
ಚನ್ನಪಟ್ಟಣ (ಮಾ.18): ಯುಜಿಡಿ ಕಾಮಗಾರಿ ಅನುಮೋದನೆಗೆ ನಾನು ಒಂದುವರೆ ತಿಂಗಳಿನಿಂದ ಶ್ರಮಪಟ್ಟಿದ್ದೇನೆ. ಆದರೆ ಈ ಯೋಜನೆಯ ಕ್ರೆಡಿಟ್ ಪಡೆದುಕೊಳ್ಳಲು ಕುಮಾರಸ್ವಾಮಿ ಪ್ರಯತ್ನಿಸುತ್ತಿದ್ದಾರೆ. ಯಾರದೋ ಕೆಲಸಕ್ಕೆ ಕ್ರೆಡಿಟ್ ತೆಗೆದುಕೊಳ್ಳುವುದು ಅವರಿಗೆ ಹೊಸದೇನು ಅಲ್ಲ ಎಂದು ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ವಾಗ್ದಾಳಿ ನಡೆಸಿದರು.
ಮಹದೇಶ್ವರ ದೇವಸ್ಥಾನದ ಉದ್ಘಾಟನಾ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರದ ಯುಜಿಡಿ ಕಾಮಗಾರಿಗೆ ಹಣಕಾಸು ಇಲಾಖೆ ಅನುಮೋದನೆ ದೊರಕಲು ನನ್ನ ಪ್ರಯತ್ನವೇ ಕಾರಣ. ಈ ಹಿಂದೆಯೂ ನಾನು ಈ ವಿಚಾರ ಪ್ರಸ್ತಾಪಿಸಿದ್ದೆ. ಆದರೆ ಇದೀಗ ಕುಮಾರಸ್ವಾಮಿ ಯುಜಿಡಿ ಕ್ರೆಡಿಟ್ಗೆ ಪ್ರಯತ್ನಿಸಿದ್ದಾರೆ. ಯುಜಿಡಿ ಕಾಮಗಾರಿ ಅನುಮೋದನೆ ಕೊಡಿಸಲು ನಾನು ಸಾಕಷ್ಟುಹೋರಾಟ ನಡೆಸಿದ್ದೇನೆ. ಇನ್ನು ಈ ವಿಚಾರ ಸಂಪುಟ ಸಭೆಗೆ ಬಂದಿಲ್ಲ. ಮುಂದಿನ ದಿನಗಳಲ್ಲಿ ಸಂಪುಟ ಸಭೆಯಲ್ಲಿ ಒಪ್ಪಿಗೆ ಪಡೆಯಲು ಸರ್ಕಾರಕ್ಕೆ ಮನವಿ ಸಲ್ಲಿಸುತ್ತೇನೆ. ಇದು ನನ್ನ ಯೋಜನೆ, ಧಾರ್ಮಿಕ ಕ್ಷೇತ್ರದಲ್ಲಿ ನಿಂತು ನಾನು ಸುಳ್ಳು ಹೇಳುವುದಿಲ್ಲ ಎಂದರು.
ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಬಗ್ಗೆ ಪ್ರತಾಪ್ ಸಿಂಹ ಚೈಲ್ಡಿಶ್ ಮಾತು: ನಿಖಿಲ್ ಕುಮಾರಸ್ವಾಮಿ
ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ನಮ್ಮ ಸಾಧನೆ ಎಂದು ಹೇಳಿಕೊಂಡರು, ಅದು ದೇವೇಗೌಡರ ಕಾಲದಲ್ಲೇ ಅನುಮೋದಿಸಿದ್ದ ಯೋಜನೆ ಎಂದರು, ತಾಲೂಕಿನಲ್ಲಿ ಆಗಿರುವ ನೀರಾವರಿ ಯೋಜನೆಗಳನ್ನು ತಮ್ಮದೇ ಕೊಡುಗೆ ಎಂದು ಹೇಳಿಕೊಳ್ಳುತ್ತಾರೆ. ಕುಮಾರಸ್ವಾಮಿ ಅವರಿಗೆ ಬೇರೆಯವರ ಸಾಧನೆಗಳನ್ನು ತನ್ನದೆಂದು ಹೇಳಿಕೊಳ್ಳುವುದು ಅಭ್ಯಾಸವಾಗಿದೆ ಎಂದು ವ್ಯಂಗ್ಯವಾಡಿದರು. ಕುಮಾರಸ್ವಾಮಿ ಅವರು ಏನೇನೋ ಪೂಜೆ, ಮಾಟ, ಮಂತ್ರ ಎಲ್ಲವನ್ನು ಮಾಡಿಸುತ್ತಿದ್ದಾರೆ. ನೋಡೋಣ ಏನಾಗುತ್ತದೆ ಎಂದು ಹೇಳುವ ಮೂಲಕ ಮಾಜಿ ಸಿಎಂ ಕುಮಾರಸ್ವಾಮಿ ಮಾಡಿಸಿದ ಹೋಮದ ಬಗ್ಗೆ ಮಾರ್ಮಿಕವಾಗಿ ಪ್ರತಿಕ್ರಿಯೆ ನೀಡಿದರು.
