
ವಿಜಯಪುರ, (ಏ.10): ಹುಚ್ಚು ಸ್ವಾಮಿ ಬೆನ್ನು ಹತ್ತಿದರೆ ಶಿಗ್ಗಾಂವಿನಲ್ಲಿ ಸಿಎಂ ಉಲ್ಟಾ ಹೊಡಿತಾರೆ ಎಂದು ಸಿಎಂ ಬಸವರಾಜ ಬೊಮ್ಮಾಯಿಗೆ (Basavaraj Bommai) ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್(Basangouda Patil Yatnal) ಎಚ್ಚರಿಕೆ ಕೊಟ್ಟಿದ್ದಾರೆ.
ವಿಜಯಪುರದ ಚಡಚಣ ತಾಲೂಕಿನ ಇಂಚಗೇರಿ ಗ್ರಾಮದಲ್ಲಿ ನಡೆದ ಪಂಚಮಸಾಲಿ ಮೀಸಲಾತಿಗಾಗಿ ನಡೆದ ಹಕ್ಕೊತ್ತಾಯ ಸಮಾವೇಶದಲ್ಲಿ ಮಾತನಾಡಿದ ಯತ್ನಾಳ್, ಮುಖ್ಯಮಂತ್ರಿಗಳೇ ಶಿಗ್ಗಾಂವಿ ಕ್ಷೇತ್ರದಲ್ಲಿ 50 ಸಾವಿರ ಮತದಾರರು ಪಂಚಮಸಾಲಿ ಸಮುದಾಯದವರಿದ್ದೇವೆ. ಆ ಸ್ವಾಮಿಯ ಬೆನ್ನು ಹತ್ತಿದರೆ ನಿಮಗೆ ಸೋಲು ಕಾಣಬೇಕಾಗುತ್ತದೆ ಎಂದು ಪರೋಕ್ಷವಾಗಿ ಹರಿಹರ ಪೀಠದ ಸ್ವಾಮೀಜಿ ಬೆನ್ನು ಹತ್ತಬಾರದೆಂದು ಯತ್ನಾಳ್ ಹೇಳಿದರು.
Karnataka Politics: ವಿಜಯೇಂದ್ರಗೆ ಸೂಕ್ತ ಸ್ಥಾನಮಾನ ನೀಡುವ ಬಗ್ಗೆ ಯತ್ನಾಳ್ ವ್ಯಂಗ್ಯ
ಕೆಲವರು ನಮ್ಮ ಸಮಾಜವನ್ನು ಒಡೆಯಲು ಮುಂದಾಗಿದ್ದರು. ಸಮಾಜ ಒಡೆಯಲು ಮುಂದಾದವರಿಗೆ ಎಲ್ಲವೂ ಅರ್ಥ ಆಗಿದೆ. ಇವತ್ತು ಪಂಚಮಸಾಲಿ ಮೂರನೇ ಪೀಠದ ಕಥೆ ಏನಾಗಿದೆ? ಜಯಮೃತ್ಯುಂಜಯ ಸ್ವಾಮೀಜಿ ಸಮಾಜವನ್ನು ಒಗ್ಗೂಡಿಸಿದ್ದಾರೆ. ನಮ್ಮ ಮೀಸಲಾತಿ ಹೋರಾಟ ಪ್ರಾಮಾಣಿಕವಾಗಿ ನಡೆಯುತ್ತಿದೆ. ಸ್ವಾಮೀಜಿಗಳು ನಮ್ಮ ಪರವಾಗಿ ಹೋರಾಟ ಮಾಡುತ್ತಿದ್ದಾರೆ. ನಮ್ಮ ಮೇಲೆ ಸಂಶಯ ಪಡಬೇಡಿ, ಆರೋಪ ಬರುವುದು ಸಹಜ. ಆರೋಪ ಮಾಡುವುದನ್ನು ಈ ದೇಶದಲ್ಲಿ ಯಾರನ್ನೂ ಬಿಟ್ಟಿಲ್ಲ ಎಂದರು.
ಸಂಪುಟ ವಿಸ್ತರಣೆ ಬಗ್ಗೆ ವರಿಷ್ಠರ ನಿರ್ಣಯವೇ ಅಂತಿಮ. ಹೈಕಮಾಂಡ್ ಏನು ನಿರ್ಣಯ ಮಾಡುತ್ತಾರೋ ಗೊತ್ತಿಲ್ಲ. ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಮಾಡ್ತಾರೋ ಗೊತ್ತಿಲ್ಲ. ಕೇಂದ್ರದಿಂದ ಯಾವುದೇ ಸ್ಪಷ್ಟವಾದ ಸಂದೇಶ ಬಂದಿಲ್ಲ. ನಾವು ಏನೇ ಮಾತಾಡಿದ್ರೂ ಅದು ಊಹಾಪೋಹ ಆಗುತ್ತೆ. ಒಟ್ಟಾರೆ ಕಾರ್ಯಕಾರಿಣಿ ನಂತರ ಒಳ್ಳೇ ಬೆಳವಣಿಗೆ ಆಗುತ್ತೆ. ವೈಯಕ್ತಿಕ, ಕಾರ್ಯಕಾರಿಣಿ ಕೆಲಸಕ್ಕಾಗಿ ದೆಹಲಿಗೆ ಹೋಗಿದ್ದೆ. ಮಂತ್ರಿಯಾಗಲು ಲಾಬಿ ಮಾಡಲು ದೆಹಲಿಗೆ ಹೋಗಿರಲಿಲ್ಲ ಎಂದು ಹೇಳಿದರು.
