ಕಾಂಗ್ರೆಸ್‌ದು ತಾಲಿಬಾನ್ ಸರ್ಕಾರ ಮಾದರಿ: ಸಿ.ಟಿ.ರವಿ

By Kannadaprabha NewsFirst Published Apr 24, 2024, 4:42 PM IST
Highlights

ಕಾಂಗ್ರೆಸ್‌ಗೆ ರಾಜ್ಯದ ಜನರ ನೆಮ್ಮದಿಗಿಂತ ವೋಟ್‌ ಬ್ಯಾಂಕ್ ರಕ್ಷಣೆಯೇ ಮುಖ್ಯವಾಗಿದೆ. ಕರ್ನಾಟಕ ಸರ್ವಜನಾಂಗದ ಶಾಂತಿಯ ತೋಟ ಎಂದು ಹೇಳುವ ಸಿಎಂ ಸಿದ್ದರಾಮಯ್ಯನವರೇ ರಾಜ್ಯದಲ್ಲಿ ಶಾಂತಿ ಎಲ್ಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದ ಮಾಜಿ ಸಚಿವ ಸಿ.ಟಿ.ರವಿ 

ಮಂಡ್ಯ(ಏ.24):  ಪ್ರಧಾನಿ ನರೇಂದ್ರ ಮೋದಿ ದೇಶದ ಅಭಿವೃದ್ಧಿಯ ಟ್ರೈಲರ್ ಬಿಡುಗಡೆ ಮಾಡಿದರೆ, ಕಾಂಗ್ರೆಸ್ ತಾಲಿಬಾನ್ ಮಾದರಿ ಆಡಳಿತದ ಟ್ರೈಲರ್ ಬಿಡುಗಡೆ ಮಾಡಿದೆ ಎಂದು ಮಾಜಿ ಸಚಿವ ಸಿ.ಟಿ.ರವಿ ಆತಂಕ ವ್ಯಕ್ತಪಡಿಸಿದರು. ಕಾಂಗ್ರೆಸ್‌ಗೆ ರಾಜ್ಯದ ಜನರ ನೆಮ್ಮದಿಗಿಂತ ವೋಟ್‌ ಬ್ಯಾಂಕ್ ರಕ್ಷಣೆಯೇ ಮುಖ್ಯವಾಗಿದೆ. ಕರ್ನಾಟಕ ಸರ್ವಜನಾಂಗದ ಶಾಂತಿಯ ತೋಟ ಎಂದು ಹೇಳುವ ಸಿಎಂ ಸಿದ್ದರಾಮಯ್ಯನವರೇ ರಾಜ್ಯದಲ್ಲಿ ಶಾಂತಿ ಎಲ್ಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.

ಹನುಮಾನ್‌ ಚಾಲೀಸ ಹೇಳಿದವರ ಮೇಲೆ ಹಲ್ಲೆ, ಕೇಸರಿ ಶಾಲು ಧರಿಸಿದ ಮಾತ್ರಕ್ಕೆ ಕೊಲೆ ಮಾಡುವುದು, ಲವ್ ಜಿಹಾದ್‌ಗೆ ಒಪ್ಪದ ಹೆಣ್ಣು ಮಕ್ಕಳ ಹತ್ಯೆ, ಕೆಫೆಯಲ್ಲಿ ಬಾಂಬ್ ಇಡುವುದು ಸೇರಿದಂತೆ ಹಲವಾರು ದೇಶ ವಿರೋಧಿ ಚಟುವಟಿಕೆ ನಡೆಸುವವರನ್ನು ಕಾಂಗ್ರೆಸ್ ರಕ್ಷಣೆ ಮಾಡುತ್ತಿದೆ. ಇವೆಲ್ಲವೂ ತಾಲಿಬಾನ್ ಸರ್ಕಾರದ ಮಾದರಿಯೇ ಎಂದು ಹೇಳಿದರು.

