Karnataka Assembly Election 2023: ಟಿಕೆಟ್ ಹಂಚಿಕೆಯಲ್ಲಿ ಬಿಎಲ್ ಸಂತೋಷ್ ಪಾತ್ರ ಎಷ್ಟಿರಲಿದೆ?!

Published : Feb 06, 2023, 04:29 PM ISTUpdated : Feb 06, 2023, 06:44 PM IST
Karnataka Assembly Election 2023: ಟಿಕೆಟ್ ಹಂಚಿಕೆಯಲ್ಲಿ ಬಿಎಲ್ ಸಂತೋಷ್ ಪಾತ್ರ ಎಷ್ಟಿರಲಿದೆ?!

ಸಾರಾಂಶ

ಚುನಾವಣೆ ಸಮೀಪಿಸುತ್ತಿದ್ದಂತೆ ರಾಜ್ಯ ರಾಜಕಾರಣದಲ್ಲಿ ಟೆಕೆಟ್‌ಗಾಗಿ ಎಲ್ಲಿಲ್ಲದ ಕಸರತ್ತು ನಡೆಯುತ್ತಿದೆ. ಬಿಜೆಪಿಯಲ್ಲಿಯೂ ಕೆಲವರು ಟಿಕೆಟ್ ಸಿಗುವ ಆಸೆಯಿಂದ ವಿವಿಧ ರೀತಿಯಲ್ಲಿ ಯತ್ನಿಸುತ್ತಿದ್ದಾರೆ. ಈ ನಡುವೆ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಟಿಕೆಟ್ ಆಕಾಂಕ್ಷಿಗಳಿಗೆ ನೀಡಿದ ಸಂದೇಶವೇನು?

- ರವಿ ಶಿವರಾಮ್, ರಾಜಕೀಯ ವರದಿಗಾರರು, ಏಷ್ಯಾನೆಟ್ ಸುವರ್ಣನ್ಯೂಸ್

ರಾಷ್ಟ್ರ ಬಿಜೆಪಿಯ ಸಂಘಟನಾ ಕಮಾಂಡರ್ ಇನ್ ಚೀಫ್ ಬಿಎಲ್ ಸಂತೋಷ್ ಮುಂಬರುವ ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನಲೆಯಲ್ಲಿ ಸೂಪರ್ ಆಕ್ಟಿವ್ ಆಗಿ ಓಡಾಡ್ತಾ ಇದ್ದಾರೆ. ಕಲಬುರಗಿ ತುದಿಯಿಂದ ಹಿಡಿದು ಬೆಂಗಳೂರು ತನಕ ಮೇಲಿಂದ ಮೇಲೆ ಸಂಘಟನಾ ಸಭೆ ನಡೆಸುವ ಮೂಲಕ ಕಾರ್ಯಕರ್ತರಿಗೆ ಕೈ ತುಂಬಾ ಕೆಲಸ ನೀಡುತ್ತಾ ಇದ್ದಾರೆ. ಜೊತೆ ಜೊತೆಗೆ‌ ಸಂಘಟನೆಯನ್ನು ಸಂಪೂರ್ಣ ತನ್ನ ಹಿಡಿತಕ್ಕೆ ತೆಗೆದುಕೊಂಡು ಚುನಾವಣೆ ಸಿದ್ಧತೆಯಲ್ಲಿ ಬ್ಯುಸಿ ಆಗಿದ್ದಾರೆ. ಪ್ರತಿ ವಿಧಾನಸಭೆ ಕ್ಷೇತ್ರದ ಮಾಹಿತಿ ಕಲೆ ಹಾಕುವ ಪ್ರಯತ್ನ ಮಾಡುತ್ತಿರುವ ಸಂತೋಷ್ ಅವರ ವೇಗ ಗಮನಿಸಿದರೆ ಟಿಕೆಟ್ ಫೈನಲ್ ಮಾಡುವ ಸಮಯದಲ್ಲಿ ಬಿಎಲ್ ಸಂತೋಷ್ ಅವರ ಪಾತ್ರ ಬಹುದೊಡ್ಡದಿರುತ್ತದೆ ಎನ್ನೋದರಲ್ಲಿ ಸಂದೇಹ ಇಲ್ಲ.

