Gadag: ಬಂಡಾಯದ ನೆಲದಲ್ಲಿ ಸಿಸಿ ಪಾಟೀಲ ಶಕ್ತಿ ಪ್ರದರ್ಶನ, ನರಗುಂದ ಪಟ್ಟಣದ ಬೀದಿಗಳು ಕೇಸರಿಮಯ!

By Kannadaprabha NewsFirst Published Apr 20, 2023, 12:24 PM IST
Highlights

ನರಗುಂದ ಪಟ್ಟಣ ಅಕ್ಷರಶಃ ಕೇಸರಿಮಯವಾಗಿತ್ತು. ಎತ್ತ ನೋಡಿದರೂ ಕೇಸರಿ ಶಾಲುಗಳು, ಬಿಜೆಪಿ ಧ್ವಜ. ಹರಿದು ಬಂದ ಜನಸಾಗರ ಅಲ್ಲಲ್ಲಿ ಜನಪದ ಕಲಾತಂಡಗಳ ಮೆರಗು. ಇಂಥದೊಂದು ಶಕ್ತಿ ಪ್ರದರ್ಶನದ ಮೂಲಕ ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ ನರಗುಂದ ವಿಧಾನಸಭಾ ಕ್ಷೇತ್ರದಿಂದ ಮತ್ತೊಮ್ಮೆ ಆಯ್ಕೆ ಬಯಸಿ ಬುಧವಾರ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು.

ನರಗುಂದ/ಗದಗ (ಏ.20) : ನರಗುಂದ ಪಟ್ಟಣ ಅಕ್ಷರಶಃ ಕೇಸರಿಮಯವಾಗಿತ್ತು. ಎತ್ತ ನೋಡಿದರೂ ಕೇಸರಿ ಶಾಲುಗಳು, ಬಿಜೆಪಿ ಧ್ವಜ. ಹರಿದು ಬಂದ ಜನಸಾಗರ ಅಲ್ಲಲ್ಲಿ ಜನಪದ ಕಲಾತಂಡಗಳ ಮೆರಗು. ಇಂಥದೊಂದು ಶಕ್ತಿ ಪ್ರದರ್ಶನದ ಮೂಲಕ ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ(CC Patil) ನರಗುಂದ ವಿಧಾನಸಭಾ ಕ್ಷೇತ್ರದಿಂದ ಮತ್ತೊಮ್ಮೆ ಆಯ್ಕೆ ಬಯಸಿ ಬುಧವಾರ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು.

ಬೆಳಗ್ಗೆ ಪುರಸಭೆಯ ಆವರಣದಲ್ಲಿ ಇರುವ ವೀರ ಬಾಬಾಸಾಹೇಬರ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ಮೆರವಣಿಗೆಗೆ ಸಚಿವ ಪಾಟೀಲ ಚಾಲನೆ ನೀಡಿದರು.

ನರಗುಂದ ವಿಧಾನಸಭಾ ಕ್ಷೇತ್ರ (Naragunda assembly constituency)ವ್ಯಾಪ್ತಿಯ ರೋಣ ಹಾಗೂ ಗದಗ(Gadag) ತಾಲೂಕುಗಳ ವಿವಿಧ ಗ್ರಾಮಗಳ ಸಾವಿರಾರು ಸಂಖ್ಯೆಯ ಕಾರ್ಯಕರ್ತರು ನೂರಾರು ವಾಹನಗಳಲ್ಲಿ ಆಗಮಿಸಿದ್ದರು. ಮೆರವಣಿಗೆ ಪ್ರಾರಂಭವಾದ ಪುರಸಭೆ ಆವರಣದಿಂದ ಬಸವೇಶ್ವರ ವೃತ್ತ ಹಾಗೂ ತಹಸೀಲ್ದಾರ್‌ ಕಚೇರಿಗೆ ತೆರಳುವ ಮಾರ್ಗದುದ್ದಕ್ಕೂ ಬಿಜೆಪಿ ಪರ ಹಾಗೂ ಸಿ.ಸಿ. ಪಾಟೀಲ, ಬಸನಗೌಡ ಪಾಟೀಲ ಯತ್ನಾಳ ಅವರ ಪರವಾದ ಜಯಘೋಷಗಳು, ಡಿಜೆ ಹಾಡುಗಳು ಗಮನ ಸೆಳೆದವು. ತೆರೆದ ವಾಹನದ ಮೆರವಣಿಗೆಯಲ್ಲಿ ವಿಜಯಪುರದ ಶಾಸಕ ಬಸನಗೌಡ ಪಾಟೀಲ ಯತ್ನಾಳ ಪಾಲ್ಗೊಂಡಿದ್ದು, ಕಾರ್ಯಕರ್ತರ ಉತ್ಸಾಹ ಹೆಚ್ಚಿಸಿತು.

