
ಮೈಸೂರು (ಜ.31): ಕುಂಭಮೇಳ ಟೀಕಿಸುತ್ತಿರುವ ಕಾಂಗ್ರೆಸ್ನವರು ಅಯೋಗ್ಯರು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ. ಗುರುವಾರ ಇಲ್ಲಿ ಸುದ್ದಿಗಾರರೊಡನೆ ಮಾತನಾಡಿ, 144 ವರ್ಷದ ನಂತರ ನಡೆಯುತ್ತಿರುವ ಕುಂಭಮೇಳ ಕುರಿತಂತೆ ಕಾಂಗ್ರೆಸ್ನವರು ಬಾಯಿಗೆ ಬಂದಂತೆ ಟೀಕಿಸುತ್ತಿದ್ದಾರೆ. ಹಿಂದುಗಳ ಭಾವನೆಗೆ ಧಕ್ಕೆ ತರುವುದೇ ಕಾಂಗ್ರೆಸ್ ಉದ್ದೇಶ ಎಂದು ಟೀಕಿಸಿದರು. ಇದೇ ವೇಳೆ, ಕುಂಭಮೇಳದಲ್ಲಿ ಕಾಲ್ತುಳಿತ ಘಟನೆ ನಡೆಯಬಾರದಿತ್ತು. ಮೃತ ಕುಟುಂಬಕ್ಕೆ ಸಾಂತ್ವನ ಹೇಳುತ್ತೇನೆ ಎಂದು ಅವರು ತಿಳಿಸಿದರು.
ಇದೇ ವೇಳೆ, ಸಚಿವ ಸಂತೋಷ್ ಲಾಡ್ ವಿರುದ್ಧ ಹರಿಹಾಯ್ದ ವಿಜಯೇಂದ್ರ, ಪ್ರಧಾನಿಯನ್ನು ಟೀಕಿಸಲು ಸಂತೋಷ್ ಲಾಡ್ ಯಾರು? ಎಂದು ಏಕವಚನದಲ್ಲಿಯೇ ತರಾಟೆಗೆ ತೆಗೆದುಕೊಂಡರು. ಬಾಯಿಗೆ ಬಂದಂತೆ ಮಾತನಾಡಿದರೆ ನಡೆಯುತ್ತದೆ ಅಂದುಕೊಂಡಿದ್ದಾರೆ. ಇವರು ಟೀಕೆ ಮಾಡಿದ ತಕ್ಷಣ ಪ್ರಧಾನಮಂತ್ರಿಯ ಬೆಲೆ ಕಡಿಮೆ ಆಗುವುದಿಲ್ಲ. ಹಾದಿ ಬೀದಿಯಲ್ಲಿ ಇಂತವರು ಮಾತನಾಡುವುದರಿಂದ ಪ್ರಧಾನಿ ಘನತೆಗೆ ಏನೂ ಚ್ಯುತಿ ಬರುವುದಿಲ್ಲ ಎಂದರು.
ಮುಡಾ ಕೇಸಲ್ಲಿ ಲೋಕಾಯುಕ್ತ ಕ್ಲೀನ್ ಚಿಟ್ ನೀಡಿದ್ರೆ ಹೋರಾಟ: ವಿಜಯೇಂದ್ರ
ಸಿಎಂಗೆ ಆಘಾತ: ಮುಡಾ(ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ) ಹಗರಣದಲ್ಲಿ ಮುಖ್ಯಮಂತ್ರಿಗಳಿಗೆ ಬಹಳ ದೊಡ್ಡ ಹಿನ್ನಡೆಯಾಗಿದ್ದು, ಶೀಘ್ರದಲ್ಲೇ ಬಿ ರಿಪೋರ್ಟ್ ಹಾಕಿಸಿಕೊಂಡು ಪ್ರಕರಣ ಮುಚ್ಚಿ ಹಾಕುವ ಪ್ರಯತ್ನದಲ್ಲಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ದೊಡ್ಡ ಆಘಾತವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕಿಡಿಕಾರಿದ್ದಾರೆ. ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿ, ನೋಟಿಸ್ ಕೊಡದಿದ್ದರೂ ಸಿದ್ದರಾಮಯ್ಯನವರ ಬಾಮೈದ ಮೈಸೂರಿನ ಲೋಕಾಯುಕ್ತ ಕಚೇರಿಗೆ ರಾತ್ರಿ 8-9 ಗಂಟೆಗೆ ಭೇಟಿ ಕೊಡುತ್ತಿದ್ದರು. ಮುಖ್ಯಮಂತ್ರಿಗಳ ಕುಟುಂಬಕ್ಕೆ ಎಷ್ಟು ಮುಕ್ತ ವ್ಯವಸ್ಥೆ ಇತ್ತೆಂದು ಈ ಮೂಲಕ ಬಹಿರಂಗವಾಗಿದೆ ಎಂದು ಟೀಕಿಸಿದರು.
