ಉತ್ತರ ಕನ್ನಡ ಜಿಲ್ಲೆಯ ಆರೂ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು: ಸಚಿವ ಮುರುಗೇಶ್‌ ನಿರಾಣಿ

By Kannadaprabha NewsFirst Published Mar 20, 2023, 8:22 PM IST
Highlights

ರಾಜ್ಯದ ವಿಧಾನಸಭಾ ಚುನಾವಣೆ ಸನ್ನಿಹಿತವಾಗಿರುವ ಸಂದರ್ಭದಲ್ಲಿ ಬಿಜೆಪಿ ತನ್ನ 5 ವರ್ಷದ ಆಡಳಿತವನ್ನು ಆಧರಿಸಿ ಪುನಃ ಮತದಾರರ ಬಳಿ ತೆರಳಿ ಪಕ್ಷದ ಗೆಲುವಿಗಾಗಿ ಮತ ಯಾಚಿಸುತ್ತಿದೆ. 

ಯಲ್ಲಾಪುರ (ಮಾ.20): ರಾಜ್ಯದ ವಿಧಾನಸಭಾ ಚುನಾವಣೆ ಸನ್ನಿಹಿತವಾಗಿರುವ ಸಂದರ್ಭದಲ್ಲಿ ಬಿಜೆಪಿ ತನ್ನ 5 ವರ್ಷದ ಆಡಳಿತವನ್ನು ಆಧರಿಸಿ ಪುನಃ ಮತದಾರರ ಬಳಿ ತೆರಳಿ ಪಕ್ಷದ ಗೆಲುವಿಗಾಗಿ ಮತ ಯಾಚಿಸುತ್ತಿದೆ. ಈಗಾಗಲೇ ಜಿಲ್ಲೆಯ 5 ಕ್ಷೇತ್ರಗಳಲ್ಲಿ ಪಕ್ಷದ ಶಾಸಕರು ಆಡಳಿತ ನಡೆಸುತ್ತಿದ್ದು ಮುಂಬರುವ ಚುನಾವಣೆಯಲ್ಲಿ ಜಿಲ್ಲೆಯ ಆರೂ ಕ್ಷೇತ್ರಗಳಲ್ಲಿ ಬಿಜೆಪಿ ಖಂಡಿತ ವಿಜಯ ಪತಾಕೆ ಹಾರಿಸುತ್ತದೆ ಎಂದು ಬೃಹತ್‌ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ವಿಶ್ವಾಸ ವ್ಯಕ್ತಪಡಿಸಿದರು. ಅವರು ಬಿಜೆಪಿ ವಿಜಯ ಸಂಕಲ್ಪ ರಥಯಾತ್ರೆಯಲ್ಲಿ ಮಾತನಾಡಿದರು.

ಅನೇಕ ವರ್ಷಗಳ ಕಾಲ ಕಾಂಗ್ರೆಸ್‌ ದುರಾಡಳಿತದ ಫಲವಾಗಿ ರಾಜ್ಯದಲ್ಲಿ ಉಂಟಾದ ವಿವಿಧ ಅನಾಹುತಗಳು ಜನತೆಯನ್ನು ಕಂಗೆಡಿಸಿರುವುದು ಖಂಡನಾರ್ಹ. ಇಂತಹ ಸಂದರ್ಭದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದ ಬಿಜೆಪಿ ಸಾರ್ವಜನಿಕರ ಹಾಗೂ ಎಲ್ಲ ವರ್ಗದ ಜನತೆಯ ಆಶೋತ್ತರಗಳನ್ನು ಮನಗಂಡು ಅಸಂಖ್ಯಾತ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದೆ. ಇದೇ ಹಿನ್ನೆಲೆಯಲ್ಲಿ ಜನರು ಪಕ್ಷದ ಕುರಿತು ತೋರುತ್ತಿರುವ ಒಲವು ಈ ಬಾರಿಯ ನಮ್ಮ ಪಕ್ಷದ ಗೆಲುವಿಗೆ ಖಂಡಿತ ಕಾರಣವಾಗಲಿದೆ ಎಂದರು.

