
ಬೆಂಗಳೂರು (ಅ.06): ‘ರಾಜ್ಯದಲ್ಲಿ ಜಾತಿ ಜನಗಣತಿ ವರದಿ (ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ) ಹಣ ಪೋಲು ಮಾಡಲು ಮಾಡಿಲ್ಲ. ಈ ಸಂಬಂಧ ಬೇಗ ವರದಿ ಕೊಡುವಂತೆ ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾದ ಜಯಪ್ರಕಾಶ್ ಹೆಗ್ಡೆ ಅವರಿಗೆ ಸರ್ಕಾರ ಸೂಚಿಸಿದೆ. ರಾಜ್ಯದಲ್ಲೂ ಮೀಸಲಾತಿ ಹೆಚ್ಚಳ ಕೂಗು ಕೇಳಿ ಬರುತ್ತಿದ್ದು, ವರದಿ ಬಹಿರಂಗಪಡಿಸಿದರೆ ಅನುಕೂಲ’ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ. ತಮಿಳುನಾಡಿನಲ್ಲಿ ಶೇ.69 ರಷ್ಟು ಮೀಸಲಾತಿ ನೀಡಲಾಗುತ್ತಿದೆ. ನಮ್ಮ ರಾಜ್ಯದಲ್ಲೂ ಮೀಸಲಾತಿ ಹೆಚ್ಚಳ ಕೂಗು ಕೇಳಿ ಬರುತ್ತಿದ್ದು, ಶೇ.50ಕ್ಕಿಂತ ಹೆಚ್ಚು ಮೀಸಲಾತಿ ನೀಡಲು ಆಗ್ರಹಿಸುತ್ತಿದ್ದಾರೆ. ಹೀಗಾಗಿ ಜಾತಿ ಜನಗಣತಿ ವರದಿ ಬಹಿರಂಗಪಡಿಸಿದರೆ ಅನುಕೂಲವಾಗುತ್ತದೆ. ಆದರೆ ವರದಿ ಬಂದ ಬಳಿಕವಷ್ಟೇ ಈ ಬಗ್ಗೆ ಚರ್ಚೆ ಮಾಡುವುದು ಒಳಿತು ಎಂದು ಹೇಳಿದರು.
ಶಿವಮೊಗ್ಗ ಗಲಭೆ ಸಣ್ಣ ಘಟನೆ: ಶಿವಮೊಗ್ಗದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಗಲಭೆ ಆಗದಂತೆ ನಾವು ಎಲ್ಲಾ ಮುಂಜಾಗ್ರತೆ ತೆಗೆದುಕೊಂಡಿದ್ದರೂ ಸಣ್ಣ ಘಟನೆಯೊಂದು ನಡೆದು ಹೋಗಿದೆ. ಅಲ್ಲಿ ಯಾವುದೇ ದೊಡ್ಡ ಪ್ರಮಾಣದಲ್ಲಿ ಅಹಿತಕರ ಘಟನೆ ನಡೆದಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ. ಶಿವಮೊಗ್ಗದಲ್ಲಿ ನಡೆದ ಕಲ್ಲುತೂರಾಟವನ್ನು ಸಣ್ಣ ಘಟನೆ ಎಂದ ಪರಮೇಶ್ವರ್ ಹೇಳಿಕೆಗೆ ಬಿಜೆಪಿಯಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಶಿವಮೊಗ್ಗ ಕಲ್ಲೂತೂರಾಟಕ್ಕೆ ಸಂಬಂಧಿಸಿ ಸುದ್ದಿಗಾರರ ಜತೆಗೆ ಮಾತನಾಡಿದ ಪರಮೇಶ್ವರ್, ಮೊದಲೇ ನಾವು ಸಾಕಷ್ಟು ಪೊಲೀಸರನ್ನು ನಿಯೋಜಿಸಿದ್ದೆವು. ಮೊದಲೆಲ್ಲ ಶಿವಮೊಗ್ಗದಲ್ಲಿ ನಡೆದ ಘಟನೆಗಳ ಬಗ್ಗೆ ನಮಗೂ ಗೊತ್ತಿದೆ. ಹೀಗಾಗಿ ಮುಂಜಾಗ್ರತೆ ತೆಗೆದುಕೊಂಡಿದ್ದೆವು ಎಂದರು.
