
ವರದಿ: ಭರತ್ ರಾಜ್, ಏಷ್ಯಾನೆಟ್ ಸುವರ್ಣ ನ್ಯೂಸ್, ಮಂಗಳೂರು
ಮಂಗಳೂರು(ಆ.10): ನಮ್ಮ ಪಕ್ಷದ ಮುಖ್ಯಮಂತ್ರಿ ಯಾರಿರಬೇಕು ಅಂತ ಪಕ್ಷ ಮತ್ತು ರಾಷ್ಟ್ರೀಯ ನಾಯಕರು ನಿರ್ಧರಿಸ್ತಾರೆ. ನಮ್ಮ ರಾಷ್ಟ್ರೀಯ ನಾಯಕರ ತಂಡ ಈ ಬಗ್ಗೆ ಸ್ಪಷ್ಟ ಸಂದೇಶ ಕೊಟ್ಟಿದೆ. ಬೊಮ್ಮಾಯಿಯವರೇ ಪೂರ್ಣಾವಧಿ ಮುಖ್ಯಮಂತ್ರಿ ಅಂತ ಸಂದೇಶ ಕೊಟ್ಟಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಇಂದು(ಬುಧವಾರ) ನಗರದಲ್ಲಿ ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಯಾವುದೇ ಬದಲಾವಣೆ ಇಲ್ಲ ಅಂತ ರಾಷ್ಟ್ರೀಯ ನಾಯಕರು ಸ್ಪಷ್ಟ ಸಂದೇಶ ಕೊಟ್ಟಿದ್ದಾರೆ. ಮುಂದಿನ ಚುನಾವಣೆ ಬೊಮ್ಮಾಯಿ ನೇತೃತ್ವದಲ್ಲಿ, ಯಡಿಯೂರಪ್ಪ ಮಾರ್ಗದರ್ಶನದಲ್ಲಿ ನಡೆಯಲಿದೆ. ಸಿದ್ದರಾಮೋತ್ಸವದ ಮೂಲಕ ಕಾಂಗ್ರೆಸ್ ಒಳಬೇಗುದಿ ಜಾಸ್ತಿಯಾಗಿದೆ. ಸಿದ್ದರಾಮಯ್ಯ ಶಕ್ತಿ ಪ್ರದರ್ಶನಕ್ಕಾಗಿ ಜನ ಸೇರಿಸಿ ಜಾತ್ರೆ ಮಾಡಿದ್ದಾರೆ. ಕೋಳಿವಾಡ ಏಕವಚನದಲ್ಲೇ ಇದಕ್ಕೆ ಉತ್ತರ ಕೊಟ್ಟಿದ್ದಾರೆ. ಖರ್ಗೆ ಕಾರ್ಯಕ್ರಮಕ್ಕೆ ಬಾರದೇ ತನ್ನ ಅತೃಪ್ತಿ ತೋರಿಸಿದ್ದಾರೆ. ಡಿಕೆಶಿ ಅನಿವಾರ್ಯವಾಗಿ ಹೋದರೂ ಸಿದ್ದರಾಮಯ್ಯ ಅಪ್ಪಿಕೊಳ್ಳಲು ರಾಹುಲ್ ಸೂಚನೆ ಕೊಟ್ಟರು. ಮುಂದಿನ ಕಾಂಗ್ರೆಸ್ ಮುಖ್ಯಮಂತ್ರಿ ಯಾರು ಎಂಬ ಗೊಂದಲ ಅವರಲ್ಲಿ ಇದೆ ಅಂತ ಲೇವಡಿ ಮಾಡಿದ್ದಾರೆ.
ಸಿಎಂ ಬೊಮ್ಮಾಯಿ ಬಗ್ಗೆ ಹರಡೋ ವದಂತಿಯನ್ನು ಬಹುತೇಕರು ಯಾಕೆ ಅಷ್ಟು ಬೇಗ ನಂಬುತ್ತಾರೆ?