ಸಿಎಂಗೆ ಆಘಾತ: ಮುಡಾ ಹಗರಣದ ವಿಷಯದಲ್ಲಿ ಬಿಜೆಪಿ-ಜೆಡಿಎಸ್ ಪಕ್ಷ ಒಟ್ಟಾಗಿ ಪಾದಯಾತ್ರೆ ನಡೆಸಿದವು. ನಮ್ಮ ಹೋರಾಟದ ಪರಿಣಾಮವಾಗಿ ಮುಖ್ಯಮಂತ್ರಿಗಳ ಪತ್ನಿ 14 ನಿವೇಶನ ಹಿಂತಿರುಗಿಸುತ್ತೇವೆ ಎಂದು ರಾತ್ರೋರಾತ್ರಿ ಮುಡಾಗೆ ಪತ್ರ ಬರೆದಿದ್ದರು. ಆ ಪತ್ರದ ಮೂಲಕ ಮೂಲಕ ಹಗರಣದಿಂದ ಹೊರಕ್ಕೆ ಬಂದ ಭ್ರಮೆಯಲ್ಲಿ ಮುಖ್ಯಮಂತ್ರಿಗಳಿದ್ದರು. ಆದರೆ, ಇದೀಗ ಇ.ಡಿ ನೋಟಿಸ್ನಿಂದಾಗಿ ಆಘಾತವಾಗಿರುವುದರಲ್ಲಿ ಎರಡು ಮಾತಿಲ್ಲ ಎಂದು ತಿಳಿಸಿದರು.
ಬಿಜೆಪಿ ಸಭೇಲಿ 80% ನಾಯಕರ ಬೆಂಬಲ ನನಗೆ ಸಿಕ್ಕಿದೆ: ವಿಜಯೇಂದ್ರ
ಇ.ಡಿಗೆ ಅದರದ್ದೇ ಆದ ನಿಯಮಗಳಿರುತ್ತವೆ. ಅದರ ಪ್ರಕಾರ ಸಂಸ್ಥೆ ಮುಂದುವರೆಯುತ್ತದೆ. ಇ.ಡಿ ನೋಟಿಸ್ ರಾಜಕೀಯಪ್ರೇರಿತ ಎಂಬುದಕ್ಕಿಂತ ಹೆಚ್ಚಾಗಿ ಕಾಂಗ್ರೆಸ್ ಆಡಳಿತಾವಧಿಯಲ್ಲಿ ಬಡವರ ಪಾಲಾಗಬೇಕಾದ ಸಾವಿರಾರು ಕೋಟಿ ರು. ಮೌಲ್ಯದ ನಿವೇಶನಗಳ ಅಕ್ರಮ ಹಂಚಿಕೆ ನಡೆದಿತ್ತು. ಈ ದೊಡ್ಡ ಹಗರಣದ ಪರಿಣಾಮವನ್ನು ಮುಂದಿನ ದಿನಗಳಲ್ಲಿ ಎದುರಿಸಬೇಕಾಗುತ್ತದೆ. ಸಿದ್ದರಾಮಯ್ಯನವರು ಆತುರಾತುರವಾಗಿ ಲೋಕಾಯುಕ್ತ ಸಂಸ್ಥೆಯಿಂದ ಬಿ ರಿಪೋರ್ಟ್ ಪಡೆದು ಹಗರಣದಿಂದ ಹೊರಕ್ಕೆ ಬರಬಹುದೆಂಬ ಲೆಕ್ಕಾಚಾರದಲ್ಲಿದ್ದರು. ಆದರೆ, ಅವರ ಪತ್ನಿಗೂ ಇ.ಡಿ ನೋಟಿಸ್ ಕೊಟ್ಟು ತನಿಖೆಗೆ ಹಾಜರಾಗಲು ತಿಳಿಸಿದೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.