ಮೀಸಲಾತಿ ಹೋರಾಟದಲ್ಲಿ ಬಿಎಲ್ ಸಂತೋಷ್ ಯಾರಿಗೆ ಸಂದೇಶ ನೀಡಿದರು?!
ಮೊನ್ನೆ ಶನಿವಾರ ಬೆಂಗಳೂರಿನ ಅರಮನೆ ಮೈದಾನದಲ್ಲಿ ರಾಜ್ಯ ಬಿಜೆಪಿ ಪದಾಧಿಕಾರಿಗಳ ಸಭೆ ನಡೆಯಿತು. ಸಮಾರೋಪ ಭಾಷಣವನ್ನು ಬಿಎಲ್ ಸಂತೋಷ್ ಮಾಡಿದ್ದರು. ಪಕ್ಷದ ಸಂಘಟನೆ ಹೇಗೆ ಸಾಗಬೇಕು,  ಯಾವ ಜಿಲ್ಲೆಯಲ್ಲಿ ಯಾವ ಮೋರ್ಚಾ ಸಮಾವೇಶ ನಡೆಸಬೇಕು ಎನ್ನುವ ಕುರಿತಾಗಿ ಮಾತನಾಡಿದ್ದಾರಂತೆ. ಭಾಷಣದ ಕೊನೆ ಭಾಗದಲ್ಲಿ ಮೀಸಲಾತಿ ಹೋರಾಟದ ವಿಷಯ ಪ್ರಸ್ತಾಪಿಸಿ, ನಮ್ಮ ಸರ್ಕಾರ ಸಾಮಾಜಿಕ ನ್ಯಾಯದಡಿ ಎಸ್ ಸಿ, ಎಸ್ ಟಿ ಮೀಸಲಾತಿ ಹೆಚ್ಚಳ ಮಾಡಿದ್ದೇವೆ. ಆದರೆ ಇತ್ತೀಚೆಗೆ ಮೀಸಲಾತಿ ಹೋರಾಟ ಹೆಚ್ಚಾಗಿದೆ ಎನ್ನುವ ಅರ್ಥದಲ್ಲಿ ಮಾತು ಮುಂದುವರಿಸಿದ ಬಿಎಲ್ ಎಸ್, ಕೆಲವರು ಮೀಸಲಾತಿ ಹೋರಾಟದ ಹೆಸರಲ್ಲಿ ತಮ್ಮ ಬೆಳೆಕಾಳುಗಳನ್ನು ಬೇಯಿಸಿಕೊಳ್ಳುತ್ತಿದ್ದಾರೆ ಎಂದು ಯಾರ ಹೆಸರು ಹೇಳದೆ ಯಾವ ಸಮುದಾಯದ ಹೆಸರು ಉಲ್ಲೇಖಿಸದೆ ಚಾಟಿ ಬೀಸಿದ್ರಂತೆ. ಬಿಎಲ್ ಸಂತೋಷ್ ಭಾಷಣ ಕೇಳಿದವರು ಮಾತ್ರ ಈ ಮಾತನ್ನು ಯತ್ನಾಳ್ ರಿಗೆ ಹೇಳಿರಬಹುದಾ ಎನ್ನುವ ಚರ್ಚೆಯಲ್ಲಿ ತೊಡಗಿದ್ದಾರೆ.

ಒಳ ಮೀಸಲಾತಿ: ಬೊಮ್ಮಾಯಿ ಸರ್ಕಾರಕ್ಕೆ ಸಿಗುತ್ತಾ ಬೂಸ್ಟರ್ ಡೋಸ್?

