ಹಳೇ ಮೈಸೂರು ಭಾಗದಲ್ಲಿ ಹೊಂದಾಣಿಕೆ ಇಲ್ಲ: ಸಿ.ಪಿ.ಯೋಗೇಶ್ವರ್‌

Published : Mar 29, 2023, 08:43 PM IST
ಹಳೇ ಮೈಸೂರು ಭಾಗದಲ್ಲಿ ಹೊಂದಾಣಿಕೆ ಇಲ್ಲ: ಸಿ.ಪಿ.ಯೋಗೇಶ್ವರ್‌

ಸಾರಾಂಶ

ಜೆಡಿಎಸ್‌ನವರು ಎರಡು ರಾಷ್ಟ್ರೀಯ ಪಕ್ಷಗಳ ಜತೆ ಬ್ಯಾಲೆನ್ಸ್‌ ಮಾಡುತ್ತಾರೆ. ಈ ವಿಚಾರ ಬಿಜೆಪಿ ಹೈಕಮಾಂಡ್‌ಗೆ ಗೊತ್ತಿದ್ದು, ಹಳೇ ಮೈಸೂರು ಭಾಗದಲ್ಲಿ ಯಾವುದೇ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ ಎಂದು ವಿಧಾನಪರಿಷತ್‌ ಸದಸ್ಯ ಸಿ.ಪಿ.ಯೋಗೇಶ್ವರ್‌ ಸ್ಪಷ್ಟಪಡಿಸಿದರು. 

ಚನ್ನಪಟ್ಟಣ (ಮಾ.29): ಜೆಡಿಎಸ್‌ನವರು ಎರಡು ರಾಷ್ಟ್ರೀಯ ಪಕ್ಷಗಳ ಜತೆ ಬ್ಯಾಲೆನ್ಸ್‌ ಮಾಡುತ್ತಾರೆ. ಈ ವಿಚಾರ ಬಿಜೆಪಿ ಹೈಕಮಾಂಡ್‌ಗೆ ಗೊತ್ತಿದ್ದು, ಹಳೇ ಮೈಸೂರು ಭಾಗದಲ್ಲಿ ಯಾವುದೇ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ ಎಂದು ವಿಧಾನಪರಿಷತ್‌ ಸದಸ್ಯ ಸಿ.ಪಿ.ಯೋಗೇಶ್ವರ್‌ ಸ್ಪಷ್ಟಪಡಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಬಾರಿ ಚುನಾವಣಾ ಪೂರ್ವದಲ್ಲಿ ಬಿಜೆಪಿ ಬೆಂಬಲ ಪಡೆದಿದ್ದ ಜೆಡಿಎಸ್‌ನವರು ಚುನಾವಣೆ ಮುಗಿದು ಕೆಲವು ಕಡೆ ಗೆಲ್ಲುತ್ತಿದ್ದಂತೆ ಕಾಂಗ್ರೆಸ್‌ ಜತೆಗೆ ಹೋಗಿ ಸಿಎಂ ಆದರು. 

ಜೆಡಿಎಸ್‌ನವರು ನಂಬಿಕೆಗೆ ಅರ್ಹರಲ್ಲ ಎಂಬುದು ನಮ್ಮ ವರಿಷ್ಠರಿಗೆ ಗೊತ್ತಾಗಿದ್ದು, ಆದ್ದರಿಂದ ಈ ಬಾರಿ ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಯಾವುದೇ ಹೊಂದಾಣಿಕೆಗೂ ಮುಂದಾಗುವುದಿಲ್ಲ ಎಂದರು. ಜೆಡಿಎಸ್‌ ಅನ್ನು ನಂಬುವ ಸ್ಥಿತಿಯಲ್ಲಿ ನಮ್ಮ ಪಕ್ಷ ವರಿಷ್ಠರು ಇಲ್ಲ. ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಶಕ್ತಿ ವೃದ್ಧಿಸುತ್ತಿದ್ದು. ಈ ಬಾರಿ ಈ ಭಾಗದಲ್ಲಿ ಪಕ್ಷ ಹೆಚ್ಚು ಸ್ಥಾನಗಳನ್ನು ಗಳಿಸಲಿದೆ. ಈ ಬಾರಿ ಬಹುಮತದೊಂದಿಗೆ ಬಿಜೆಪಿ ಮತ್ತೊಮ್ಮೆ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಯೋಗೇಶ್ವರ್‌ಗೆ ಸೋಲಿನ ಮುನ್ಸೂಚನೆ ಸಿಕ್ಕಿದ್ದು ಹತಾಶರಾಗಿದ್ದಾರೆ: ನಿಖಿಲ್‌ ಕುಮಾರಸ್ವಾಮಿ