ಬಿಜೆಪಿ ಅವಧಿಯ ಕೇಸು ರದ್ದತಿ ಅಂಕಿ ಬಿಚ್ಚಿಡಲೆ?: ಗೃಹ ಸಚಿವ ಪರಮೇಶ್ವರ್ ಗರಂ
ಕಲ್ಲು ತೂರಾಟಕ್ಕೆ ಸಂಬಂಧಿಸಿ 50 ಜನರನ್ನು ಬಂಧಿಸಿದ್ದೇವೆ. ಸಿಸಿಟಿವಿಯಲ್ಲಿ ಕಂಡವರನ್ನು ವಿಚಾರಣೆ ಮಾಡುತ್ತಿದ್ದೇವೆ. ಈಗ ಅಲ್ಲಿ ಯಾವುದೇ ಗಲಭೆ ಸ್ಥಿತಿ ಇಲ್ಲ. ಎಲ್ಲವೂ ಮುಗಿದ ಅಧ್ಯಾಯ. ಹೊರರಾಜ್ಯದಿಂದ, ಹೊರ ಜಿಲ್ಲೆಯಿಂದ ಯಾರು ಬಂದಿಲ್ಲ. ಯಾರು ಹೊರಗಡೆಯಿಂದ ಬರಬಾರದು ಎಂದು ಸ್ಕ್ರೀನಿಂಗ್ ಮಾಡಿದ್ದೇವೆ. ಬೇಕೆಂದೇ ಈ ಘಟನೆ ಆಗಿರಬಹುದು, ಅವರು ಕಲ್ಲು ಹೊಡೆದಿದ್ದಾರೆ ಅಂತ ಇವರೂ ಕಲ್ಲು ಹೊಡೆದಿದ್ದಾರೆ ಎಂದರು. ಸಾಮೂಹಿಕವಾಗಿ ಕಲ್ಲು ತೂರಿದಾಗ ಪೊಲೀಸರ ಮೇಲೆ ಕಲ್ಲು ಬಿದ್ದಿದೆ. ಅವರು, ಇವರು ಅಂತ ವಿವರಣೆ ಕೊಡುವ ಅಗತ್ಯ ಇಲ್ಲ. ಯಾವುದೇ ದೊಡ್ಡ ಪ್ರಮಾಣದಲ್ಲಿ ಅಹಿತಕರ ಘಟನೆ ನಡೆದಿಲ್ಲ. ಅಲ್ಲದೆ ನಾನು ಶಿವಮೊಗ್ಗಕ್ಕೆ ಹೋಗುವ ಅಗತ್ಯವೂ ಇಲ್ಲ. ನಾನು ಹೋಗುವಂಥದ್ದೇನೂ ಅಲ್ಲಿ ಆಗಿಲ್ಲ. ಘಟನೆ ದೊಡ್ಡದಾಗುವುದಕ್ಕೆ ನಾನು ಬಿಡುವುದಿಲ್ಲವೆಂದರು.
ರೈತರ ಸಮಸ್ಯೆಗಳನ್ನು ಸಿಎಂ ಗಮನಕ್ಕೆ ತರುವೆ: ಸಚಿವ ಪರಮೇಶ್ವರ್
ಬಿಜೆಪಿ ಕಿಡಿ: ಶಿವಮೊಗ್ಗದ ರಾಗಿಗುಡ್ಡದಲ್ಲಿ ಭಾನುವಾರ ಸಂಜೆ ನಡೆದ ಕಲ್ಲುತೂರಾಟ ಪ್ರಕರಣವನ್ನು ಸಣ್ಣ ಘಟನೆ ಎಂದಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿಕೆಗೆ ಬಿಜೆಪಿ ಮುಖಂಡರಾದ ಕೆ.ಎಸ್.ಈಶ್ವರಪ್ಪ, ಬಿ.ವೈ.ವಿಜಯೇಂದ್ರ ಮತ್ತಿತರರು ಕಿಡಿಕಾರಿದ್ದಾರೆ. ಪರಮೇಶ್ವರ್ ಅವರು ಗೃಹ ಸಚಿವರಾಗಲು ನಾಲಾಯಕ್, ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಆಗ್ರಹಿದರೆ, ಈ ರೀತಿಯ ಹೇಳಿಕೆಗಳಿಂದ ಇಂಥ ದೃಷ್ಕೃತ್ಯ ನಡೆಸಲು ಇನ್ನಷ್ಟು ಪ್ರಚೋದನೆ ನೀಡಿದಂತಾಗುತ್ತದೆ ಎಂದು ಶಾಸಕ ಬಿ.ವೈ.ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.