
ಚಿಕ್ಕಮಗಳೂರು (ಜೂ.02): ಕಾಂಗ್ರೆಸ್ ಪಕ್ಷ ಯಾವಾಗಲೂ ಮಾತಿಗೆ ತಪ್ಪಿಲ್ಲ, ನಮ್ಮ ಗ್ಯಾರಂಟಿ ಯೋಜನೆಗಳ ಬಗ್ಗೆ ಬಿಜೆಪಿಯವರು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವೆ ಮೋಟಮ್ಮ ಆರೋಪಿಸಿದ್ದಾರೆ. ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಪ್ರಧಾನಿ ದಿವಂಗತ ಇಂದಿರಾಗಾಂಧಿ ಕಾಲದಿಂದ ಇಲ್ಲಿಯವರೆಗೆ ಕಾಂಗ್ರೆಸ್ ಪಕ್ಷ ಕೊಟ್ಟಮಾತಿನಂತೆ ನಡೆದುಕೊಂಡು ಬರುತ್ತಿದೆ. ಬಡವರ ಪರವಾದ 20 ಅಂಶದ ಕಾರ್ಯಕ್ರಮಗಳು ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರು ಕೊಟ್ಟರು. ಶೇ. 33 ಮಹಿಳಾ ಮೀಸಲಾತಿ ಸೇರಿದಂತೆ ಎಲ್ಲಾ ಭರವಸೆಗಳನ್ನು ಈಡೇರಿಸುತ್ತಾ ಬಂದಿದೆ ಎಂದು ಹೇಳಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಕೇವಲ 15 ದಿನಗಳಾಗಿವೆ. ಚುನಾವಣೆ ಸಂದರ್ಭದಲ್ಲಿ ಕೊಟ್ಟಮಾತಿನಂತೆ ನಡೆದುಕೊಳ್ಳಲು ಪಕ್ಷ ಬದ್ದವಾಗಿದೆ ಎಂದರು.ಕಾಂಗ್ರೆಸ್ ಪಕ್ಷದ 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಲು ಮಾರ್ಗಸೂಚಿಗಳನ್ನು ರೂಪಿಸಬೇಕಾಗಿದೆ. ಯಾರಿಗೆ ಈ ಯೋಜನೆಗಳು ಅನ್ವಯವಾಗುತ್ತವೆ ಎಂಬ ಮಾನದಂಡಗಳ ಬಗ್ಗೆ ಪರಿಶೀಲಿಸ ಬೇಕು. ಈ ಪ್ರಕ್ರಿಯೆಗಳು ಆರಂಭವಾಗಿದ್ದು, ಜನರಿಗೆ ಯೋಜನೆ ತಲುಪಬೇಕಾದರೆ ಸ್ವಲ್ಪ ಕಾಲಾವಕಾಶ ಬೇಕಾಗುತ್ತದೆ. ರಾಜ್ಯದ ಜನರು ತಾಳ್ಮೆಯಿಂದ ಇದ್ದಾರೆ. ಆದರೆ, ಬಿಜೆಪಿಯವರು ಜನರನ್ನು ಪ್ರಚೋಧಿಸುವ ಮೂಲಕ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಭ್ರಷ್ಟಾಚಾರ ರಹಿತ ಆಡಳಿತಕ್ಕೆ ಸಹಕರಿಸಿ: ಶಾಸಕ ಸಿ.ಎಸ್.ನಾಡಗೌಡ
ಹಿಂದೆ ಸರ್ಕಾರ ರಚಿಸಿ ಆಡಳಿತ ನಡೆಸಿರುವಂತ ಹಿರಿಯ ರಾಜಕಾರಣಿಯಾಗಿರುವ ಸಿ.ಟಿ.ರವಿ ಅಂತಹವರು ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳ ಬಗ್ಗೆ ಜನರ ದಿಕ್ಕು ತಪ್ಪಿಸುವಂತೆ ಹೇಳಿಕೆ ನೀಡುತ್ತಿರುವುದು ಸಮಂಜಸವಲ್ಲ ಎಂದು ಹೇಳಿದರು. ಅಂತಾರಾಷ್ಟ್ರೀಯ ಕುಸ್ತಿಪಟುಗಳು ತಮಗಾಗಿರುವ ಲೈಂಗಿಕ ಕಿರುಕುಳದ ಬಗ್ಗೆ ಪ್ರತಿಭಟನೆ ನಡೆಸುತ್ತಾ ತಾವು ಪಡೆದ ಪದಕಗಳನ್ನು ನೀರಿಗೆ ಎಸೆಯಲು ಮುಂದಾಗಿದ್ದರು. ಈ ಬಗ್ಗೆ ಯಾರು ಚಕಾರವೆತ್ತುತ್ತಿಲ್ಲ ಇದು ಖಂಡನೀಯ ಎಂದರು. ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಪಕ್ಷದ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಶಭಾನ ಸುಲ್ತಾನ್ ಉಪಸ್ಥಿತರಿದ್ದರು.
