ದೇಶದಲ್ಲಿ ಕಾಂಗ್ರೆಸ್ ಪಕ್ಷ ಬ್ಯಾನ್ ಮಾಡ್ಬೇಕು; ಯತ್ನಾಳ್ ವಾಗ್ದಾಳಿ

By Ravi JanekalFirst Published Oct 3, 2022, 3:46 PM IST
Highlights
  • ಬಾಗಲಕೋಟೆ ನಗರದಲ್ಲಿ ದಸರಾ ಹಬ್ಬದ ಪೂಜೆಗೆ ಚಾಲನೆ ನೀಡಿದ ಬಸನಗೌಡ ಪಾಟೀಲ...
  • ವಕ್ಫ್ ಕಾನೂನು ರದ್ದು ಮಾಡುತ್ತೇವೆ...ಕಾಮನ್ ಸಿವಿಲ್ ಕೋಡ್ ಜಾರಿ ತರುತ್ತೇವೆ.‌‌.
  • ಬಾಗಲಕೋಟೆ - ವಿಜಯಪುರ ಅವಳಿ ಜಿಲ್ಲೆಯಲ್ಲಿ ನಿಲ್ಲದ ಹುಳುವಿನ ಕಾಟ 
  • ಪರೋಕ್ಷವಾಗಿ ಮುರುಗೇಶ್ ನಿರಾಣಿಗೆ ಟಾಂಗ್?

ವರದಿ:- ಮಲ್ಲಿಕಾರ್ಜುನ ಹೊಸಮನಿ, ಏಷಿಯಾನೆಟ್ ಸುವರ್ಣನ್ಯೂಸ್, ಬಾಗಲಕೋಟೆ.

ಬಾಗಲಕೋಟೆ (ಅ.3) : ಕಾಂಗ್ರೆಸ್ ಈ‌‌ ದೇಶಕ್ಕೆ ಒಂದು ಶಾಪವಾಗಿದೆ. ಮೊದಲು ಈ ದೇಶದಲ್ಲಿ ಕಾಂಗ್ರೆಸ್ ಪಕ್ಷವನ್ನು ಬ್ಯಾನ್ ಮಾಡಬೇಕು ಎಂದು ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

ಯತ್ನಾಳ್‌ ಹೇಳಿಕೆಯಿಂದ ಪಕ್ಷಕ್ಕೆ ಡ್ಯಾಮೇಜ್‌: ವಿಜಯೇಂದ್ರ

 ಅವರು ಬಾಗಲಕೋಟೆ(Bagalkote) ನಗರಕ್ಕೆ ಆಗಮಿಸಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶಕ್ಕೆ ಸ್ವಾತಂತ್ರ್ಯ ಬಂದ ಬಳಿಕ ಕಾಂಗ್ರೆಸ್ ಅನ್ನು ವಿಸರ್ಜಿಸುವಂತೆ ಗಾಂಧೀಜಿ ಹೇಳಿದ್ದರು. ಸಿದ್ದರಾಮಯ್ಯ ಅವರು ಪೂರ್ತಿ ಹತಾಶೆ ಆಗಿದ್ದಾರೆ. ಹೀಗಾಗಿ ಆರೆಸ್ಸೆಸ್ ಸಂಘಟನೆ ಬ್ಯಾನ್ ಮಾಡಬೇಕು ಎಂದು ಹೇಳುತ್ತಿದ್ದಾರೆ ಎಂದು ಕಿಡಿ ಕಾರಿದರು.

