
ಹುಬ್ಬಳ್ಳಿ,(ಆಗಸ್ಟ್.02): ಬಿಜೆಪಿಯವರೇ ಎಸ್.ಡಿ.ಪಿ.ಐ ಮತ್ತು ಪಿಎಫ್ಐ ಸಾಕಿಕೊಂಡಿರುವ ಸಂಘಟನೆಗಳು ಎಂದು ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಇಂದು(ಮಂಗಳವಾರ) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಯಾರಿಗೂ ರಕ್ಷಣೆ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ನಾವು ಹೇಳೋದಲ್ಲ, ಸ್ವತಹ ಬಿಜೆಪಿ ಮುಖಂಡರೇ ಹೇಳ್ತಿದಾರೆ. ಪಿಎಫ್ಐ , ಎಸ್.ಡಿ.ಪಿ.ಐ ಗಳ ಬಗ್ಗೆ ಆಧಾರಗಳಿದ್ದಲ್ಲಿ ಬ್ಯಾನ್ ಮಾಡಲಿ. ನಾವ್ಯಾರು ಬೇಡ ಅಂದಿಲ್ಲ ಎಂದು ಸ್ಪಷ್ಟಪಡಿಸಿದರು.
ಯಾರದೇ ಆದ್ರೂ ಪ್ರಾಣವೇ. ಪದೇ ಪದೆ ಕೊಲೆಗಳ ನಡೆದರೆ ಅದನ್ನು ನೋಡಿಕೊಂಡು ಕೊಡೋಕೆ ಆಗಲ್ಲ. ಈ ಎರಡು ಸಂಘಟನೆಗಳ ನಿಷೇಧದ ಬಗ್ಗೆ ಬಿಜೆಪಿಯವರು ಮಾತಾಡ್ತಾರೆ. ಆದ್ರೆ ಸಂಘಟನೆಗಳನ್ನು ನಿಷೇಧ ಯಾಕೆ ಮಾಡ್ತಿಲ್ಲ? ಬಿಜೆಪಿಯವರೇ ಸಾಕಿಕೊಂಡಿರೊ ಸಂಘಟನೆಗಳು ಇವಾಗಿವೆ. ಮತ ವಿಭಜನೆಗಾಗಿ ಈ ಸಂಘಟನೆಗಳನ್ನು ಸಾಕಿಕೊಂಡಿದ್ದಾರೆ. ಹೀಗಾಗಿಯೇ ಯಾವುದೇ ಕಠಿಣ ಕ್ರಮ ಕೈಗೊಳ್ಳುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.
ಸಿದ್ದರಾಮೋತ್ಸವಕ್ಕೆ ಮಲ್ಲಿಕಾರ್ಜುನ ಖರ್ಗೆ, ಮುನಿಯಪ್ಪ ಗೈರು, ಕಾರಣ ಕೊಟ್ಟ ಸಿದ್ದರಾಮಯ್ಯ
ಸಿಎಂ ಒಂದು ವರ್ಗಕ್ಕೆ ಸೀಮಿತವಾಗಬಾರದು. ನಾನು ಸಿಎಂ ಆಗಿದ್ದಾಗ 23 ಜನ ಸಾವನ್ನಪ್ಪಿದ್ದರು. ಈ ಪೈಕಿ 11 ಜನ ಹಿಂದೂಗಳು, 12 ಜನ ಮುಸ್ಲಿಂರು ಸಾವನ್ನಪ್ಪಿದ್ರು. ಕೊಲೆ ಆದವರಿಗೆ ನಾವು ಪರಿಹಾರ ಕೊಟ್ಟಿರಲಿಲ್ಲ. ಆದರೆ ಈ ಪರಂಪರೆ ಹುಟ್ಟು ಹಾಕಿದವರೆ ಬಿಜೆಪಿಯವರು. ಆದರೆ ಪರಿಹಾರ ಕೊಡುವಲ್ಲಿಯೂ ತಾರತಮ್ಯ ಮಾಡ್ತಿದಾರೆ. ಕೊಲೆಯಾದ ಹಿಂದುಗಳಿಗಷ್ಟೇ ಪರಿಹಾರ ಕೊಟ್ಟು, ಮುಸ್ಲಿಮರಿಗೆ ಕೈಬಿಡುತ್ತಿದ್ದಾರೆ. ಜನರ ತೆರಿಗೆ ಹಣ ಪರಿಹಾರ ರೂಪದಲ್ಲಿ ಕೊಡ್ತಿರುವಾಗ ಹೀಗೆ ತಾರತಮ್ಯ ಮಾಡುವುದು ಸರಿಯಲ್ಲ. ಸಿಎಂ ಮಾಡ್ತಿರೋದು ರಾಜಧರ್ಮ ಅನ್ನೋಕೆ ಆಗುತ್ತಾ..? ನಾಳೆಯೇ ಚುನಾವಣೆ ನಡೆದ್ರೂ ಕಾಂಗ್ರೆಸ್ ಗೆಲ್ಲುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ದಾವಣಗೆರೆಯಲ್ಲಿ ನಡೆಯುತ್ತಿರುವುದು ಸಿದ್ಧರಾಮೋತ್ಸವ ಅಲ್ಲ. ಯಾವುದೋ ವ್ಯಕ್ತಿಯನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಪ್ರೊಜೆಕ್ಟ್ ಮಾಡಲು ಮಾಡ್ತಿಲ್ಲ. ಇದೇನಿದ್ದರೂ ಹುಟ್ಟುಹಬ್ಬದ ಅಮೃತ ಮಹೋತ್ಸವ. ಅದನ್ನು ತಪ್ಪಾಗಿ ಅರ್ಥೈಸಿಕೊಂಡರೆ ನಾವೇನು ಮಾಡೋಕೆ ಆಗಲ್ಲ. ಅಭಿಮಾನಿಗಳೆಲ್ಲರೂ ಒಟ್ಟುಗೂಡಿ ಈ ಕಾರ್ಯಕ್ರಮ ಮಾಡ್ತಿದಾರೆ. ನಾನು ಸಹ ಅದರಲ್ಲಿ ಭಾಗಿಯಾಗಲಿದ್ದೇನೆ ಎಂದರು.
ನಾಳೆ ಚುನಾವಣೆ ನಡೆದ್ರೆ ಕಾಂಗ್ರೆಸ್ ಅಧಿಕಾರಕ್ಕೆ.
ಜನ ಚುನಾವಣೆಗಾಗಿ ಕಾಯುತ್ತಿದ್ದಾರೆ. ನಾಳೆಯೇ ಚುನಾವಣೆ ನಡೆದ್ರೆ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ. ರಾಹುಲ್ ಗಾಂಧಿ ನೇತೃತ್ವದಲ್ಲಿ ರಾಜಕೀಯ ವ್ಯವಹಾರ ಸಮಿತಿ ಸಭೆ ನಡೆಯಲಿದೆ. ಪ್ರಸಕ್ತ ರಾಜಕೀಯ ವಿದ್ಯಮಾನಗಳ ಬಗ್ಗೆ ಚರ್ಚೆಯಾಗಲಿದೆ. ಮಲ್ಲಿಕಾರ್ಜುನ ಖರ್ಗೆ, ಕೆ.ಎಚ್.ಮುನಿಯಪ್ಪ ಬರುತ್ತಿಲ್ಲ. ಮುನಿಯಪ್ಪ ಹುಷಾರಿಲ್ಲ, ಖರ್ಗೆಯವರು ಹೆರಾಲ್ಡ್ ಪತ್ರಿಕೆ ದಾಳಿ ಕಾರಣಕ್ಕೆ ದೆಹಲಿಯಲ್ಲಿ ಬ್ಯೂಸಿ ಇದ್ದಾರೆ. ಅವರು ರಾಹುಲ್ ಗಾಂಧಿ ಜೊತೆ ಬರಬೇಕಿತ್ತು. ಮುನಿಯಪ್ಪಗೆ ಡೆಂಗ್ಯೂ ಜ್ವರ ಬಂದಿದೆ ಅಂತ ಕರೆ ಮಾಡಿ ತಿಳಿಸಿದ್ದಾರೆ.
ಡಿ.ಕೆ ಶಿವಕುಮಾರ್ ರೆಗ್ಯೂಲರ್ ಬೇಲ್ ಸಿಕ್ಕಿದ್ದು ನಿರೀಕ್ಷಿತ. ಇದು ಸಿದ್ದರಾಮೋತ್ಸ ಅಲ್ಲ, ಇದು ಅಮೃತೋತ್ಸವ. 75 ವರ್ಷ ತುಂಬಿದಾಗ ಏನಂತ ಕರೆಯೋದು? ನಮ್ಮ ಸ್ನೇಹಿತರು, ಹಿತೈಷಿಗಳು ಸೇರಿಕೊಂಡು ಆಚರಿಸುತ್ತಿದ್ದಾರೆ. ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ- ಎಂಬುದು ಮಾಧ್ಯಮಗಳ ಸೃಷ್ಟಿ. ಅಭಿಮಾನಿಗಳ ಅಲ್ಬಂ ಸಾಂಗ್ ಬಗ್ಗೆ ನನಗೆ ಗೊತ್ತಿಲ್ಲ. ನಮ್ಮದು ಯಾವುದೇ ಬಣ ಇಲ್ಲ, ನಮ್ಮದು ಒಂದೇ ಬಣ, ಅದು ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಬಣ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.