ಋುಷಿಗಳ ತತ್ತ್ವ ಸಂದೇಶಗಳು ಮುಖ್ಯವಾಗಬೇಕು: ಋುಷಿ ಮೂಲಕ್ಕಿಂತ ಋುಷಿಗಳ ತತ್ತ್ವ ಸಂದೇಶಗಳು ಮುಖ್ಯವಾಗಬೇಕಿದೆ ಎಂದು ಹರಿಹರಪುರ ಮಠದ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ನುಡಿದರು. ಜಾವಳಿಯ ಶ್ರೀ ಹೇಮಾವತಿ ನದಿಮೂಲ ಮಹಾಗಣಪತಿ ಸ್ವಾಮಿ ಹಾಗೂ ನಾಗದೇವರ ಅಷ್ಟಬಂಧ ಪುನರ್ ಪ್ರತಿಷ್ಠಾಪನೆಯ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಶ್ರೀಗಳು ಆಶೀರ್ವಚನ ನೀಡಿ ಭಾರತೀಯ ಸಂಸ್ಕೃತಿಯಲ್ಲಿ ಅಪಾರವಾಗಿರುವ ಜ್ಞಾನವನ್ನು ಋುಷಿಗಳು ನಮಗೆ ಪರಂಪರೆಯಿಂದ ಕೊಟ್ಟಿದ್ದಾರೆ. ಆದರೆ, ಋುಷಿಗಳ ಮೂಲವನ್ನು ಹುಡುಕಬಾರದು ಎನ್ನುತ್ತಾರೆ. ಅವರ ಮೇಲಿರುವ ಪೂಜ್ಯ ಭಾವನೆ ಕಡಿಮೆಯಾಗಬಾರದು ಎಂಬ ಕಾರಣಕ್ಕೆ ಋುಷಿ ಮೂಲವನ್ನು ಹುಡುಕಬಾರದು ಎನ್ನುತ್ತಾರೆ ಎಂದರು.
ಪ್ರಪಂಚದಲ್ಲಿ ಎಲ್ಲಾ ಆಗು-ಹೋಗುಗಳು ಚೈತನ್ಯ ಸ್ವರೂಪಿಯಾದ ಭಗವಂತನ ಇಚ್ಛೆಯಂತೆ ನಡೆಯುತ್ತದೆ. ಭಕ್ತಿ ಶ್ರದ್ಧೆಯಿಂದ ಭಗವಂತನ ಆರಾಧನೆ ಮಾಡಿದಲ್ಲಿ ವಾಸ್ತವದ ಅರಿವು ನಮಗಾಗುತ್ತದೆ ಎಂದು ಹೇಳಿದರು. ಬದುಕಿನಲ್ಲಿ ಯಶಸ್ಸು ಪಡೆಯಲು, ಸುಖ, ಶಾಂತಿ ಸಮೃದ್ಧಿ ಕಾಣಲು ನಂಬಿಕೆ ಸದಾ ಉಳಿಸಿಕೊಳ್ಳಬೇಕು. ನಂಬಿಕೆ ಇದ್ದಾಗ ಬದುಕಿನಲ್ಲಿ ಸುಖ ಶಾಂತಿ ಹೊಂದಲು ಸಾಧ್ಯವಾಗುತ್ತದೆ ಎಂದರು. ಶ್ರೀ ಕ್ಷೇತ್ರ ಹೊರನಾಡಿನ ಧರ್ಮಕರ್ತರಾದ ಡಾ.ಜಿ.ಭೀಮೇಶ್ವರ ಜೋಷಿ ಮಾತನಾಡಿ, ಜಾವಳಿಯ ಶ್ರೀ ಹೇಮಾವತಿ ನದಿಮೂಲದ ಶ್ರೀ ಕ್ಷೇತ್ರಕ್ಕೆ ತನ್ನದೇ ಆದ ಇತಿಹಾಸವಿದ್ದು ಸರ್ಕಾರ ಹಾಗೂ ಜನರ ನೆರವಿನಿಂದ ಈ ಕ್ಷೇತ್ರ ಜೀರ್ಣೋದ್ದಾರಗೊಂಡಿದೆ.
ಏಕಾಏಕಿ ಕುಸಿತ ಕಂಡ ರೇಷ್ಮೆ ಗೂಡಿನ ಧಾರಣೆ: ಕಂಗಾಲಾದ ರೇಷ್ಮೆ ಬೆಳೆಗಾರರು
ಹೇಮಾವತಿ ನದಿಮೂಲದ ಮಹಾ ಗಣಪತಿಸ್ವಾಮಿ ಹಾಗೂ ನಾಗದೇವರ ಶ್ರೀ ಕ್ಷೇತ್ರವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕಾರ್ಯ ಪ್ರವೃತರಾಗಬೇಕಿದೆ ಎಂದರು. ಶಾಸಕಿ ನಯನಾ ಮೋಟಮ್ಮ ಮಾತನಾಡಿ, ನನ್ನ ಅಧಿಕಾರವಧಿಯಲ್ಲಿ ಧಾರ್ಮಿಕ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತೇನೆ. ದೇವಸ್ಥಾನಗಳ ಅಭಿವೃದ್ಧಿಗೆ ಅನುದಾನ ಮೀಸಲಿಡುತ್ತೇನೆ. ಹೇಮಾವತಿ ನದಿ ಜಾವಳಿಯಲ್ಲಿ ಹುಟ್ಟಿಬಾಳೂರು, ಕೊಟ್ಟಿಗೆಹಾರ, ಮೂಡಿಗೆರೆ, ಸಕಲೇಶಪುರ, ಹಾಸನ, ಗೊರೂರಿನಲ್ಲಿ ಹರಿದು ಈ ನದಿ ತೀರಗಳನ್ನು ಹಸಿರಾಗಿಸಿದೆ. ಸಾವಿರಾರು ಊರುಗಳಿಗೆ ನೀರುಣಿಸುವ ಹೇಮಾವತಿ ನದಿಯ ಮೂಲ ಅತ್ಯಂತ ಪುಣ್ಯ ಕ್ಷೇತ್ರವಾಗಿದೆ. ನದಿಮೂಲದ ಉಳಿವಿಗೆ ಎಲ್ಲರೂ ಕೈಜೋಡಿಸಬೇಕಿದೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.