ಬಿಜೆಪಿ ಬಲಿಷ್ಠಗೊಳಿಸುವ ಗುರಿ: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ ಜತೆ ಬಿಜೆಪಿ ಹೊಂದಾಣಿಕೆ ಮಾಡಿಕೊಂಡಿದ್ದ ವಿಷಯದ ಬಗ್ಗೆ ಆಡಿಯೋ ವೈರಲ್‌ ಆಗಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಹಳೇ ಮೈಸೂರು ಭಾಗದಲ್ಲಿ ಸುಮಾರು 70ರಿಂದ 80 ಕ್ಷೇತ್ರಗಳಲ್ಲಿ ಬಿಜೆಪಿಯನ್ನು ಬಲಿಷ್ಠಗೊಳಿಸಬೇಕು ಎಂಬುದು ನನ್ನ ಗುರಿಯಾಗಿತ್ತು. ಈ ಕಾರಣಕ್ಕೆ ಪಕ್ಷದ ಶಕ್ತಿ ವೃದ್ಧಿಸುವ ನಿಟ್ಟಿನಲ್ಲಿ ಈ ಭಾಗದಲ್ಲಿ ಒಂದಷ್ಟುಕಾರ‍್ಯಕರ್ತರನ್ನು ಹುಟ್ಟುಹಾಕಿದ್ದು. ಅವರಿಗೆ ಟಿಕೆಟ್‌ ಕೊಡಿಸುವ ಮಾತು ನೀಡಿದ್ದೆ. ಆದರೆ ಅವರಿಗೆ ಟಿಕೆಟ್‌ ಸಿಗಲಿಲ್ಲ. ನಮ್ಮ ಕೈಯಾರ ನಾವೇ ಪಕ್ಷದ ಬೆಳವಣಿಗೆ ಮೊಟಕುಗೊಳಿಸಿದೆವಲ್ಲ ಎಂಬ ಕಾರಣದಿಂದ ಸಾಂದರ್ಭಿಕವಾಗಿ ಆ ರೀತಿ ಮಾತು ಬಂದಿದೆ ಎಂದರು.

ಬೇರೆಯವರನ್ನ ಕರೆತರೋದು, ಆಪರೇಷನ್‌ ಕಮಲ ತಪ್ಪಬೇಕು ಅಂದರೆ ಹೊಂದಾಣಿಕೆ ನಿಲ್ಲಿಸಬೇಕು ಎಂದು ನಾನು ಮೊದಲಿನಿಂದಲೂ ಹೇಳಿಕೊಂಡು ಬಂದಿದ್ದೇನೆ. ಈಗಲೂ ಹೊಂದಾಣಿಕೆ ಬೇಡ ಎಂಬ ಹೇಳಿಕೆಗೆ ನಾನು ಬದ್ಧವಾಗಿದ್ದೇನೆ. ಜೆಡಿಎಸ್‌ಗೆ ಡ್ಯಾಮೇಜ್‌ ಆಗುತ್ತಿದ್ದ ಕೆಲ ಕ್ಷೇತ್ರದಲ್ಲಿ ಒಳ್ಳೆ ಅಭ್ಯರ್ಥಿಗಳನ್ನು ಹಾಕಲಿಲ್ಲ. ಕೆಲವೆಡೆ ತ್ರಿಕೋನ ಸ್ಪರ್ಧೆ ಏರ್ಪಡುತ್ತಿತ್ತು. ಆದರೆ ಪ್ರಬಲ ಅಭ್ಯರ್ಥಿಗೆ ಟಿಕೆಟ್‌ ಕೊಡಲಿಲ್ಲ. ಈಗಲೂ ಕೆಲ ಕ್ಷೇತ್ರದಲ್ಲಿ ಕಾರ‍್ಯಕರ್ತರಿಗೆ ಈ ಭಯ ಇದೆ. ಇದೆಲ್ಲವೂ ವರಿಷ್ಠರ ಗಮನಕ್ಕೆ ಬಂದಿದೆ. ಆದ್ದರಿಂದ ಈ ಬಾರಿ ಯಾವುದೇ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ತಮ್ಮ ಅವಧಿಯಲ್ಲಿ ಕೆಲಸ ಮಾಡಿದ್ದರೆ ಏಕೆ ಆತಂಕ ಪಡಬೇಕಿತ್ತು: ಯೋಗೇಶ್ವರ್‌ ವಿರುದ್ಧ ನಿಖಿಲ್‌ ವಾಗ್ದಾಳಿ