ಆರೆಸ್ಸೆಸ್ ಒಂದು ದೇಶಭಕ್ತ ಸಂಘಟನೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ದೇಶಭಕ್ತರನ್ನು ತಯಾರು ಮಾಡುವಂತಹ ಕಾರ್ಖಾನೆ ಆರೆಸ್ಸೆಸ್ ಆಗಿದೆ. ಆದರೆ ಪಿಎಫ್ಐ ಸಂಘಟನೆ ದೇಶದಲ್ಲಿ ಹಿಂದುಗಳ ಹತ್ಯೆ ಮಾಡುವುದು, ಹಿಂದು ನಾಯಕರ ಕೊಲೆ, ಲವ್ ಜಿಹಾದ್ ಮಾಡಬೇಕೆಂಬ ಕುತಂತ್ರ ನಡೆಸಿರುವುದಕ್ಕೆ ಸಾಕ್ಷ್ಯ ಇದೆ.. ನಮ್ಮಸರ್ಕಾರ ಪಿಎಫ್‌ಐ ಸಂಘಟನೆಯನ್ನ ಸುಮ್ಮನೆ ನಿಷೇಧ ಹೇರುವ ಕೆಲಸ ಮಾಡಿಲ್ಲ. ಈ ದೇಶದ ಅನ್ನ ತಿಂದು ದೇಶದಲ್ಲಿ ಭಯೋತ್ಪಾದನೆ ಚಟುವಟಿಕೆ ನಡೆಸಲು ಕುತಂತ್ರ ನಡೆಸಿದ್ದಾರೆ. ಈ ಚಟುವಟಿಕೆಗಾಗಿ ಅರಬ್ ದೇಶಗಳಿಂದ ಸಾವಿರಾರು ಕೋಟಿ ರೂ ಹಣ ಹರಿದು ಬರುತ್ತಿದೆ. ಇವೆಲ್ಲ ದಾಖಲೆಗಳನ್ನಿಟ್ಟುಕೊಂಡೇ ಎನ್‌ಐಎ ದಾಳಿ ನಡೆಸಿದೆ. ಇದೀಗ ಪಿಎಫ್ಐ ನಿಷೇಧ ಅಗಿದ್ದು ಕಾಂಗ್ರೆಸ್ ಗೆ ಒಳಗಿಂದ ಒಳಗೆ ಸಂತೋಷವಿದೆ. ದುರ್ದೈವ ಅಂದ್ರೆ ದೇಶಕ್ಕಿಂತ ಮುಸ್ಲಿಂ ವೋಟ್ ಗಳಿಗಾಗಿ ಟೀಕೆ ಮಾಡ್ತಿದಾರೆ. ಪಿಎಫ್ಐ ನಿಂದ ಕಾಂಗ್ರೆಸ್ ಮತಬ್ಯಾಂಕ್ ಒಡೆದು ಹೋಗಿತ್ತು. ಕಾಂಗ್ರೆಸ್ ಗೆ ಜೀವನ ಕೊಟ್ಟಿದ್ದು ನರೇಂದ್ರ ಮೋದಿ ಎಂದು ಯತ್ನಾಳ್ ವ್ಯಂಗ್ಯ ಮಾಡಿದರು.

ರಾಹುಲ್ ಒಬ್ಬ ಅರೆಹುಚ್ಚ ಎಂದ ಯತ್ನಾಳ್: 

ಭಾರತ ಜೋಡೋ ವಿಚಾರವಾಗಿ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ ಯತ್ನಾಳ್,  ಭಾರತ ಜೋಡೊ ಅನ್ನೋದಕ್ಕೆ ಕಾಂಗ್ರೆಸ್ಸಿಗರಿಗೆ ನೈತಿಕತೆಯೇ ಇಲ್ಲ. ಪಾಕಿಸ್ತಾನ ಒಡೆದು ಕೊಟ್ಟವರು ಯಾರು? ಬಾಂಗ್ಲಾದೇಶ ಒಡೆದವ್ರು ಯಾರು? ಎಂದು ಪ್ರಶ್ನೆ ಮಾಡಿದ್ದಾರೆ.

ಕಾಶ್ಮೀರದ ಆರ್ಟಿಕಲ್ 370 ವಿಧಿ ಲಾಗು ಮಾಡಿದವರು ಕಾಂಗ್ರೆಸ್, ಕಾಂಗ್ರೆಸ್ ಭಾರತವನ್ನು ತೋಡೊ ಮಾಡುವ ಕೆಲಸ ಮಾಡಿದೆ. ಆದರೆ ಪಿಎಂ‌ ಮೋದಿ ಭಾರತವನ್ನು ಜೋಡಿಸುವ ಕೆಲಸ ಮಾಡುತ್ತಿದ್ದಾರೆ. ಕಾಶ್ಮೀರದ 370 ನೇ ವಿಧಿ ನಾವು ತೆಗೆದು ಹಾಕಿದ್ವಿ. ಭಾರತದ ಅವಿಭಾಜ್ಯ ಅಂಗ ಅಂತೇಳಿ ಡಿಕ್ಲೇರ್ ಮಾಡಿದ್ದೀವಿ. ಆದರೆ ಕಾಂಗ್ರೆಸ್ ನವರು ಈ ದೇಶದಲ್ಲಿ ಇನ್ನೊಂದು ಪಾಕಿಸ್ತಾನ ತಯಾರು ಮಾಡಲು ಹೊರಟಿದ್ದಾರೆ  ಅವರಿಗೆ ಮುಸ್ಲಿಮರ ತುಷ್ಟೀಕರಣ ಬಿಟ್ರೆ, ದೇಶದ ಬಗ್ಗೆ ಯಾವ ನೈಜ ಕಾಳಜಿಯೂ ಇಲ್ಲ. ಅದು ಭಾರತದ ಕಾಂಗ್ರೆಸ್ ಅಲ್ಲ. ಪಾಕಿಸ್ತಾನದ ಕಾಂಗ್ರೆಸ್ ಆಗಿ ಪರಿವರ್ತನೆ ಆಗಿದೆ ಎಂದು‌ ಕಿಡಿ ಕಾರಿದ ಯತ್ನಾಳ್, ಮುಸ್ಲಿಮರ ಅಭಿವೃದ್ಧಿ ಸಲುವಾಗಿ ಮಾತನಾಡ್ತಾರೆ. ಬಾಡಿಗೆ ಜನರನ್ನು ತಂದು ಹೋರಾಟ ಮಾಡಿಸ್ತಿದ್ದಾರೆ ಎಂದು ಕಿಡಿಕಾರಿದರು.