ಸಿದ್ದರಾಮಯ್ಯ ಗೆದ್ದ ಕ್ಷೇತ್ರಕ್ಕೆ ಒಳ್ಳೆಯದನ್ನ ಮಾಡಲಿ: ಸಚಿವ ಮುರುಗೇಶ್‌ ನಿರಾಣಿ

ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್‌ ಮಾತನಾಡಿ, ಚುನಾವಣೆ ಎದುರಿಸಲು ನಮ್ಮ ಪಕ್ಷದ ಸೈನಿಕರು ಸನ್ನದ್ಧರಾಗಿದ್ದಾರೆ. ನಮಗೆ ಇಡೀ ರಾಜ್ಯದ ಎಲ್ಲ ಕ್ಷೇತ್ರಗಳಲ್ಲಿಯೂ ನಮ್ಮ ಪಕ್ಷವೇ ಗೆಲುವು ಸಾಧಿಸುವುದೆಂಬ ವಿಶ್ವಾಸ, ನಂಬಿಕೆಗಳಿವೆ. ನಮ್ಮ ನಾಡಿನ ಎಲ್ಲ ವರ್ಗದ ಜನರ ವಿಶೇಷವಾಗಿ ಬಡವರಾದ ರೈತರು ಮತ್ತು ಕಾರ್ಮಿಕರಿಗೆ ನೆರವಾಗುವ ವಿವಿಧ ಯೋಜನೆಗಳನ್ನು ಬಿಜೆಪಿ ಜಾರಿಗೊಳಿಸಿದ್ದು, ಇದು ನಮ್ಮ ಗೆಲುವಿಗೆ ಕಾರಣವಾಗಲಿದೆ ಎಂದರು.

ಪಂಚಾಯತ್‌ ರಾಜ್‌ ವಿಕೇಂದ್ರೀಕರಣ ಸಮಿತಿ ಉಪಾಧ್ಯಕ್ಷ ಪ್ರಮೋದ ಹೆಗಡೆ ಮಾತನಾಡಿ, ಮುಂಬರುವ ಚುನಾವಣೆಯಲ್ಲಿ ಬಿಜೆಪಿ ತನ್ನ ಸಾಧನೆಗಳನ್ನು ಆಧರಿಸಿ ಮತ ಯಾಚಿಸುತ್ತದೆ. ಕಾಂಗ್ರೆಸ್‌ ದೂಷಣೆಗಳ ಪಕ್ಷವಾಗಿದ್ದರೆ, ಬಿಜೆಪಿ ಆಚರಣೆಗಳ ಪಕ್ಷವೆಂಬುದನ್ನು ಪ್ರತಿಯೋರ್ವ ಮತದಾರರೂ ಮನಗಂಡಿದ್ದಾರೆ ಎಂದರು.

ಅಂಕೋಲಾದಲ್ಲಿ ವಿಜಯ ಸಂಕಲ್ಪ ಯಾತ್ರೆಯನ್ನು ನೋಡಿದರೆ ರೂಪಾಲಿ ಮತ್ತೆ ಗೆಲ್ಲುವುದು ಖಚಿತ: ಸಚಿವ ಮುರುಗೇಶ್ ನಿರಾಣಿ

ವಿಭಾಗ ಸಹ ಪ್ರಭಾರಿ ಎನ್‌.ಎಸ್‌. ಹೆಗಡೆ, ರಥಯಾತ್ರೆ ಮುಖ್ಯಸ್ಥ ರವೀಂದ್ರನಾಥ ಡಬ್ಲಿ ಮಾತನಾಡಿದರು. ಬಿಜೆಪಿ ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ, ಪ್ರಮುಖರಾದ ಕೆ.ಜಿ. ನಾಯ್ಕ, ಗೋಪಾಲಕೃಷ್ಣ ಗಾಂವ್ಕರ, ಉಮೇಶ ಭಾಗ್ವತ, ಗಣಪತಿ ಮಾನಿಗದ್ದೆ, ರಾಜೇಂದ್ರ ನಾಯ್ಕ ಇದ್ದರು. ಗ್ರಾಮದೇವಿ ದೇವಸ್ಥಾನದ ಎದುರಿಗೆ ರಥಯಾತ್ರೆಗೆ ಚಾಲನೆ ನೀಡಲಾಯಿತು. ಬಸವೇಶ್ವರ ವೃತ್ತದ ಮೂಲಕ ಅಂಕೋಲಾಕ್ಕೆ ತೆರಳುವ ರಥವನ್ನು ಸಂಕಲ್ಪದ ಬಳಿ ಬೀಳ್ಕೊಡಲಾಯಿತು.

click me!