಜೆಪಿಗಳು ವಿಜಯೋತ್ಸವ ಆಚರಿಸಿದ್ದಾರೆ. ಒಟ್ಟು 31 ಸದಸ್ಯ ಬಲದ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಗುರುವಾರ ನಡೆದ ಚುನಾವಣೆಯಲ್ಲಿ ಬಿಜೆಪಿ 9 ಸದಸ್ಯರು, 3 ಮಂದಿ ಪಕ್ಷೇತರರು, 6 ಜನ ಕಾಂಗ್ರೆಸ್ಸಿಗರು, ಸಂಸದರ ಮತ ಸೇರಿ ಬಿಜೆಪಿಗೆ ಒಟ್ಟು 19 ಮತಗಳು ಬಂದಿವೆ. ಇನ್ನು ಕಾಂಗ್ರೆಸ್‌ 10 ಸದಸ್ಯರು, ಶಾಸಕ, ಎಂಎಲ್ಸಿ ಸೇರಿ 3, ಒಬ್ಬ ಪಕ್ಷೇತರ, ಇಬ್ಬರು ಜೆಡಿಎಸ್‌ ಸದಸ್ಯರ ಬೆಂಬಲದೊಂದಿಗೆ ಒಟ್ಟು 16 ಮತಗಳನ್ನು ಪಡೆದಿದೆ ಎಂದು ಮೇಲ್ನೋಟಕ್ಕೆ ಕಂಡುಬಂದಿದೆ ಎನ್ನಲಾಗುತ್ತಿದೆ.

ಶಾಸಕ ಪ್ರದೀಪ್ ಈಶ್ವರ್, ವಿಧಾನ ಪರಿಷತ್ ಸದಸ್ಯರಾದ ಅನಿಲ್ ಕುಮಾರ್ ಹಾಗೂ ಎಂ.ಆರ್.ಸೀತಾರಾಂ ಮತದಾನ ಮಾಡಿದರು. ವಿಧಾನ ಪರಿಷತ್ ಸದಸ್ಯರಾದ ಅನಿಲ್ ಕುಮಾರ್ ಹಾಗೂ ಎಂ.ಆರ್.ಸೀತಾರಾಂ ಮತದಾನ ಮಾಡಲು ಅರ್ಹರಲ್ಲ ಎಂದು ಡಾ.ಕೆ.ಸುಧಾಕರ್ ಬೆಂಬಲಿಗ ಹಾಗೂ ಮಾಜಿ ನಗರಸಭಾ ಸದಸ್ಯ ಆನಂದಬಾಬುರೆಡ್ಡಿ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿದ ಕಾರಣ ಮತದಾನಕ್ಕೆ ಅವಕಾಶ ನೀಡಿ, ಚುನಾವಣೆ ನಡೆಸಲು ಕೋರ್ಟ್ ಸೂಚನೆ ನೀಡಿದ್ದರೂ ಫಲಿತಾಂಶ ರಿಟ್ ಅರ್ಜಿಯ ಫಲಿತಾಂಶಕ್ಕೆ ಒಳಪಟ್ಟಿರುವುದಾಗಿ ಆದೇಶಿಸಿತ್ತು. ಹಾಗಾಗಿ ಚುನಾವಣೆ ನಡೆದರೂ ಅಧಿಕೃತವಾಗಿ ಚುನಾವಣಾಧಿಕಾರಿ ಫಲಿತಾಂಶ ಪ್ರಕಟಿಸಲಿಲ್ಲ.

