ಯತ್ನಾಳ ವಿಷ ಕಾರುವ ವ್ಯಕ್ತಿ: ಎಂ.ಬಿ.ಪಾಟೀಲ ಕಿಡಿ

By Kannadaprabha NewsFirst Published Apr 30, 2023, 12:47 PM IST
Highlights

ವಿವಿಧ ಧರ್ಮ, ಜಾತಿ, ನಾಯಕರ ಬಗ್ಗೆ ಅಶ್ಲೀಲ ಹೇಳಿಕೆ ನೀಡುತ್ತಿದ್ದಾರೆ. ಹಗಲು-ರಾತ್ರಿ ವಿಷ ಕಾರುವ ಕೆಲಸ ಮಾಡುತ್ತಿದ್ದಾರೆ. ಮುಸ್ಲಿಂ ಬಾಂಧವರಿಗೆ ಕಚೇರಿಗೆ ಬರಬೇಡಿ, ಬುರ್ಖಾ, ಟೋಪಿ, ಗಡ್ಡಧಾರಿಗಳು ನನಗೆ ಬೇಕಾಗಿಲ್ಲ ಎನ್ನುವ ಕನಿಷ್ಠ ತಿಳಿವಳಿಕೆ ಸಹ ಇಲ್ಲದ ವ್ಯಕ್ತಿ ಯತ್ನಾಳ ಎಂದು ಕಿಡಿ ಕಾರಿದ ಎಂ.ಬಿ.ಪಾಟೀಲ. 

ವಿಜಯಪುರ(ಏ.30):  ಶಾಸಕ ಬಸನಗೌಡ ಪಾಟೀಲ ಯತ್ನಾಳ ಐದು ವರ್ಷಗಳಿಂದಲೂ ದ್ವೇಷ ಬಿತ್ತುವ ಹಾಗೂ ಅವಮಾನಕರ, ಅಶ್ಲೀಲ ಹೇಳಿಕೆಗಳನ್ನು ನೀಡುತ್ತ ಬಂದಿದ್ದಾರೆ. ಮತ್ತೊಬ್ಬರ ಬಗ್ಗೆ ವಿಷ ಕಾರುವ ಕೆಲಸವನ್ನು ನಿರಂತರವಾಗಿ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ, ಬಬಲೇಶ್ವರ ಶಾಸಕ ಎಂ.ಬಿ.ಪಾಟೀಲ ಕಿಡಿ ಕಾರಿದರು. ನಗರದಲ್ಲಿ ಶನಿವಾರ, ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಎಂ.ಬಿ.ಪಾಟೀಲ, ವಿವಿಧ ಧರ್ಮ, ಜಾತಿ, ನಾಯಕರ ಬಗ್ಗೆ ಅಶ್ಲೀಲ ಹೇಳಿಕೆ ನೀಡುತ್ತಿದ್ದಾರೆ. ಹಗಲು-ರಾತ್ರಿ ವಿಷ ಕಾರುವ ಕೆಲಸ ಮಾಡುತ್ತಿದ್ದಾರೆ. ಮುಸ್ಲಿಂ ಬಾಂಧವರಿಗೆ ಕಚೇರಿಗೆ ಬರಬೇಡಿ, ಬುರ್ಖಾ, ಟೋಪಿ, ಗಡ್ಡಧಾರಿಗಳು ನನಗೆ ಬೇಕಾಗಿಲ್ಲ ಎನ್ನುವ ಕನಿಷ್ಠ ತಿಳಿವಳಿಕೆ ಸಹ ಇಲ್ಲದ ವ್ಯಕ್ತಿ ಯತ್ನಾಳ ಎಂದು ಕಿಡಿ ಕಾರಿದರು.

ಯತ್ನಾಳರ ತಂದೆ ಒಳ್ಳೆಯ ವ್ಯಕ್ತಿ. ಬಸವಣ್ಣನವರ ಹೆಸರನ್ನು ಯತ್ನಾಳರಿಗೆ ಇಟ್ಟಿದ್ದಾರೆ. ಆದರೆ, ಬಸನಗೌಡರು ಬಸವಣ್ಣನವರ ಆಚಾರ-ವಿಚಾರ, ತತ್ವ-ಸಿದ್ಧಾಂತಕ್ಕೆ ವಿರೋಧವಾಗಿ ನಡೆದುಕೊಳ್ಳುತ್ತಿದ್ದಾರೆ. ಅನೇಕ ವರ್ಷಗಳಿಂದಲೂ ಧರ್ಮ, ಜಾತಿ, ನಾಯಕರ ಬಗ್ಗೆ ಅವಹೇಳನ ಮಾಡುತ್ತಲೇ ಬಂದಿದ್ದು, ಬಾಯಿ ತೆಗೆದರೆ ಸಾಕು ವಿಷ ಉಗುಳುವ ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿ ಕಾರಿದರು.