ಅರ್ಹತೆ ನೋಡಿ ಟಿಕೆಟ್ ಕೊಡ್ತೇವೆ ಬಿಎಲ್ ಸಂತೋಷ್
ಎರಡು ದಿನಗಳ ಹಿಂದೆ ಆನೇಕಲ್ ನಲ್ಲಿ ಬಿ ಎಲ್ ಸಂತೋಷ್ ಇನ್ ಡೋರ್ ಸಭೆ ಮಾಡಿದ್ರು. ಒಂದಿಷ್ಟು ಕಾರ್ಯಕರ್ತರು ಸೇರಿದ್ದರು. ಚುನಾವಣೆ ಸಮಯ ಟಿಕೆಟ್ ಗಾಗಿ ಎರಡು ಮೂರು ಬಣಗಳ ಕೂಗಾಟ ಚೀರಾಟ ಸಹಜ. ಟಿಕೆಟ್ ಲಾಭಿ ಮಾಡೋರಿಗೆ ತಮ್ಮ ಭಾಷಣದಲ್ಲಿ ಬಿಎಲ್ ಸಂತೋಷ್ ಚಾಟಿ ಬೀಸಿದ್ದಾರೆ. ಪಕ್ಷ ಅರ್ಹತೆ ನೋಡಿ ಟಿಕೆಟ್ ನೀಡತ್ತೆ. ಹಣ ಖರ್ಚು ಮಾಡಿದ್ದೇನೆ ಜನ ಸೇರಿಸಿದ್ದೇನೆ ಎಂದೆಲ್ಲಾ ಟಿಕೆಟ್ ನೀಡೊದಿಲ್ಲ.  "ಕೊಟ್ಟವನು ಕೋಡಂಗಿ, ಇಸ್ಕೊಂಡವನು ವೀರಭದ್ರ " ಅಷ್ಟೇ. ನಮ್ಮಲ್ಲಿ ಟಿಕೆಟ್ ಪಡೆಯಲು ಹಣ ಮಾನದಂಡ ಅಲ್ಲ. ಗುಣ ಮಾನದಂಡ. ಹಣ ಇಲ್ಲದೇ ಇದ್ದರು ಅರ್ಹತೆ ಇದ್ದರೆ ಅಂತವರಿಗೆ ಪಕ್ಷ ಟಿಕೆಟ್ ನೀಡುತ್ತದೆ ಎಂದು ಸಂತೋಷ್ ಪಾಠ ಮಾಡಿದ್ರಂತೆ.

ಟಿಕೆಟ್ ಕೇಳಲು ದೆಹಲಿಗೆ ಹೋಗಿದ್ದವರಿಗೆ ಬಿಎಲ್ ಸಂತೋಷ್ ಪಾಠ
ಟಿಕೆಟ್ ಪಡೆಯಲು ಅನೇಕರು ನಾನಾ ಕಸರತ್ತು ಮಾಡೋದು ಎಲ್ಲಾರಿಗೂ ಗೊತ್ತಿರುವ ವಿಷಯ. ಯಾರ ಬಳಿ ಹೋದರೆ ತಮ್ಮ ಕೆಲಸ ಆಗುತ್ತದೆ ಎಂದು ತಲಾಷ್ ಮಾಡ್ತಾನೆ ಇರ್ತಾರೆ.ನಾಲ್ಕೈದು ಯುವಕರು ಸೇರಿ ದೆಹಲಿಗೆ ಹೋಗಿ ನೇರವಾಗಿ ಬಿಎಲ್ ಸಂತೋಷ್ ಬಳಿ ಟಿಕೆಟ್‌ಗೆ ಬೇಡಿಕೆ ಇಟ್ಟು ಬಂದಿದ್ದಾರಂತೆ ! ಮೊದಲು ಕೆಲಸ ಮಾಡಿ ಟಿಕೆಟ್ ವಿಷಯ ಆಮೇಲೆ ನೋಡೊಣ ಎಂದಿದ್ದಾರಂತೆ ಬಿಎಲ್ ಸಂತೋಷ್. ಟಿಕೆಟ್ ಸಿಗತ್ತೊ ಬಿಡತ್ತೊ ಆದರೆ ಕಲ್ಲು ಹೊಡೆದರೆ ಫಲ ನೀಡುವ ಮರಕ್ಕೆ ಕಲ್ಲು ಹೊಡೆಯೋಣ ಎಂಬಂತಿದೆ ಇವರ ಪ್ಲಾನ್.