ಈಗಾಗಲೇ ನಾಲ್ಕೈದು ಜನ ಎದ್ದು ಕೂತಿದ್ದು, ಕಾಂಗ್ರೆಸ್ ಕಾರ್ಯಕರ್ತರು ಗೊಂದಲದಲ್ಲಿ ಇದಾರೆ. ಇದನ್ನ ಮುಚ್ಚಿ ಹಾಕಲು ಇಂಥಹ ಸುಳ್ಳು ಸುದ್ದಿ ಹರಿ ಬಿಡಲಾಗಿದೆ. ಸೋನಿಯಾ, ರಾಹುಲ್ ಇಡಿ ತನಿಖೆ ಎಲ್ಲವೂ ಇದಕ್ಕೆ ಕಾರಣ. ಕಾಂಗ್ರೆಸ್ ಹಗರಣಗಳು ಬಯಲಿಗೆ ಬರ್ತಾ ಇದ್ದು, ಕಾಂಗ್ರೆಸ್ ಜನರನ್ನ ಹಾದಿ ತಪ್ಪಿಸ್ತಿದೆ. ಅದರ ತಂತ್ರಗಾರಿಕೆ ಭಾಗವಾಗಿ ಈ ಸುದ್ದಿ ಹಬ್ಬಿಸಲಾಗಿದೆ. ಕಾಂಗ್ರೆಸ್ ಈಗ ಆತಂಕದಲ್ಲಿದ್ದು, ಅವರಲ್ಲಿ ಜಗಳವಿದೆ, ನಮ್ಮಲ್ಲಿ ಇಲ್ಲ. ಖರ್ಗೆ, ಪರಮೇಶ್ವರ್ ದಲಿತ ಸಿಎಂ ರೇಸ್ನಲ್ಲಿದ್ದಾರೆ. ಸಿದ್ದರಾಮಯ್ಯ ಇವತ್ತು ಡಿಕೆಶಿ ಮೇಲಿನ ಅಸಮಾಧಾನ ಹೊರ ಹಾಕಿದ್ದಾರೆ. ಸಿದ್ದರಾಮಯ್ಯ ಮೊನ್ನೆ ಡಿಕೆಶಿ ವಿರುದ್ಧ ಶಕ್ತಿ ಪ್ರದರ್ಶನ ಮಾಡಿದ್ರು. ಉತ್ತರ ಕರ್ನಾಟಕ ಭಾಗದಲ್ಲಿ ನಾನೇ ಅಂತ ತೋರಿಸಿದ್ದಾರೆ. ಇವತ್ತು ಡಿಕೆಶಿ ಮೂಲೆಗುಂಪಾಗ್ತಾ ಇದಾರೆ. ಕಾಂಗ್ರೆಸ್ನ ಹೆಚ್ಚಿನ ಶಾಸಕರು ಸಿದ್ದರಾಮಯ್ಯ ಜೊತೆ ಇದಾರೆ, ಡಿಕೆಶಿ ಜೊತೆ ಇಲ್ಲ. ಡಿಕೆಶಿ ಈಗ ತನ್ನ ಶಕ್ತಿ ಪ್ರದರ್ಶನಕ್ಕೆ ಇಂಥಹ ತಂತ್ರ ಬಳಸ್ತಾ ಇದಾರೆ. ಹೀಗಾಗಿ ಸಿದ್ದರಾಮಯ್ಯ ಅದಕ್ಕೆ ಸ್ಪಷ್ಟ ಉತ್ತರ ಕೊಟ್ಟು ತನ್ನ ಅಸಮಾಧಾನ ಹೊರ ಹಾಕಿದ್ದಾರೆ ಎಂದರು.
'ಕಾಂಗ್ರೆಸ್ ಭಾರತ್ ಜೋಡೋ ಬದಲು ಕಾಂಗ್ರೆಸ್ ಜೋಡೋ ಮಾಡಲಿ'
ಕಾಂಗ್ರೆಸ್ನ ಭಾರತ್ ಜೋಡೋ ಯಾತ್ರೆ ಬಗ್ಗೆ ನಳಿನ್ ಕುಮಾರ್ ಕಟೀಲ್ ವ್ಯಂಗ್ಯವಾಡಿದ್ದಾರೆ. ಭಾರತವನ್ನ ಒಡೆದದ್ದು, ವಿಭಜನೆಗೆ ಕಾರಣ ಕಾಂಗ್ರೆಸ್. ಸ್ವಾತಂತ್ರ್ಯ ನಂತರ ಚೀನಾಕ್ಕೆ ಭಾರತದ ಭಾಗ ಕೊಟ್ಟಿದ್ದು ಕಾಂಗ್ರೆಸ್. ಜಾತಿ ಜಾತಿಗಳ ಹೆಸರಿನಲ್ಲಿ ಒಡೆದು ಆಳಿದ್ದು ಕಾಂಗ್ರೆಸ್. ಇಡೀ ದೇಶವನ್ನು ಧರ್ಮ, ಮತಗಳ ಹೆಸರಿನಲ್ಲಿ ಒಡೆದ ಇವರು ಭಾರತ್ ಜೋಡೋ ಏನ್ ಮಾಡ್ತಾರೆ. ಮೊದಲು ಇವರು ಕಾಂಗ್ರೆಸ್ ಜೋಡೋ ಮಾಡಲಿ, ಜನರು ಕಾಂಗ್ರೆಸ್ ಚೋಡೋ ಮಾಡ್ತಿದಾರೆ. ಕರ್ನಾಟಕದ ಕಾಂಗ್ರೆಸನ್ನ ಒಂದು ಮಾಡಲು ರಾಹುಲ್ ಗಾಂಧಿಗೆ ಆಗುತ್ತಾ? ಪಾದಯಾತ್ರೆ ಮಾಡುವ ಮೊದಲು ಕಾಂಗ್ರೆಸ್ ಜಗಳ ಸರಿ ಮಾಡಿ ಅವರನ್ನು ಒಂದು ಮಾಡಲಿ. ರಾಷ್ಟ್ರದಲ್ಲಿ ಕಾಂಗ್ರೆಸ್ ಮೂರು ತುಂಡಾಗಿದೆ, ಹಿರಿಯರು ಹೊರಗೆ ಹೋಗಿದ್ದಾರೆ. ಇದನ್ನ ಜೋಡಿಸಲಾಗದ ಕಾಂಗ್ರೆಸ್ ದೇಶವನ್ನು ಏನು ಜೋಡಿಸೋದು ಅಂತ ಪ್ರಶ್ನಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.