ಪ್ರಧಾನಿ ಮೋದಿ ಬರೀ ಸುಳ್ಳು ಹೇಳ್ತಾರೆ: ಎಂ.ಬಿ.ಪಾಟೀಲ

ರಾಹುಲ್‌ ಗಾಂಧಿ ಹುಚ್ಚ ಎಂದಿದ್ದಾರೆ:

ರಾಹುಲ್‌ ಗಾಂಧಿ ಅವರಿಗೆ ಹುಚ್ಚ ಎನ್ನುವ ಪದ ಬಳಸಿದ್ದಾರೆ. ಯತ್ನಾಳರ ಈ ನಡವಳಿಕೆ ಗಮನಿಸಿದರೆ ಜನತೆ ತಮ್ಮನ್ನು ಏನನ್ನುತ್ತಾರೆ? ಎಂದು ಒಮ್ಮೆ ಆತ್ಮಾವಲೋಕನ ಮಾಡಿಕೊಳ್ಳಿ. ಎಐಸಿಸಿ ಅಧಿನಾಯಕಿ ಸೋನಿಯಾ ಗಾಂಧೀಜಿ ಅವರಿಗೂ ವಿಷ ಕನ್ಯೆ, ಪಾಕ್‌ ಏಜೆಂಟ್‌ ಹೀಗೆ ಅನೇಕ ಅಸಂಬದ್ಧ ಪದಗಳನ್ನು, ಕೆಟ್ಟಮಾತುಗಳನ್ನು ಆಡುತ್ತಿದ್ದಾರೆ ಎಂದು ಎಂ.ಬಿ.ಪಾಟೀಲ್‌ ದೂರಿದರು.

ಸೋನಿಯಾ ಗಾಂಧಿ ತ್ಯಾಗಿ:

ಸೋನಿಯಾ ಗಾಂಧಿ ರಾಜೀವ ಗಾಂಧಿ ಅವರ ಕೈ ಹಿಡಿದು ದೇಶದ ಸೊಸೆಯಾಗಿದ್ದಾರೆ. 50 ವಷÜರ್‍ಗಳಿಂದ ಭಾರತದಲ್ಲಿ ನೆಲೆಸಿದ್ದಾರೆ. ಭಾರತದ ಪ್ರಧಾನಿಯಾಗಲು ಎರಡು ಬಾರಿ ಅವಕಾಶವಿದ್ದರೂ ತ್ಯಾಗ ಮಾಡಿ ಡಾ.ಮನಮೋಹನ ಸಿಂಗ್‌ ಅವರನ್ನು ಪ್ರಧಾನಿ ಹುದ್ದೆಗೇರಿಸಿದರು. ಇದನ್ನು ಯತ್ನಾಳ ಅರ್ಥ ಮಾಡಿಕೊಳ್ಳಬೇಕು ಎಂದರು.

ಯತ್ನಾಳ ಈ ಹಿಂದೆ ಸೋಮಣ್ಣ ಅವರನ್ನು ಬೈದರು ಮುಂದೆ ಗೆಳೆತನವಾಯಿತು. ಯಡಿಯೂರಪ್ಪ ಮತ್ತು ಪುತ್ರ ವಿಜಯೇಂದ್ರ ವಿರುದ್ಧ ಸಾವಿರ ಹೇಳಿಕೆಗಳನ್ನು ನೀಡಿದ್ದಾರೆ. ನಿರಂತವಾಗಿ ಅವರನ್ನು ತೆಗಳುತ್ತಲೇ ಬಂದಿದ್ದಾರೆ. ಕೆಟ್ಟಪದ ಪ್ರಯೋಗಿಸಿ ಟೀಕಿಸಿದ್ದಾರೆ. ಈಗ ಅವರನ್ನು ಹೊಗಳುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ಪಕ್ಷಕ್ಕೆ ಶೆಟ್ಟರ್‌ ಚೂರಿ ಹಾಕಿದ್ದಾರೆ ಎಂಬ ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಎಂ.ಬಿ.ಪಾ, ಯಡಿಯೂರಪ್ಪ ಅವರು ಈ ಹಿಂದೆ ಕೆಜೆಪಿ ಕಟ್ಟಿದಾಗ ಪಕ್ಷಕ್ಕೆ ಬೆನ್ನಿಗೆ ಚೂರಿ ಹಾಕಿಲ್ಲವೇ? ಕೆಜೆಪಿ ವಿಷಯವಾಗಿ ದೊಡ್ಡ ಮಟ್ಟದ ವಿಷಯಗಳಿವೆ. ಅದನ್ನು ಸಮಯ ಬಂದಾಗ ಬಹಿರಂಗಪಡಿಸುತ್ತೇನೆ ಎಂದರು.