ಅಭಿವೃದ್ಧಿಯಲ್ಲಿ ರಾಜಕೀಯ ಮಾಡಿಲ್ಲ-ಸಚಿವ ಸಿ.ಸಿ. ಪಾಟೀಲ

ಪಟ್ಟಣದ ಎಲ್ಲ ರಸ್ತೆಗಳಲ್ಲೂ ಪಾಲ್ಗೊಂಡಿದ್ದ ಪ್ರತಿಯೊಬ್ಬ ಕಾರ್ಯಕರ್ತ ಕೇಸರಿ ಶಾಲು ಹಾಕಿಕೊಂಡು ಕೈಯಲ್ಲಿ ಬಿಜೆಪಿ ಧ್ವಜ ಹಿಡಿದು ಪಾಲ್ಗೊಂಡ ಹಿನ್ನೆಲೆಯಲ್ಲಿ ನರಗುಂದ ಪಟ್ಟಣ ಸಂಪೂರ್ಣ ಕೇಸರಿಮಯವಾಗಿತ್ತು.

ಕಲಾಮೇಳಗಳ ಮೆರಗು:

ಮೆರವಣಿಗೆಯಲ್ಲಿ ಡೊಳ್ಳು ಕುಣಿತ, ಕರಡಿಮಜಲು, ಜಗ್ಗಲಿಗೆ, ಜಾಂಜ್‌ ಮೇಳ, ಮಹಿಳಾ ಡೊಳ್ಳು ಕುಣಿತ ಹೀಗೆ ವಿವಿಧ ಜನಪದ ಕಲಾತಂಡಗಳು ಪಾಲ್ಗೊಂಡು ಮೆರವಣಿಗೆಯ ಮೆರಗು ಹೆಚ್ಚಿದ್ದವು. ಮಹಿಳಾ ಡೊಳ್ಳು ಗಮನ ಸೆಳೆಯಿತು. ಸುಡು ಬಿಸಿಲಿನ್ನೂ ಲೆಕ್ಕಿಸದೇ ಕಾರ್ಯಕರ್ತರು ಅತ್ಯಂತ ಉತ್ಸಾಹದಿಂದ ಪಾಲ್ಗೊಂಡಿದ್ದರು. ಎತ್ತು ಚಕ್ಕಡಿಗಳೊಂದಿಗೆ ಆಗಮಿಸಿದ್ದ ಮಹಿಳೆಯರು ಚಕ್ಕಡಿಗಳಲ್ಲಿ ನಿಂತು ಡಿಜೆ ಸೌಂಡ್‌ಗೆ ಹೆಜ್ಜೆ ಹಾಕಿದರು.

ಮೆರವಣಿಗೆಯ ಬಳಿಕ ಹೆದ್ದಾರಿ ಪಕ್ಕದಲ್ಲಿಯೇ ನಿರ್ಮಿಸಲಾಗಿದ್ದ ಬೃಹತ್‌ ವೇದಿಕೆಯಲ್ಲಿ ಬಹಿರಂಗ ಸಭೆ ನಡೆಯಿತು. ನರಗುಂದ ಕ್ಷೇತ್ರ ವ್ಯಾಪ್ತಿಯ ವಿವಿಧ ಗ್ರಾಮಗಳ 30 ಸಾವಿರಕ್ಕೂ ಅಧಿಕ ಜನರು ಪಾಲ್ಗೊಂಡಿದ್ದರು.

ನೀರು, ಮಜ್ಜಿಗೆ ವ್ಯವಸ್ಥೆ

3 ಕಿ.ಮೀ.ಗೂ ಅಧಿಕ ಉದ್ದದ ಮೆರವಣಿಗೆಯಲ್ಲಿ ಕಾರ್ಯಕರ್ತರಿಗೆ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಕುಡಿಯುವ ನೀರು ಮತ್ತು ತಂಪಾದ ಮಜ್ಜಿಗೆ ವ್ಯವಸ್ಥೆ ಮಾಡಿದರು.

ಹೊಸ ಮತದಾರರ ಒಲವು ಬಿಜೆಪಿಯತ್ತ: ಸಚಿವ ಸಿ.ಸಿ.ಪಾಟೀಲ್‌

ವಿಪ ಸದಸ್ಯ ಎಸ್‌.ವಿ. ಸಂಕನೂರ, ಯುವ ಮುಖಂಡ ಉಮೇಶಗೌಡ ಪಾಟೀಲ, ಜಿಲ್ಲಾ ಬಿಜೆಪಿ ಅಧ್ಯಕ್ಷ ಮುತ್ತಣ್ಣ ಲಿಂಗನಗೌಡ್ರ, ಸ್ಥಳೀಯ ಪುರಸಭೆಯ ಅಧ್ಯಕ್ಷ, ಉಪಾಧ್ಯಕ್ಷರು, ಬಿಜೆಪಿ ವಿವಿಧ ಮೋರ್ಚಾಗಳ ಪದಾಧಿಕಾರಿಗಳು, ವಿವಿಧ ಮಂಡಲಗಳ ಅಧ್ಯಕ್ಷ, ಉಪಾಧ್ಯಕ್ಷರು, ಸಾವಿರಾರು ಸಂಖ್ಯೆಯ ಕಾರ್ಯಕರ್ತರು, ಯುವ ಘಟಕದ ಪದಾಧಿಕಾರಿಗಳು ಹಾಜರಿದ್ದರು.

click me!