Latest Videos

ಅನಧಿಕೃತ ಮಾಹಿತಿ ಮೇರೆಗೆ ಸುಧಾಕರ್ ಬೆಂಬಲಿತ ಗಜೇಂದ್ರ ಅಧ್ಯಕ್ಷರಾಗಿ ಹಾಗೂ ಗ್ಯಾಸ್ ನಾಗರಾಜು ಉಪಾಧ್ಯಕ್ಷರಾಗಿ ಜಯಗಳಿಸಿದ್ದಾರೆ ಎಂದು ಬೆಂಬಲಿಗರ ಹೇಳಿಕೊಳ್ಳುತ್ತಿದ್ದಾರೆ. ಸಂಸದ ಡಾ.ಕೆ.ಸುಧಾಕರ್ ಬೆಂಬಲಿತ ಬಿಜೆಪಿಯಿಂದ ಗಜೇಂದ್ರ ಅಧ್ಯಕ್ಷ ಹಾಗೂ ಗ್ಯಾಸ್ ನಾಗರಾಜು ಉಪಾಧ್ಯಕ್ಷ ಸ್ಥಾನಗಳಿಗೆ ಮತ್ತು ಕಾಂಗ್ರೆಸ್‌ನಿಂದ ಅಂಬರೀಶ್ ಅಧ್ಯಕ್ಷ, ನರಸಿಂಹಮೂರ್ತಿ ಉಪಾಧ್ಯಕ್ಷ ಸ್ಥಾನಗಳಿಗೆ ನಾಮಪತ್ರ ಸಲ್ಲಿಸಿದ್ದರು.

 

ತೋಟಗಾರಿಕಾ ಬೆಳೆಗಳಿಗೆ ಬೆಳೆ ವಿಮೆ ಮಾಡಿಸಲು ಅಭಿಯಾನ ಕೈಗೊಳ್ಳಿ: ಸಂಸದ ಸುಧಾಕರ್

ಸಂಸದ ಡಾ.ಕೆ.ಸುಧಾಕರ್ ಮಾತನಾಡಿ, ನಮ್ಮ ಸದಸ್ಯರನ್ನು ಕಾಂಗ್ರೆಸ್‌ನವರು ಹೈಜಾಕ್ ಮಾಡಲು ಬಹಳಷ್ಟು ಪ್ರಯತ್ನ ಮಾಡಿದರು. ಶಾಸಕ ಪ್ರದೀಪ್ ಈಶ್ವರ್ ಉಡಾಫೆ ಮಾತುಗಳು, ದ್ವೇಷದ ರಾಜಕಾರಣ ಹೂಮಾಲೆಯಾಗಿ ನನ್ನ ಕೊರಳಿಗೆ ಬೀಳುತ್ತಿವೆ. ಇವರ ಡ್ಯಾನ್ಸ್ ಹೀಗೆ ಮುಂದುವರೆಯಲಿ. ಇನ್ನೂ ಮೂರು ವರ್ಷ ಹೀಗೆ ಮಾಡಿ. ಆಮೇಲೆ ಈ ರಾಜ್ಯ ದೇಶದಲ್ಲಿ ಎಲ್ಲೂ ಅವಕಾಶ ಇರಲ್ಲ. ಪ್ಲೀಸ್ ನೋಟ್ ಮೈ ಪಾಯಿಂಟ್ ಎಂದು ಹೇಳಿದರು.

ಕೋವಿಡ್ ಬಳಿಕ ಸುಧಾಕರ್ ಗೆ ಮತ್ತೊಂದು ಶಾಕ್ ನೀಡಲು ಮುಂದಾದ ಸರ್ಕಾರ!

ಶಾಸಕ ಪ್ರದೀಪ್ ಈಶ್ವರ್ ಮಾತನಾಡಿ, ನಗರಸಭೆ ಚುನಾವಣೆಗೆ ಸಂಸದ ಕೆ.ಸುಧಾಕರ್ 7 ರಿಂದ 8 ಕೋಟಿ ರು. ಖರ್ಚು ಮಾಡಿ ಕಾಂಗ್ರೆಸ್ ಸದಸ್ಯರನ್ನು ಖರೀದಿ ಮಾಡಿದ್ದಾರೆ. ಅಷ್ಟೇ ಅಲ್ಲ, ಅವರು ಹೆಣಗಳ ಮೇಲೆ ದುಡ್ಡು ಮಾಡಿ ನಗರಸಭೆ ಚುನಾವಣೆಗೆ ಹಾಕಿದ್ದಾರೆ. ನಮ್ಮ ಬಳಿ ಹಣ ಇಲ್ಲ, ಮುಂದಿನ ನಗರಸಭೆ ಚುನಾವಣೆಯಲ್ಲಿ ‘ಕೈ​’ ಬಾವುಟ ಹಾರಿಸುತ್ತೇನೆ ಎಂದರು.

click me!