ರಾಹುಲ್ ಎಂಬ ಅರೆಹುಚ್ಚ, ಅಪ್ರಬುದ್ಧ, ಬಟಾಟಿಯಿಂದ ಬಂಗಾರ ತೆಗೆಯುವಂತಹ ವ್ಯಕ್ತಿ. ರಾಹುಲ್ ಪಿಎಂ ಆದ್ರೆ ಏನಾಗುತ್ತೆ ಅನ್ನೋದು ದೇಶದ ಜನರಿಗೆ ಗೊತ್ತಿದೆ. ಭಾರತ್ ಜೋಡೋದಿಂದ ಬಿಜೆಪಿ ಹೆದರಿಲ್ಲ. ಆದರೆ  ಕಾಂಗ್ರೆಸ್ ಹತಾಶೆಗೊಂಡಿದೆ. ಇನ್ನೂ 20 ವರ್ಷ ಮೋದಿನೇ ಪ್ರಧಾನಿ ಆಗಿರ್ತಾರೆ ಎಂದು ತಿಳಿಸಿದರು.

ಡಿಕೆಶಿ ಮೇಲಿನ ಆರೋಪಗಳು ಸಿದ್ದರಾಮಯ್ಯರ ಮೇಲಿಲ್ಲ 

ಸಿಬಿಐಯನ್ನು ಬಿಜೆಪಿ ದುರುಪಯೋಗ ಪಡಿಸಿಕೊಳ್ತಿದೆ ಎಂಬ ಡಿಕೆಶಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಯತ್ನಾಳ್, ಇವ್ರು ಈ ದೇಶ ಲೂಟಿ ಮಾಡಿದ್ದಾರೆ. ಕನಕಪುರ ಪೂರ್ತಿ ಲೂಟಿ ಆಗಿದೆ. ಸಾವಿರಾರು ಕೋಟಿ ರೂಪಾಯಿ ಅಕ್ರಮ‌ ಆಸ್ತಿ ಇದೆ. ನನ್ನ ಮೇಲೆ ರೇಡ್ ಮಾಡ್ತಾರಾ? 10 ಸಾರಿ ರೇಡ್ ಮಾಡಿದ್ರು ನನ್ನ ಬಳಿ ಏನೂ ಸಿಗುವುದಿಲ್ಲ. ನೀವು ಕಳ್ಳತನ ಮಾಡಿದ್ದೀರಿ. ಅದಕ್ಕೆ ಸಿಬಿಐನವರು ರೇಡ್ ಮಾಡ್ತಿದಾರೆ. ನಾವೇನು ಸಿದ್ದರಾಮಯ್ಯ ಮನೆ ಮೇಲೆ ರೇಡ್‌ಮಾಡಿದ್ದೀವಾ? ಸಿದ್ದರಾಮಯ್ಯ ಅವ್ರದ್ದು ಯಾಕೆ ಮಾಡಿಲ್ಲ.ಡಿಕೆಶಿ ಮೇಲಿನ ತರಹದ ಆರೋಪಗಳು ಸಿದ್ದರಾಮಯ್ಯ ಮೇಲಿಲ್ಲ. ಆರೋಪ ಇದ್ರೆ ಸಿದ್ದರಾಮಯ್ಯ ಮೇಲೂ ಮಾಡ್ತಾರೆ. ನನ್ನ ಮೇಲೂ ರೇಡ್ ಮಾಡ್ತಾರೆ. ನಮ್ಮ ಬಿಜೆಪಿ ಕೆಲವು ಮಂದಿ ಮೇಲೆ ರೇಡ್ ಮಾಡಿದ್ದಾರೆ. ಹಿಂದಿನ ಸಿಎಂ ಅವರ ಮಗನ ಅತ್ಯಂತ  ನಿಕಟ ಇದ್ದ ಕಂಡಕ್ಟರ್ ಮೇಲೂ ರೇಡ್ ಮಾಡಿದ್ರು ಎಂದು ತಿಳಿಸಿದರು.

