"ಅವರು ಕಾಲಿಟ್ಟಲ್ಲೆಲ್ಲಾ ಕಮಲ ಅರಳತ್ತೆ"; ಸೋನಿಯಾ - ಪ್ರಿಯಾಂಕಾಗೆ ಸ್ವಾಗತ ಕೋರಿದ ಬಿಜೆಪಿಯ ಲಕ್ಷಣ್‌ ಸವದಿ

By Sharath Sharma KalagaruFirst Published Oct 3, 2022, 3:59 PM IST
Highlights

Laxman Savadi mocks Sonia Gandhi:  ಬಿಜೆಪಿ ನಾಯಕ ಲಕ್ಷ್ಮಣ ಸವದಿ ಸೋನಿಯಾ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಭಾರತ್‌ ಜೋಡೊ ಯಾತ್ರೆಯಲ್ಲಿ ಪಾಲ್ಗೊಳ್ಳುವ ಕುರಿತು ವ್ಯಂಗ್ಯ ಮಾಡಿದ್ದಾರೆ. ಅವರು ಬರಲಿ, ಅವರನ್ನು ಸ್ವಾಗತಿಸುತ್ತೇನೆ. ಅವರು ಕಾಲಿಟ್ಟಲ್ಲೆಲ್ಲಾ ಕಮಲ ಅರಳುತ್ತದೆ ಎಂದು ಹೇಳಿದ್ದಾರೆ.  

ಬೆಳಗಾವಿ: ಬಿಜೆಪಿ ರಾಜ್ಯ ಉಪಾಧ್ಯಕ್ಷ ಮತ್ತು ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ್‌ ಸವದಿ ಸೋನಿಯಾ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಅವರ ರಾಜ್ಯ ಭೇಟಿಯನ್ನು ಅಣಕಿಸಿದ್ದಾರೆ. ಸೋನಿಯಾ ಗಾಂಧಿ ಹಾಗೂ ಪ್ರಿಯಂಕಾ ವಾದ್ರಾ ಅವರಿಗೆ ರಾಜ್ಯಕ್ಕೆ ಸ್ವಾಗತ. ಅವರು ಎಲ್ಲೆಲ್ಲಿ ಕಾಲು ಇಟ್ಟಿದ್ದಾರೆ, ಅಲ್ಲಲ್ಲಿ ಕಮಲ ಅರಳಿದೆ, ಅವರನ್ನು ನಾನು ಸ್ವಾಗತಿಸುತ್ತೇನೆ ಎಂದು ಕೇಂದ್ರ ಕಾಂಗ್ರೆಸ್ ನಾಯಕರ ವಿರುದ್ಧ ಸವದಿ ಲೇವಡಿಯಾಡಿದ್ದಾರೆ. ದೇಶದಲ್ಲಿ ಕಾಂಗ್ರೆಸ್ ನೇತೃತ್ವ ಕಳೆದುಕೊಂಡಿದೆ. ಭಾರತ ಜೋಡೋ ಅಲ್ಲ ಕಾಂಗ್ರೆಸ್ ಸಿದ್ದರಾಮಯ್ಯ ಡಿಕೆ ಜೋಡೋ ಕಾರ್ಯಕ್ರಮ ಇದಾಗಿದೆ ಎನ್ನುವ ಮೂಲಕ ರಾಹುಲ್ ಗಾಂಧಿ ಭಾರತ ಜೋಡೋ ಕಾಂಗ್ರೆಸ್ ಅಭಿಯಾನ ಪಾದಯಾತ್ರೆಯ ಕಾಲೆಳೆದಿದ್ದಾರೆ. ಭಾರತ ಜೋಡೋ ಎನ್ನುವುದಕ್ಕೆ, ಭಾರತ ಒಡದಿಲ್ಲ. ಅವತ್ತಿನ ವಲ್ಲಭಬಾಯಿ ಪಟೇಲ್ ಅವರಿಗೆ ಧನ್ಯವಾದ ಸಲ್ಲಿಸಬೇಕು. ಅವತ್ತಿನ ಹಲವು ರಾಜರ ಪ್ರಾಂತ್ಯಗಳನ್ನು ಒಗ್ಗೂಡಿಸಿದ ವಲ್ಲಭಬಾಯಿ ಪಟೇಲ್ ಅವರಿಗೆ ಧನ್ಯವಾದ ಸಲ್ಲಿಸುತ್ತೇನೆ. ಕಾಂಗ್ರೆಸ್ ನವರು ಯಾಕೆ ಭಾರತ ಜೋಡೊ ಮಾಡುತ್ತಿದ್ದಾರೆ, ಎಲ್ಲಿ ಭಾರತ ಒಡೆದಿದೆ ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಹವಾಮಾನ ವೈಪರಿತ್ಯ, ಆರೋಗ್ಯ ಸಮಸ್ಯೆ: Sonia Gandhi ಕೊಡಗು ಪ್ರವಾಸ ರದ್ದು, ಮೈಸೂರಿನಲ್ಲೇ ವಾಸ್ತವ್ಯ

ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಐಗಳಿ ಗ್ರಾಮದಲ್ಲಿ ಮಾತನಾಡಿದ ಲಕ್ಷ್ಮಣ್‌ ಸವದಿ ಕಾಂಗ್ರೆಸ್‌ ಪಾದಯಾತ್ರೆಯ ಬಗ್ಗೆ ವ್ಯಂಗ್ಯ ಮಾಡಿದ್ದಾರೆ. ಇಂದು ಸೋನಿಯಾ ಗಾಂಧಿ ವಿಮಾನದ ಮೂಲಕ ಮೈಸೂರಿಗೆ ಬಂದು ತಲುಪಿದ್ದಾರೆ. ಭಾರತ ಐಕ್ಯತಾ ಯಾತ್ರೆಯಲ್ಲಿ ಸೋನಿಯಾ ಮತ್ತು ಪ್ರಿಯಾಂಕ ಭಾಗಿಯಾಗುತ್ತಿರುವ ಕುರಿತು ಪ್ರಶ್ನಿಸಿದಾಗ ಪ್ರತಿಕ್ರಿಯೆ ನೀಡಿದ ಸವದಿ, ಅವರನ್ನು ಸ್ವಾಗತಿಸುತ್ತೇನೆ. ಅವರು ಕಾಲಿಟ್ಟರೆ ಕಮಲ ಅರಳುತ್ತದೆ ಎಂದಿದ್ದಾರೆ. ಜತೆಗೆ ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಇಬ್ಬರನ್ನೂ ಜೋಡೊ ಮಾಡುವ ಯತ್ನಕ್ಕೆ ಕಾಂಗ್ರೆಸ್‌ ರಾಷ್ಟ್ರೀಯ ನಾಯಕರು ಯತ್ನಿಸುತ್ತಿದ್ದಾರೆ ಎಂದಿದ್ದಾರೆ. 

ಮೈಸೂರಿಗೆ ಬಂದ ಸೋನಿಯಾ:

ಸೋನಿಯಾ ಗಾಂಧಿ ಮಧ್ಯಾಹ್ನ 12.30ಕ್ಕೆ ಮೈಸೂರಿನ ವಿಮಾನ ನಿಲ್ದಾಣಕ್ಕೆ ಬಂದಿಳಿದರು. ಕಾಂಗ್ರೆಸ್‌ ರಾಜ್ಯಾಧ್ಯಕ್ಷ ಡಿಕೆ ಶಿವಕುಮಾರ್‌ ಅವರನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದರು. ನಂತರ ನಿಯೋಜಿತ ಕಾರ್ಯಕ್ರಮದ ಪ್ರಕಾರ ಅವರು ಹೆಲಿಕಾಪ್ಟರ್‌ ಮೂಲಕ ಕೊಡಗಿಗೆ ತೆರಳಬೇಕಿತ್ತು. ಆದರೆ ಹವಾಮಾನ ಸರಿ ಇಲ್ಲದ ಹಿನ್ನೆಲೆ ಹೆಲಿಕಾಪ್ಟರ್‌ ಯಾನ ಸಾಧ್ಯವಾಗಲಿಲ್ಲ. ಈ ಕಾರಣಕ್ಕೆ ಅವರು ರಸ್ತೆ ಮಾರ್ಗದಲ್ಲಿ ಹೋಗಲು ಮೊದಲು ನಿರ್ಧರಿಸಿದರಾದರೂ, ಅನಾರೋಗ್ಯದ ಹಿನ್ನೆಲೆಯಲ್ಲಿ ಮೈಸೂರಿನ ಕಬಿನಿ ಬಳಿಯ ರೆಸಾರ್ಟ್‌ ಒಂದರಲ್ಲಿ ತಂಗಲು ನಿರ್ಧರಿಸಿದರು. ಮಧ್ಯಾಹ್ನ ಮೈಸೂರಿನ ವಿಂಡ್‌ ಮಿಲ್‌ ಹೋಟೆಲ್‌ನಲ್ಲಿ ಊಟ ಸೇವಿಸಿದ ಅವರು, ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರ ಜೊತೆಗೆ ರೆಸಾರ್ಟ್‌ಗೆ ತೆರಳಿದರು. ಎರಡು ದಿನಗಳ ಕಾಲ ರೆಸಾರ್ಟ್‌ನಲ್ಲೇ ಸೋನಿಯಾ ಗಾಂಧಿ ವಿಶ್ರಾಂತಿ ಪಡೆಯಲಿದ್ದಾರೆ. ಭಾರತ್‌ ಜೋಡೊ ಯಾತ್ರೆ ಎರಡು ದಿನಗಳ ಕಾಲ ಸ್ಥಗಿತಗೊಳ್ಳಲಿದ್ದು, ರಾಹುಲ್‌ ಗಾಂಧಿ ಕೂಡ ಇದೇ ರೆಸಾರ್ಟ್‌ನಲ್ಲಿ ತಂಗಲಿದ್ದಾರೆ. 

ಇದನ್ನೂ ಓದಿ: Bharat Jodo Yatra: ಜಡಿ ಮಳೆಗೂ ಬಗ್ಗಲಿಲ್ಲ Rahul Gandhi, ಸುರಿವ ಮಳೆಯಲ್ಲೇ ಭಾಷಣ; ಜನರಿಗೆ ಭೇಷ್‌ ಎಂದ ರಮ್ಯಾ

ಪಾದಯಾತ್ರೆಗೆ ಸೋನಿಯಾ, ಪ್ರಿಯಾಂಕಾ:

ಎರಡು ದಿನಗಳ ವಿಶ್ರಾಂತಿ ಬಳಿಕ ಸೋನಿಯಾ ಗಾಂಧಿ ಸೆಪ್ಟೆಂಬರ್‌ ಆರನೇ ತಾರೀಕು ಮಂಡ್ಯ ಜಿಲ್ಲೆಯ ಮೇಲುಕೋಟೆಯಲ್ಲಿ ಪಾದಯಾತ್ರೆಯಲ್ಲಿ ಭಾಗಿಯಾಗಲಿದ್ದಾರೆ. ಸೆಪ್ಟೆಂಬರ್‌ ಏಳರಂದು ಪ್ರಿಯಾಂಕಾ ಗಾಂಧಿ ವಾದ್ರಾ ಕೂಡ ನಾಗಮಂಗಲದಲ್ಲಿ ಪಾದಯಾತ್ರೆ ಮಾಡಲಿದ್ದಾರೆ. ಅದಾದ ನಂತರ ರಾಹುಲ್‌ ಗಾಂಧಿ ಇತರೆ ಕಾಂಗ್ರೆಸ್‌ ನಾಯಕರ ಜೊತೆ ಪಾದಯಾತ್ರೆ ಮುಂದುವರೆಸಲಿದ್ದಾರೆ. ಈ ಭೇಟಿಯ ವೇಳೆ ಮುಂಬರುವ ವಿಧಾನಸಭೆ ಚುನಾವಣೆ ಕುರಿತಂತೆ ರಾಜ್ಯ ನಾಯಕರ ಜೊತೆ ಸೋನಿಯಾ ಚರ್ಚಿಸಲಿದ್ದಾರೆ. ಜತೆಗೆ ಕಾಂಗ್ರೆಸ್‌ ರಾಷ್ಟ್ರಾಧ್ಯಕ್ಷ ಚುನಾವಣೆ ಕುರಿತಂತೆಯೂ ಮಲ್ಲಿಕಾರ್ಜುನ್‌ ಖರ್ಗೆ ಜತೆ ಚರ್ಚಿಸಲಿದ್ದಾರೆ. 

click me!