ಬೆಂಗಳೂರು (ಜು.18): ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ದೆಹಲಿಗೆ ಭೇಟಿ ನೀಡಿದ ಬೆನ್ನಲ್ಲೇ ಬಿಜೆಪಿ ವರಿಷ್ಠರು ಯಡಿಯೂರಪ್ಪ ಅವರಿಗೆ ತಕ್ಷಣ ರಾಜೀನಾಮೆ ನೀಡಲು ಸೂಚಿಸುತ್ತಾರೆ, ಯಡಿಯೂರಪ್ಪ ಅವರನ್ನು ಪಶ್ಚಿಮ ಬಂಗಾಳಕ್ಕೆ ರಾಜ್ಯಪಾಲರನ್ನಾಗಿ ನಿಯುಕ್ತಿಗೊಳಿಸಲಾಗುತ್ತದೆ, ಪುತ್ರ ಬಿ.ವೈ.ವಿಜಯೇಂದ್ರ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಲಾಗುತ್ತದೆ ಎಂಬಿತ್ಯಾದಿ ವದಂತಿಗಳು ಬಲವಾಗಿ ಕೇಳಿಬಂದವು. ರಾಷ್ಟ್ರೀಯ ಮಾಧ್ಯಮಗಳೂ ಈ ಕುರಿತು ವರದಿ ಪ್ರಸಾರ ಮಾಡಿ ಇದಕ್ಕೆ ಪುಷ್ಟಿನೀಡಿದವು.
ಸಿಎಂಗೆ ವರಿಷ್ಠರಿಂದ ಮೂರು ಟಾರ್ಗೆಟ್!
ಆದರೆ, ಅದೆಲ್ಲವೂ ಸುಳ್ಳು. ಕೇವಲ ಊಹಾಪೋಹಗಳಿಂದ ಕೂಡಿವೆ ಹೊರತು ವಾಸ್ತವ ಅಲ್ಲ ಎಂದು ಪಕ್ಷದ ಉನ್ನತ ಮೂಲಗಳು ಸ್ಪಷ್ಟಪಡಿಸಿವೆ.
ನಾಯಕತ್ವ ಬದಲಾವಣೆ ಕುರಿತು ತಕ್ಷಣವೇ ನಿರ್ಧಾರ ಕೈಗೊಳ್ಳುವ ಹಂತ ಇನ್ನೂ ಬಂದಿಲ್ಲ. ಆ ಸಂದರ್ಭ ಬಂದಾಗ ನೋಡೋಣ. ಸದ್ಯಕ್ಕೆ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಮುಂದುವರೆಸಲಾಗುವುದು ಎಂದು ತಿಳಿದು ಬಂದಿದೆ.