ನಮ್ಮ ಮೀಸಲಾತಿ ಹೋರಾಟದಿಂದಾಗಿ ಹಲವು ಬದಲಾವಣೆ ಆಗಿದೆ. ಬೇರೆ ಬೇರೆ ಸಮಾಜದಲ್ಲೂ ಮೀಸಲಾತಿ ಬಗ್ಗೆ ಚರ್ಚೆ ನಡೆದಿದೆ. ಮೀಸಲಾತಿ ಬದಲಾವಣೆ ಬಗ್ಗೆ ಸಮಾಜದಲ್ಲಿ ಚರ್ಚೆ ನಡೀತಿದೆ. ನಾವು ಕೇವಲ ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಕೇಳಿಲ್ಲ. ಎಲ್ಲ ಸಮುದಾಯಕ್ಕೂ ಮೀಸಲಾತಿ ಕೇಳಿದ್ದೇವೆ. ಕೂಡಲಸಂಗಮಶ್ರೀಗಳು ಯಾವುದೇ ಹೊಂದಾಣಿಕೆ ಮಾಡಿಕೊಂಡಿಲ್ಲ. ಶ್ರೀಗಳು ಹೊಂದಾಣಿಕೆ ಆದರೆ ಇವತ್ತೇ ಸಿಎಂ 10 ಕೋಟಿ ಕೊಡ್ತಾರೆ. ಆದರೆ ಕೂಡಲಸಂಗಮ ಸ್ವಾಮೀಜಿ ಆಮಿಷಕ್ಕೆ ಒಳಗಾದವರಲ್ಲ. ಜಯಮೃತ್ಯುಂಜಯಶ್ರೀ ನ್ಯಾಯಪರ ಹೋರಾಟ ಮಾಡುತ್ತಿದ್ದಾರೆ. ಕೆಲವು ಸ್ವಾಮೀಜಿಗಳು ನಾಟಕೀಯವಾಗಿ ಹೋರಾಟದಲ್ಲಿ ಭಾಗಿ ಆಗಿದ್ದಾರೆ. ಪಾದಯಾತ್ರೆಯಲ್ಲಿ ಬಂದು ಸ್ವಾಮೀಜಿಗಳು ನಾಟಕ ಮಾಡಿದರು. ಯಾರನ್ನೋ ಮಂತ್ರಿ ಮಾಡುವ ಸಲುವಾಗಿ ನಾಟಕ ಮಾಡಿದರು. ಪಾದಯಾತ್ರೆ ವೇಳೆ ಕತ್ತಲಾಗುತ್ತಿದ್ದಂತೆಯೇ ಕಾರಿನಲ್ಲಿ ಕೂಡುತ್ತಿದ್ದರು ಎಂದು ಟೀಕಿಸಿದರು.
ಪಂಚಮಸಾಲಿ 2ಎ ಮೀಸಲಾತಿ, ಎಸ್ಟಿ ಮೀಸಲಾತಿ ಹಾಗೂ ಇತರೇ ಸಮಾಜದ ಮೀಸಲಾತಿ ಶೀಘ್ರದಲ್ಲೇ ನೀಡಲಾಗುತ್ತದೆ ಎಂದು ವಿಧಾನಸಭೆಯಲ್ಲಿ ಸಿಎಂ ಬೊಮ್ಮಾಯಿ ಭರವಸೆ ನೀಡಿದ್ದಾರೆ. ಸರ್ವಪಕ್ಷ ಸಭೆ ಕರೆದು ನಿರ್ಣಯ ಮಾಡುವುದಾಗಿ ಹೇಳಿದ್ದಾರೆ. ಇನ್ನೊಂದು ತಿಂಗಳಲ್ಲಿ ಎಸ್ಟಿ ಮೀಸಲಾತಿ ಹೆಚ್ಚಳ ಜೊತೆಗೆ ಹಿಂದುಳಿದ ವರ್ಗಗಳ ಮೀಸಲಾತಿ ಬಗ್ಗೆ ಸಿಎಂ ನಿರ್ಧರಿಸುತ್ತಾರೆ ಎಂದು ಯತ್ನಾಳ್ ತಿಳಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.