ಬಿಜೆಪಿ ಸರ್ಕಾರದ ಎರಡೂ ಎಂಜಿನ್‌ ಫೇಲ್‌: ಎಂ.ಬಿ.ಪಾಟೀಲ ವಾಗ್ದಾಳಿ

ಪರಮೇಶ್ವರ ಮೇಲೆ ಹಲ್ಲೆ ಖಂಡನೆ:

ಚುನಾವಣೆಯಲ್ಲಿ ಅಭಿವೃದ್ಧಿ ವಿಷಯವಾಗಿ ಪ್ರಚಾರ ನಡೆಸಬೇಕು. ಪ್ರತಿಪಕ್ಷದವರ ವೈಫಲ್ಯಗಳನ್ನು ಜನರ ಮುಂದೆ ಇರಿಸಿ ಮತ ಕೇಳಬೇಕು. ಅದನ್ನು ಬಿಟ್ಟು ಕಲ್ಲು ಒಗೆಯುವುದು, ಪ್ರಚಾರಕ್ಕೆ ಅಡ್ಡಿ ಪಡಿಸುವುದು, ಹಲ್ಲೆ ಮಾಡುವಂತಹ ಹೇಯ ಕೃತ್ಯ ಸಲ್ಲದು. ಡಾ.ಜಿ.ಪರಮೇಶ್ವರ ಮೇಲೆ ಈ ರೀತಿ ಹಲ್ಲೆ ನಡೆಸಿರುವುದು ಖಂಡನೀಯ ಎಂದು ಎಂ.ಬಿ.ಪಾಟೀಲ ಹೇಳಿದರು.

ಪತ್ನಿ ಪ್ರಚಾರಕ್ಕೆ ತೆರಳಿದಾಗ ಅಡ್ಡಿಪಡಿಸಿದ್ರು:

ನನ್ನ ಪತ್ನಿ ಆಶಾ ಪಾಟೀಲ ಅವರು ಹುಬನೂರ ಗ್ರಾಮದಲ್ಲಿ ಪ್ರಚಾರಕ್ಕೆ ತೆರಳಿದಾಗಲೂ ಕೆಲವರು ಬೈಕ್‌ ಶಬ್ದ ಮಾಡಿ ಪ್ರಚಾರಕ್ಕೆ ಅಡ್ಡಿಪಡಿಸಿದರು. ಹಲ್ಲೆ ನಡೆಸಲು ಮುಂದಾದರು. ಕೆಲ ದಿನಗಳ ಹಿಂದೆ ಯುವಕನೋರ್ವ ಹಿರಿಯ ಮನುಷ್ಯರೊಬ್ಬರಿಗೆ ಅಶ್ಲೀಲ ಪದ ಪ್ರಯೋಗಿಸಿದ. ಹಿರಿಯರಿಗೆ ಅವಮಾನ ಸರಿಯಲ್ಲ ಎಂದು ಬುದ್ಧಿವಾದ ಹೇಳಿದ್ದೆ. ಮಗನ ವಯಸ್ಸಿನ ಯುವಕ ಎಂದು ಬುದ್ಧಿವಾದ ಹೇಳಿದ್ದೇನೆ. ಆತನ ಮೇಲೆ ಹಲ್ಲೆ ನಡೆಸಿಲ್ಲ. ಆದರೆ ಅದನ್ನೇ ಗೂಂಡಾಗಿರಿ ಎಂದು ಕೆಲವರು ಬಿಂಬಿಸುತ್ತಿದ್ದಾರೆ ಎಂದು ಹೇಳಿದರು.

click me!