ಲೋಕಸಭಾ ಚುನಾವಣೆ 2024: ನನ್ನನ್ನ ಸೋಲಿಸುವ ಶಕ್ತಿ ಸಿದ್ದುಗೂ ಇಲ್ಲ, ಡಿಕೆಶಿಗೂ ಇಲ್ಲ, ಕುಮಾರಸ್ವಾಮಿ

ಕೆಫೆಯಲ್ಲಿ ಬಾಂಬ್ ಇಟ್ಟ ಆರೋಪಿಗಳನ್ನು ಎನ್‌ಐಎ ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಅವರು ಐಸಿಸ್ ಸಹಯೋಗದೊಂದಿಗೆ ಇಂಡಿಯನ್ ಮುಜಾಹಿದ್ ಸಂಘಟನೆಯ ಬೆಂಬಲ ಪಡೆದು ಭಯೋತ್ಪಾದಕ ಕೃತ್ಯವೆಸಗಲು ದೊಡ್ಡ ಮಟ್ಟದ ತಾಲೀಮು ನಡೆಸುತ್ತಿರುವುದು ಬೆಳಕಿಗೆ ಬಂದಿದೆ. ಇಂತಹ ದೇಶವಿರೋಧಿಗಳನ್ನು ಕಾಂಗ್ರೆಸ್ ಬೆಂಬಲಿಸಿ ಬೆಳೆಸುತ್ತಿದೆ ಎಂದು ತಿಳಿಸಿದರು.

ತಮ್ಮದೇ ಪಕ್ಷದ ಶಾಸಕ ಹಾಗೂ ಕಾರ್ಪೋರೇಟರ್ ಮಗಳ ಬದುಕಿಗೆ ರಕ್ಷಣೆ ಕೊಡಲಾಗದ ಕಾಂಗ್ರೆಸ್ ಸರ್ಕಾರ ರಾಜ್ಯದ ಜನರನ್ನು ಹೇಗೆ ರಕ್ಷಣೆ ಮಾಡುತ್ತದೆ. ಇವರನ್ನು ಹೀಗೆಯೇ ಬಿಟ್ಟರೆ ಜನರಿಗೆ ಚಟ್ಟದ ಭಾಗ್ಯ ಸಿಗಲಿದೆ ಎಂದು ಆತಂಕದಿಂದ ನುಡಿದರು.

ಜೆಡಿಎಸ್-ಬಿಜೆಪಿ ಮೈತ್ರಿಯಿಂದ ಕಾಂಗ್ರೆಸ್ ಭಯಭೀತಗೊಂಡಿದೆ. ಸುಳ್ಳು, ಅಪಪ್ರಚಾರವನ್ನೇ ಚುನಾವಣಾ ಪ್ರಚಾರದ ಅಸ್ತ್ರ ಮಾಡಿಕೊಂಡಿದೆ. ನಾವು ನೀತಿಯ ಆಧಾರದ ಮೇಲೆ ಆಡಳಿತ ನಡೆಸುವುದಾಗಿ ಹೇಳಿದರೆ, ಅವರು ಜಾತಿಯ ಆಧಾರದ ಮೇಲೆ ಪ್ರಶ್ನೆ ಮಾಡುತ್ತಿವೆ. ನೀತಿ, ನೇತೃತ್ವ, ನೀಯತ್ತು ಈ ಮೂರು ಸಂಗತಿಗಳಲ್ಲಿ ಬಿಜೆಪಿ ಜನರ ಮನಸ್ಸನ್ನು ಗೆಲ್ಲಲು ಹೊರಟಿದ್ದರೆ ಕಾಂಗ್ರೆಸ್ ಕೇವಲ ಚುನಾವಣೆ ಗೆಲ್ಲುವ ಕುತಂತ್ರಕ್ಕಷ್ಟೇ ಸೀಮಿತವಾಗಿದೆ ಎಂದು ಹೇಳಿದರು. ಗೋಷ್ಠಿಯಲ್ಲಿ ಡಾ.ಎನ್.ಎಸ್.ಇಂದ್ರೇಶ್, ಸಿ.ಪಿ.ಉಮೇಶ್, ಅಶೋಕ್ ಜಯರಾಂ, ವಸಂತ, ಅರುಣ್‌ಕುಮಾರ್, ಸಿ.ಟಿ.ಮಂಜುನಾಥ್ ಹಾಜರಿದ್ದರು.

click me!