ಅವರು ಮಾಡಿದ್ದೇ ಅವರಿಗೆ ಅಗಿದೆ: ಕಾಂಗ್ರೆಸ್‌ ಸಂಭಾವ್ಯ ಅಭ್ಯರ್ಥಿ ಜೆಡಿಎಸ್‌ ಸೇರ್ಪಡೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಯೋಗೇಶ್ವರ್‌, ಕಳೆದ ಬಾರಿ ರಾಮನಗರದಲ್ಲಿ ನಡೆದಿದ್ದ ಚುನಾವಣೆಯ ವೇಳೆ ಬಿಜೆಪಿ ಅಭ್ಯರ್ಥಿಯನ್ನು ಕಾಂಗ್ರೆಸ್‌ನವರು ಕರೆದುಕೊಂಡರು. ಅಂದು ಅವರು ಮಾಡಿದ್ದೇ ಈಗ ಅವರಿಗೆ ಆಗಿದೆ. ಇದು ಡಿ.ಕೆ. ಸಹೋದರರಿಗೆ ಒಂದು ಪಾಠ ಎಂದರು. ಕುಮಾರಸ್ವಾಮಿ ಬಹಳ ವರ್ಷದಿಂದ ಬಾಡೂಟ ಹಾಕಿರಲಿಲ್ಲ ಹಾಗಾಗಿ ಈಗ ಕೆಲವು ಕಡೆ ಬಾಡೂಟ ಹಾಕಿಸುತ್ತಿದ್ದಾರೆ. ಕುಮಾರಸ್ವಾಮಿ ಅವರು ಹತಾಶಗೊಂಡಿರುವುದಕ್ಕೆ ಇದೇ ಸಾಕ್ಷಿ. ಆದರೆ, ಕ್ಷೇತ್ರದ ಜನತೆ ಕೈಗೆ ಸಿಗುವ ವ್ಯಕ್ತಿ ಬೇಕೆಂದು ಕೇಳುತ್ತಿದ್ದಾರೆ. ಈ ಕ್ಷೇತ್ರದ ಸ್ವಾಭಿಮಾನಿ ಜನ ಕುಮಾರಸ್ವಾಮಿ ಅವರನ್ನು ಒಪ್ಪಲ್ಲ ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ನಾನು ಲಂಚ ಪಡೆದಿದ್ದು ಸಾಬೀತಾದರೆ ರಾಜೀನಾಮೆ: ಗೃಹ ಸಚಿವ ಪರಮೇಶ್ವರ್‌
ದಲಿತ ಸಮುದಾಯಕ್ಕೆ ಸಿಎಂ ಹುದ್ದೆ ಕೊಡಿ ಎಂದು ಸಮಯ ಬಂದಾಗ ಕೇಳುವೆ: ಸಚಿವ ಮಹದೇವಪ್ಪ