ಬಾಗಲಕೋಟೆ - ವಿಜಯಪುರ ಅವಳಿ ಜಿಲ್ಲೆಯಲ್ಲಿ ಹುಳು ಕಾಟ

ಇನ್ನು ಅವಳಿ ಜಿಲ್ಲೆಯಲ್ಲಿ ನಮ್ಮ ಪಕ್ಷ ಹಾಳು ಮಾಡುವ ಹುಳ ಇದೆ ಎಂಬ ಹೇಳಿಕೆ ವಿಚಾರ ಪ್ರಸ್ತಾಪಿಸಿ ಮಾತನಾಡಿದ ಅವರು, ಆ ಹುಳ ಹಿಂಗೆ ಹಾಳು ಮಾಡುವ ಕೆಲಸ ಮಾಡಿದ್ರೆ ಸಿಬಿಐ ರೇಡ್ ಆಗುತ್ತೆ ಎಂದುಪರೋಕ್ಷವಾಗಿ ಸಚಿವ ಮುರುಗೇಶ್ ನಿರಾಣಿ ವಿರುದ್ಧ ವಾಗ್ದಾಳಿ ನಡೆಸಿದರು. 

ದುಡ್ಡಿದೆ ಅಂತೇಳಿ ಚರಂತಿಮಠ ಅವರನ್ನು ಸೋಲಿಸ್ತೀವಿ, ಯತ್ನಾಳ್, ಕಾರಜೋಳ, ಸಿದ್ದು ಸವದಿ ಸೋಲಿಸ್ತೀವಿ ಅಂತಾ ಆ ಹುಳ ತಿಳಿದುಕೊಂಡಿದೆ. ಅದೇ ಈ ಸಲ ಹೋಗುತ್ತದೆ (ಸೋಲುತ್ತದೆ)‌. ಯಾವುದು ಆ ಹುಳು ಎಂಬ ಪ್ರಶ್ನೆಗೆ ,ಅದನ್ನ ನೀವೇ ವಿಶ್ಲೇಷಣೆ ಮಾಡಿ ಎಂದು ಹೆಸರು ಹೇಳದೆ ಯತ್ನಾಳ ಜಾರಿಕೊಂಡರು.

ಬಾಗಲಕೋಟೆ- ವಿಜಯಪುರ ಅವಳಿ ಜಿಲ್ಲೆಯಲ್ಲಿ ಒಂದು ಹುಳ ಐತಿ. ಅವು ನಾಲ್ಕೈದು ಕಡೆ ನಿಂದ್ರುವು ಅದಾವ.ಈ ಹಿಂದೆ ಬಾಗಲಕೋಟೆ, ಗದಗ ಎಂಪಿ ನಿಂತು ಮೂರು ಮಂದಿ ಡಬ್ಬ ಬಿದ್ರಲಾ, ಹಾಗೆ ಅವರನ್ನ ಡಬ್ಬ ಹಾಕುವ ಕಾಲ ಬಂದೇ ಬರುತ್ತೆ. ನಾವು ಮಾಡಲೇಬೇಕು ಎಂದು ಕಿಡಿ ಕಾರಿದ ಯತ್ನಾಳ,ಮಾಡದೇ ಹೋದ್ರೆ ನಮ್ಮ ಜಿಲ್ಲಾ ಉದ್ಧಾರ ಆಗೋದಿಲ್ಲ. ಹಿಂದುತ್ವದ ಪರವಾಗಿ ಕೆಲಸ ಮಾಡುವ ಚರಂತಿಮಠರು ಒಳ್ಳೆಯ ಕೆಲಸ ಮಾಡಿದ್ದಾರೆ. ಅವರ ವಿರುದ್ಧ ಯಾರನ್ನೇ ತಿಮ್ಮಣ್ಣ ನಿಲ್ಲಿಸಲಿ, ನೀವು ಮಾತ್ರ ಹಿಂದುತ್ವ ಉಳಿಯಬೇಕಾದರೆ ಚರಂತಿಮಠರನ್ನ ಗೆಲ್ಲಿಸಬೇಕು ಎಂದು ಯತ್ನಾಳ ಹೇಳಿದರು.