ಕಣ್ಣೀರಿಗೆ ಕರಗದಿರಿ: ಕಳೆದ ವಿಧಾನಸಭೆ ಚನಾವಣೆಯಲ್ಲಿ ಕಣ್ಣೀರಿಗೆ ಕರಗಿ ನನ್ನನ್ನು ಸೋಲಿಸಿದರಿ. ಈ ಬಾರಿಯ ಚುನಾವಣೆಯಲ್ಲಿ ನನ್ನನ್ನು ಬೆಂಬಲಿಸಿ ಗೆಲ್ಲಿಸಿ ಎಂದು ವಿಧಾನಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಮನವಿ ಮಾಡಿದರು. ರಾಜ್ಯವೇ ತಾಲೂಕಿನತ್ತ ತಿರುಗಿ ನೋಡುವಂತೆ ಕಳೆದ ಬಾರಿ ನೀರಾವರಿ ಯೋಜನೆಯನ್ನು ಅನುಷ್ಠಾನಗೊಳಿಸಿದೆ. ಆದರೆ ನೀವು ಕಣ್ಣೀರು, ಆಶ್ವಾಸನೆಗೆ ಮರುಳಾಗಿ ಕಳೆದ ಚುನಾವಣೆಯಲ್ಲಿ ನನ್ನ ಕೈಬಿಟ್ಟು ಹೊರಗಿನಿಂದ ಬಂದವರನ್ನು ಗೆಲ್ಲಿಸಿದರಿ. ಗೆಲ್ಲಿಸಿದ ಮೇಲೆ ಈ ಕ್ಷೇತ್ರ ಅಭಿವೃದ್ಧಿ ಏನಾಗಿದೆ ಎಂಬುದು ನಿಮಗೆ ಗೊತ್ತಿದೆ.
ಎಚ್ಡಿಡಿ, ಎಚ್ಡಿಕೆಗೆ ಮೋಸ ಮಾಡಿದ ಬಾಲಕೃಷ್ಣ: ಶಾಸಕ ಮಂಜುನಾಥ್
ಆದ್ದರಿಂದ ಈ ಬಾರಿಯಾದರೂ ನನ್ನನ್ನು ಗೆಲ್ಲಿಸಿ ನಿಮ್ಮ ಸೇವೆಗೆ ಅವಕಾಶ ನೀಡಿ ಎಂದರು. ಮಾಜಿ ಸಿಎಂ ಕುಮಾರಸ್ವಾಮಿ ನಿಲ್ಲಲು ಬೇಕಾದಷ್ಟುಕ್ಷೇತ್ರಗಳಿವೆ. ಆದರೆ ನನಗಿರುವುದು ಇದೊಂದೇ ಕ್ಷೇತ್ರ. ಕಳೆದ ಬಾರಿ ಹಿತ್ತಲ ಗಿಡ ಮದ್ದಲ್ಲ ಎಂಬ ಗಾದೆಯಂತೆ ಅಷ್ಟುಕೆಲಸ ಮಾಡಿದರೂ ಹೊರಗಿನಿಂದ ಬಂದವರ ಮಾತಿಗೆ ಮರಳಾಗಿ ಅವರನ್ನು ಗೆಲ್ಲಿಸಿದಿರಿ. ಗೆದ್ದ ಮೇಲೆ ಅವರು ನೀಡಿದ ಆಶ್ವಾಸನೆಗಳನ್ನು ಈಡೇರಿಸಲಿಲ್ಲ. ಈ ಬಾರಿ ನಿಮ್ಮ ಮನೆ ಮಗನಿಗೆ ಮತ್ತೊಂದು ಅವಕಾಶ ನೀಡಿ ಎಂದು ವಿನಂತಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.