Karnataka Politics: ಯತ್ನಾಳ್ ನಾಯಕನಲ್ಲ ಹೇಳಿಕೆಯ ಹಿಂದಿನ ಕಾರಣಗಳು?!

ರಾಜ್ಯ ಬಿಜೆಪಿಯಲ್ಲಿ ನಿರ್ಮಲ್ ಕುಮಾರ್ ಸುರಾನಾ ಹೈಪರ್ ಆಕ್ಟಿವ್!
ನಿರ್ಮಲ್ ಕುಮಾರ್ ಸುರಾನಾ ರಾಜ್ಯ ಬಿಜೆಪಿ ಉಪಾಧ್ಯಕ್ಷ. ಕೋರ್ ಕಮಿಟಿ ಸದಸ್ಯ. ಪುದುಚೇರಿ ಉಸ್ತುವಾರಿ. ಸದ್ಯದ ಮಟ್ಟಿಗೆ ರಾಜ್ಯ ಬಿಜೆಪಿ ಕಚೇರಿಯಲ್ಲಿ ಯಾವುದೇ ಪ್ಲಾನ್ ಆ್ಯಂಡ್ ಆಕ್ಷನ್ ಆಗಬೇಕು ಅಂದರೆ ನಿರ್ಮಲ್ ಕುಮಾರ್ ಸುರಾನಾ ಹೇಳೊದೆ ಫೈನಲ್. ಪಾರ್ಟಿ ಸೇರ್ಪಡೆ ಕಾರ್ಯಕ್ರಮದಿಂದ ಹಿಡಿದು, ಚುನಾವಣೆ ಪ್ರಚಾರಕ್ಕೆ ಬೇಕಾದ ಸಲಕರಣೆ, ಡಿಜಿಟಲ್ ಮಾಧ್ಯಮ ಎಲ್ಲಾ ಟೀಮ್ ಜೊತೆ ಚರ್ಚೆ, ಖರ್ಚು ವೆಚ್ಚ ಇದೆಲ್ಲಾದರ ಬಗ್ಗೆ ಫೈನಲ್ ಸಭೆ ಮಾಡಿ ತೀರ್ಮಾನ ಮಾಡೋದೆ ಸುರಾನಾ. ಯಡಿಯೂರಪ್ಪ ರಾಜ್ಯಾಧ್ಯಕ್ಷ ಆಗಿದ್ದಾಗ ಪಾರ್ಟಿಯಿಂದ ಉಚ್ಚಾಟನೆಗೊಂಡಿದ್ದ ನಿರ್ಮಲ್ ಕುಮಾರ್ ಸುರಾನಾ ಈಗ ಪಾರ್ಟಿಯಲ್ಲಿ ಹೈಪರ್ ಆಕ್ಟಿವ್. ಒಬ್ಬೊಬ್ಬರಿಗೊಂದು ಕಾಲ ಬಿಡಿ.!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಬೆಳಗಾವಿ ಸುವರ್ಣ ಸೌಧ ಮುತ್ತಿಗೆಗೆ ಬಿಜೆಪಿ ಯತ್ನ; ವಿಜಯೇಂದ್ರ, ಅಶೋಕ ಸೇರಿ 50ಕ್ಕೂ ಅಧಿಕ ನಾಯಕರು ವಶಕ್ಕೆ
'ಅಹಿಂದ ಕಿಂಗ್ ಸಿದ್ದರಾಮಯ್ಯ' ಜೀವಂತ ಇರುವಾಗಲೇ ಪರ್ಯಾಯ ನಾಯಕತ್ವದ ಕೂಗು ಏಕೆ?: ಬೈರತಿ ಸುರೇಶ್