ವಕ್ಫ್ ಕಾನೂನು ರದ್ದು ಮಾಡುತ್ತೇವೆ; ಕಾಮನ್ ಸಿವಿಲ್ ಕೋಡ್ ಜಾರಿ ತರುತ್ತೇವೆ:

ವಕ್ಫ್ ಕಾನೂನು ರದ್ದು ಮಾಡುತ್ತೇವೆ ಮತ್ತು  ಈ ದೇಶದಲ್ಲಿ ಒಂದೇ ಕಾಮನ್ ಸಿವಿಲ್ ಕೋಡ್ ಜಾರಿಗೆ ತರುತ್ತೇವೆ ಎಂದು ಯತ್ನಾಳ್ ಹೇಳಿದರು.  ಎಲ್ಲರೂ ಒಂದೇ ಲಗ್ನ ಆಗಬೇಕು, ಎರಡೇ ಮಕ್ಕಳಿರಬೇಕು. ಹಮ್ ಪಾಂಚ್, ಹಮ್ ಬಚ್ಚಿಸ್ ಬಂದ್ ಹೋಗಯಾ ಹೈ ಎಂದು ಯತ್ನಾಳ ವ್ಯಂಗ್ಯವಾಡಿದರು.ಮಕ್ಕಳ ಇಷ್ಟಿದ್ದರೇ ಇರಿ, ಇಲ್ಲದೆ ಹೋದ್ರೆ ಇಂದು ಜನ್ಮ ದಿನ ಐತೆಲಾ ಮೋಹನದಾಸ ಕರಮಚಂದ ಗಾಂಧೀಜಿ ಆವಾಗಲೇ ಪಾಲು ಮಾಡಿ ಕೊಟ್ಟಾನು ನೀವು ಹೊಯ್ಕೋಂತ ಹೋಗ್ರಿ.ಈಗ ನಮ್ಮ ದೇಶಕ್ಕೆ ಒಳ್ಳೆಯ ಪ್ರಧಾನಿ ಸಿಕ್ಕಿದ್ದಾರೆ. ಇಂದು ದೇಶ ಬಹಳ ಸದೃಢವಾಗಿದೆ. ಲಂಡನ್ ಇಂಗ್ಲೆಂಡ್ ಹಿಂದೆ ಹಾಕಿ ಜಗತ್ತಿನ ೫ ನೇ ಸದೃಢ ಆರ್ಥಿಕ ರಾಷ್ಟ್ರವಾಗಿದೆ.ಭಾರತದಲ್ಲಿ ಇದ್ದೀವಿ, ೩೭೦ ತೆಗೆದಿವಿ.

ನಾನು ಮುಖ್ಯಮಂತ್ರಿ ಆದ್ರೆ ಒಬ್ರನ್ ಜೈಲ್‌ಗೆ ಕಳಿಸ್ತೇನೆ, ಒಬ್ರನ್ನ ಕಾಡಿಗೆ ಕಳಿಸ್ತೇನೆ -ಯತ್ನಾಳ್ ಕಿಡಿ

ಅಯೋಧ್ಯೆ ರಾಮ ಮಂದಿರ ಕಟ್ಟುತ್ತಿದ್ದೇವೆ .ಮಥುರಾ ಕೃಷ್ಣನ ಮಂದಿರನೂ ಕಟ್ಟುತ್ತೇವೆ. ದೇಶದಲ್ಲಿ ಒಂದೇ ಕಾನೂನು ಜಾರಿಗೆ ತರುತ್ತೇವೆ ಎಂದು ಯತ್ನಾಳ ತಿಳಿಸಿದರು. ಈ ಸಂದರ್ಭದಲ್ಲಿ ಶಾಸಕ ವೀರಣ್ಣ ಚರಂತಿಮಠ, ಬಿಜೆಪಿ ಮುಖಂಡ ಬಸವರಾಜ್ ಯಂಕಂಚಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

click me!